Sunday, September 3, 2017

ದೀನರ ಮಾತು

ಹಸಿದ ಹೊಟ್ಟೆಗೆ
ಹಾಗಿರಲಿ ಊಟ
ಕುಡಿಯಲು ತೊಟ್ಟು
ನೀರು ಸಿಗದೆ ಹೋದರೂ
ಕಣ್ಣಂಚಲಿ ಹರಿಯುತಿವೆ
ಗಂಗೆ ತುಂಗೆಯ ತೊರೆಗಳು
ತಡೆಯಲು ಬಾರರು
ಕರುಣೆಯ ಬರವಿರುವ ಜನರು

ಹೊತ್ತಿಗಾದರೂ
ಕೈ ತುತ್ತು ಸಿಕ್ಕರೆ
ಬದುಕಲದುವೆ ಮೃಷ್ಟಾನ್ನವು
ನೀಡರಾರು ತಲೆಬಾಗಿ ಬೇಡಿದರೂ
ದಯೆಯೇ ಇಲ್ಲದ ಧನಿಕರು
ಧರ್ಮದ ಮೂಲ ಮರೆತ ಮತಾಂಧರು

ಆಸೆಗಾದರೂ
ಅರಮನೆಯ ಕನಸ ಕಾಣಲು
ನೈತಿಕತೆ ಪ್ರಶ್ನೆಯ ಉಗಮವು
ಮತದ ಭೇಟೆಗೆ ದಾಳಿಯಿಡುವ
ರಾಜಕಾರಣಿಗಳ ಕರಿ ನೆರಳಲಿ
ಸ್ವಾವಲಂಭಿಯಾಗಿ ಬಾಳ ನಡೆಸಲಾಗದು

ಆತ್ಮತೃಪ್ತಿಗಾದರೂ
ಜಾತಿ ಮತಗಳ ಒಡೆಯದೆ
ಪ್ರಜೆಗೆ ಮಾಡಲಿ ಚೂರು ಒಳಿತನು
ದೇಶ ಹೊಂದುವುದು ಅಭಿವೃದ್ಧಿಯ
ಕೊಂಚ ನಿರಾಳತೆಯ ಭಾವವ ಹೊಂದಲು
ಕೆಡುಕಾಗದು ತಿಂದರೂ ದೀನರ ದುಡ್ಡನು

Friday, September 1, 2017

ವಿದೇಶಿ ಯಾನ ಮುಖ ತಗ್ಗಿಸುವಂತೆ ಮಾಡಿದ ಅವಮಾನ

ಹೊರ ದೇಶಕ್ಕೆ ಹೋಗುತ್ತಿದ್ದೇನೆ ಎಂಬ ಜಂಭ, ಹರ್ಷ, ಹಿರಿಹಿಗ್ಗು ಒಂದೆಡೆಯಾದರೆ ನನ್ನವರನ್ನು ಬಿಟ್ಟು ತುಂಬ ದಿನ ಇರಬೇಕಲ್ಲ ಎಂಬ ಬೇಸರ ಇನ್ನೊಂದೆಡೆ. ವಿಮಾನ ಹತ್ತಿ ರಷ್ಯಾದ ಅಂಗಳದಲ್ಲಿ ಕಾಲಿಟ್ಟಾಗ ಅದೇನೊ ಸಂಭ್ರಮ. ಅದೇ ಜಂಭದಿಂದ ತಲುಪಬೇಕಾಗಿದ್ದ ಸ್ಥಳಕ್ಕೆ ಹೋಗಲು ಒಂದು ಕಾರನ್ನು ಹತ್ತಿ ಸ್ವಲ್ಪ ದೂರ ಕ್ರಮಿಸಿದೆ. ತುಂಬಾ ದೂರ ತಲುಪಬೇಕಾಗಿದ್ದರಿಂದ ಕಾರಿನ ಚಾಲಕನೊಂದಿಗೆ ಮಾತಿಗೆ ಇಳಿದೆ. ಪರಿಚಯ ವಿನಿಮಯ ಮಾಡಿಕೊಂಡ ಚಾಲಕ, ಇವನು ಭಾರತವನೆಂದು ತಿಳಿದ ಕೂಡಲೆ ಚಾಲಕನ ಮಾತು ಪರಿಚಯಸ್ತರ ತರಹ ಶುರುವಾಯಿತು.

"ನೀವು ಭಾರತದವರ" ಎಂದ ಕೂಡಲೆ ನಾನು ಹೆಮ್ಮೆಯಿಂದಲೇ ಹೌದು ಎಂದೆನು. ಮಾತನಾಡುತ್ತ ನನ್ನ ದೇಶದ ಬಗ್ಗೆ ವಿವರಿಸಲು ಪ್ರಾರಂಭಿಸಿದೆ. ಅಷ್ಟರಲ್ಲೆ ಚಾಲಕ ಮಧ್ಯ ಮಾತಾಡಿ ಸರ್ ನನಗೊಂದು ಗೊಂದಲವಿದೆ, ಅದನ್ನು ಪರಿಹರಿಸುತ್ತೀರ ಎಂದು ಕೇಳಿದ. ಆಗ ಗರ್ವದಿಂದಲೇ ನನ್ನ ದೇಶದ ಬಗ್ಗೆ ಏನನ್ನೇ ಬೇಕಾದರೂ ಕೇಳು ಹೇಳುತ್ತೇನೆ ಎಂದೆ. ಹಾಗೆಂದ ಕೂಡಲೆ ತಡ ಮಾಡದೇ ನನ್ನ ಗೊಂದಲವಿರುವುದು ಭಾರತದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಬಗ್ಗೆ ಎಂದೇಳುತ್ತಾನೆ.

ತುಂಬಾ ದಿನಗಳಿಂದ ನನಗೆ ಅದರ ಬಗ್ಗೆ ಗೊಂದಲವಿದೆ ಅದೇನೆಂದರೆ ಭಗವದ್ಗೀತೆಯ ೧೩ನೇ ಅಧ್ಯಾಯದ ೭ನೇ ಶ್ಲೋಕದ ಅರ್ಥವನ್ನು ಸ್ವಲ್ಪ್ ತಿಳಿಸುವಿರಾ? ಎಂದು ಕೇಳುತ್ತಾನೆ. ಅವನಷ್ಟು ಕೇಳಿದಕೂಡಲೆ ತುಂಬಾ ಗರ್ವದಿಂದ ಬೀಗುತ್ತಿದ್ದ ನನಗೆ ಈ ಭೂಮಿ ಇಲ್ಲೇ ಬಿರಿಯಬಾರದೇ, ಆ ಆಕಾಶ ಈ ಕೂಡಲೆ ತಲೆಯ ಮೇಲೆ ಎರಗಿ ಬೀಳಬಾದೇ ಅಥವಾ ತಕ್ಷಣಕ್ಕೆ ಕಾರಿಂದ ಜಿಗಿದು ಓಡೋಗಲೇ ಎಂಬೆಲ್ಲ ನಮನಮನಿಯ ಯೋಚನೆಗಳೆಲ್ಲ ತಲೆಯಲ್ಲಿ ಬಂದವು. ಏಕೆಂದರೆ ಹುಟ್ಟಿನಿಂದ ವಿದೇಶಕ್ಕೆ ಹೋಗುವವರೆಗೂ ಒಂದೇ ಒಂದು ಬಾರಿಯು ಭಗವದ್ಗೀತೆಯನ್ನು ಓದುವುದು ಹಾರಲಿ ಕೈಯಲ್ಲಿಯೂ ಹಿಡಿಯದ ನನಗೆ ಇನ್ನೆಲ್ಲಿ ಭಗವದ್ಗೀತೆಯ ಶ್ಲೋಕದ ಅರ್ಥ ತಿಳಿದಿರಲು ಸಾಧ್ಯ.

ಹೊರ ದೇಶದ ಕಾರಿನ ಚಾಲಕನಿಗೆ ಇರುವಷ್ಟು ಜ್ಞಾನವೂ ಸಹ ನನಗೆ ಭಗವದ್ಗೀತೆಯ ಮೇಲಿಲ್ಲದಿರುವುದರಿಂದ ಕ್ಷಮಿಸಿ ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲವೆಂದು ಹೇಳಿದೆ. ಆಗ ಮರ್ಯಾದೆಯಾಗಿ ಮುಖವನ್ನೆತ್ತಿ ಮಾತನಾಡಲಾಗದೆ ಅವನ ಮಾತಿಗೆ ಉತ್ತರಿಸುವುದು ಹಾಗಿರಲಿ ತುಟಿ ಪಿಟಿಕ್ ಎನ್ನದೆ ಸ್ತಬ್ಧನಾಗಿ ವಾಸವಿರಬೇಕಾದ ಸ್ಥಳ ಬರುವವರೆಗೂ ಸುಮ್ಮನೆ ಕುಳಿತೆ.

Wednesday, August 30, 2017

ಅನುಭವದ ಎರಕಾವ ಹೊಯ್ದ ಅಪ್ಪ

ಪರಿಸ್ಥಿತಿಯ ಕೈಗೊಂಬೆಯಾಗಿ, ವಿಧಿಯಾಟದ ಅಂಗಳದಲ್ಲಿ ಎದೆಯೊಡ್ಡಿ ನಿಂತ. ಕೊಚ್ಪಾಲು ತೋಟ (ಅಲ್ಲೊಂದಿಷ್ಟು ಚೂರು ಇಲ್ಲೊಂದಿಷ್ಟು ಚೂರು ತೋಟ) ದಲ್ಲಿ ಅಡಿಕೆ ಬೆಳೆಯನ್ನು ಸಮೃದ್ಧವಾಗಿ ತೆಗೆಯುವ ಹೋರಾಟದ ವ್ಯಕ್ತಿ. ಕೆಲಸ ಸ್ನೇಹಿ, ಸುಸ್ತಾಗದ ದೇಹಿ ಎಂಬಂತೆ ಮುಂಜಾವಿನಿಂದ ಮಧ್ಯ ರಾತ್ರಿಯ ತನಕವು ವಿಶ್ರಾಂತಿಯಿಲ್ಲದೆ ದುಡಿದು ತನ್ನ ಹೆಗಲ ಮೇಲಿನ ಜವಾಬ್ಧಾರಿಯನ್ನು, ಕರ್ತವ್ಯವನ್ನು ನಿರ್ವಹಿಸಿದವ ನನ್ನಪ್ಪ.

ಅವಿಭಕ್ತ ಕುಟುಂಬದ ತ್ರಿಮೂರ್ತಿಗಳಲ್ಲಿ ಕೊನೆಯವನಾಗಿ, ಮನೆಯ ಯಜಮಾನ ತನ್ನ ದೊಡ್ಡಣ್ಣನಿಗೆ ವಿಧೇಯನಾಗಿ ಬದುಕ ಸವೆಸಿದ. ಮೆಚ್ಚಿದ ಅಣ್ಣನ ಮಾತಿಗೆ ಎರಡಾಡದ ಈತ ಕಾಲಳತೆಯ ದೂರದಲ್ಲಿರುವ ಹಳೆಯ ಮನೆಯಲ್ಲೇ ತನ್ನ ಸಂಸಾರದೊಂದಿಗೆ ನೆಲೆಸಿದ. ಇದು ಬಹಳ ಇಕ್ಕಟ್ಟಿನ ಸಮಯ ಏಕೆಂದರೆ ಮಕ್ಕಳ ಅಗತ್ಯತೆಗೆ, ಮಡದಿಯ ಆಸೆಗಳಿಗೆ, ಮತ್ತೆಲ್ಲ ವ್ಯವಹಾರಕ್ಕೆ ಬೇಕಾದ ಹಣವನ್ನು ಕುಟುಂಬದ ಯಜಮಾನನ ಹತ್ತಿರ ಕೇಳಿ ಪಡೆಯಬೇಕಿತ್ತು. ಅವಶ್ಯಕತೆಗೆ ಬೇಕಾದಷ್ಟು ಹಣ ಯಜಮಾನನಿಂದ ಸಿಗದಿರುವುದು ಒಂದೆಡೆಯಾದರೆ ಮಕ್ಕಳ ಆಸೆ, ಅವಶ್ಯಕತೆಗಳನ್ನು ಈಡೇರಿಸಲಾಗದಿರುವುದು ಇನ್ನೊಂದೆಡೆ.

ಎಲ್ಲರಿಗೂ ಅವರವರ ಅಪ್ಪ ಎಲ್ಲರಿಗಿಂತ ದೊಡ್ಡ ನಾಯಕನೆ. ಆದರೆ ನನಗೆ ಯಾಕೆ ನನ್ನಪ್ಪನೇ ಶ್ರೇಷ್ಠ, ಎಲ್ಲರಿಗಿಂತ ಭಿನ್ನವಾಗಿದ್ದಾನೆ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಮಕ್ಕಳ ಏಳಿಗೆಗಾಗಿ ಹೇಗೆ ಶ್ರಮಿಸಿದ, ಮಕ್ಕಳ ಅಗತ್ಯತೆಗೆ ಯಾವ ರೀತಿಯಲ್ಲಿ ಸ್ಪಂದಿಸಿದ, ಯಾವೆಲ್ಲ ತ್ಯಾಗ ಮಾಡಿ ಸ್ಪೂರ್ತಿಯಾಗಿ ನಿಂತ, ಏನೆಲ್ಲಾ ಕೆಲಸ ನಿರ್ವಹಿಸಿ ನಾಯಕನಾಗಿ ಗೋಚರಿಸಿದ ಎನ್ನುವುದು ಅಂತರಾಳ ಕಲಕುವ ಕಥೆ.

ಓದಿದ್ದು ಬರೆ ೪ನೇ ತರಗತಿ ಆದರೆ ಕೂಡಿಸಿ ಕಳೆಯುವ ಗುಣಾಕಾರ ಭಾಗಾಕಾರಗಳ ಲೆಕ್ಕಚಾರದಲ್ಲಿ ಗಣಿತ ತಜ್ಞ. ಹಾಗೆ ತೋಟಗಾರಿಕೆಯ ವಿಚಾರದಲ್ಲಿ, ನೇತಾಡುತ್ತಿರುವ ಮರಗಳನ್ನು ಹಿಂಡು ಮರಗಳ ನಡುವಿನಲ್ಲಿರುವ ಖಾಲಿ ಜಾಗದಲ್ಲಿ ಉರುಳಿಸುವಲ್ಲಿ ಹಾಗು ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಇಂಜಿನಿಯರ್. ಅದಲ್ಲದೆ ನಡೆದಾಡುವ ವಿಷಯದಲ್ಲಿ ಮಿಂಚಿನಂತೆ ಕಣ್ಣು ಮಿಟಕಾಯಿಸುವಷ್ಟರಲ್ಲಿ ಇವರು ಗೋಚರಿಸದಂತೆ ಬೇರೆಡೆಗೆ ತೆರಳುವಷ್ಟು ವೇಗದ ನಡಿಗೆಯವನು.

ಬೆಳ್ಳು ಮೂಡುವ ಸಮಯಕ್ಕೆ ಎದ್ದು ಹಸಿದ ಹೊಟ್ಟೆಯಲ್ಲಿಯೇ ಮಳೆಗಾಲದಲ್ಲಿ ಕಾಡಿಗೆ ಹೋಗಿ ಸೊಪ್ಪನ್ನು ಕೊಯ್ದು, ಬೇಸಿಗೆಯಲ್ಲಿ ಬೇಣಕ್ಕೆ (ಗುಡ್ಡಕ್ಕೆ) ಹೋಗಿ ದೆರಕನ್ನು (ಉದುರಿದ ಒಣಗಿದ ಎಲೆಗಳನ್ನು) ತಂದು ಕೊಟ್ಟಿಗೆಯಲ್ಲಿರುವ ದನದ ಕಾಲಡಿಗೆ ಹಾಸಿಗೆಯನ್ನಾಗಿ ಹಾಕಿ ತೋಟಕ್ಕೆ ಗೊಬ್ಬರವನ್ನಾಗಿ ಮಾಡುತ್ತಿದ್ದ. ಉದುರಿದ ಅಡಿಕೆಗಳನ್ನು ಹೆಕ್ಕಿ, ಅಡಿಕೆ ಮರಗಳಿಗೆ ನೀರನ್ನು ತೋಕುತ್ತಿದ್ದನು (ಸೊಂಟ ಬಗ್ಗಿಸಿಕೊಂಡು ನೀರನ್ನು ಹಾಕುವುದು). ತೋಟಕ್ಕೆ ಬೇಕಾದ ಮಣ್ಣು, ಗೊಬ್ಬರ, ಮರಗೆಲಸ (ಮರ ಹತ್ತಿ ಅಡಿಕೆ ಕೊನೆ ಕೊಯ್ಯುವುದು, ತೆಂಗಿನ ಕಾಯಿ ಕೊಯ್ಯುವುದು), ಅಗೆತ, ಸಸಿ ನೆಡುವುದು ಹೀಗೆ ಎಲ್ಲವನ್ನು ಸ್ವಂತವಾಗಿಯೇ ಮಾಡಿಕೊಂಡು ಪರಿಶ್ರಮಿಸಿದ.

ಇದೆ ಸಮಯದಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡು ಮರು ಮದುವೆಯಾಗಿ ತನ್ನ ಮಕ್ಕಳನ್ನು ಸಮಾನವಾಗಿ ನೋಡಿಕೊಂಡನು. ತನ್ನ ಎರಡನೆ ಪತ್ನಿಯಿಂದನೂ ಸಹ ಬೆಂಬಲಿತನಾಗಿ ಎಲ್ಲಾ ಮಕ್ಕಳಿಗೂ ಸಹ ಬೇಕಾದ ಅವಶ್ಯಕತೆಗಳನ್ನು ಪೂರೈಸಿದ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಎಲ್ಲವನ್ನು ತೂಕಬದ್ಧವಾಗಿ ಸಂಸಾರವನ್ನು ಸಮತೋಲಿಸಿದ. ಆಡು ಜನರ ಮಾತಿಗೆ ಧೃತಿಗೆಡದೆ ತಾಳ್ಮೆಯಿಂದ ಸಮಾಜದ ಎದುರು ಎದ್ದುನಿಂತ ಪರಿ ಮೂಗಿನ ಮೇಲೆ ಬೆರಳಿಡುವಂತಹದು.

ಅವಿಭಕ್ತ ಕುಟುಂಬ ವಿಭಕ್ತವಾದ ಮೇಲೆ ತನಗೆ ಸಿಕ್ಕ ಕೊಚ್ಪಾಲು ತೋಟದಿಂದ ಬಂದ ಆದಾಯದಲ್ಲಿ ತನ್ನ ನಾಲ್ವರು ಮಕ್ಕಳ ಅವಶ್ಯಕತೆಯನ್ನು ಪೂರೈಸಲು ಹೆಣಗಾಡಿದ ಕತೆಯನ್ನು ನೋಡಿದರೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ. ಇಂತಹ ಸಂಗ್ದಿದ್ಧ ಪರಿಸ್ಥಿತಿಯಲ್ಲೂ ನಾನು ಹೈಸ್ಕೂಲಿನಲ್ಲಿದ್ದಾಗ ಸೈಕಲ್ ಕೊಡಿಸಿ,ಪದವಿಯ ಕೊನೆಯ ವರ್ಷದಲ್ಲಿದ್ದಾಗ ಉದ್ಯೋಗ ಅರಸಲು ಸಹಾಯವಾಗಲೆಂದು ಆಗತಾನೆ ಮಾರ್ಕೇಟಿಗೆ ಬಂದ ಮೊಬೈಲ್ ಸಹ ಕೊಡಿಸಿದ. ಓದಿಗೆ ಕೊಟ್ಟ ಸ್ಪೂರ್ತಿ ಬಹಳ ಅಚ್ಚು ಮೆಚ್ಚು. ಶಾಲೆಯಲ್ಲಿ ನಡೆಯುವ ಯಾವುದೇ ಚಟುವಟಿಕೆಗಳಲ್ಲೇ ಆಗಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದ. ತೋಟದ ಕೆಲಸ ಕಲಿಯಲಿಚ್ಛಿಸಿದರೆ ಅವುಗಳನ್ನು ಜಾಗರುಕತೆಯಿಂದ ನಿರ್ವಹಿಸಲು ಬೇಕಾದ ಚಾಕಚಕ್ಯತೆಯನ್ನು ನಾಜುಕಾಗಿ ಹೇಳಿಕೊಟ್ಟವ ನನ್ನಪ್ಪ. ಒಬ್ಬರಿಗೊಂದು ಕೆಡುಕನ್ನು ಮಾಡದೆ ಸಂಸ್ಕಾರವನ್ನಿತ್ತನು. ಅದೆಂತಹದೇ ದೊಡ್ಡ ಮರವಿರಲಿ ಅದನ್ನ ಏರಿ ಹಣ್ಣುಗಳನ್ನು ಕೊಯ್ಯುವ ಕೌಶಲ್ಯವನ್ನು ಕಲಿಸಿದನು.

ಜೀವನವನ್ನು ನದೆಸಿಕೊಂಡು ಹೋಗಲು ಬೇಗಾಗುವಂತಹ ವಿದ್ಯೆಯನ್ನು ಕೊಡಿಸಿ, ಬದುಕನ್ನು ಕಟ್ಟಲು ಬೇಕಾಗುವಷ್ಟು ಕೆಲಸಗಳನ್ನು ತಿಳಿಸಿದ. ಯಾವ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂಬ ಜಾಣ್ಮೆಯನ್ನು ಅರುಹಿದ. ಎಂತಹ ಸಂದಿಗ್ಧ ಸ್ಥಿತಿಯಲ್ಲಿ ಹೇಗೆ ತಾಳ್ಮೆಯಿಂದ ವರ್ತಿಸಿ ಎಲ್ಲರನ್ನು ಮತ್ತು ಎಲ್ಲವನ್ನು ಸಮತೋಲನದಿಂದ ನಿಭಾಯಿಸಬೇಕೆಂಬುದನ್ನು ನೀತಿಯುಕ್ತ ಜೀವನದ ಅನುಭವದಿಂದ ಕಲಿಸಿದವ ನನ್ನಪ್ಪ.

Wednesday, August 16, 2017

ಕರಡಿದೆಯಾ ಕೆಸರ

ಎಸೆದೆಯಾ ಸಣ್ಣ ಕಲ್ಲನು
ಕರಡಿದೆಯಾ ಕೆಸರ ಮಣ್ಣನು
ನಗುತಿರುವ ಶಿಶುವ ಅಳಿಸುವೆಯಾ?
ಪೂರ್ಣ ಚಂದ್ರನ ಚೂರಾಗಿಸುತ
ಸಂಸ್ಕರಿಸಲು ಸಾಕು ಕ್ಷಣ ಹೊತ್ತು
ಒಂದಾಗಲು ಬೇಕು ಆಣಿಮುತ್ತು

ಈ ಸಂಜೆ ಯಾಕೆ ಹೀಗೆ
ಕಲೆಯಲ್ಲಿ ಸೆಳೆಯುತಿದೆ ಮನವ
ಓ ರವಿಯೇ ಜೋಕೆ ಹಾಗೆ
ಮಂದ ಬೆಳಕಿನಲ್ಲಿ ಜಾರು ನಿಧಾನ
ಬೋರ್ಗರೆಯವ ಕಡಲ ಕಿನಾರೆ
ಗರ್ಜಿಸುವ ಸಾದುಮೃಗದ ತರಾನೆ
ಸರಿಸಾಟಿ ಯಾರು ಇಲ್ಲ
ಕನವರಿಸುವ ಮೂಲ ಬೊಂಬೆಗೆ

ಸ್ಪಂದಿಸಲು ಸಿಗದೆ ಸ್ವಲ್ಪ ಸಮಯ
ಹುಂಬತನದಿ ಅತಿ ನಂಬಿದೆಯ
ನಿರೀಕ್ಷೆಯ ಬಾಳಿನ ಸಂಜೆಯಲಿ
ಸೂರ್ಯ ಮುಳುಗುವ ಹೊತ್ತಾಗಿದೆ
ಉಸಿರಿನ ವೇಗಕೆ ಮೂಡುವ ಚಿತ್ರವು
ಮುಂದಿನ ಬದುಕಿಗೆ ಜೊತೆಯಾಗುವುದೇ?

ನೆನಪಿನ ಸಾರಾಂಶ ಭವಿಷ್ಯದ ಮುಖ್ಯಾಂಶ
ಹಲವು ಚಿಂತನೆಯು
ಮಂಥನಕೆ ಅಣಿಯಾಗಿರಲು
ಅವಳು ಸಿಗುವಳು ಎನ್ನುತಿದೆ

Thursday, August 3, 2017

ಆಧುನಿಕ ಒಲವು

ತಿರುಗೋ ಭೂಮಿ ತಿರಗೋದನ್ನು
ಮರೆಯಲಬಹುದೇನೊ
ಸುತ್ತುವ ಕಡಲು ನದಿಗಳ ಹಾಗೆ
ಹರಿಯಲುಬಹುದೇನೊ
ನೀಲಿ ನಭದ ಅಂಗಳದಲ್ಲೂ
ಮನೆಯನು ಕಟ್ಟಲುಬಹುದೇನೊ
ಮಂಗಳಸೂತ್ರದ ಧಾರಣೆ ಬಳಿಕ
ಮಂಗಳಯಾನವ ಗೈಯಬಹುದೇನೊ
ವಿಧವಿಧವಾದ ಬಯಕೆಯ ತವರು
ನನ್ನ ಮನವೀಗ
ಕಿರು ನೋಟದ ತರುವಾಯ

ಗಣಕಯಂತ್ರದ ಗಣೀತದಲ್ಲೂ ಮೊತ್ತವೆ ನಿನ್ನ ಹೆಸರು
ಚಂದ್ರಲೋಕದ ಚಿತ್ರಣದಲ್ಲೂ
ಗಾಳಿಯೆ ನಿನ್ನ ಉಸಿರು
ರಸ್ತೆಯಲ್ಲಿನ ಸಂಚಾರ ಸ್ತಂಭನದಲ್ಲೂ
ತುಂಬಿದೆ ಹಚ್ಚ ಹಸಿರು
ಕಣ್ಣಲಿ ಹರಡಿದೆ ಮನಸಿನ ಭಾವನೆ
ನೆನೆಯಲು ನಿನ್ನ ಕುರಿತು

ಸಿಯಾಚಿನ್ನಿನ ಕೊರೆವಾ ಚಳಿಯಲೂ
ಬೆಚ್ಚನೆಯ ಕವಚವಾಗಿರುವೆ
ಭಯೋತ್ಪಾದಕರ ಭಯದಾ ನೆರಳಲೂ
ಧೈರ್ಯದ ಬಿಸಿಲಾಗಿರುವೆ
ಕಕ್ಷೆ ಸೇರುವ ರಾಕೆಟ್ಟಿನ ಉಪಗ್ರಹದಲೂ
ಸುದ್ದಿ ಕೊಡುವ ಯಂತ್ರವಾಗಿರುವೆ
ಕಾಂಜಿಪೀಂಜಿಯ ಪುಂಡರ ಮೇಲೂ
ನಿಗಾವಹಿಸುವ ರಕ್ಷಕನಾಗಿರುವೆ
ಚಕಾರವೆತ್ತದೇ ಪ್ರೀತಿಯ ಬಗ್ಗೆ
ವರಿಸುತ ಉಳಿಸು ತಡಮಾಡದೆ

Wednesday, August 2, 2017

ವ್ಯವಸಾಯವಿಲ್ಲದ ವಿಚಾರದಿಂದ ವ್ಯವಹರಿಸಬಾರದು

ಹಲವು ವಿಚಾರಗಳಿಗೆ ಬೌತಿಕ ಸ್ಪರ್ಶದ ಅಗತ್ಯತೆ ಇರುವುದಿಲ್ಲ. ಮೊದಲಿಗೆ ನಾವು ಮಾಡುವ ವಿಚಾರಗಳಿಗೆ ಬಾಹ್ಯ ರೂಪವಿಲ್ಲ. ವಿಚಾರವೆನ್ನುವುದು ತಾರ್ಕಿಕವಾಗಿ ರಚನೆಯಾಗಿರುವುದಾಗಿದೆ. ಅದೆಷ್ಟೋ ಜನರು, ಅದೇನೆ ಹೇಳಿದರೂ ವ್ಯವಸಾಯವಿರದ ವಿಚಾರಗಳಿಂದ ವ್ಯವಹರಿಸುತ್ತಾರೆ. ಇದರಿಂದಾಗಿ ತೊಂದರೆಗೂ ಒಳಗಾಗುತ್ತಾರೆ ಮತ್ತು ನಿಂದನೆಗೆ ಅರ್ಹರು ಎಂದೆನಿಸುತ್ತಾರೆ. ನೈತಿಕತೆಯ ಸ್ಪರ್ಶದಿಂದ ಹಲವು ಜನರು ವ್ಯವಸಾಯವಿರದ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.

ಒಬ್ಬ ವ್ಯಕ್ತಿ ತನ್ನ ಅಸ್ಥಿತ್ವವನ್ನು ತೋರಿಸಿಕೊಳ್ಳಲು ಬಹಳ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಆದರೆ ಅವುಗಳಲ್ಲಿ ಕೆಲವೇ ಕೆಲವರಿಂದ ಔಚಿತ್ಯಪೂರ್ಣವಾದ ತತ್ವಗಳು ಮತ್ತು ವಿಚಾರಧಾರೆಗಳು ಮಂಡನೆಯಾಗುತ್ತದೆ. ಮುಂದಿಡುವ ವಿವೇಚನಾ ಶೀಲ ಅನಿಸಿಕೆ ಅಭಿಪ್ರಾಯಗಳಿಗೆ ವ್ಯವಸಾಯವಿಲ್ಲದಿದ್ದರೆ ಅಸಂಬದ್ಧ ಪ್ರಲ್ಲಾಪವಾದಂತಾಗುತ್ತದೆ. ವ್ಯವಸಾಯವೆಂದರೆ ಕೃಷಿ ಕ್ಷೇತ್ರದ ಒಂದು ಬೌತಿಕವಾದ ಕೆಲಸವೆಂದೆನಿಸಬಹುದು ಆದರೆ ಇದನ್ನು ನಾವು ಮಾಡುವ ವಿಚಾರಗಳಲ್ಲೂ ನೈತಿಕವಾಗಿ ಮಾಡಿದಾಗ ಮಾತ್ರ ಜೀವನವೆನ್ನುವುದು ನವಿರಾಗಿ ಕಂಗೊಳಿಸುವುದು. ತಾರ್ಕಿಕವಾದ ವ್ಯವಸಾಯವಿರದಿದ್ದರೆ ಉಳಿದವರ ಎದುರು ತಲೆ ತಗ್ಗಿಸುವಂತ ಮಾತನಾಡಬೇಕಾಗುತ್ತದೆ. ಆಗ ಜೀವನವೆಂಬುದು ಫಸಲು ಬಾರದ ಬಂಜರು ಭೂಮಿಯಂತಾಗುತ್ತದೆ.

ಬರಡು ಬುರುಡೆಯಂತೆ ವ್ಯವಹರಿಸದೆ, ಸತ್ವ ಸಾರುವ ವಿಷಯಗಳನ್ನು ಅರುಹಿದರೆ ತಾರೆಗಳ ನಡುವಿನಲ್ಲಿ ಕಂಗೊಳಿಸುವ ಶಶಿಯಂತಾಗುವುದು ಖಂಡಿತ. ಒಂದುವೇಳೆ ಹಾಗಾಗದಿದ್ದರೂ ಆಭರಣಗಳ ನಡುವಿನಲಿ ಮಿನುಗುವ ಮುತ್ತಿನಂತಾಗುವುದಂತೂ ನಿಶ್ಚಿತ. ವ್ಯವಸಾಯವಿರುವ ವಿಚಾರವಂತರ ಬಾಳು ಹೇಗಿರುತ್ತದೆಂದರೆ ಇರುವೆಗಳು ಮುತ್ತುವ ಸಿಹಿಯಂತಿರುತ್ತದೆ. ಅಲ್ಲದೆ ಕಡಿವ ಜೇನು ಹುಳುವಿನಿಂದಾಗುವ ಜೇನು ತುಪ್ಪದಂತಿರುತ್ತದೆ. ವ್ಯವಸಾಯವಿರುವ ವಿಚಾರದಿಂದ ವ್ಯವಹರಿಸಿದರೆ ನೈತಿಕ ಸ್ಪರ್ಶದ ಅನುಭವಿಯಾಗುವುದರಲ್ಲಿ ಅನುಮಾನವಿಲ್ಲ.

Thursday, June 22, 2017

ಆಳ್ವಿಕೆ ಮಾಡು

ಹರಿವ ಹೊಳೆಯ ನೀರ ಮೇಲೆ
ಮಳೆಯು ಸುರಿದ ಹಾಗಿದೆ
ಯಾಕೆ ಹೀಗೆ ಮನದ ಓಲೆ
ಭಾವ ಲಹರಿಯ ಹಾಡಿದೆ
ಕದ್ದು ನೋಡಲು ನಿನ್ನ ಮೊಗವ
ತನುವಿನ ಆಸೆ ಏರುತ ಹೋಗಿದೆ
ನೋಡು ಒಳಗಿನ ಬಯಕೆ ರಾಜ್ಯವ
ಇಲ್ಲೇ ಆಳ್ವಿಕೆ ಮಾಡು ಎಂದಿದೆ

ಕೊಡೆಯನು ಹಿಡಿಯುವೆ
ಬಿಸಿಲ ಝಳಕೆ
ನೆರಳಿನ ನೆನೆಪೇ ಆಗದು
ಮಡಿಲಲಿ ಮಲಗಿಸಿ
ತುತ್ತ ನೀಡುವೆ
ತಾಯಿ ಹಂಬಲವೇ ಬಾರದು

ಕನಸಲು ಕಾಯುವೆ
ಪ್ರೀತಿ ಸುಧೆಯ
ಬೇರೆಡೆ ದೃಷ್ಟಿಯ ಹಾಯಿಸದೆ
ರೇಗದೆ ತಿಳಿಸುವೆ
ಪ್ರೇಮದ ಪರಿಯ
ಬೇಡುತ ತಾಳ್ಮೆಯ ಪರೀಕ್ಷಿಸದೆ

Wednesday, June 21, 2017

ಮುದಕೆ ಭಂಗ

ಹೂವು ಅರಳುವ ಘಳಿಗೆ ಸುಳಿಯಿತು
ಮನದ ನೋವ ಮರೆಯಲು
ಮೊಗ್ಗು ಚಿಗರುವ ಕಾಲ ಬಂದಿತು
ಮುದಕೆ ಭಂಗ ಮಾಸಲು

ಮುಕ್ತ ಮನಸಿನ ವೇದನೆಯೆಲ್ಲೋ
ಗುಪ್ತವಾಗಿಡಲು ಬಯಸಿದೆ
ಸುಪ್ತ ಯಾತನೆ ಆವರ್ತನೆಯಲ್ಲೋ
ಸಪ್ತ ಸಾಗರ ಎದುರಾಗಿದೆ

ನಿಶ್ಚೇಷ್ಟ ಕಾರ್ಯದ ಹೊತ್ತ ಹಣಿಯಲು
ನಲಿವಿನ ನಾಟಕ ಅಳಿಯಲಿ
ಅರೆ ಅರಿವಿನ ಅಂಧಕಾರ ಅಳಿಸಲು
ವಿವೇಕದ ಬೆಳಕು ಹರಿಯಲಿ

Tuesday, June 20, 2017

ಸ್ವಾನುರಾಗವ ತೊರೆದು

ಸುತ್ತದಿರು ತೀರ್ಥಯಾತ್ರೆಗೆಂದು
ಹಲವಾರು ದೇವಾಲಯವ ದೇಶವ್ಯಾಪಿ
ಸಾಯದಿರು ಸ್ವಾರ್ಥಿ ಹತಾಶಿಯೆಂದು
ನಿನ್ನೊಳಗಿರುವ ದೇವ ಭಾವವ ಮರೆತು
ಪ್ರೀತಿ ವಿಶ್ವಾಸದ ಕರುಣೆಯ ತೊರೆದು
ನಿನ್ನ ಅಹಮ್ಮಿನ ಕೋಟೆಯಲಿ ಮೆರೆಯುದಿರು

ಹಸಿವು ಎಂದವರಿಗೆ ಕೈ ತುತ್ತನಿಡು
ಯಾಚಿಸಿದವರಿಗೆ ಸಹಾಯ ಹಸ್ತ ಕೊಡು
ತಾನು ತನ್ನದೆಂಬುವ ಮೋಹ ಬಿಡು
ಇರಲಿ ನನ್ನವರೆಂಬುವ ನಿಸ್ವಾರ್ಥದ ಬೀಡು

ಕಾಣದ ದೇವನಿಗೆ ಹಂಬಲಿಸದಿರು
ಪರೋಪಕಾರಿಯಾಗುತ ಜೀವಿಸಿರು
ದೀನರ ಪಾಲಿನ ದೇವ ನೀನಾಗುವೆ
ನೆಮ್ಮದಿ ಕಾಣುತ ಅಜರಾಮರನಾಗುವೆ

ಬೆಳಕಾಗು ಬೇಡುವ ಬಡವರ ಪಾಲಿಗೆ
ರಕ್ಷಕನಾಗು ಅನಾಥರ ಬದುಕಿಗೆ
ಊರುಗೋಲಾಗು ವೃದ್ಧರ ಬಾಳಿಗೆ
ಸ್ವಾನುರಾಗವ ಆಲಾಪಿಸದೆ ಗಂಧರ್ವನಾಗು

Monday, June 12, 2017

ನನ್ನವಳ ವರಿಸಲು

ಹೆತ್ತವರು ಹೇಳಿದರು ನೀ ಸುಂದರಿ
ನಿನ್ನನ್ನು ನೋಡಲು ಮನ ಕಾತರಿ
ಕರೆಯಲ್ಲಿ ನುಡಿದಿಹರು ಮುಗುದೆಯೆಂದು
ನೋಡು ಶಾಸ್ತ್ರವ ಕೂಡಲೆ ಮುಗಿಸಲೆಂದು
ನೂರಾರು ಕನಸುಗಳ ಕಲರವವು ಎದೆಯಲಿ
ಭೇಟಿಯಾಗಲು ಅಣಿಯಾದೆ ಸಂತೋಷದಲಿ

ಕಣ್ಣನ್ನು ಕುಕ್ಕಿತು ಆ ಕೆಂದುಟಿ
ಮಾತನಾಡದೆ ನೀಡಿದೆ ಸಮ್ಮತಿ
ತಿರುಗಿ ಬಯಸಿಹೆನು ವರಿಸಲು ಅನುಮತಿ
ಕದ್ದು ತಿಳಿಸಲು ಮುದ್ದು ಮನದ ಆಣತಿ

ಸಿಹಿಯನ್ನು ತಿನಿಸಿಹೆನು ಶುಭಾರಂಭಕೆ
ಸಂಭಾಷಣೆಯ ಮೂಲಕ ಹೊಂದಾಣಿಕೆ
ಸವಿಯುತ್ತರ ಪಡೆಯಲು ನಿಶ್ಚಿತಾರ್ಥಕೆ
ನಿಗದಿಯಾಯಿತು ದಿನವು ಕಲ್ಯಾಣಕೆ

ಪ್ರತಿದಿನವು ನಡೆಯಿತು ಮಿತಿಯಿರದ ಹರಟೆ
ಮತ್ತದರ ಸಾರಾಂಶ ವಿನಿಮಯದ ಗೊರಟೆ
ಶುಭದಿನದ ಸೊಗಸಿನ ತಯಾರಿಗೆ ಹೊರಟೆ
ಜೊತೆಯಿರುವೆ ರಕ್ಷಿಸಲು ಕಲಿತು ಕರಾಟೆ

ವೈದಿಕರು ಮಾಡಿಹರು ಮಂತ್ರಘೋಷ
ಮಾಂಗಲ್ಯ ಧಾರಣೆಗೆ ನಗೆಯ ಹರುಷ
ಹಾರೈಸಿಹರು ಬಾಳಿ ನೂರಾರು ವರುಷ
ಸಾಮರಸ್ಯದ ಬದುಕಿರಲಿ ಪ್ರತಿ ನಿಮಿಷ

Friday, June 9, 2017

ಮತ್ತೆ ಬೆರೆಯಲಿ

ನೂಲ ನೇಯುತ
ಏಣಿ ಮಾಡುತ
ಗಗನ ಹತ್ತಲು ಸಾಧ್ಯವೇ?
ಹೇಗೆ ನಂಬಲಿ
ಅದರ ದೃಢತೆಯ
ಮೆಲ್ನೋಟಕೂ ಕಾಣುವುದು
ಹುಸಿಯುವ ಅಸ್ಥಿರತೆಯು

ರೆಪ್ಪೆ ಮುಚ್ಚಲು ಶಬ್ದಬಾರದು
ಕಣ್ಣಂಚಿನ ಬೆಳಕು ಮಿಂಚಾಗದು
ಕನಸಿನ ಕಲ್ಪನೆಯ ಆಗಸಕೆ
ಜೋತು ಬೀಳಲಿ ಘಂಟೆಯು
ಎದೆಯ ದುಗುಡದ ಬಡಿತ
ಕೇಳಲಿ ಕೆಪ್ಪಾದ ಜಗಕೆ
ಹೆಪ್ಪುಗಟ್ಟಿದ ನೋವ ಹಾಲನು
ಚೆಲ್ಲು ಹೊಡೆಯಲು ಘಂಟೆನಾದವು

ಚಪ್ಪಾಳೆಯಾಗದು ಒಂದೇ ಕೈಯಲಿ
ಜ್ಞಾತೃ ಸಲ್ಲದು ಬೆರೆವ ಮನಸಲಿ
ಚಿಪ್ಪು ಒಡೆದಾಗ ಮುತ್ತು ಸಿಕ್ಕಂತೆ
ಬೇರಾದ ಬದುಕು ಬೆರೆಯುತ
ಅಹಂಕಾರ ತೊರೆದು ಚೊಕ್ಕಾಗಲು
ಚಾಣದ ಪೆಟ್ಟು ತಿಂದ ಕಲ್ಲಿನಂತೆ
ಮೂರ್ತಿಯಾಗಿ ಪೂಜೆ ಪಡೆದಂತೆ
ವಿರಸದ ಪ್ರೇಮಿಗಳು ಸರಸಿಗಳಾಗಲಿ

Tuesday, June 6, 2017

ಮೆರೆದಿದ್ದ ಕಡ್ಗೋಲಿನ ವ್ಯಾಯಾಮ ಮರೆಯಾದಾಗ

ಮೊದಲೆಲ್ಲ ನಮ್ಮ ಹಳ್ಳಿಗಳಲ್ಲಿ ಇದ್ದ ಕೆಲವೊಂದು ನೈಸರ್ಗಿಕ ವ್ಯಾಯಾಮದ ಪದ್ದತಿಗಳು ಇಂದೆಲ್ಲ ಮರೆಯಾಗಿ ಎಷ್ಟೋ ಜನರಿಗೆ ಅದರ ಹೆಸರೇ ಮರೆತುಹೋಗಿದೆ ಅಲ್ವೇ...? ಇಲ್ಲಿ ನಮ್ಮ ಮಹಿಳೆಯರಿಗೆ ಬಸರಿನ ಸಮಯದಲ್ಲಿ ಮಾಡಿಸುವಂತಹ ವ್ಯಾಯಾಮ ಹೀಗಿತ್ತು. ಮಡಿಕೆಯಲ್ಲಿ ಮೊಸರನ್ನು ಮಾಡಿ ಬೆಳಗಾದ ಮೇಲೆ ಮೊಸರನ್ನು ಕಡೆಯುವ ಕೆಲಸದಲ್ಲಿ ಮಹಿಳೆಯರ ಗಡಿಬಿಡಿಯ ತಲೆಬಿಸಿಗಳು ಇಂದು ಕಾಣ ಸಿಗುವುದು ಬಹಳ ಅಪರೂಪದ ದಿನಚರಿ. ನಾವೇಕೆ ಅದನ್ನೆಲ್ಲಾ ಮಾಡಬೇಕು? ನಾವೀಗ ಮುಂದುವರಿದ ಜನಾಂಗದವರು ಎಂದೇಳುವ ನಮ್ಮ ಮಹಿಳೆಯರಲ್ಲಿ ಅದನ್ನು ಮಾಡುವುದರಿಂದ ಏನು ಓಳಿತಿತ್ತು ಎಂದು ಪರಾಮರ್ಷಿಸುವ ಸೌಜನ್ಯತೆಯೂ ಸಹ ಇಲ್ಲದಿರುವುದು ವಿಪರ್ಯಾಸವೇ ಸರಿ ಎಂದೆನಿಸುತ್ತದೆ.

ಮೊದಲೆಲ್ಲ ಪ್ರತಿ ಮನೆಯಲ್ಲೂ ಕಡಲ್ಕಂಬ (ಮೊಸರು ಕಡೆಯುವ ಕಂಬ) ಮತ್ತು ಅದರ ಜೊತೆಗೆ ಕಡಲ್ಗೋಲು (ಮೊಸರು ಕಡೆಯುವ ಕೋಲು) ಇದ್ದೇ ಇರುತ್ತಿತ್ತು. ಇವೆಲ್ಲ ಏನು? ಅಂತ ಕೇಳಿದರೆ, ಕೆಲವರಿಗೆ ಹಿಂದೆಂದೂ ಕೇಳರಿಯದ ಶಬ್ಧ, ಇನ್ನೂ ಕೆಲವರಿಗೆ ಎಲ್ಲೋ ಕೇಳಿದ ನೆನಪು, ಮತ್ತೂ ಕೆಲವರಿಗೆ ಈಗ ಅವುಗಳೆಲ್ಲಾ ಎಲ್ಲಿ ನೋಡಲು ಸಿಗುತ್ತದೆ? ಎಂಬ ಆಶ್ಚರ್ಯ ಯಾಕೆಂದರೆ ಮೊಸರು ಕಡೆಯುವ "ಮೊಟಾರು ಮಷಿನ್" ಬಂದಿರುವುದರಿಂದ ಅವುಗಳೆಲ್ಲ ಮನೆಯಲ್ಲಿ ಮೂಲೆಗುಂಪಾಗಿದೆ ಅಥವಾ ಬಚ್ಚಲಮನೆಯ ಒಲೆಯನ್ನು ಬಿದ್ದು ಬೂದಿಯಾಗಿವೆ ಎಂಬ ವಿಷಾದದ ಭಾವ. ಸ್ವಲ್ಪವೇ ಸ್ವಲ್ಪ ಜನರಿಗೆ ಅದರ ಒಡನಾಟದ ಅನುಭವ ಈಗಲೂ ಸಿಗುತ್ತಿದೆ ಹಾಗಾಗಿ ಅದರಲ್ಲೇನಿದೆ ವಿಶೇಷವೆಂಬ ನಿರ್ಲಕ್ಷದ ಮಾತನಾಡುವವರಿರಬಹುದು.

ಮೊದಲು ಮೊಸರನ್ನು ಕಡೆಯಲು ಮಣ್ಣಿನ ಮಡಿಕೆಯ ಅಡಿಯಲ್ಲಿ ಹಿರ್ಕೆಯನ್ನು (ಬೆತ್ತದ ಎಳೆಗಳಿಂದ ಮಾದಿದ ಅಡಿ ಮಣೆ)  ಇರಿಸಿ ಕಡಲ್ಗೋಲನು ಮೊಸರಿನ ಮಡಕೆಯೊಳಗಿಟ್ಟು ಕಡಲ್ಕಂಬಕ್ಕೆ ಸಿಲುಕಿಸಿ ನೇಣನ್ನು ಕಟ್ಟಿ ಸೊರ...ಸೊರ ಎಂದು ಮೊಸರನ್ನು ಕಡೆಯಲು ಪ್ರಾರಂಭಿಸಿದರೆ ಸಾಬುವನ್ನು ತಿಕ್ಕಿದಾಗ ನೊರೆ ಬಂದಹಾಗೆ ಬೆಣ್ಣೆಯು ಮಜ್ಜಿಗೆಯ ಮೇಲೆ ತೇಲಿ ಬರುತ್ತಿದ್ದುದನ್ನು ನೋಡಲು ಖುಷಿಯ ಭಾವ ಕಡೆಯುವವರ ಮೊಗದಲ್ಲಿ ಮೂಡುತ್ತಿತ್ತು. ಮಕ್ಕಳು ಕದ್ದು ತಿನ್ನಬಾರದೆಂದು ಹುರಿಯ ಹಗ್ಗದಿಂದ ಮಾಡಿದ ಶಿಕ್ಕದ (ಹಗ್ಗದ ಜೋಳಿಗೆ) ಮೇಲೆ ಮಜ್ಜಿಗೆಯ ಬೊಡ್ಡೆಯನ್ನು ಇಡುತ್ತಿದ್ದರು. ಆದರೂ ಬೆಣ್ಣೆಯ ಬೊಡ್ಡೆಯೊಳಗೆ ಕೈ ಹಾಕಿ ಕದ್ದು ತಿನ್ನುತ್ತಿದ್ದ ಮಜವೇ ಬೇರೆ. ಆದರೆ ಇಂದಿಗೆ ಅವುಗಳೆಲ್ಲ ಮಾಸಿದ ಬರಿ ನೆನಪುಗಳು ಮಾತ್ರ.

ಮೊದಲೆಲ್ಲ ಏಳು ತಿಂಗಳು ತುಂಬಿದ ಮಹಿಳೆಯರಿಗೆ ಈ ಕೆಲಸವನ್ನು ಕೊಡುತ್ತಿದ್ದುದು ಬಹಳ ವಿಷೇಶವಾಗಿತ್ತು. ಯಾಕೆಂದರೆ ಗರ್ಭಿಣಿಯರಿಗೆ ಮೈ ಕೈಗಳೆಲ್ಲ ಆಡಲೆಂದು ಮತ್ತು ಮುಂದಾಗುವ ಹೆರಿಗೆ ಸರಾಗವಾಗಿ ಆಗಲಿ ಎಂಬ ಸದುದ್ದೇಶ ಇದರ ಹಿಂದಿರುತ್ತಿತ್ತು. ಮೊಸರನ್ನು ಕಡೆಯುವಾಗ ಕಡಲ್ಗೋಲಿಗೆ ಸುತ್ತಿದ ನೇಣನ್ನು ಹಿಡಿದು ಎಳೆಯುವಾಗ ಒಂದು ಕೈ ಮುಂದೆ ಮತ್ತೊಂದು ಕೈ ಹಿಂದೆ ಆಗುವುದರಿಂದ ಗರ್ಭಿಣಿಯರಿಗೆ ಸರಿಯಾದ ವ್ಯಾಯಾಮವಾಗಿ ಹೊಟ್ಟೆಯೊಳಗಿದ್ದ ಮಗು ಸರಾಗವಾಗಿ ಓಡಾಡಿಕೊಂಡು ಇರುತ್ತಿತ್ತು ಎಂಬ ನಂಬಿಕೆಯಿದೆ. ಇದು ಬರಿ ನಂಬಿಕೆ ಅಥವಾ ಮೂಢನಂಬಿಕೆಯಲ್ಲ, ಯಾಕೆಂದರೆ ಹಲವು ಜನರಿಗೆ ಸರಾಗವಾಗಿ ಹೆರಿಗೆಯು ಆಗಿದ್ದು ಸತ್ಯ ಎಂಬುದು ಬಹಳ ಜನರ ಮಾತು. ಇದರಿಂದಾಗಿ ಎರಡು ಕೆಲಸಗಳು ಜೊತೆಯಾಗಿ ಆಗುತ್ತಿತ್ತು. ಒಂದು ದೇಹದ ವ್ಯಾಯಾಮ ಇನ್ನೊಂದು ಅಗತ್ಯವಾಗಿ ಮಾಡಬೇಕಾದ ದಿನಚರಿಯ ಕೆಲಸ. ಹೀಗಾಗಿ ಆಗಿನ ಕಾಲದ ಬಸ್ರಿ ಹೆಂಗಸರಿಗೆ ಸಂಜೆ ಹೊತ್ತಲ್ಲಿ ಹೋಗುವ ವಾಯು ವಿಹಾರವಾಗಲಿ, ಹಾಸಿಗೆಯ ವಿಶ್ರಾಂತಿಯಾಗಲಿ ಬೇಕೆ ಆಗುತ್ತಿರಲಿಲ್ಲ. ಇವುಗಳನ್ನೆಲ್ಲ ಮಾಡದಿದ್ದರೂ ಹೆರಿಗೆ ಸರಾಗವಾಗಿ ಆಗಿ ಆರೋಗ್ಯದಿಂದಿರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಇನ್ನೊಂದು ಮಾಸಿದ ನೆನಪು "ಯಸಮುಚ್ಲು" ಎಂದರೆ ಬಾಗಿಸಿದ ಅನ್ನವನ್ನು ಮಾಡುವಾಗ ಬಳಸುತ್ತಿದ್ದ ಚಪ್ಪಟೆಯಾಗಿರುತ್ತಿದ್ದ ಮರದಿಂದ ಮಾಡಿದ ಮುಚ್ಚಳ. ಇದನ್ನು ಬರಿ ಅನ್ನ ಬಾಗಿಸಲಿಕ್ಕಷ್ಟೇ ಅಲ್ಲ ಮಗುವಾದ ಮೇಲೆ ಚಿಕ್ಕ ಮಗುವಿನ ಸ್ನಾನ ಮಾಡಿಸಿ ತೊಟ್ಟಲಿನಲ್ಲಿ ಮಲಗಿಸುವಾಗ ಮಗುವಿನ ತಲೆಯ ಆಡಿಯಲ್ಲಿ ಇದಕ್ಕೆ ಬಟ್ಟೆಯನ್ನು ಸುತ್ತಿ ಇಡುತ್ತಿದ್ದರು. ಕಾರಣವೆಂದರೆ ಮಗುವಿನ ತಲೆಗೆ ಸುಂದರವಾದ ರೂಪ ಕೊಡುವುದಾಗಿತ್ತು. ಇದನ್ನು ತಲೆಯ ಅಡಿಯಲ್ಲಿಟ್ಟು ಮಗುವನ್ನು ಕೆಲ ತಿಂಗಳುಗಳ ಕಾಲ ಮಲಗಿಸಿದರೆ ಎಳೆಗೂಸಿನ ತಲೆಯ ಹಿಂಬದಿ ಉಬ್ಬು ತಬ್ಬುಗಳಿಲ್ಲದೆ ಸಮವಾದ ರೂಪ ಪಡೆಯಯುತ್ತಿತ್ತು. ಆಧುನಿಕವಾಗಿ ಬೆಳೆಯುತ್ತಿರುವ ನಾವು ಇಂತಹ ಹಲವು ಸೂತ್ರಗಳು ನಮ್ಮ ಅನುಕೂಲಕ್ಕೆ ಇರುತ್ತಿದ್ದವು ಎಂಬುದನ್ನು ಮರೆತು ಮರೆಯಾಗಿಸುತ್ತಿದ್ದೇವೆ ಎಂಬುದು ಅತ್ಯಂತ ಬೇಸರದ ಸಂಗತಿಯಾಗಿದೆ. ಈಗಲಾದರೂ ಅವುಗಳತ್ತ ಮುಖ ಮಾಡಿ ನಮ್ಮ ಹಳೆಯ ಒಳಿತಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ನಮ್ಮ ಹೆಗಲ ಮೇಲಿದೆ ಎಂಬುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ.

Friday, June 2, 2017

ಸಾಧ್ಯಸಾಧ್ಯ ಮರೆವು

ನೂಲ ನೂಕಿ
ಬೆಟ್ಟ ಬೀಳಿಸಿಬಹುದು
ನೀರು ತಾಕದ ಹಾಗೆ
ಸಪ್ತ ಸಾಗರ ದಾಟಲುಬಹುದು
ಹನಿ ಕಂಬನಿಯನೂ ಹರಿಸದೆ
ಮನದ ಪ್ರೀತಿ ಮರೆಯಲಾಗದು
ಅಸಾಧ್ಯವನು ಸಾಧಿಸಬಹುದು
ಆದರೆ
ಸಾಧ್ಯವನು ಮರೆಮಾಚುವುದೇ ಪ್ರೇಮ

ಸಂಜೆ ಸಮಯಕೆ
ಕಡಲ ತೀರಕೆ
ಒಂಟಿಯಾಗಿ ಬರಲು
ಹಕ್ಕಿ ಹಾಡಲು
ಆರ್ತನಾದವು ಕೇಳಿಸುತಿದೆ
ಏಕೆ ಮರೆಯ ಬೇಕು?
ಹೇಗೆ ತೊರೆಯಲಿ? ಸಾಕು

ಜೊತೆಯಾಗಿ ಅನುಕ್ಷಣ
ಕಳೆದಿರುವ ಯವ್ವನ
ಏಕಾಂತಕೆ ದಾರಿಯಾಯ್ತು
ತಿಳಿ ಸಂಜೆ ಸೊಗಸಲಿ
ಏಕಾಂಗಿ ಬೇಸರದಲಿ
ಸನಿಹ ನೆನಪಾಗದೇನು?
ಸಂಗಡ ಬರಬಾರದೇನು? ಹೇಳು

Wednesday, May 31, 2017

ನೋಡಲಾಗದ ವ್ಯಥೆ

ದುಃಖ ತುಂಬಿದ
ಮೊಗದಲಿ ಕಂಡೆ
ಕಡಲ ಅಲೆಯಂತ ಕಂಬನಿ
ಮನಸಾರೆ ಅತ್ತುಬಿಡು
ಹರಿದು ಹೋಗಲಿ
ಕೊರಗಲು ತುಂಬಿದ ಕಣ್ಣೀರು

ನಾ ತಿರುಗಿ ನೋಡಲಾರೆ
ಭಾವ ಶರದಿಯ ಮುಖವನು
ನನ್ನ ಕಾಡುತಿದೆ ಪಾಪ ಪ್ರಜ್ಞೆಯು
ಏನು ಮಾಡಲಾಗದೆ ಕುಳಿತು
ಸೋಲಿನ ಅಸಾಹಯಕತೆಯು
ಮರುಗುವ ಮನಸನು ಮರೆಯಾಗಿಸು
ಭವ್ಯ ಭರವಸೆಯ ಮಡಿಲಿನಲಿ

ನಿನ್ನ ಕೆಂಗಣ್ಣಿನ ನೋಟಕೆ
ದುಮ್ಮಾನದ ಬಾಣವು
ಒಂದೊಂದೆ ಬಂದು ನಾಟುತಿದೆ
ನನ್ನೆದೆ ಕರುಣೆಯ ತುಮುಲಕೆ
ಸತ್ತ ದೇಹವು ಎದ್ದೇಳುವಂತೆ ಗೋಳಾಡು
ತುಂಬಿದ ನೋವು ಕರುಳಿಂದ ಹೋಗಲಿ
ಚಿರಶಾಂತಿಯ ಸಂವೇದನೆಯಲಿ

Monday, May 29, 2017

ಕಿರು ನಗು

ಅಲೆಮಾರಿ ಬದುಕಿನಲಿ
ಅನುರಾಗ ಬೆರೆಯುತಿದೆ
ಅನುಯಾಯಿ ಧ್ಯಾನದಲಿ
ಆಲಾಪ ಕೇಳುತಿದೆ
ವಿಹಾರದ ಸಂಜೆಯಲಿ
ವಿರಹವು ಅಳಿಯುತಿದೆ
ಇದಕ್ಕೆಲ್ಲ ಮೂಲವು
ಅವಳ ಕಿರು ನಗುವು                      

ತಿರುಗಿದೆ ಉಧ್ಯಾನವೆಲ್ಲ
ತಿಳಿಸದ ಅಧ್ಯಾಯವಿಲ್ಲ
ಅರಸುವ ಪರಿಯೊಂದ ಕಾಣೆ
ಸಿಗುಲು ಮಾಡುವೆ ಆಣೆ
ತೊರೆದು ಹೋಗೆನು ಬಾಳಲ್ಲಿ
ತಿರುಗಿ ಸುಳಿಯುವೆ ಜೊತೆಯಲ್ಲಿ
                   
ನಡೆಯುತ ದಾರಿಯಲಿ
ನಡುವಿನ ಕಣ್ಣಿನಲಿ
ಹುಡುಕುವೆ ತುಸು ಮೊಗವ
ಹೋಲದು ನಿನ್ನ ನಗುವ
ಕೇಳುತ ಒಳ ಮನಸ
ಹೇಳು ನಿನ್ನ ವಿಳಾಸ

Tuesday, May 23, 2017

ಕಣ್ಣೋಟ ಸೆಳೆಯುವ ಕನ್ನೆಮನೆ

ಕರಿಕಾನ ಕಣಿವೆಯಲಿ ಹುಟ್ಟಿ
ಧುಮುಕುವ ತೊರೆಯಾದೆ
ತೋಟದ ಬೆಳೆಗೆ ಆಹಾರವು
ನೀ ಹರಿವ ಅಮೃತವು

ಕಂಡಲ್ಲಿ ಅಡ್ಡ ಕಟ್ಟಿ
ಸೆಳೆಯುವರು ತಮ್ಮೆಡೆಗೆ
ಹಿತ್ತಲಿನ ಹಸಿವಿಗಾಗಿ
ಬರಿದಾಗದಂತೆ ಬಾವಿ

ಅದಕಂಜದೆ ಧುಮ್ಮಿಕ್ಕಿ ಹರಿದಿರುವೆ
ಒಡಲಾದ ಕಡಲ ಕಿನಾರೆಯವರೆಗೆ
ಮೇಲಿನೂರು ಕೆಳಗಿನೂರೆಂದು
ಇಬ್ಬಾಗಿಸಿ ನಲಿದಿರುವೆ ನೀಲಕೋಡಿನಲಿ

ಈಜು ಕಲಿಸುತ ದೇವನ ಮೀಸುವೆ
ಕಾರ್ತೀಕ ಭಜನೆಗೆ ಅಂತ್ಯ ಹಾಡುವೆ
ಜಟಿಲ ದಾರಿಯಲಿ ಚಲಿಸುತ
ಕನ್ನೆಮನೆ ಸಾರವೆಂದು ಗುರುತಾಗಿರುವೆ

Monday, May 22, 2017

ಮತ್ತೆ ಸುರಿಯಲಿ

ಮತ್ತೇ ಮತ್ತೆ ಹನಿಯುದುರುವುದೇ?
ಬಡವ ಬಯಸಿದ ಮಣ್ಣ ಹೊನ್ನಾಗಿಸಲು
ಇಳೆಯ ದಾಹ ನೀಗಿಸಲು
ಹಸಿರಿನ ಬಣವ ಹೆಚ್ಚಿಸಲು
ಧೋ ಎಂದು ಸುರಿಯಲಿ ಮುಂಗಾರು ಮಳೆ


ಬೀಜ ಬಿತ್ತುವ ರೈತನ ಕಾತುರಕೆ
ಎಂದು ನೆನೆಯುವುದು ತಣಿದ ಧರಣಿ?
ಸಮೀಪಿಸಲಿ ತುಂಡು ಮೋಡಗಳು
ಗುಡುಗು ಮಿಂಚುಗಳು ಆರ್ಭಟಿಸಲು
ನೆನೆಗುದಿಗೆ ಬಿದ್ದಿರುವ ಊಳುವ ಕೆಲಸಕೆ
ಚಾಲನೆ ಸಿಗಲಿ ಬೆನ್ನೆಲುಬಿನ ಮೂಲಕ
ಧೋ ಎಂದು ಸುರಿದಾಗ ಮುಂಗಾರು ಮಳೆ

ಜಾನುವಾರುಗಳ ಬವಣೆ ನೀಗಲು
ಮೇವುಗಳು ಬೆಳೆಯಲಿ ವಿಫುಲವಾಗಿ
ನೀರಡಿಕೆಯ ದಾಹ ಕುಂದಲು
ಕರೆ ಕಟ್ಟೆಗಳು ತುಂಬಿ ಹರಿಯಲಿ
ಉರಿತಾಪದ ಧಗೆಯು ಆರಲು
ಹಸಿರಿನೆಲೆಗಳ ತಂಗಾಳಿ ಬೀಸಲಿ
ಧೋ ಎಂದು ಸುರಿದಾಗ ಮುಂಗಾರು ಮಳೆ

Wednesday, May 17, 2017

ಹೆಣ್ಣೆಂದರೆ ಯಾರು?

ಹೆಣ್ಣೆಂದರೆ ಯಾರು?
ಎರಡು ಸಂಸ್ಕೃತಿ, ಸಂಪ್ರದಾಯಗಳನು ಬೆಸೆಯುವ ಸೇತುವೆ

ಹೆಣ್ಣೆಂದರೆ ಯಾರು?
ಭಾಷೆಯನು ಪಸರಿಸುವ ರಾಯಭಾರಿ

ಹೆಣ್ಣೆಂದರೆ ಯಾರು?
ಹಲವು ಕಲೆ-ಶಿಲ್ಪಕಲೆಗಳ ಪ್ರತಿನಿಧಿ

ಹೆಣ್ಣೆಂದರೆ ಯಾರು?
ಹೊತ್ತು ಹೆತ್ತು ಸಲಹುವ ತಾಯಿ

ಹೆಣ್ಣೆಂದರೆ ಯಾರು?
ಜೊತೆಯಾಡಿ ಸರಿ ತಪ್ಪು ತಿಳಿಸುವ ಸಹೋದರಿ

ಹೆಣ್ಣೆಂದರೆ ಯಾರು?
ತಪ್ಪನ್ನು ಶಿಕ್ಷಿಸಿ ಸರಿಯಾಗಿ ಬೋಧಿಸುವ ಶಿಕ್ಷಕಿ

ಹೆಣ್ಣೆಂದರೆ ಯಾರು?
ನಮ್ಮಲ್ಲಿನ ಅಂತಃಶಕ್ತಿಯನ್ನರಿತು ಪ್ರೇರೇಪಿಸುವ ಗೆಳತಿ

ಹೆಣ್ಣೆಂದರೆ ಯಾರು?
ಒಲವಿನ ಪ್ರೀತಿಯನು ಧಾರೆ ಎರೆವ ಪ್ರೇಯಸಿ

ಹೆಣ್ಣೆಂದರೆ ಯಾರು?
ಸಂತಾನದ ಮೂಲಕ ಪೀಳಿಗೆ ಪ್ರಾರಂಭಿಸುವ ಹೆಂಡತಿ

ಹೆಣ್ಣೆಂದರೆ ಯಾರು?
ಜೀವನದ ಏಳು ಬೀಳಿನಲಿ ಜೊತೆಬರುವ ಸಂಗಾತಿ

ಹೆಣ್ಣೆಂದರೆ ಯಾರು?
ಮನೆ ಮನವ ಗುಡಿಸಿ ಸ್ವಚ್ಛವಾಗಿಡುವ ಮಗಳು

ಹೆಣ್ಣೆಂದರೆ ಯಾರು?
ಕಥೆಯನ್ನು ಹೇಳುವ ನೀತಿಯನು ಬೋಧಿಸುವ ಅಜ್ಜಿ

ಹೆಣ್ಣೆಂದರೆ ಯಾರು?
ಸಹನೆಯಲಿ ಮನ್ನಿಸುವ ಕ್ಷಮಯಾ ಧರಿತ್ರಿ

ಹೆಣ್ಣೆಂದರೆ ಯಾರು?
ಬಾಹ್ಯಾಂತರದ ರೂಪ ತಿಳಿಸುವ ಕನ್ನಡಿ

ಹೆಣ್ಣೆಂದರೆ ಯಾರು?
ತಾನು ಗಳಿಸಿದ ವಿದ್ಯೆಯನು ಅರಹುವ ಶಾಲೆ

Monday, May 15, 2017

ಕಾರ್ಮೋಡ

ಬೆಳ್ಳಿ ಮುಗಿಲು ಮರೆಯಾಗಿದೆ
ಕಸವಿರದ ಕಾರ್ಮೋಡ ಕವಿದಿದೆ
ಇಳೆಯಲ್ಲರಳಿದ ಬೆಳಕು ಬರಿದಾಗಿದೆ
ಇರುಳಿನ ಛಾಯೆಯು ರವಿಯನ್ನು ನುಂಗಿದೆ

ಕಡಿದಾದ ಕರಿ ಮೋಡದ ಭಾರಕೆ
ಸ್ಥಿರವಾದ ಬಾನೇ ಬಾಗಿದೆ
ಹನಿಗಳ ಸುರಿಸಲು ಮೊದಲಾನ್ವೇಷಣೆಗೆ
ಹರಿವ ನದಿಗಳ ದಾರಿಯ ನೋಡಲು ಕಡಲಿನೆಡೆಗೆ

ಕಾರ್ಮೋಡ ಕವಿದಿರಲು ಹಲವು ಭರವಸೆಗಳು
ಕುತ್ತಿಗೆಯ ಮೇಲೆತ್ತಿ ಹಂಬಲಿಪ ಮನಗಳು
ಬಿತ್ತನೇಯ ಬೀಜವ ಅರಸುವ ಕಣ್ಣುಗಳು
ದಾಹ ನೀಗಬಹುದೇ ಧರಿತ್ರಿಯ ಒಡಲಿನೊಳು?

Tuesday, May 9, 2017

ಹತ್ತು ಹೆಜ್ಜೆ ಗುರುತುಗಳ ಹಿನ್ನೋಟ ಮುನ್ನೆಡೆಗೆ ಮಾದರಿ

ಮೊದಲ ವಂದನೆಯೂ ಮತ್ತು ಪೂಜೆಯೂ ಶ್ರೀ ಗಣೇಶನಿಗೆ ಮಾಡುವ ಹಾಗೆ ಸಂಘಟನೆಯನ್ನು ಮೊದಲಿಗೆ ಎಳೆದು ತಂದವನು ಸಹ ಗಣೇಶನೇ. ನಮ್ಮ ವಿದ್ಯಾರ್ಥಿ ಜೀವನದಲ್ಲೇ ಎನೋ ಸಾಧಿಸಬೇಕೆಂದುಕೊಂಡಿದ್ದ ನಮಗೆ ಕಂಡಿದ್ದು ಸ್ವಯಂ ಸೇವಕ ಸಂಘದ ಶಿಸ್ತು, ಛಲ, ಮುಂದಾಳತ್ವ, ಸಂಘಟನಾ ಶಕ್ತಿಯ ವೇದಿಕೆ. ಇಲ್ಲಿಂದ ಸಂಘಟಿತರಾದ ನಾವು ಮುಂದಿನೆರಡು ವರ್ಷ ಸುವರ್ಣ ಶಾಖೆಯ ಮೆರುಗನ್ನು ನೀಡಿದೆವು. ನಂತರದ ದಿನಗಳಲ್ಲಿ ವಿದ್ಯಭ್ಯಾಸಕ್ಕೆಂದು ಬೇರೆಡೆಗೆ ತೆರಳಿದ್ದರಿಂದ ಶಾಖೆ ಸ್ಥಗಿತಗೊಂಡಿತು. ಶಾಖೆ ಇರದೆ ಶಾಖಾ ವಾರ್ಷಿಕೋತ್ಸವವನ್ನು ಮಾಡಬಾರದೆಂದಾಗ ನಮ್ಮ ಸಂಘಟನಾ ಕ್ರಿಯಾಶೀಲತೆಗೆ ಘಾಸಿಯಾಯಿತು.

ಆಗ ನಮ್ಮ ಸಂಘಟನೆಯನ್ನು ಮುಂದುವರೆಸಬೇಕೆಂದು ಯೋಚಿಸಿ ಸಾರ್ವಜನಿಕ ಗಣೇಶೋತ್ಸವದ ಎದುರಲ್ಲಿ ಕುಳಿತಿದ್ದ ಒಂದು ಗಣೇಶ ಮತ್ತು ಎರಡು ವಿನಾಯಕರಿಗೆ ಹೊಳೆದದ್ದು "ವಿಶ್ವ ಭಾರತಿ ವಿದ್ಯಾರ್ಥಿ ಬಳಗ". ನಂತರದ ಕೆಲಸ ಬಳಗಕ್ಕೊಂದು ಲಾಂಛನ ಮತ್ತು ದೃಢವಾದ ಧ್ಯೇಯೋದ್ದೇಶಗಳನ್ನು ನಿರೂಪಿಸುವ ಒಂದು ಮಹತ್ತರ ಕೆಲಸ. ಇವುಗಳನ್ನು ನಿರೂಪಿಸಿ, ಹಿರಿಯರೊಂದಿಗೆ ಸಮಾಲೋಚಿಸಿ ದಿನದ ಶಾಖೆಗೆ ಬರುತ್ತಿದ್ದ ಎಲ್ಲ ತರುಣರನ್ನು ಜೊತೆ ಸೇರಿಸಿ ಅವರೊಂದಿಗೆ ಮಾತನಾಡುತ್ತ ಎಲ್ಲರೂ ಜೊತೆ ಸೇರಿ ಕೆಲಸ ಮಾಡೋಣವೆಂದು ಚರ್ಚಿಸಿ ಒಂದು ರೂಪು ರೇಷೆಯನ್ನು ಇಟ್ಟೆವು. ಮೊದಲ ಹೆಜ್ಜೆಯಲ್ಲಿ ಜೊತೆಯಾದ ವಿದ್ಯಾರ್ಥಿಗಳೆಂದರೆ ವಿನಾಯಕ ಭಾಗ್ವತ, ವಿನಾಯಕ ಹೆಗಡೆ, ಗಣೇಶ ಭಾಗ್ವತ, ವಿನಾಯಕ ಭಾಪಟ್, ಪ್ರಜ್ವಲ ಭಟ್ಟ, ವಿನಾಯಕ ಹೆಗಡೆ, ವಿನಾಯಕ ಭಟ್ಟ, ದರ್ಷನ ಹೆಗಡೆ, ಗಣೇಶ ಭಟ್ಟ. ಇವರೆಲ್ಲರೂ ಸೇರಿ ಅಂದು ಪ್ರಾರಂಭಿಸಿದ ಈ ಬಳಗ ಗಣ್ಯರಿಂದ ಉದ್ಘಾಟನೆಗೊಂಡು ನಂತರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಆವತ್ತಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿತು.

ಒಂದು ಸಂಘಟನೆ ಅದೆಷ್ಟು ಕಷ್ಟ ಎನ್ನುವುದು ಮುಂದಾಳತ್ವ ವಹಿಸುವ ಕೆಲವರಿಗಷ್ಟೇ ಗೊತ್ತು. ಯಾಕೆಂದರೆ ಆಗಷ್ಟೇ ಪ್ರೌಢ ಶಾಲೆ ಮುಗಿಸಿದ ವಿದ್ಯಾರ್ಥಿಗಳಾಗಿದ್ದ ನಮ್ಮಲ್ಲಿ ಮೈ ಚರ್ಮ ಸೊಲಿದರೂ ಒಂದು ರೂಪಾಯಿ ಬಿಡಿಗಾಸು ಸಿಗದ ಸಮಯ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬೇಕಾಗುವಷ್ಟು ಹಣವನ್ನು ಸಂಗ್ರಹಿಸಿ, ಚಪ್ಪರ, ತೋರಣ, ವೇದಿಕೆಯ ಅಲಂಕಾರ, ತಿಂಡಿ ಪೊಟ್ಟಣಗಳ ವ್ಯವಸ್ಥೆ ಹೀಗೆ ಪ್ರತಿಯೊಂದು ಕೆಲಸಗಳನ್ನು ಸ್ವಂತವಾಗಿ ನಿರ್ವಹಿಸಿಕೊಂಡಿದ್ದ ನಾವು ಮನೆಯ ಹಿರಿಯವರಿಂದ ಬೈಸಿಕೊಂಡರೂ, ಬೆವರಿನ ಹನಿಗಳನ್ನು ಲೆಕ್ಕಿಸದೆ, ಕಾರ್ಯಕ್ರಮವನ್ನು ಮಾಡಿಯೇ ಸಿದ್ಧ ಎಂದು, ಜನರನ್ನು ತಲುಪುವ ಉದ್ದೇಶದಿಂದ ಶಕ್ತಿಮೀರಿ ದುಡಿದ ವಿದ್ಯಾರ್ಥಿಗಳು ನಾವೆಂದು ಹೇಳಿಕೊಳ್ಳಲು ಇಂದು ಹೆಮ್ಮೆಯಾಗುತ್ತದೆ.

ಅಧಿಕಾರಿ ಶಾಹಿ ವ್ಯಕ್ತಿತ್ವ ಬೆಳೆಸಿಕೊಳ್ಳದೆ ಹಿಂದೂ ಮುಂದೂ ನಾವೆಲ್ಲ ಒಂದು ಎಂಬ ಸಮಚಿತ್ತದಿಂದ ನಿರ್ಧರಿಸಿದೆವು. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಎಂಬೆಲ್ಲ ಯಾವುದೇ ಅಧಿಕಾರದ ಸ್ಥಾನಗಳನ್ನು ಇಟ್ಟುಕೊಳ್ಳದೆ ಎಲ್ಲರೂ ಸಮಾನರೂ ಎಂಬ ಧ್ಯೆಯೋದ್ದೇಶದೊಂದಿಗೆ ಬಳಗದ ಸಹಿಯಲ್ಲಿಯೂ ಸಹ ಸರ್ವ ಸದಸ್ಯರೆಂದು ನಮೂದಿಸುವುದರೊಂದಿಗೆ ನಾವೆಲ್ಲ ಒಂದೇ ಎಂದು ಗಂಟಾಘೋಷದಿಂದ ಹೇಳಿಕೊಂಡು ನಡೆದು ಬರುತ್ತಿರುವ ಸಂಘಟನೆ ನಮ್ಮದು. ನಮ್ಮ ಬಳಗದ ಬೆಳವಣಿಗೆಗೆ ನೀರಿನಂತೆ ಎರೆದ ಹಲವರ ಬೆವರ ಹನಿಗಳಿವೆ. ಇದು ಯಾವುದೋ ಒಬ್ಬನ ಹೆಸರಿನಿಂದಾಗಿ, ಯಾವುದೋ ಒಂದು ಕುಟುಂಬದ ಕೂಸಾಗಿ ಅಥವಾ ಯಾವುದೋ ಒಂದು ಅಧಿಕಾರಿ ಶಾಹಿಗಳು ಹುಟ್ಟು ಹಾಕಿದ ಗುಂಪಲ್ಲ. ಯಾಕೆಂದರೆ ಇದು ದೇಶಕ್ಕೇನಾದರೂ ಮಾಡಬೇಕೆಂಬ ಸದುದ್ದೇಶ, ನಮ್ಮಿಂದ ತೆರೆಮರೆಯ ಕಾಯಿಗಳನ್ನು ಹೊರತರುವ ಪ್ರಯತ್ನ, ನಮ್ಮ ಸಂಸ್ಕೃತಿ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಹೊಸ ಪೀಳಿಗೆಯನ್ನು ತಲುಪುವುದು, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯವಾಗುವಂತಹ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮಾಡಿ ಅವರು ಸ್ವಾವಲಂಭಿಗಳಾಗಿ ಬದುಕಲೆಂಬ ದೂರಾಲೋಚನೆಯಿಂದ ಹುಟ್ಟಿಕೊಂಡ ಒಂದು ಸಮಾನ ಮನಸ್ಕರ ಸಂಘಟನಾ ಶಕ್ತಿಯೇ ನಮ್ಮ ಈ ವಿಶ್ವ ಭಾರತಿ ವಿದ್ಯಾರ್ಥಿ ಬಳಗ.

ಬಳಗಕ್ಕೆ ಬಂಡವಾಳವನ್ನು ಹೊಂದಿಸುವ ಉದ್ದೇಶದಿಂದ ನೆರಹೊರೆಯ ಸ್ಥಳಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಬಡಿಸುವ ತಂಡಗಳನ್ನು ಮಾಡಿದೆವು. ಪ್ರಾರಂಭದಲ್ಲಿ ೭೦-೮೦ ರೂಪಾಯಿಗಳನ್ನು ಕೊಡುತ್ತಿದ್ದರೂ ಕೊಟ್ಟ ಹಣದಲ್ಲಿ ಬಳಗಕ್ಕೆಂದು ಪ್ರತಿಯೊಬ್ಬರೂ ೨೦ ರೂಪಾಯಿಗಳನ್ನು ನೀಡುತ್ತಿದ್ದರೂ. ಪ್ರತಿಯೊಬ್ಬರ ಸಂಬಳದಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಜಮಾಯಿಸುತ್ತಿದ್ದೆವು. ಹೀಗೆ ಶುರುವಾದ ಬಳಗದ ಬಡಿಸುವ ತಂಡದಿಂದ ಬಳಗದ ಹಣ ವೃದ್ಧಿಯಾಗಿದ್ದು ಬಳಗದ ನೀತಿ ನಿಯಮಗಳಿಗೆ ಸಮ್ಮತಿಸಿ ಶ್ರಮಿಸಿದ ಹಲವಾರು ಜನರುಗಳಿಂದ ಎನ್ನುವುದು ನೆನೆಯಲೇ ಬೇಕಾದ ವಿಷಯ.

ಚಿಕ್ಕ ಮಕ್ಕಳಿಂದ ಹಿಡಿದು ಮಹಿಳೆಯರವರೆಗಿನ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದೆವು. ಅಷ್ಟೇ ಅಲ್ಲದೆ ದೂರದರ್ಶನದ ಎದುರುಗಡೆ ಕುಳಿತಿರುವ ಹೆಂಗಳೆಯರನ್ನು ನಮ್ಮ ಕಾರ್ಯಕ್ರಮದ ವೇದಿಕೆಯ ಮುಂಬಾಗದಲ್ಲಿ ಸೇರಿಸಿದ ಯಶಸ್ವಿ ಕಾರ್ಯಕ್ರಮಗಳನ್ನು ಕೊಟ್ಟ ಬಳಗ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಅದಲ್ಲದೇ ಮಹಿಳೆಯರಿಗಾಗಿ ಪ್ರಾರಂಭಿಸಿದ ಸಾಂಪ್ರದಾಯಿಕ ಹಾಡಿನ ಸ್ಪರ್ಧೆಯು ನಂತರದ ದಿನಗಳಲ್ಲಿ ಬೇರೆ ಬೇರೆ ಉನ್ನತ ಸಂಸ್ಥೆಗಳಲ್ಲಿ ನಕಲಿಸಿದ ನಿದರ್ಶನವೂ ಸಹ ನಮ್ಮ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಎಂಬ ಖುಷಿಗೆ ಒಂದು ಸಾಕ್ಷಿ. ಸಂಪನ್ಮೂಲ ವ್ಯಕ್ತಿಗಳಿಂದ ಕೊಡಿಸಿದ ಶೈಕ್ಷಣಿಕ ಸಲಹೆಗಳಿಂದ ಹಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ಪ್ರಶಂಸನಾರ್ಹವಾಗಿದೆ. ಹಾಗೆ ತೆರೆಮರೆಯಲ್ಲಿ ಅಡಗಿದ್ದ ಪ್ರತಿಭೆಗಳನ್ನು ಗುರ್ತಿಸಿ ಅವರಿಗೊಂದು ವೇದಿಕೆಯನ್ನು ಒದಗಿಸಿಕೊಟ್ಟು ಅವರ ಪ್ರತಿಭಾ ಪ್ರದರ್ಶನದಿಂದ ಬೇರೆಯವರಿಂದ ಗುರುತಿಸ್ಪಟ್ಟು ಬೇರೆಡೆಯಲ್ಲಿ ಅವಕಾಶಗಳು ದೊರೆತ ಹಲವು ನಿದರ್ಶನಗಳು ನಮ್ಮ ಕಣ್ಣೆದುರಿಗಿರುವುದು ನಮ್ಮ ಬಳಗದ ಕೀರ್ತಿ ಹೆಚ್ಚುವಂತೆ ಮಾಡಿದ್ದು ಸಂತಸದ ಸುದ್ದಿ. ಪ್ರತಿ ವರ್ಷವು ಹೊಸತರನಾದ ಕಾರ್ಯಕ್ರಮಗಳನ್ನು ನೀಡುತ್ತ ಜನಮಾನಸದಲ್ಲಿ ಬಳಗದ ಬಗ್ಗೆ ಅಭಿಮಾನ ಬೆಳೆದಿರುವುದು ನಮ್ಮ ಪ್ರಯತ್ನಕ್ಕೆ ಸಿಕ್ಕ ಸಾರ್ಥಕತೆ ಮತ್ತು ಇನ್ನೂ ಒಳ್ಳೊಳ್ಳೆ ಕಾರ್ಯಕ್ರಮ, ಕೆಲಸಗಳನ್ನು ಮಾಡಲು ಪ್ರೇರಣೆಯಾಗಿದೆ.

ಇಷ್ಟೆಲ್ಲ ಹೇಳಿದ ಮೇಲೆ ಇನ್ನೊಂದನ್ನು ನೆನಪಿಸಿಕೊಂಡು ಅವರಿಗೆ ನಮಸ್ಕರಿಸದೇ ಹೋದರೆ ಇಂದು ನಾವಿಲ್ಲಿ ಸಂಘಟಿತರಾಗಿರುವುದಕ್ಕೆ ಅರ್ಥವಿರದಂತಾಗುತ್ತದೆ. ಅವರೆಂದರೆ ಬಳಗದ ಎಲ್ಲಾ ಸದಸ್ಯರ ತಂದೆ ತಾಯಂದಿರಿಗೆ ನಮ್ಮ ಎಲ್ಲಾ ಸದಸ್ಯರ ಎದೆಯಾಳದಿಂದ ಕೈ ಜೋಡಿಸಿ, ಶಿರವೆರಗಿ, ಸಾಷ್ಟಾಂಗ ನಮಸ್ಕಾರಗಳನ್ನು ಸಮರ್ಪಿಸುತ್ತಿದ್ದೇವೆ. ಯಾಕೆಂದರೆ ಅಂದು ನಾವು ಮೀಸೆ ಚಿಗುರದ ವಿದ್ಯಾರ್ಥಿಗಳಾಗಿದ್ದಾಗ ನಮ್ಮನ್ನ ಒಂದೆರಡು ವರ್ಷ ಬೈದರೂ ಮನೆಗೆ ಬಂದಾಗ ಮಗಾ ಊಟ ಮಾಡು ಎಂದು ಕೈತುತ್ತನ್ನಿತ್ತು ಪ್ರೇರೇಪಿಸಿದ ಅವರುಗಳನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ. ಈ ಬಳಗದಿಂದ ನಮಗೇನು ಸಿಕ್ಕಿತು ಎಂದು ಕೆಲವರು ಕೇಳುವುದುಂಟು, ಹಾಗಾಗಿ ಅವರುಗಳಿಗೆ ಈ ಮೂಲಕ ನಾವು ಹೇಳುವುದೊಂದೆ ಇದರಿಂದಾಗಿ (ಬಳಗದಿಂದಾಗಿ) ನಮಗೆ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹೇಗೆ ಮಾತನಾಡಬೇಕು, ಹೇಗೆ ಸಮಾಜಮುಖಿಯಾಗಿ ಬದುಕಬೇಕು, ಯಾರೊಂದಿಗೆ ಹೇಗೆ ಬೇರೆಯಬೇಕು ಎಂಬೆಲ್ಲಾ ವಿಷಯಗಳು ಶಾಲೆಯಲ್ಲಿ ಕಲಿಸದಿದ್ದರೂ, ಬೇರೊಬ್ಬರು ಹೇಳಿಕೊಡದಿದ್ದರೂ ನಾವು ಕಲಿತುಕೊಂಡೆವೆನ್ನುವುದು ನಮಗೆ ಸಿಕ್ಕ ಅನರ್ಘ್ಯ ರತ್ನವೆಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ನಾಲ್ಕು ಜನ ನಮ್ಮನ್ನು ಗುರುತಿಸುವ ಹಾಗಾಗಿದ್ದು ಸಂಘಟನೆಯ ಶಕ್ತಿಯಿಂದಾಗಿದೆ.

ನಮ್ಮ ನಡುವೆ ಇರುವ ಹಲವು ಸಾಧಕರು ಅಂದರೆ ಸೈನಿಕರು, ವೈದ್ಯರೂ, ಸಮಾಜ ಸೇವಕರು ಹೀಗೆ ಹಲವರನ್ನು ಗುರ್ತಿಸಿ ಅವರನ್ನು ಸನ್ಮಾನಿಸಿದೆವು. ಅದಷ್ಟೇ ಅಲ್ಲದೇ ವಿದ್ಯಾರ್ಥಿಯಾಗಿ ಅತಿ ಹೆಚ್ಚಿನ ಅಂಕ ಗಳಿಸಿದವರಿಗೂ ಸಹ ಗೌರವ ಸಮರ್ಪಿಸಿ ಪ್ರೋತ್ಸಾಹಿಸಿದೆವು. ನಮ್ಮ ಸುತ್ತ ಮುತ್ತಲಿರುವ ಹಲವು ತೆರೆಮರೆಯ ಪ್ರತಿಭೆಗಳನ್ನು ಗುರ್ತಿಸಿ ಅವರವರ ಕಲಾ ಪ್ರಕಾರದ ಪ್ರತಿಭಾ ಪ್ರದರ್ಶನಕ್ಕೆ ಮುಕ್ತ ವೇದಿಕೆನ್ನು ಒದಗಿಸಿಕೊಟ್ಟೆವು. ಯಾವುದೇ ಪ್ರಕಾರದ ಕಲೆಯಾಗಿರಲಿ ಅಂದರೆ ದೇಶ ಪ್ರೇಮ ಮೆರೆಯುವ ನೃತ್ಯ-ಹಾಡು, ಯಕ್ಷಗಾನ, ಚಂಡೆ, ಭರತನಾಟ್ಯ, ಶಾಸ್ತೀಯ ಮತ್ತು ಸುಗಮ ಸಂಗೀತ, ಕೊಳಲು ವಾದನ, ತಬಲಾ ವಾದನ, ನಾಟಕ, ಚಿತ್ರಕಲೆ, ಚಲನಚಿತ್ರ ಗೀತೆ, ನೃತ್ಯ ರೂಪಕ ಹಾಗು ಮತ್ತಿತರ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಪ್ರತಿಭಾವಂತರಿಗೆ ಒಂದು ಅವಕಾಶ ಮಾಡೀಕೊಟ್ಟೆವು.

ಹತ್ತು ವರ್ಷಗಳಲ್ಲಿ ವಿರಹ, ವಿರೋಧ, ಸಂತಸ, ಯಶಸ್ಸು ಹೀಗೆ ಎಲ್ಲವನ್ನು ಹೇಗೆ ಸಮನಾಗಿ ತೆಗೆದುಕೊಂಡು, ಸಮರ್ಪಕವಾಗಿ ಮೆಟ್ಟಿನಿಂತು, ಹೇಗೆ ಮುನ್ನುಗ್ಗಬೇಕೆಂಬ ಸದ್ವಿಚಾರಗಳನ್ನು ನಮಗೆ ಕಲಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಿದ್ದರೂ ನಮ್ಮ ಬಳಗದಲ್ಲಿ ಯಾರೊಬ್ಬರೂ ಉಂಡಾಡಿ ಗುಂಡನಂತೆ ಪೋಲಿ ಪೋಕರಿಯಾಗದೆ ಎಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತು ಅವರವರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವುದು ಪ್ರಶಂಸನಾರ್ಹವಾಗಿದೆ. ಕೆಲವು ತಂದೆ ತಾಯಂದಿರು ತಮ್ಮ ಮಕ್ಕಳಿಗೆ ನಮ್ಮನ್ನು ತೋರಿಸಿ ನೀನು ಹೀಗೆ ಜನರೊಂದಿಗೆ ಬೆರೆತು ಕ್ರೀಯಾಶೀಲನಾಗು ಎಂದು ನಮ್ಮನ್ನು ಆದರ್ಷವ್ಯಕ್ತಿಗಳಂತೆ ತೋರಿಸುವುದು ನಮ್ಮ ಬೆವರಿಗೆ ಸಿಕ್ಕ ಬೆಲೆಯಾಗಿದೆ. ಇದು ನಮ್ಮನ್ನು ನಾವು ಹೊಗಳಿಕೊಳ್ಳುತ್ತಿರುವುದಲ್ಲ ಬದಲಿಗೆ ನಮ್ಮ ಕೆಲಸದ ಸಾರ್ಥಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುದಾಗಿದೆ. ಬನ್ನಿ ಬೆಂಬಲಿಸಿ, ನಿಮ್ಮ ಮಕ್ಕಳನ್ನು ನಮ್ಮೊಂದಿಗೆ ಕಳುಹಿಸಿಕೊಡಿ ಅಥವಾ ನಮ್ಮಂತೆ ಮುಂದಾಳತ್ವದ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಮಾಡಿ ಅದರಿಂದ ಸದೃಢ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡೋಣ.

ಇವನ್ನೆಲ್ಲ ನಿಮ್ಮ ಮುಂದೆ ತರುವ ಯೋಚನೆಯಿಂದ ೧೧ ನೇ ವರ್ಷದ ಕಾರ್ಯಕ್ರಮದಲ್ಲಿ ನೆನಪನ್ನು ಮರುಕಳಿಸುವ, ದುಡಿದು ಸಹಕರಿಸಿದ ಕೈಗಳನ್ನು ಸ್ಮರಿಸುವ ಸ್ಮರಣ ಸಂಚಿಕೆಯನ್ನು ಹೊರ ತಂದೆವು. ನಮ್ಮ ಬಳಗದ ಸಕ್ರೀಯ ಸದಸ್ಯರ ಶ್ರಮದಿಂದಾದ ಒಂದು ಗುರುತರ ಕೆಲಸ ಇದಾಗಿದೆ. ಬೇರೆ ಬೇರೆ ಸಮಾಜಮುಖಿ ಕಾರ್ಯಗಳತ್ತ ಹೆಜ್ಜೆ ಹಾಕುವ ನಿಟ್ಟಿನಲ್ಲಿರುವ ಈ ಯುವ ಸಂಘಟನೆಯನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಕಾರ್ಯ ನಿಮ್ಮಿಂದಾಗಬೇಕಿದೆ. ಬನ್ನಿ ಕೈ ಜೋಡಿಸಿ, ಸಹಕರಿಸಿ ಏಕತೆಯಿಂದ ಮುನ್ನುಗ್ಗಿ ಭಾರತವನ್ನು ವಿಶ್ವ ಗುರುವನ್ನಾಗಿಸುವತ್ತ ದಾಪುಗಾಲಿರಿಸೋಣ.

Wednesday, May 3, 2017

ಬಿಸಿಲೆ

ಮಳೆಗಾಲದ ಪೂರ್ವದಲಿ
ತಯಾರಿ ಮಾಡಿಸಲು
ಪ್ರಖರವಾಗಿ ಪ್ರಜ್ವಲಿಸುವ
ಉರಿಶಾಖದ ಹೆಸರೇ ಬಿಸಿಲು

ದವಸ ಧಾನ್ಯಗಳನು
ಉರಿಸುವ ಕಟ್ಟಿಗೆಯನು
ತಿಂಡಿ ತಿನಿಸುಗಳ ಮೂಲವನು
ಒಣಗಿಸುವ ಯಂತ್ರವೇ ಬಿಸಿಲು

ದಾಹದ ಅನುಭವವನು
ದನ ಕರುಗಳಿಗೆ ಹುಲ್ಲನು
ಸುಡುವ ಬೇಸಿಗೆಯನು
ನೀಡುವ ಅನುದಾನಿಯೇ ಬಿಸಿಲು

ಬಾಯ್ಬಿಟ್ಟಿ ಹೇಳುವ
ಕೈಯೊಡ್ಡಿ ದುಡಿಸುವ
ನಿಸರ್ಗದ ಸೌಂದರ್ಯವ
ತೋರ್ಪಡಿಸುವೆ ನೀ ಬಿಸಿಲೆ

Wednesday, April 26, 2017

ಆರೋಹಣ

ಅನಿಸಿಕೆಯ ಗಾನಕೆ
ಆತ್ಮದ ಆಲಾಪನೆ
ಅಂತರಂಗದ ಮಿಡಿತಕೆ
ಆತ್ಮೀಯತೆಯ ಆರಾಧನೆ
ಅನುರಾಗದ ಸಂಗೀತಕೆ
ಆರಾಮಿಸೋ ಆಲೋಚನೆ
ಅನುಬಂಧದ ಒಡನಾಟಕೆ
ಆರಂಭಿಸು ಆರೋಹಣೆ

Monday, April 24, 2017

ಬೆಳಗು & ದೀಪ


                     1
ಮನವು ಅಹಂಕಾರದ ಪರದೆಯಲಿ
ಮರೆಯಾಗಿ ಬೀಹಗುತಿದೆ ಗರ್ವದಲಿ
ತನದೊಂದೆ ಸರಿಯೆಂಬ ದರ್ಪವು
ತನ್ನಿಂದಲೆ ಚಲಿಸುವುದು ಎಲ್ಲವು
ಹೊಂದಿಕೆಯು ಹರಿದೋಗಿದೆ ಅಂದು
ಕೃಪೆಯಿಂದ ಹೊಲಿಯಬೇಕಿದೆ ಇಂದು
ಜಗದ ಕೋಪಕೆ ಶಿಕ್ಷಾರ್ಹನು
ಜನರ ಶಾಪಕೆ ಪರಿತಪಿಸುತಿಹೆನು
ಜ್ಞಾನದ ಬೆಳಕನ್ನಿತ್ತು ಪರಿಪಾಲಿಸು
ಜೊತೆಯಲ್ಲಿ ಕೈ ಹಿಡೀದು ಮುನ್ನೆಡೆಸು


                     2
ಹಣತೆಯಲಿ ಅರಳಿದ ಹೂ
ಕತ್ತಲೆಯನು ಕರಗಿಸುವ ಪ್ರಜ್ವಲೆಯು
ಅಪ್ರಿಯ ಅಂಧಕಾರಕೆ ಅಂತ್ಯವು
ಜ್ಞಾನಧಾರೆಯು ಮೂರ್ಖತನಕೆ
ನಿನ್ನಳಿವಿಗೆ ಬೆಳಗುವೆ ಜೋರಾಗಿ
ಜೀವನದ ದಾರಿದ್ರ್ಯ ದೂರಾಗಿಸುವ
ಸಮೃದ್ಧಿಯ ದಿವ್ಯ ದೀಪ

Tuesday, April 18, 2017

ಪಯಣದಲ್ಲಿ ನಾನು ಮತ್ತು ಆವಳು


ಸಂಜೆ ಗಂಟೆಗೆ ಕದಂಬ ಬಸ್ ಹೊರಟಿತು ಮೈಸೂರಿನಿಂದ ಗೋವಾದ ಕಡೆಗೆ. ಬಸ್ಸಿನ ಮಧ್ಯದಲ್ಲಿ ಕೂರಲು ಜಾಗ ಗಿಟ್ಟಿಸಿಕೊಂಡು ಪುಶ್ ಬೇಕ್ ಸೀಟಿನಲ್ಲಿ ಮಲಗಿದ. ಸರಿ ಸುಮಾರು .೩೦ರ ಸಮಯಕ್ಕೆ ಮೈಸೂರಿನಿಂದ ಹೊರಟ ಬಸ್ ಹಾಸನವನ್ನು ತಲುಪಿತು. ಆಗ ಒಂದು ಹುಡುಗಿಯ ಪ್ರವೇಶವಾಯಿತು ಬಸ್ಸಿನೊಳಗೆ. ಅವಳನ್ನು ನೋಡಿ ಮತ್ತೆ ಪುನಃ ಸುಮ್ಮನೆ ಮಲಗಿದ. ಪಯಣಿಸುತ್ತಿದ್ದ ಬಸ್ಸಿನಲ್ಲಿ ಹೆಣ್ಣು ಧ್ವನಿಯ ಕೂಗು, ಬೈಗುಳ ಕೇಳಿತು. ಆಗ ಎದ್ದು ಹಿಂದುಗಡೆ ನೋಡಿದ ನಾನು ಅವಳ ಸಿಟ್ಟು, ಕಿರಿಕಿರಿ ಅನುಭವಿಸಿದ ಬೇಸರದ ಭಾವ ಗೋಚರಿಸಿತು.

ಪರಿಸ್ಥಿತಿಯ ಗಂಭಿರತೆಯನ್ನು ಅರಿತ ನಾನು, ಅವಳ ಪಕ್ಕದಲ್ಲಿ ಕುಳಿತಿದ್ದ ಮಧ್ಯಮ ವಯಸ್ಸಿನ ಕುಡಕನಿಗೆ ತರಾಟೆ ತೆಗೆದುಕೊಂಡೆ. ಪ್ರಶ್ನಿಸಲು ಪ್ರಾರಂಭಿಸಿದ ನಂತರ ಇಡಿ ಬಸ್ಸಿನಲ್ಲಿ ಕುಳಿತಿದ್ದ ಜನರೆಲ್ಲರೂ ಅವನಿಗೆ ಬಯ್ಯುತ್ತ ಹೊಡೆಯಲು ಮುಂದಾದರು. ಸಮಯದ ಗಂಭಿರತೆಯನ್ನು ಅರಿತು ತಕ್ಷಣದಲ್ಲೆ ಕುಡುಕನನ್ನು ಬಸ್ಸಿನಿಂದ ಕೆಳಗಿಳಿಸಿದ ನಾನು ಹುಡುಗಿಯ ಹತ್ತಿರ ನಿನ್ನ ಅಭ್ಯಂತರವಿಲ್ಲದಿದ್ದರೆ ನನ್ನ ಪಕ್ಕದಲ್ಲಿರುವ ಆಸನದಲ್ಲಿ ಕುಳಿತುಕೊಳ್ಳಿಯೆಂದು ಹೇಳಿದ. ನಾನು ಹೇಲಿದಂತೆ ಅವಳು ಬಂದು ನಾನುವಿನ ಪಕ್ಕದಲ್ಲಿ ಕುಳಿತಳು. ಅವರಿಬ್ಬರೂ ಸಹ ಮೌನದ ಪ್ರಯಾಣ ಪ್ರಾರಂಭಿಸಿದರು.

ಮಂದೆ ಸಾಗಿದ ಬಸ್ ಊಟಕ್ಕೆಂದು ಪರಿಚಯವಿರದ ಸ್ಥಳದಲ್ಲಿ ನಿಂತಿತು. ಅಲ್ಲಿಯ ಊಟ, ಊಟದ ವ್ಯವಸ್ಥೆ, ಊಟದ ಜಾಗ ಇವೆಲ್ಲವನ್ನು ನೋಡಿದ ನಾನು ಬಾಳೆಹಣ್ಣುಗಳನ್ನು ಖರೀದಿಸಿ ಬಸ್ಸಿನೆಡೆಗೆ ಹಿಂದುರುಗಿದ. ನಾನು ಹೋಗಿ ಕೂತಾಗ ಅವಳು ಕೇಳಿದಳು ಊಟ ಮಾಡುವುದಿಲ್ಲವೇ? ಉತ್ತರಿಸುತ್ತ ನಾನು ಹೇಳಿದ ಸ್ವಚ್ಚವಿರದ ಸ್ಥಳದಲ್ಲಿ ಊಟವಲ್ಲ ಚೂರು ನೀರು ಕುಡಿಯಲು ಮನಸೊಪ್ಪುವುದಿಲ್ಲವೆಂದ. ಹೌದು ಎನ್ನುತ್ತ ಅವಳು, ತಾನು ತಂದಿದ್ದ ಊಟದ ದಬ್ಬವನ್ನೆ ನಾನುವಿನೊಂದಿಗೆ ಹಂಚಿಕೊಂಡಳು. ಅಲ್ಲಿಂದ ಶುರುವಾಯಿತು ಅವರಿಬ್ಬರ ಮಾತುಕತೆಯ ಹರಟೆ.

ತಮ್ಮ ತಮ್ಮ ಪರಿಚಯವನ್ನು ವಿನಿಮಯ ಮಾಡಿಕೊಂಡ ಅವರಿಬ್ಬರು ತಮ್ಮ ಆಸಕ್ತಿ, ವಿಚಾರಗಳನ್ನು ಹೇಳಲಾರಂಭಿಸಿದರು. ನಾನು ಹೇಳುತ್ತ, ಉತ್ತಮ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸಮಾಡುತ್ತಿರುವುದಾಗಿ ಹೇಳಿದ. ಹಾಗೆ ಮುಂದುವರಿಸುತ್ತ ತನ್ನ ಹಿಂದಿನ ದಿನಗಳ ಚಿಕ್ಕ ಪುಟ್ಟ ಹೋರಾಟದ ನಡೆಯನ್ನು ಹೇಳಿಕೊಂಡ. ವಿದ್ಯಾರ್ಥಿಯಾಗಿದ್ದಾಗಿನಿಂದ ವಿದ್ಯಾರ್ಥಿ ಗುಂಪಿನ ಮುಂದಾಳುವಾಗಿ ಗುಂಪನ್ನು ಮುನ್ನಡೆಸಿಕೊಂಡು ಬಂದ ಸಂಗತಿಗಳನ್ನು ವಿವರಿಸಿದ. ಅಲ್ಲದೆ ಮಹಿಳೆಯರ ಕುರಿತಾಗಿ ಇರುವ ತನ್ನ ವಿಚರಧಾರೆಯನ್ನು ಸಮರ್ಥವಾಗಿ ತಿಳಿಸಿದ. ಇದರಿಂದಾಗಿ ಅವಳಿಗೆ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಪರಿಚಯವಾಯಿತು ಮತ್ತು ಗುಣವಂತನ ಗೆಳೆತನವಾಯಿತೆಂದು ಸಮಾಧಾನಿಸಿದಳು.

ಅವಳು ತನ್ನ ಬಗ್ಗೆ ಹೇಳಿಕೊಳ್ಳುತ್ತಾ ಪದವಿಯನ್ನು ಮುಗಿಸಿ ಉದ್ಯೋಗ ಮಾಡುತ್ತ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೇನೆನ್ನುತ್ತಾಳೆ. ಅಲ್ಲದೆ ಇವಳು ಸಹ ನಾನು ಹೇಳಿದ ವಿಚಾರಗಳಿಗೆ ಸಂಬಂಧಿಸಿದ ಮಾತುಗಳನ್ನಡುತ್ತಾ ತನ್ನ ಸಹ ಮತವನ್ನು ಸೂಚಿಸುತ್ತಾಳೆ. ಹಾಗೆ ಹೇಳುತ್ತಾ ತಾನು ಎಲ್ಲಿಗೆ ಹೊರಟಿರುವುದಾಗಿ ಹೇಳುತ್ತ ತನ್ನ ಸದುದ್ದೇಶದ ವಿಷಯವನ್ನು ಅರಹುತ್ತಾಳೆ. ತನಗೆ ಇರುವ ಸವಾಲುಗಳನ್ನು ಹೇಳುತ್ತ ಏನಾದರೂ ಸಲಹೆಗಳು ನಿನ್ನಲ್ಲಿವೆಯಾ ಎಂದು ಕೇಳುತ್ತಾಳೆ. ಅದಕ್ಕೆ ಪ್ರತ್ಯುತ್ತರಿಸುತ್ತಾ ನಿನ್ನ ಸವಾಲುಗಳಿಗೆ ಯೋಚಿಸಿ ತನ್ನ ಸಲಹೆಗಳನ್ನು ಕೊಡುತ್ತೇನೆ ಎನ್ನುತ್ತಿರುವಾಗ ಚಹ ಕುಡಿಯಲೆಂದು ಬಸ್ ನಿಲ್ಲುತ್ತದೆ.

ಬಸ್ಸಿನಿಂದ ಕೆಳಗಿಳಿದ ಇಬ್ಬರೂ ಎಳನೀರನ್ನು ಕುಡಿಯುತ್ತಾರೆ. ಕುಡಿಯುವ ಸಮಯದಲ್ಲಿ ಅವಳಿಗೆ ಇವನಂತಹ ಹುಡುಗನು ತನಗೆ ಜೀವನದ ಜೊತೆಗಾರನಾಗಿ ಸಿಗಬೇಕೆಂದು ಅನಿಸಿದರೂ ಅವನ ಸಹಜತೆಯ ಮಾತುಗಳನ್ನು ಗಮನಿಸಿ ಒಳ್ಳೆಯ ಸ್ನೇಹಿತೆಯಾಗಿ ಉಳಿಯುವುದು ಉತ್ತಮವೆಂದುಕೊಳ್ಳುತ್ತಾಳೆ. ಅಲ್ಲಿಂದ ಮುಂದೆ ಸಾಗಿದ ಬಸ್ ಇವರಿಬ್ಬರ ಹರಟೆಗೆ ಪೂರ್ಣ ವಿರಾಮವನ್ನಿಡಲು ಮುಂದಾಗುತ್ತದೆ. ಯಾಕೆಂದರೆ ನಾನು ಇಳಿಯುವ ಸ್ಥಳ ಹತ್ತಿರವಾಗುತ್ತಿದ್ದಂತೆ ಇಬ್ಬರ ಮೊಬೈಲ್ ನಂಬರ್ ಹಂಚಿಕೆಯಾಗುತ್ತದೆ.

ಅಚಾನಕ್ಕಾಗಿ ಜೊತೆಯಾದ ಅವರಿಬ್ಬರೂ ತಮ್ಮ ಪರಿಚಯವನ್ನು ಗೆಳೆತನವನ್ನಾಗಿಸಲು ಇಚ್ಛಿಸುತ್ತಾರೆ. ಅಲ್ಲಿಂದ ಮರಳಿದ ನಂತರ ಮೊಬೈಲ್ ಕರೆಯ ಮೂಲಕ ತಮ್ಮ ಗೆಳೆತನವನ್ನು ಮುಂದುವರೆಸುತ್ತಾ ಪರಸ್ಪರರೂ ಅವರವರ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ಒಬ್ಬರಿಗೊಬ್ಬರು ಸಲಹೆ ಸೂಚನೆಗಳನ್ನು ಕೊಟ್ಟಿಕೊಳ್ಳುತ್ತಾ ಉತ್ತಮ ಗೆಳೆಯರಾಗಿ ಮುನ್ನಡೆಯುತ್ತಾರೆ.

Friday, April 14, 2017

ನಂಬಿಕೆಯ ವಜ್ರ

ಅನಿಸಿಕೆಯ ವಿವರಣೆ
ಹೇಳುವ ಹಂಗಿಲ್ಲ
ದೋಚಿ ಹಗುರಾಗು
ಒಲವಿನ ಉಡುಗೊರೆ

ಕಂಜೂಸು ಮಾಡದಿರು
ಕಲ್ಪನೆಯ ಸಿರಿತನಕೆ
ಮನದಾಳ ಬಿಚ್ಚೇಳು
ಔದಾರ್ಯದ ನಂಬಿಕೆಗೆ

ಜೀವನದ ಕಡಲಿನಲಿ
ಕೊಳಕೆಲ್ಲಾ ಕೊಚ್ಚೋಗಲಿ
ಕಡಿದಾದ ತೆರೆಯ ಸೆಳೆತಕೆ
ಆಕರ್ಷಣೆಯ ಕೇಂದ್ರವಾಗಿ
ಎಲ್ಲಾರು ಬಯಸುವಂತ
ಕಿರಿದಾದ ವಜ್ರವಾಗುವಾಸೆ

Thursday, April 13, 2017

ಕಿವಿ ತುಂಬೋ ಕೋಗಿಲೆ

ನನ್ನ ಬ್ಲಾಗಿನ ಮೂರು ನೂರನೇ ಬರಹ ಈ ಕವನ

ಹಾಡು ಬಾ ಕೋಗಿಲೆ
ಇಂಪಾದ ಸ್ವರದಲಿ
ತಂಪಾಗಲಿ ಮನವೆಲ್ಲವು
ತಂಗಾಳಿ ಸುಧೆಯಲಿ
ನೀ ಕಲಿಯೆ ನೀ ಕಲಿಯೆ
ಎಲ್ಲಾ ಕಾಲದ ವಾಸ
ನಾ ಅರಿಯೆ ನಾ ಅರಿಯೆ
ಸಂಗೀತ ಸಂಭ್ರಮದ ಭಾಸ
ಹೇಳೆ ಕೋಗಿಲೆ ಕೊಂಡಾಡಲ
ಅನುದಿನವು ಅನುಕ್ಷಣವು
ನಿನ್ನ ಅನುಕರಿಸಿ

ಹಸಿರು ತುಂಬಿದ
ವನಸಿರಿಯಲಿ
ಗುಟುಕು ಕೊಡುವ
ಹಕ್ಕಿಯಾಗುವೆನು
ಹರಿವ ಹೊಳೆಯ
ಸುಳಿಗುಂಡಿಯಲಿ
ಈಜಿ ಹೊರಬರುವ
ಹುಚ್ಚು ಹಂಬಲಿಗನು

ಬಿಸಿಲು ಮಳೆಯ
ದ್ವಂದ್ವ ಕಾಲಕೆ
ಮೂಡುವ ಮಳೆಬಿಲ್ಲಿಗೆ
ಮುತ್ತಿಟ್ಟು ಮುದ್ದಾಡುವೆನು
ಜೋತಾಡುವ ಜಲಪಾತಕೆ
ಮೇಲಿಂದ ಕೆಳಗೆ
ಜೋತು ಬೀಳುಲು
ತೆಳ್ಳಗಿನ ದಾರ ಕಟ್ಟುವೆನು

ಹಾಡು ಬಾ ಕೋಗಿಲೆ
ಕೂಗುವುದ ಕೊನೆಯಾಗಿಸದಿರು
ನನ್ನ ಹುಡುಗಾಟದ
ಹನಿಗನಸಿಗೆ ನೀರೆರೆಯದಂತೆ
ಕಿವಿ ತುಂಬುತ ಕೂಗುತಿರು
ಪ್ರೇರಣೆಯು ಹಾಡಾಗಲಿ

Wednesday, April 12, 2017

ಸ್ತಬ್ಧ ಚಿತ್ರದಂತೆ

ಪ್ರೀತಿ ಬಂತು ಒಲವಾಗಲು
ಮೋಹ ತಂತು ಮಸಾಗಲು
ಆದರೇನು ಆಗದು
ಕವಲು ಕಾಡಿನ ಹಾದಿಯಲ್ಲಿ
ಸ್ವಂತದ್ದೆಂದು ಹೇಗೆ ನುಡಿಯಲಿ
ಇರುಸು ಮುರುಸಿನ ಸ್ಥಿತಿಯಲಿ

ಆಚೆಗೊಂದು ಬಾಳ ಸ್ಪೂರ್ತಿಯು
ಈಚೆಗೊಂದು ಬದುಕಿನಾಧಾರವು
ಯಾರ ನೋಡಲಿ?
ಜೊತೆಗೆ ಹೆಜ್ಜೆ ಹಾಕಲು
ಎಲ್ಲಿಡಲಿ? ಹೇಗಿಡಲಿ? ಯಾರಲಿ?

ಯಾರ ಕಡೆಗೆ ವಾಲಿದರೂ
ಒಂದು ಕಣ್ಣು ಮಂಜಾದಂತೆ
ಬಾಳಾಟ ಮುಗಿಯುವವರೆಗೂ
ಎರಡು ಜೀವ ಒಂದೇ ಜೀವನ
ಯಾವ ಕೈಯಲಿ? ಯಾರ ಹಿಡಿಯಲಿ?

ಬರಿಯ ಗೊಂದಲ ತಲೆಯ ತುಂಬ
ವಿಲವಿಲ ಒದ್ದಾಟ ಮುರಿದು ಸ್ತಂಭ
ಆಗುವೆನು ಚಿತ್ರದಂತೆ ಸ್ತಬ್ಧ
ದೋಣಿ ಸಾಗಲಿ ಅವನಾಸೆಯಂತೆ
ಮುಳುಗಿಸುವನೋ? ತೇಲಿಸುವನೋ?

Monday, April 10, 2017

ಏನಾಗಲಿ?

ಕಾಣದ ಇರುಳಲಿ
ಕನಸಿನ ಮೆರವಣಿಗೆ
ಕಾಣುವ ಕನಸನು
ಮಾಡಲು ನನಸನು
ಛಲದಲಿ ಬಾಳಲು

ಗುರಿಯೇ ಇಲ್ಲದಂತೆ
ಹೊರಟ ಬದುಕ ನಡಿಗೆ
ಸಾಗುತ ಸೋಲುವೆ
ಬಾಗುತ ಸ್ವಪ್ನಕೆ
ಎಂದು ಈಡೇರುವುದೆಂದು

ಕುಟಿಲ ಪಥಗಳು
ಜಟಿಲ ಜನಗಳ ನಡುವೆ
ತೊರೆಯಂತೆ ಚಲಿಸಲೇ?
ಒಡೆಯದ ಬಂಡೆಯಂತೆ
ಗಟ್ಟೀಯಾಗಿ ನಿಲ್ಲಲೇ?

ಜೀವಿಸಲು ಹೇಗಿರಲಿ?
ಜನುಮದ ಪಯಣದಲಿ
ಪರರೊಂದಿಗಿನ ಮಾತಿನಲಿ
ಊಸರವಳ್ಳಿಯು ನಾನಾಗಲೇ?
ಅಲುಗಾಡದ ಎದೆಯಾಳಾಗಲೇ?

Wednesday, April 5, 2017

ಜೋಗದ ಗುಂಡಿಯ ಆಳವನರಿಯಲು ಹೊರಟ ಹುಡುಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಬದುಕಿನಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಅಂತ ಕನ್ನಡದ ಹಾಡೊಂದರಲ್ಲಿ ಹೇಳುತ್ತಾರೆ. ಅದೇ ರೀತಿ ಗೆಳೆಯರೆಲ್ಲ ಸೇರಿ ಓಮಿನಿ ಕಾರಿನಲ್ಲಿ ಜೋಗದತ್ತ ಪಯಣ ಬೆಳೆಸುತ್ತಾರೆ. ಹುಡುಗ ಬುದ್ಧಿಯವರಿಗೆ ಅದೊಂದು ರೀತಿಯ ಮಜ. ಅರಿವೇ ಇಲ್ಲದಂತೆ ತಾವೆಲ್ಲಿಗೆ ಹೊರಟಿದ್ದೇವೆ, ಅದೆಂತಹ ಅಪಾಯದ ಜಾಗ, ಸ್ಥಳದಲ್ಲಿ ಹೇಗೆ ಇರಬೇಕು, ಎಷ್ಟು ಜಾಗರೂಕತೆಯಿಂದ ವ್ಯವಹರಿಸಬೇಕು ಎಂಬುದು ಇವರಿಗೆ ಮುಖ್ಯವಲ್ಲ. ಅಲ್ಲಿ ಹೋಗಿ ಜೋಗದ ಜಲಪಾತವನ್ನು ನೋಡಿ ಸಂಭ್ರಮಿಸುವುದಷ್ಟೇ ಇವರ ತಲೆಯಲ್ಲಿದ್ದ ಪಯಣದ ರೂಪರೇಷೆ.

ಅಂತಾಕ್ಷರಿ, ಹರಟೆಗಳ ಮೂಲಕ ಜೋಗದ ಸ್ಥಳವನ್ನು ತಲುಪಿದರು. ಕಾರಿಂದ ಇಳಿದು ಯಾವ ಕಡೆ ಹೋಗ ಬೇಕೆಂದು ಯೋಚಿಸಿ ಜೋಗ ಜಲಪಾತದ ನೀರು ಬೀಳುವ ಜಾಗಕ್ಕೆ ತಲುಪಿದರು. ಮೇಲಿಂದ ಕೆಳಗೆ ನೋಡಿ ಭಯ ಬೀತರಾದರು. ನೀರು ಬೀಳುವ ಜಾಗದಲ್ಲಿರುವ ಬಂಡೆಗಲ್ಲಿನ ಮೇಲೆ ಮಲಗಿ ಜೋಗದ ಗುಂಡಿ ನೋಡಿ ಫೋಟೊ ಸೆರೆ ಹಿಡಿದರು. ಬ್ರಿಟೀಷ್ ಬಂಗಲೆಯನ್ನು ಸುತ್ತಿದರು. ಅಲ್ಲಿನ ಕಾಡು ಮರಗಳನ್ನು ಸುತ್ತಿ ಪರಿಸರದ ತಂಪು ಸ್ವಾದವನ್ನು ಹೀರಿದರು.

ಜೋಗದ ಗುಂಡಿ ನೋಡಲು ನಿಧಾನವಾಗಿ ಮೆಟ್ಟಿಲಿನತ್ತ ಹೆಜ್ಜೆ ಹಾಕಿದರು. ಸಾವಿರ ಮೆಟ್ಟಿಲುಗಳಿವೆ ಎಂದು ಕೇಳಿದ್ದ ಇವರು ಪ್ರತಿ ಮೆಟ್ಟಿಲುಗಳನ್ನು ಲೆಕ್ಕ ಮಾಡುತ್ತ ಹೆಜ್ಜೆಯಿಟ್ಟರು. ಕೆಳಗಡೆಗೆ ಹೋದ ಮೇಲೆ ಅಲ್ಲಿನ ಬಂಡೆಗಳ್ಳುಗಳನ್ನು ಏರಿ ಕುಳಿತರು. ಅಲ್ಲಿದ್ದ ಐಸ್ ಕ್ರೀಂ ಅನ್ನು ಒಂದಕ್ಕೆ ಎರಡು ದರ ಕೊಟ್ಟು ಖರೀದಿಸಿ ರುಚಿ ನೋಡಿದರು. ಆಗ ಅವರಿಗೆ ಹುಟ್ಟಿದ್ದು ಗುಂಡಿಯಲ್ಲಿ ಹಾರಿ ಈಜಿಕೊಂಡು ಜಲಪಾತದ ಕೆಳಗೆ ಹೋಗೋಣ ಎಂದು ಮಾತಾಡಿ ಗುಂಡಿಗೆ ಹಾರಲು ತಯಾರಾದರು. ಈಜು ಬರುವ ಎರಡು ಜನ ಹಾರಿ ರೋರರ್ ಜಲಪಾತದ ಕೆಳಬದಿಯನ್ನು ತಲುಪಿದರು.

ಮೂರನೆಯವನು ಹಾರಲೆಂದು ತನ್ನ ಕಾಲನ್ನು ಬಂಡೆ ಕಲ್ಲಿನ ಕೆಳಬದಿಯಲ್ಲಿರುವ ಚಿಕ್ಕ ಕಲ್ಲಿನ ಮೇಲಿಡಲೆಂದು ಧಾವಿಸಿದ. ಚಿಕ್ಕ ಕಲ್ಲಿನ ಮೇಲೆ ಕಾಲಿಡಬೇಕೆಂದು ಅಂದುಕೊಂಡು ಕಾಲಿಟ್ಟ ಹುಡುಗ ಕ್ಷಣ ಮಾತ್ರದಲ್ಲಿ ಕಣ್ಮರೆಯಾದ. ಯಾಕೆಂದರೆ ಬಂಡೆಯ ಕೆಳಗೆ ಚಿಕ್ಕ ಕಲ್ಲೇ ಇರಲಿಲ್ಲ. ಗುರುತು ಪರಿಚಯವಿರದ ಜಾಗದಲ್ಲಿ ಈಜಲು ಹೋದ ಹುಡುಗ ಜೋಗಾದ ಗುಂಡಿಯ ಆಳವನ್ನು ನೋಡಲು ಹೊರಟ ಹಾಗಾಯಿತು. ಎಷ್ಟೋ ಕೆಳಗೆ ಹೋದ ಹುಡುಗ ತಾನು ಸತ್ತೆ ಎಂದು ಮನಸ್ಸಿನಲ್ಲೆ ಅಂದುಕೊಳ್ಳುತ್ತಾ ಬದುಕಿ ಮೇಲೆ ಬರುವ ಪ್ರಯತ್ನ ಮಾಡಿದ. ಹೆದರಿದ ಹುಡುಗ ಮೇಲೆ ಬರುವಷ್ಟರಲ್ಲಿ ಉಸಿರಿನ ಕೊರತೆಯನ್ನು ಅನುಭವಿಸಿದ. ಬದುಕಬೇಕೆನ್ನುವ ಆಸೆಯಿಂದ ಹೇಗೋ ಮೇಲೆ ಬಂದ ಹುಡುಗನ ತಲೆ ಸರಿಯಾಗಿ ನೀರಿನ ಮೇಲಿದ್ದ ಬಂಡೆಗೆ ಸರಿಯಾಗಿ ಜಪ್ಪಿತು (ಹೊಡೆಯಿತು). ಉಸಿರಿಲ್ಲದ ಹುಡುಗ ನೀರೊಳಗೆ ಕೂಗಲು ಆಗದೆ ನೋವನ್ನು ಅನುಭವಿಸಲೂ ಆಗದೆ ಬಂಡೆಗಲ್ಲನ್ನೆ ಹಿಡಿದು ತಳ್ಳಿಕೊಳ್ಳುತ್ತೀಚೆ ಬಂದು ಮುಖವನ್ನು ಮೇಲೆ ಮಾಡಿ ಉಸಿರಾಡಿ ತನ್ನ ಕೈಯನ್ನು ಚಾಚಿದ.

ಆಗ ಈತನಿಗಾಗಿ ಅರಸುತ್ತಿದ್ದ ಈತನ ಒಬ್ಬ ಗೆಳೆಯ ಇವನ ಕೈ ಹಿಡಿದು ಮೇಲೆತ್ತಿದ. ಉಸಿರಿಲ್ಲದೆ ಹೆದರಿ ನೀರನ್ನು ಕುಡಿದಿದ್ದ ಹುಡುಗ ಬಂಡೆಯ ಮೇಲೆ ಮಕಾಡೆ ಮಲಗಿದ. ಅಂತು ಇಂತು ತನ್ನ ಜೀವ ಬದುಕಿತು ಎಂದುಕೊಳ್ಳುತ್ತ ಅರ್ಧಗಂಟೆ ವಿಶ್ರಮಿಸಿದ. ಈಜಿ ಜಲಪಾತದ ಕೆಳಗೆ ಹೋಗ ಬೇಕೆಂದುಕೊಂಡಿದ್ದ ಹುಡುಗ, ಅಂದುಕೊಂಡಿದ್ದನ್ನು ಸಾಧಿಸಿದ. ಮತ್ತೊಮ್ಮೆ ನೋಡಿಕೊಂಡು ಗುಂಡಿಗೆ ಹಾರಿ ಈಜಿಕೊಂಡು ಹೋಗಿ ಜಲಪಾತದ ಕೆಳಗೆ ನಿಂತು ಸಂಭ್ರಮಿಸಿದ.


ಮರಳಿ ಬರುವಾಗ ಸಾವಿರ ಮೆಟ್ಟಿಲುಗಳನ್ನು ಹತ್ತಲು ಕಷ್ಟ ಪಟ್ಟರೂ ಏನೋ ಸಾಧಿಸಿದ ಹುಡುಗರ ಸಂಭ್ರಮದ ಮುಂದೆ ಅವರಿಗಾದ ಸುಸ್ತು ನೀರಿನಂತೆ ಕರಗಿತು. ಮತ್ತೆ ಪುನಃ ಮಜದ ಮಾತಾಡುತ್ತ ಕಾರಿನೊಳಗೆ ಕೂತು ತಿರುಗಿ ಮನೆ ಸೇರುವಾಗ ಬಾನಿನ ಸೂರ್ಯ ಮಲಗಿದ್ದ ಹೊತ್ತಾಗಿತ್ತು.

ಅಪರಿಚಿತ ದಾರಿಹೋಕ ದಾರಿ ತೋರಿದಾಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಪರಿಚಯವಿರದ ಪಯಣಕ್ಕೆ ಮುಂದಾದ ತರುಣನ ತರಾತುರಿಯಲ್ಲಿ ಮುನ್ನುಗ್ಗುತ್ತಿದ್ದ. ನೆಂಟರೊಬ್ಬರ ಮನೆಯ ವಿಶೇಷ ಪೂಜೆಯ ಕರೆಗೆ ಮನೆಯವರ ಪ್ರೇರಣೆಯೊಂದಿಗೆ ಬಸ್ ಹತ್ತಿ ಹೊರಟ. ಎಲ್ಲಿಳಿಯ ಬೇಕು, ಹೇಗೆ ಹೋಗ ಬೇಕೆಂದು ಕೇಳಿ ತಿಳಿದಿದ್ದ ತರುಣ ಒಂದು ಬಸ್ಸನ್ನು ಇಳಿದು ತಲುಪಬೇಕಾದ ಸ್ಥಳಕ್ಕೆ ಹೋಗುವ ಬಸ್ ಹತ್ತಿ ಹೊರಟ. ಬಸ್ಸಿನ ನಿರ್ವಾಹಕನ ಹತ್ತಿರ ಕೇಳಿಕೊಂಡು ಇಳಿಯ ಬೇಕಾದ ನಿಲ್ದಾಣದಲ್ಲಿ ಇಳಿದ. ಆದರೆ ಅಲ್ಲಿಂದ ನೆಂಟರ ಮನೆಗೆ ಹೋಗಲು ಇದ್ದಿದ್ದು ಕಾಲು ಹಾದಿ. ಅದೂ ಕಡಿದಾದ ಕಾಡಿನ ಮಧ್ಯೆ ಕಿರಿಕಿರಿಯೆಂದು ಕೂಗುತ್ತಿದ್ದ ಕಾಡು ಜಿರಲೆಯ ನಾದದ ಕೂಗಿಗೆ ಹೆಜ್ಜೆ ಹಾಕುತ್ತ ಮನೆಯವರು ಹೇಳಿದಂತೆ ಸಾಗುತ್ತ ಗುರಿಯತ್ತ ಮುನ್ನೆಡೆದ. ಹಾಗೆ ಒಬ್ಬನೆ ನಡೆಯುತ್ತ ಮುಂದೆ ಹೋಗುತ್ತಿದ್ದಾಗ ಅವನಿಗೆ ಎದುರಾಗಿದ್ದು ಕವಲು ದಾರಿ. ಆಗ ಕಂಗಾಲಾದ ತರುಣ ಬಲಗಡೆಯ ದಾರಿಯಲ್ಲಿ ಹೋಗಲೇ? ಅಥವಾ ಎಡಬದಿಯ ದಾರಿಯಲ್ಲಿ ಮುನ್ನಡೆಯಲೇ? ಎಂದು ವಿಚಾರ ಮಾಡುತ್ತ ಮಧ್ಯದಲ್ಲಿ ನಿಂತು ಯೋಚಿಸಿದ.

ಬಿಸಿಲು ತಲೆಯ ಮೇಲಿಂದ ಸುಡುವ ಹೊತ್ತಾದರೂ ಕಾಡಿನ ಮಧ್ಯೆ ಮರಗಳ ನೆರಳಿನಲ್ಲಿ ನಿಂತಿದ್ದ ತರುಣ ಯಾವ ದಾರಿಯಲ್ಲಿ ಹೋಗಬೇಕೆಂದು ಗೊತ್ತಾಗದೇ ಗಲಿಬಿಲಿಯಾಗಿದ್ದ ತರುಣನಿಗೆ ಕಂಡಿದ್ದು ದೂರದಲ್ಲಿ ಬರುತ್ತಿದ್ದ ಬಿಳಿ ಕೂದಲಿನ ಮುದುಕ. ಆ ಮುದುಕ ಹತ್ತಿರ ಬರುತ್ತಿದ್ದಂತೆ "ಅಜ್ಜ ಕವಲು ಮನೆಗೆ ಹೋಗುವ ದಾರಿ ಯಾವುದೆಂದು" ಕೇಳಿದ. ಅದಕ್ಕೆ ಉತ್ತರಿಸುತ್ತ, ನೀನು ಈ ಪ್ರದೇಶಕ್ಕೆ ಹೊಸಬನೇ ಎಂದು ಪ್ರಶ್ನಿಸಿದ. ಹೌದು ಎಂದ ತರುಣ ಅಲ್ಲಿಗೆ ಹೋಗುವ ದಾರಿಯಾವುದೆಂದು ಹೇಳಜ್ಜ ಹೊತ್ತಾಯಿತು ಎನ್ನುತ್ತಾನೆ. ಎರಡು ದಾರಿಯು ಅವರ ಮನೆಗೆ ಹೋಗುತ್ತದೆ ಆದರೆ ಅವರ ಮನೆ ಇರುವುದು ಹಲವಾಗು ಮನೆಗಳ ನಡುವೆ ಎಂದಾಗ ಮತ್ತೆ ಗೊಂದಲಕ್ಕೊಳಗಾಗುತ್ತಾನೆ. ಆಗ ಮುದುಕ ಹೇಳುತ್ತಾನೆ ನಡೆ ನಿನ್ನ ಜೊತೆಗೆ ನಾನು ಬರುತ್ತೇನೆ, ನಿನಗೆ ಮನೆಯನ್ನು ತೋರಿಸುತ್ತೇನೆ ಎಂದು ಹೇಳಿ ತರುಣನ ಜೊತೆ ಹೆಜ್ಜೆ ಹಾಕುತ್ತಾನೆ.

ಮುನ್ನಡೆಯುತ್ತಾ ತರುಣನ ಜೊತೆ ಮಾತಿಗಿಳಿದ ಅಜ್ಜ ಕೇಳುತ್ತಾನೆ ನಿನಗೆ ಭಯ ಜಾಸ್ತಿಯಾ? ಎಂದಾಗ ತರುಣ ಹಾಗೇನಿಲ್ಲ ಎಲ್ಲೋ ಅಲ್ಪ ಸ್ವಲ್ಪ ಹೆದರುತ್ತೇನೆ ಅಂತೇಳುತ್ತಾನೆ. ಹಾಗಾದರೆ ದೆವ್ವಗಳೆಂದರೂ ಭಯವಿಲ್ಲವೇ? ದೆವ್ವಗಳ ಜೊತೆಗೆ ಮಾತನಾಡುವೆಯಾ? ಎಂದು ಕೇಳಿದಾಗ ತರುಣ ಸ್ವಲ್ಪ ಅಂಜಿಕೆಯಿಂದಲೆ ಹೆದರಿಕೆಯಿಲ್ಲ, ಅವುಗಳನ್ನೆಲ್ಲ ನಾನು ನಂಬುವುದಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ತಲುಪಬೇಕಾಗಿದ್ದ ಮನೆಯು ಹತ್ತಿರದಲ್ಲಿ ಕಾಣಿಸಿತು. ಅಲ್ಲಿದೆ ನೀನು ಹೋಗಬೇಕಾದ ಮನೆಯೆಂದು ತೋರಿಸಿದ. ಆಗ ಅಜ್ಜನಿಗೆ ಧನ್ಯವಾದ ಹೇಳಬೇಕೆಂದು ಅಜ್ಜಾ ಎನ್ನುತ್ತಾನೆ. ಏನು ಮಗಾ, ನೀನು ದೆವ್ವಗಳನ್ನು ನಂಬುವುದಿಲ್ಲ ಅಲ್ಲವೇ? ಎಂದು ಕೇಳುತ್ತಾನೆ. ಇಲ್ಲಾ ಎಂದು ಹೇಳುತ್ತಾ ತಿರುಗಿದಾಗ ಬಳಿಯಿದ್ದ ಅಜ್ಜನನ್ನು ಕಾಣದೇ ಕಂಗಾಲಾಗಿ ಕರೆಯಲಾರಂಭಿಸುತ್ತಾನೆ ಅಜ್ಜಾ....!  ಅಜ್ಜಾ.......!!

Tuesday, March 28, 2017

ಯುಗದ ಆದಿಗೆ ಸ್ವಾಗತ

ಮರ ಚಿಗುರಲು ನವೋಲ್ಲಾಸವು
ಕೋಗಿಲೆಯ ಕೂಗು ಇಂಪಾದವು
ಚೈತನ್ಯದಾಯಕ ವಸಂತನಾಗಮನವು
ಚಿತ್ತಾರವ ಬಾಳಿಗೆ ತುಂಬುವವು

ಹೊಸ ಹುರುಪನು ತುಂಬಲಿ
ಕಸ ಅಳಿಸುತ ಜಗದಲಿ
ವೈಮನಸ್ಸಿನ ವಧೆಯಾಗಲಿ
ಸಜ್ಜನರ ಇಚ್ಛೆ ಈಡೇರಲಿ

ಯುಗದ ಆದಿ ಹುರಿದುಂಬಿಸಲಿ
ಕುಗ್ಗಿದ ಮನಸಲಿ ಛಲವು ಮೂಡಲಿ
ಸುರಿದು ಮಳೆಯು ದಾಹ ನೀಗಲಿ
ಹೊಲದ ಪೈರು ಹೂವಂತೆ ಅರಳಲಿ

ಪ್ರೀತಿ ಬೆಳೆಯಲಿ ಜನರ ನಡುವಲಿ
ನಂಬಿಕೆ ಉಳಿಯಲಿ ಪ್ರತಿ ಮನಸಲಿ
ಮೋಸ ಸೋಲಲಿ ವಿಶ್ವಾಸ ಬೆಳೆಯಲಿ
ದ್ರೋಹ ಸಾಯಲಿ ದೋಸ್ತಿ ಹಣೆಯಲಿ

ಸ್ಪರ್ಶವಾಗಲಿ ಸಮೃದ್ಧಿ ಹೊಂದಲು
ಸ್ಪೂರ್ತಿಯಾಗಲಿ ನೂತನವಾಗಲು
ಚಿಂತೆ ಮರೆಯಲಿ ಗಳಿಕೆಯಾಗಲು
ಕಾರ್ಯವಾಗಲಿ ಸಂವತ್ಸರ ಬರಲು

ಸರ್ವರಿಗೂ ಯುಗದ ಆದಿಗೆ ಸ್ವಾಗತ. ನವ ಸಂವತ್ಸರದ ಹಾರ್ದಿಕ ಶುಭಾಶಯಗಳು. ನಿಮಗೆಲ್ಲರಿಗೂ ಹೇಮಲಂಭಿ ಹೊಸ ಹುಮ್ಮಸ್ಸು ನೀಡಲಿ. 🎉🎊

ನೃತ್ಯದ ಕೊನೆಯಲ್ಲಿ ಆದ ಅವಮಾನ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಕಾಲೇಜಿನ ದಿನಗಳು ಅಂದರೆ ಬಲು ರೋಮಾಂಚನದ ಕ್ಷಣಗಳು. ಅದರಲ್ಲೂ ಕೊನೆಯ ವರ್ಷದ ವಾರ್ಷಿಕೋತ್ಸವವೆಂದರೆ ಹೇಳಿಕೊಳ್ಳಲಾಗದ ಸಡಗರ. ಸಂಭ್ರಮದ ದಿನದಲ್ಲಿ ಅದೆಷ್ಟೋ ಜನರೊಂದಿಗೆ ಮಾತಾಡುತ್ತ ಮುಂದಿನ ತಯಾರಿ ನನ್ನದಪ್ಪ ಎಂದು ಸ್ವಲ್ಪ ಗಾಬರಿಯ ರೀತಿ ವ್ಯವಹಾರ ಮಾಡುವುದು ಸಹಜ.

ನೃತ್ಯದ ತಯಾರಿ ನಡೆದಿತ್ತು ಸುಮಾರು ೧ ವಾರದ ಹಿಂದಿನಿಂದ. ಅದೆಂತಹ ನೃತ್ಯವೆಂದರೆ ಮುಖವನ್ನು ಚೀಲದಿಂದ ಮುಚ್ಚಿಕೊಂಡು ಹೊಟ್ಟೆಯ ಮೇಲೆ ಮುಖದ ಚಿತ್ರ ಬಿಡಿಸಿಕೊಂಡು ಕುಣಿಯುವುದು. ಕಣ್ಣೆರಡು ಕಾಣುವಂತೆ ಮುಚ್ಚಿಕೊಂಡ ಚೀಲಕ್ಕೆರಡು ತೂತು. ಮುಖದ ಭಾವ ಹೊಮ್ಮುವಂತೆ ದೊಡ್ಡ ಸಣ್ಣದಾಗಿ ಕುಣಿಸಬೇಕಾಗಿತ್ತು ಹೊಟ್ಟೆಯನ್ನ. ಹೀಗೆ ಮಾಡುತ್ತ ವೇದಿಕೆಯ ಮೇಲೆ ಎಲ್ಲರನ್ನ ರಂಜಿಸುತ್ತ ಕುಣಿಯುತ್ತಿದ್ದಾಗ ಸಭೆಯಲ್ಲಿ ನೆರೆದಿದ್ದ ಉಳಿದೆಲ್ಲಾ ಸ್ನೇಹಿತರಿಂದ ಶಿಳ್ಳೆ, ಚಪ್ಪಾಳೆ, ಕೂಗಾಟ-ಕಿರುಚಾಟದ ಮೂಲಕ ಹುರಿದುಂಬಿಸಿದ ಪರಿ ಜೋರಾಗಿತ್ತು. ಆ ಕಾಲದಲ್ಲಿ ಈ ತರಹದ ನೃತ್ಯ ಹೊಸದಾಗಿದ್ದರಿಂದ ನೆರೆದಿದ್ದ ಜನರೆಲ್ಲರೂ ಸಂಭ್ರಮಿಸುತ್ತಿದ್ದರು.

ನೃತ್ಯದ ಪೂರ್ವ ತಯಾರಿ ನಡೆಸಿದ್ದರೂ ಅದೇನಾಯಿತೋ ಗೊತ್ತಾಗಲಿಲ್ಲ ಕಣ್ಣು ಕಾಣುವಷ್ಟು ದೊಡ್ಡದಾದ ತೂತ ಮಾಡಿ ಮುಖವನ್ನು ಮುಚ್ಚಿಕೊಂಡಿದ್ದ ಚೀಲ ಕುಣಿತದ ಝಲಕ್ಕಿಗೆ ಜಾರಿ ಕಣ್ಣುಕಾಣದಂತೆ ಪೂರ್ತಿಯಾಗಿ ಮುಚ್ಚಿಹೋಯಿತು. ಆಗೇನು ಮಾಡುವುದು, ಕುಣಿಯುವ ರಭಸದಲ್ಲಿ ಅದೆಲ್ಲ ಲೆಕ್ಕಕ್ಕೆ ಬಾರದೆ ಕುಣಿತವನ್ನು ಮುಂದುವರೆಸಿ ಎಲ್ಲರನ್ನು ರಂಜಿಸಲು ಕುಣಿತವನ್ನು ಮುಂದುವರೆಸಿದೆ. ಇನ್ನೇನು ಹಾಡು ಮುಗಿಯಬೇಕು ಅದೆ ಸಮಯಕ್ಕೆ ಸರಿಯಾಗಿ ಕುಣಿಯುತ್ತ ಕುಣಿಯುತ್ತ ಮುಂದೆ ಬಂದು ವೇದಿಕೆಯ ಮೇಲಿಂದ ಕೆಳಗೆ ದುಢಕ್ಕೆಂದು ಬಿದ್ದುಬಿಟ್ಟೆ. ನಗುವಿನೊಂದಿಗೆ ಕರತಾಡನವನ್ನು ಗಿಟ್ಟಿಸಿಕೊಂಡದ್ದು ಅಗೌರವದ ಹೆಮ್ಮೆಯಾಯಿತು.

ನಂತರ ಎಲ್ಲಾ ಸ್ನೇಹಿತರೂ ಬಂದು ನೋವಾಯಿತಾ ಎಂದು ವಿಚಾರಿಸಿ ಉತ್ತಮವಾಗಿತ್ತು ನಿನ್ನ ನೃತ್ಯ ಆದರೆ ಕೊನೆಯಲ್ಲಿ ಹೀಗಾಗಿರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದಾಗ ಆದ ಅವಮಾನದ ಕ್ಷಣ ಬಿದ್ದಾಗ ಆದ ನೋವಿಗಿಂತ ಜಾಸ್ತಿಯಾಗಿ ಮನ ಕುಗ್ಗುವಂತೆ ಮಾಡಿತು. ಹಾಗೆ ಕೊನೆಯಲ್ಲಿ ಗಳಿಸಿದ ಮೊದಲನೆಯ ಸ್ಥಾನದ ಪ್ರಶಸ್ತಿಯನ್ನು ಪಡೆಯುವಾಗಲೂ ಕೆಳಗೆ ಬಿದ್ದರೂ ಮೊದಲನೆಯ ಸ್ಥಾನ ಪಡೆಯುವ ಮೂಲಕ ಮೇಲೆದ್ದ ಎಂದಾಗ ಕರುಣೆಯಲ್ಲಿ ಅಗೌರವವನ್ನು ಅನುಭವಿಸಿದ್ದ ಮೂತಿ ನಗುವಿನಲಿ ಹೆಮ್ಮೆಯಿಂದ ಅರಳಿತು.

Monday, March 20, 2017

ದಿಗಿಲ ಅರಿವು

ಕತ್ತಲೆಯಲಿ ನಾಯಿಯೊಂದು
ಮುಖವನ್ನೆತ್ತಿ ಬೊಗಳುತಿದೆ
ದೆವ್ವ ಬಂದಿತೋ? ಕಳ್ಳ ಬಂದನೋ?
ಅರಿವಿಗೆ ಬಾರದು ಭಯದಲಿ
ನಡುಕ ಹುಟ್ಟಿತು ಚಳಿಯಲಿ

ಕೆಂಪು ನಾಮದ ಬಿಳಿಯ ಸೀರೆಯು
ತಿರುಗಿದ ಹೆಜ್ಜೆ ನಡಿಗೆಯು
ಎಲ್ಲಿ ಓಡಲಿ? ಏನು ಮಾಡಲಿ?
ಸನಿಹ ಬರಲು ಅಂಜಿಕೆಯು
ಎದುರು ನಿಲ್ಲಲು ಹೆದರಿಕೆಯು

ಸುತ್ತ ಕವಿದಿದೆ ನಡುಗತ್ತಲು
ಕೂಗಿದರೆ ಬರುವವರಿಲ್ಲ ಬಳಿಗೆ
ಹುಚ್ಚನಾದೆನೋ? ಸತ್ತು ಹೋದೆನೋ?
ಅರಿವು ಮೂಡದ ಕ್ಷಣದಲಿ
ಜ್ಞಾನ ಭಾರತಿ ಒಲಿಯಲಿ

ಬಂದು ಕೇಳಿತು ಕುಶಲವ
ನೀನು ಬೂತಗಳ ನಂಬುವೆಯಾ?
ಏನ ಹೇಳಲಿ? ಯಾರ ಕೇಳಲಿ?
ಕೋಳಿ ಕೂಗಲು ಬೆಳಗಾಯಿತು
ಅರಿತೆ ದಿಗಿಲ ಕನಸಾಅಯಿತು

Sunday, March 19, 2017

ನಾನಿರುವೆ ನಾನಾಗಿರುವೆ

ಕೂದಲಳತೆ ದೂರದಲಿ
ನೆರಳಿನಷ್ಟೇ ಹತ್ತಿರ ನಿಂತು
ದೃಷ್ಠಿಯಾಗದಿರಲೊಂದು ಬೊಟ್ಟಿಡುವೆನು
ಕಾಡಿಗೆಯ ಬೊಟ್ಟಿಡುವೆನು

ಆ ಕಪ್ಪು ಚುಕ್ಕೆಯಲಿ
ಕೆಟ್ಟ ಕಣ್ಣುಗಳು ಸುಳಿಯದಿರಲು
ಬಂಧನವ ಹಾಕಿರುವೆನು
ದಿಗ್ಬಂಧನವ ಹಾಕಿರುವೆನು

ನಿನ್ನ ತುಂಟತನದ ನಗುವಿನಲಿ
ನನ್ನ ನೆಂಟತನದ ಬೆಸುಗೆಯಲಿ
ನಮ್ಮ ಜೀವನದ ಗೆಳೆತನದಲಿ
ನಿಮ್ಮ ಮನದಾಳದ ಹಾರೈಕೆಯಿರಲಿ

ಏಳು ಸುತ್ತಿನ ಕೋಟೆಯಾದರೂ
ಎದುರಿಗೆ ನಿಂತು ಹೋರಾಡುವೆನು
ಏಕಾಂಗಿಯೆಂದು ಬೇಸರಿದಂತೆ
ಸೂಜಿಮೊನೆಯ ಚೂರು ಸಹ ತಾಗದಂತೆ

ಕನಸಿನ ಬ್ರೂಣಕೆ ಜೀವವಾಗಿ
ನನಸಿನ ಪ್ರಾಣಕೆ ಚೈತನ್ಯವಾಗಿ
ಮನಸಿನ ಬಾವನೆಗೆ ನುಡಿಯಾಗಿ
ಚಲನೆಯ ನೋಟಕಿರುವೆ ಕಣ್ಗುಡ್ಡೆಯಾಗಿ

ನಿನ್ನಂದಕೆ ರಕ್ಷಾಕವಚವು ನಾನಾಗಿ
ಕುಶಲತೆಗೆ ಬಿಡಿಸುವ ಕಗ್ಗಂಟುವಾಗಿ
ನೋವಾದರೆ ಹಿತವಾದ ಕ್ಷೇಮವಾಗಿ
ಜೊತೆಗಿರುವೆ ದಡ ಸೇರಿಸೋ ದೋಣಿಯಾಗಿ

Wednesday, March 15, 2017

ನಗುತಿರು ರೂಪಸಿ

ನಗುವೆಯಾ ನನ್ನ ರೂಪಸಿ?
ನಿನ್ನ ನೋವು ನನಗಿರಿಸಿ
ಸೋಲದೆ ಪ್ರೀತಿ ಕಡಲಿನಲಿ
ಹೆದರದೆ ಬಾಳ ಪಯಣದಲಿ
ಬೆಳಗುವ ದೀಪ ನೀನಾಗು
ಅರಳಿದ ಸುಗಂಧದ ಹೂವಾಗು

ಕಣ್ಣಿನಲಿ ಕಂಬನಿಯ ಕಣವಾಗಿ
ಅಡಗಿರುವೆ ತಡೆಯಾಗಿ ಹಿಡಿದು
ದೂಡದಿರು ಹೊರಗೆ ಕಣ್ಣಿರಿನಲಿ
ಮಿನುಗುವೆನು ಕಣ್ಣ ಗುಡ್ಡೆಯಲಿ

ಗುಪ್ತ ಸಂವೇದನೆಯು ಧಮನಿಯಲಿ
ಸೂಕ್ತ ಪ್ರೇರಣೆಯು ಬಾಳಿನಲಿ
ದೀವಿಗೆಯ ದೀಪದಲಿ ದಿವ್ಯವಾಗು
ಬದುಕಿನ ಬವಣೆಯಲಿ ಭವ್ಯವಾಗು

ದಿನದ ನೋವ ನುಂಗಿ
ಅರಿತೆ ಭಾವದ ಭಂಗಿ
ಮರುಗದಿರು ಸ್ಪುರಿತೆಯೆಂದು
ಕೊರಗದಿರು ಕರ್ಮಕ್ಕೆಂದು
ಬೇಸರಕೆ ಹಸನದ ರೂಪ
ಅವಿರತ ಕೊಡುವ ಭೂಪ

Monday, March 13, 2017

ಕಾಡ ದಾರಿ ಕಾಲ ಹಾದಿ

ಗುಡ್ಡದ ಮೇಲೆ
ಗಿಡವ ನೆಡಲು
ನಾಂದಿ ಹಾಡಿತು
ಉಸಿರಾಗದ ಗಾಳಿಯು

ಹಿಂದು ಮುಂದಿನ
ಆಗು ಹೋಗುವಿನ
ಯೋಚನೆ ಅರಿಯಿತು
ಚರ್ಚಿಸಲು ಕೊನೆಯಲಿ

ಯಾರು ಎರೆವರು?
ಗಿಡಕೆ ನೀರನು
ಗುಡ್ಡ ಹತ್ತುವರೇ?
ಕಾಲ ಹಾದಿಯಲಿ

ಕಾಡ ದಾರಿಯು
ಭಯದ ಕಹಳೆಯು
ಕಿವುಡರಿಗೂ ಸಾಧ್ಯವಾಗದು
ಕುರುಡರೂ ಮುನ್ನಡೆಯರು

ಕಾಡ ಕಡಿಯುವ
ಕಟುಕ ಕಳ್ಳರು
ಕಾಣದಂತೆ ಕಳೆಯುವ
ಕೊಬ್ಬನಡಗಿಸುವ ಅಂತ್ಯಕೆ

ಜೊತೆಗೆ ಸಾಗುತ
ಎಗರಿ ನಿಲ್ಲುವ
ಕೊಡವ ಹೊತ್ತೊಯ್ಯುತ
ಜಲವ ಧಾರೆಯೆರೆಯುವ

ಜಗ್ಗಿ ಕುಗ್ಗದೆ
ಗಿಡಗಳ ಬೆಳೆಸುವ
ಸೋಲು ಸುಸ್ತನು
ತೀಡಿ ತೊರೆಯುವ

ಹರಿವ ಹೊಳೆಯಲಿ
ನೀರ ತುಂಬಿಸುವ
ಅಡ್ಡಗಟ್ಟುತ ಮೋಡವ
ಮರೆಯಾದ ಮಳೆಯಾಗಿಸುವ

ಗುಡ್ಡ ತೊಳೆದು
ಹೂಳು ತುಂಬದಂತೆ
ಬೇರು ತಡೆಯುವುದು
ಮರವ ಬೆಳೆಸಲು

ಸುಗ್ಗಿಯಲ್ಲಿ ಹೋಳಿ ಮೆರಗು

ಸುಗ್ಗಿಯ ಕಾಲದ ಬೆಳೆಯನ್ನುಕೊಯ್ದು ಅದರ ಸಂಭ್ರಮವನ್ನು ಆಚರಿಸುವ ಹಬ್ಬವೇ ಸುಗ್ಗಿ ಹಬ್ಬ. ಹಳ್ಳಿಯ ಕಡೆಗೆ ಇದನ್ನುಸುಗ್ಗಿ ಎಂದು ಕರೆದರೆ, ನಗರ ಮತ್ತು ಪಟ್ಟಣಗಳಲ್ಲಿ ಹೋಳಿ ಎಂದು ಕರೆಯುವರು.  ಹಳ್ಳಿಗಳಲ್ಲಿ ಹದಿನೈದು ದಿನಗಳ ಕಾಲ ಹಬ್ಬ ಇದ್ದರೆ, ನಗರದಲ್ಲಿ ಒಂದು ದಿನ ಆಚರಿಸುವರು.  ಹಳ್ಳಿಗಳಲ್ಲಿ ಬುಡಕಟ್ಟು ಜನಾಂಗದವರಾದ ಹಾಲಕ್ಕಿ ಸಮಾಜದವರು ಹಾಗು ಇತರೆ ವರ್ಗದ ಜನಾಂಗದವರು ತಮ್ಮಲ್ಲಿಯೇ ಒಂದೊಂದು ಗುಂಪು ಅಥವಾ ಪಂಗಡಗಳನ್ನಾಗಿ ಮಾಡಿಕೊಂಡು ಸುಗ್ಗಿ ಹಬ್ಬಕ್ಕಿಂತ ಒಂದು ತಿಂಗಳು ಮೊದಲೇ ತಯಾರಿಯನ್ನು ಮಾಡಿಕೊಳ್ಳುತ್ತಾರೆ.

ಹಲವರು ನೃತ್ಯವನ್ನು, ಕೆಲವರು ಹಾಡನ್ನು, ಇಬ್ಬರು-ಮೂವರು ವಾದ್ಯಗಳನ್ನು ಬಾರಿಸುವರು. ಒಬ್ಬ ಗುಮಟೆಪಾಗನ್ನು, ಇನ್ನೊಬ್ಬ ಜಮಟೆ(ಜಾಗಟೆ)ಯನ್ನು, ಮತ್ತೊಬ್ಬ ತಾಳವನ್ನು ಬಾರಿಸುವರು. ಗುಮಟೆಪಾಗು ಎನ್ನುವುದು ಚಾಪ್ಯ ಎನ್ನುವ ಪ್ರಾಣಿಯ ಒಣ ಚರ್ಮವನ್ನು ಮಣ್ಣಿನ ಮಡಿಕೆಯ ಬಾಯಿಗೆ ಕಟ್ಟಿ ಮಾಡುವ ಒಂದು ವಾದ್ಯವಾಗಿದೆ.

ಚೋ..ಹೋ..ಹೋಯ್
ಹೋಯ್... ಹೋಯ್...

ಎಂದು ಹಾಡು ಹೇಳುತ್ತ, ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ನವಿಲುಗರಿಗಳಿಂದ ಮಾಡಿದ ಕುಂಚವನ್ನು ಒಂದು ಕೈಯಲ್ಲಿ, ಕೊಲನ್ನು ಇನ್ನೊಂದು ಕೈಯಲ್ಲಿ ಹಿಡಿದು ಕುಣಿಯುವರು.ಇದನ್ನೇ ಹಳ್ಳಿಯಲ್ಲಿ ಸುಗ್ಗಿ ಕುಣಿತ ಎನ್ನುವರು.
                                                  
ಸುಗ್ಗಿಯು ಬಂತೆಂದರೆ ಚಿಕ್ಕ ಮಕ್ಕಳಿಗೆ ಹಿಗ್ಗೋ ಹಿಗ್ಗು. ಸುಗ್ಗಿಯವರು ಮಾಡಿಕೊಂಡು ಬರುವ ವಿವಿಧ ವೇಷಗಳಾದ ಯಕ್ಷಗಾನ, ನಾಟಕ, ಮೊಕ್ಕಟ, ಇತ್ಯಾದಿ ವೇಷಗಳನ್ನು ನೋಡಲು ಕಾತುರರಾಗಿರುತ್ತಾರೆ.ಕೆಲವು ಮಕ್ಕಳು ಮೊಕ್ಕಟ ವೇಷಧಾರಿಯನ್ನು ಕಂಡರೆ ಹೆದರುತ್ತಾರೆ. ಏಕೆಂದರೆ ವೇಷಧಾರಿಗಳು ಚಿಕ್ಕ ಮಕ್ಕಳನ್ನು ಕಂಡರೆ ಎತ್ತುಕೊಂಡು ಹೋಗುತ್ತೇನೆ ಎಂದು ಹೆದರಿಸುತ್ತಾರೆ. ಹೀಗಾಗಿ ಚಿಕ್ಕ ಮಕ್ಕಳು ಸುಗ್ಗಿ ಬಂದಾಗ ಮನೆಯಿಂದ ಹೊರಗೆ ಬರುವುದಿಲ್ಲ. ನಾವು ಚಿಕ್ಕವರಿದ್ದಾಗ ಊರಿನ ಪ್ರತಿ ಮನೆಗೂ ಹೋಗಿ ಹುಚ್ಚನ ವೇಷ, ಕರಡಿಯ ವೇಷ, ಹನುಮಂತನ ವೇಷ ಹಾಗೂ ಮುಂತಾದ ವೇಷಧಾರಿಗಳ ಜೊತೆಗೆ ಮಾಡುತ್ತಿದ್ದ ಕೀಟಲೆಗಳನ್ನು ನೆನೆಸಿಕೊಂಡರೆ ಇಂದಿಗೂ ಖುಷಿಯಾಗುವುದು ಮತ್ತು ಹಳೆಯ ದಿನಗಳಿಗೆ ಹಿನ್ನಡೆಯಬೇಕೆನ್ನಿಸುತ್ತದೆ. ಸುಗ್ಗಿಯ ಸೆಳೆತವೇ ಅಂತಹದು.... ಅಲ್ವೇ?

                ಮನೆ ಮನೆಗೆ ಬರುವ ಸುಗ್ಗಿ ಮೇಳದವರಿಗೆ ಮನೆಯ ಯಜಮಾನರು ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಹಣವನ್ನು ನೀಡುತ್ತಾರೆ. ಹೀಗೆ ಪ್ರತಿ ಮನೆಯಲ್ಲೂ ಸುಗ್ಗಿಯವರಿಗೆ ಮರ್ಯಾದೆಯನ್ನು ನೀಡುತ್ತಾರೆ. ಮೊಕ್ಕಟನ ವೇಷಧಾರಿಯು ಚಿಲ್ಲರೆ ರೊಕ್ಕವನ್ನು ನೀಡುವಂತೆ ಕಾಡುತ್ತಾನೆ. ಸುಗ್ಗಿ ಮೇಳದವರು ಹಗಲು ಇರುಳೆನ್ನದೆ ಊರೂರು ಸುತ್ತಿ ಪ್ರತಿ ಮನೆಗೂ ಹೋಗುವರು. ಸುಗ್ಗಿಯಲ್ಲಿ "ತುರಾಯಿ" ಕಟ್ಟುವುದು ವಿಶೇಷವಾದುದು. ಹಿಂದಿನ ಕಾಲದಲ್ಲಿ ತುರಾಯಿ ವೇಷಧಾರಿಗಳು ಮಾತ್ರ ಸುಗ್ಗಿಯನ್ನು ಕುಣಿಯುತ್ತಿದ್ದರು. ಆದರೆ ಇಂದು ಬೆಂಡಿನಿಂದ (ಥರ್ಮೋಕಾಲ್) ಮಾಡುವ ತುರಾಯಿಯ ಒಂದು ಕಡ್ಡಿಗೆ ನೂರು ರೂಪಾಯಿಗಳಿಗಿಂತ ಹೆಚ್ಚು ಹಣವಿದ್ದು ಇಪ್ಪತ್ತೈದರಿಂದ ಐವತ್ತು ಕಡ್ದಿಗಳಿರುವ ತುರಾಯಿ ಗೊಂಚಲೊಂದಕ್ಕೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಹೀಗಾಗಿ ಬೇರೆ ಬೇರೆ ರೀತಿಯ ವೇಷಗಳನ್ನು ಧರಿಸಲು ಆರಂಭಿಸಿದರು.
                                                 
ವಿವಿಧ ವೇಷ, ಮುಖಕ್ಕೆ ಚಿತ್ರ ವಿಚಿತ್ರ ಬಣ್ಣಗಳನ್ನು ಬಳಿದುಕೊಂಡು ಬರುವ ಸುಗ್ಗಿಯ ಕೊನೆಯ ದಿನ ಕಾಮನ ಸುಡುವ ಪದ್ಧತಿ ಇದ್ದು ದಿನವನ್ನು ಹೋಳಿ ಎಂದು ಕರೆದು ಬಣ್ಣ ಬಡಿದು ಕುಣಿಯುತ್ತಿದ್ದ ಜನಗಳು ಮತ್ತು ಇತರರೆಲ್ಲರೂ ಸೇರಿ ಬಣ್ಣವನ್ನು ಎರಚಿಕೊಂಡು ಹೋಳಿಯಾಡುವರು. ಅಲ್ಲದೆ ಸುಗ್ಗಿಯಲ್ಲಿ ಕಟ್ಟಿದ ತುರಾಯಿಯನ್ನು ರಾಶಿ ಹಾಕಿ ಅದಕ್ಕೆ ಪೂಜೆಯನ್ನು ಮಾಡಿ ಬೆಂಕಿಯನ್ನು ಇಟ್ಟು ಸುಡುವರು. ಇದನ್ನು ಕಾಮ ದಹನ ಎಂದು ಕರೆಯುವರು. ನಂತರ ಮನೆಗೆ ಬಂದು ಸ್ನಾನ ಮಾಡಿ, ಹಬ್ಬದ ಅಡುಗೆಯನ್ನು ಮಾಡಿ ಊಟ ಮಾಡುವರು.
                                                 
ಯಜಮಾನ ಎಂದು ಊರ ಗೌಡ ಅಥವಾ ಮುಖ್ಯಸ್ಥನನ್ನು ಕರೆಯುತ್ತಿದ್ದು ಸುಗ್ಗಿಯ ಸಮಯದಲ್ಲಿ ಸುಗ್ಗಿಯ ಗುಂಪಿನ ಸದಸ್ಯರೆಲ್ಲ ತಮ್ಮ ಮನೆಗಳಿಗೆ ತೆರಳದೆ ಯಜಮಾನನ ಮನೆಯಲ್ಲಿ ಉಳಿಯುವರು. ಕೊನೆಯಲ್ಲಿ ಬಂದ ಹಣದಲ್ಲಿ ಧವಸ ಧಾನ್ಯಗಳನ್ನು ಖರೀದಿಸಿ ತಂದು ಎಲ್ಲರೂ ಸಮನಾಗಿ ಹಂಚಿಕೊಳ್ಳುವರು. ಸುಗ್ಗಿಯಲ್ಲಿ ಪ್ರತಿ ಮನೆಯಿಂದ ಒಬ್ಬ ಸದಸ್ಯ ಭಾಗವಹಿಸಲೇ ಬೇಕು. ಅದೇ ಆಚರಣೆ ಈಗಲು ಮುಂದುವರೆದುಕೊಂಡು ಬರುತ್ತಿದೆ ಎನ್ನುವುದು ನಮ್ಮ ಸಂಸ್ಕೃತಿಗೆ ಒಂದು ಹಿರಿಮೆ.

ಹೋಳಿ ಎಂದರೆ ಮೇಲ್ನೋಟಕ್ಕೆ ಬಣ್ಣದಾಟ ಎಂಬ ಮಾತಿದೆ. ಇತ್ತೀಚಿನ ದಿನಗಳಲ್ಲಿ ಇದು ಸತ್ಯ ಕೂಡ. ಅಲ್ಲದೆ ಹೋಳಿಯೆಂದರೆ ಮೋಜು ಮಸ್ತಿಯಾಟವಾಗಿದೆ. ಹೋಳಿ ಯಾಡುವುದರ ಅರ್ಥ ಗೊತ್ತಿಲ್ಲದೆ ಹಲವು ಜನರು ಮೋಜಿಗಾಗಿ ರಂಗನ್ನೆರಚಿ ಕುಣಿಯುವದಷ್ಟೆ ತಿಳಿದಂತಿದೆ. ರಂಗಿನಾಟದ ಮೂಲ ಉತ್ತರ ಭಾರತವೆಂದರೆ ತಪ್ಪಾಗಲಾರದು. ನಮ್ಮಲ್ಲಿ ಇದನ್ನೆ ಕಾಮದಹನ ಎಂಬಾಚರಣೆಯ ಮೂಲಕ ಸಂಭ್ರಮಿಸುತ್ತೇವೆ.


ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಮಿಯಂದು ಇದನ್ನು ಆಚರಿಸುತ್ತೇವೆ. ಹಬ್ಬವನ್ನು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸಂಭ್ರಮಿಸುವ ಅಭ್ಯಾಸವಿದೆ. ಕೆಲವು ಕಡೆ ೧೦ ತಲೆಯ ರಾವಣನ ಮೂರ್ತಿಯನ್ನು ಸುಡುವುದು, ಗೋದಿಯ ಕಿಚಡಿಯನ್ನು ಬೇಡಿ ಸಂಭ್ರಮಿಸುವುದು, ಶಿಕಂಡಿಯ ವೇಷಧಾರಿಯು ಮನೆಗಳಿಂದ ಬೇಡಿತಂದ ಬೇಡದೇ ಹೋದ ವಸ್ತುಗಳನ್ನು ಸುಡುವುದು ಹೀಗೆ ಬೇರೆ ಬೇರೆ ತರನಾದ ಆಚರಣೆಗಳು ನಮ್ಮ ವೈವಿಧ್ಯತೆಯಲ್ಲಿನ ಏಕತೆಯನ್ನು ಎತ್ತಿ ತೋರಿಸುತ್ತದೆ.


ಕಾಮ ದಹನ ಮಾಡುವುದು ಮತ್ತು ರಾವಣನ ಮೂರ್ತಿಯನ್ನು ದಹಿಸುವುದು ನಮ್ಮಲ್ಲಿರುವ ಕೆಟ್ಟದ್ದನ್ನು, ದುಷ್ಟತನ, ಬೇಡದ ವಸ್ತುವನ್ನು ಸುಟ್ಟು ಅಥವಾ ಬಿಟ್ಟು ನವ ಪಥದಲ್ಲಿ ಸಾಗೋಣ ಎಂಬ ವಿಚಾರವನ್ನು ತಿಳಿಸುತ್ತದೆ. ಹಾಗೆ ರಂಗಿನೆರೆಚಾಟವು ನಮ್ಮ ಬಾಳಲ್ಲಿ ವೈವಿಧ್ಯಮಯ ಸಂಗತಿಗಳು ಘಟಿಸಿ ರಂಗುರಂಗಾಗಿ ನಮ್ಮ ಬಾಳು ಪ್ರಜ್ವಲಿಸಲಿ ಎಂಬ ಸದುದ್ದೇಶವಿದೆ. ಯಾಕೆಂದರೆ ಹೆಚ್ಚಿನದಾಗಿ ರಂಗಿನೆರೆಚಾಟಕ್ಕೆ ಬಳಸುವ ಬಣ್ಣಗಳ ವಿಶಾಲಾರ್ಥ ಹೀಗಿದೆ: ಕೆಂಪು ಬಣ್ಣ-ಭಾವೋದ್ವೇಗ ಹೆಚ್ಚಿಸುತ್ತದೆ, ಕಿತ್ತಳೆ ಬಣ್ಣ-ಮನಸ್ಸಿನ ಸ್ವಭಾವ ಮತ್ತು ವರ್ತನೆ ಮೇಲೆ ನೇರವಾದ ಪರಿಣಾಮ ಬೀರುತ್ತದೆ, ತೀಕ್ಷ್ಣಸ್ವಭಾವದ ಸೌಹಾರ್ದ  ರೂಪವಾಗಿದೆ ಮತ್ತು ವ್ಯಾಮೋಹ ಹೆಚ್ಚಿಸುತ್ತದೆ, ನೀಲಿ ಬಣ್ಣ-ಪ್ರಶಾಂತತೆ ನೀಡುತ್ತದೆ ಮತ್ತು ಆನಂದ ಉಲ್ಲಾಸ ಹೆಚ್ಚಿಸುತ್ತದೆ, ಹಸಿರು ಬಣ್ಣ-ಶಾಂತಿ ನೆಮ್ಮದಿ ವಿಶ್ರಾಂತಿಯನ್ನು ತರುತ್ತದೆ, ನೇರಳೆ ಬಣ್ಣ-ಮನಸ್ಸಿಗೆ ಪ್ರಶಾಂತತೆ ಅನುಭವ ಕೊಡುತ್ತದೆ, ಹಳದಿ ಬಣ್ಣ-ಶಕ್ತಿಯನ್ನು ಮತ್ತು ವ್ಯಾಮೋಹವನ್ನು ವೃದ್ಧಿಸುತ್ತದೆ. ಹೀಗಾಗಿ ಸರ್ವ ಧರ್ಮಿಯರೂ ಸಹ ಹೋಳಿಯನ್ನಾಡುತ್ತಾರೆ. ಬಣ್ಣಗಳನ್ನಾಡುವುದರಿಂದ ಪ್ರತಿ ಬಣ್ಣಗಳಿಗೆ ಇರುವ ಸಂಕೇತ ಸಾಕಾರವಾಗಲಿ ಎಂಬ ಆಶಯದೊಂದಿಗೆ ಸುಗ್ಗಿಯ ಹೋಳಿಗೆ ಮೆರುಗನ್ನು ನೀಡೋಣ.