Sunday, December 6, 2015

ನಿಶೆಯ ಸೆರಗು

ಮುಬ್ಬು ಮುಗಿಲ ಮಾಲೆಯಲಿ
ಅಡಗಿರುವ ಹೊಂಗಿರಣದ ಪಗಳೆಗಳು
ಚೂರು ಬಂದು ವಿರಹಿ ಎಂದು
ಅತ್ತ ಇತ್ತ ಅರಸಿದೆ ಜೋಡಿಯನು

ಸನಿಹದಲ್ಲಿ ಸಂಗಾತಿಯನು ಕಲ್ಪಿಸಿ
ದಿಟ್ಟ ತನದಿ ನೋಡಿದೆ ಒಂಟಿಯಾಗಿ
ಯಾವ ಮಗ್ಗಲಿನಲಿ ಹೊರಬಂದರೂ
ಕೆಲಸವಾಗದೆ ಬೇಸರಿಸಿತು ಸುಂಕವಿತ್ತರು

ಮೂಡಣದಲಿ ಹೊರಗೆ ಬಂದರೆ
ಕೋಳಿ ಕೂಗಿನ ಕಾಟವು
ಪಡುವಣದಲಿ ಮರೆಯಾದರೆ
ನಿಶಾಚರಗಳ ಮಾರ್ದನಿಯು

ದಡದ ಕಡೆಗೆ ಓಡುವ ಅಲೆಗಳಲಿ
ತಾರತಮ್ಯವಿಲ್ಲದ ತತ್ವಗಳಿವೆ
ಪ್ರಾಣಿಯಾಗಲಿ ಕಸವೇ ಆಗಲಿ
ಒಡಲಲ್ಲಿ ಉಳಿಸದೆ ಹೊರಗೆ ದೂಡುವುದು

ಸುರಿವ ಮಳೆಯಲಿ ಬೇಧವಿಲ್ಲ
ಎಲ್ಲರ ಮನ ತಣಿಸುವುದು
ಬೋರ್ಗರೆವ ತರಂಗಗಳ ಜೊತೆ
ನಿಶೆಯ ಸೆರಗು ಹಿಡಿಯಲೆ ಏಕಾಂತದಲಿ

ಮುಂಜಾನೆಯು ಮುಸ್ಸಂಜೆಯಂತೆ
ರಸಗಳೆ ಇಲ್ಲದಾಗ ನವರಸಗಳಲಿ
ಬೆಳಕ ಹೊತ್ತು ಕಿರಣ ಬಂದರೂ
ಚೈತನ್ಯವಿಲ್ಲದಂತೆ ಜೀವ ಸೊರಗುವುದು

Friday, December 4, 2015

ಹದಿ-ಹರೆಯ

ಹದಿಹರೆಯದ ಮುನ್ನೋಟಕೆ
ಮನಸೇಳಿದೆ ಆಲಿಂಗನ
ಅದು ಶಪಿಸುವ ಪರಿಣಾಮಕೆ
ಬದುಕಲ್ಲಿದೆ ಆಕ್ರಂದನ

ಮನಸಲ್ಲಿನ ಬಹು ಮಿಡಿತಕೆ
ಬೇಕಾಗದ ಕೆಲ ತುಡಿತವು
ಆಸ್ವಾದಿಸೊ ಪ್ರತಿ ನೋಟಕೆ
ನವರಸಗಳ ಉದ್ಭವವು

ಬಯಕೆಗಳು ಬಹಳ
ಏರು ರಕ್ತದಲಿ ಈಡೇರಿಕೆಗೆ
ಸರಿ ತಪ್ಪುಗಳ ಎಣಿಕೆ
ಜೀವನದಲ್ಲಿ ತುಸು ಸೋತರೆ

ಏನೋ ಹಿಡಿಯುವ ಆಸೆ
ಉದ್ವೇಗದಲ್ಲಿ ತಾಳ್ಮೆಯಿಲ್ಲದೆ
ಸಹ ಬಾಳ್ವೆ ನಡೆಸುವ ಆಸೆ
ಯವ್ವನದಲ್ಲಿ ಸಂಗಾತಿಯ ಜೊತೆ

Thursday, December 3, 2015

ಒಲವಲಿ ಮನ್ನಿಸು

ನೆನಪಲಿ ಕ್ಷಮಿಸು ನೋವಾದರೆ
ಒಲವಲಿ ಮನ್ನಿಸು ಸಿಟ್ಟಾದರೆ
ಹಗಲಲಿ ನಿದ್ರಿಸು ನಲಿವಿದ್ದರೆ
ಇರುಳನೆ ಅಳಿಸು ಈ ಜಗವು ಸುಳ್ಳಾದರೆ

ಮನಸಿದು ಒಲವಿನ ವೇದಿಕೆ
ಹೃದಯವು ಒಲವಿನ ದೀವಿಗೆ
ಭಾವನೆಯೇ ಮೌನದ ಮಾತು
ಕೌತುಕವು ಕಣ್ಣ ಸನ್ನೆಯಲಿ ಕೂತು
ಮರೆಯದೆ ಬಾಳುವ ಮರು ದಿನಗಳ ಸರದಿಯಲಿ 

ಇಳೆಯಲಿ ಚಾರಿತ್ರ್ಯದ ಚಪ್ಪರ
ಕನಸಲಿ ಕಲ್ಪನೆಗಳ ಅಬ್ಬರ
ನವೋದಯದ ನಂಬಿಕೆಯು ಮುಂಜಾನೆಯಲಿ
ನಲಿವಿನ ನರ್ತನವು ಮುಸ್ಸಂಜೆಯಲಿ
ಚೈತನ್ಯಕೆ ನಾವಿಬ್ಬರೇ ಆದರ್ಶ ವ್ಯಕ್ತಿಗಳು


Friday, November 20, 2015

ಮೌನ ಹಾಡಲಿ

ಸತ್ತು ಬದುಕಿದ ಮೇಲೆ
ಚಿಗುರಿದ ಕನಸೊಂದು
ಅರಸಿತು ಒಲವಿನ
ಗೂಡನು ಸೇರಲು
ಬಯಸಿದ ಮನಸೊಂದು...

ಜೊತೆಯಲಿ ಬೇಕು
ಜೊತೆಯಾಗ ಬೇಕು
ತುಡಿತಕೆ ಸೋತಿತು ಮನವು
ಗೆದ್ದರೆ ಸಾಕು
ತವಕದ ಮಾತು
ಮನಸು ಮೌನಕೆ ಜಾರಲು

ಸನ್ನೆಯು ಕಣ್ಣಲಿ
ಸಮ್ಮತಿ ಸೂಚಿಸಿ
ಸತ್ತ ಮನಸನು ಬದುಕಿಸಲು
ಜೀವನ ಮೌಲ್ಯವ
ಬದುಕಿನ ಕಾವ್ಯವ
ಇಂಪಾದ ರಾಗದಿ ಹಾಡಲು

Tuesday, November 10, 2015

ಅಂದು ಹಬ್ಬವೆಂದರೆ ಸಂಭ್ರಮ...ಇಂದು ಹಬ್ಬವೆಂದರೆ ವಿರಾಮ...!!!

 ಹಬ್ಬವೆಂದರೆ ಸಂತಸ, ಮನೋಲ್ಲಾಸ, ಸಡಗರದ ಗಡಿಬಿಡಿಯ ಕ್ಷಣಗಳು. ಬಗೆ ಬಗೆಯ ತಿಂಡಿ ತಿನುಸು, ಹೊಸ ಬಟ್ಟೆ, ಅಲಂಕೃತ ಮನೆಯ ಎದುರು ರಂಗೋಲಿ ಹೀಗೆ ವಿಧ ವಿಧವಾದ ಸಂತಸದ ಆಟೋಟಗಳು. ಎನೋ ಬಯಸಿದ ಬರಿದಾದ ಮನಗಳಿಗೆ ಮುದ ನೀಡುತ್ತಿದ್ದ ಆಯಾಮವಾಗಿತ್ತು. ಆದರೆ ಈಗ ಆ ದಿನಗಳು ಮರೆಯಾದಂತೆ ಮನವರಿಕೆಯಾಗುತ್ತಿದೆ. ಹೇಗೆ ಬೇಕಾದರೂ ಹಬ್ಬದ ದಿನವನ್ನು ಬಳಸಿಕೊಳ್ಳುವ ಬದಲಾಯಿತ ಸಂದರ್ಭ ನಮದಾಗುತ್ತಿದೆ. ವಿಶ್ರಾಂತಿಯೋ, ತಿರುಗಾಟವೋ, ಪಯಣವೋ, ಪ್ರವಾಸವೋ ಹೀಗೆ ಮನ ಬಂದಂತೆ ವ್ಯಯಿಸುವ ಪೂರ್ವ ನಿಯೋಜಿತ ದಿನಗಳಾಗುತ್ತಿದೆ.

ಯಾಕೆ ನಮ್ಮ ದಿನಚರಿಗಳು ಬದಲಾಗುತ್ತಿದೆ, ಆಧುನಿಕತೆಗೆ ತಲೆಬಾಗಿ ನಾವು ನಮ್ಮ ಪಾರಂಪರಿಕ ಜೀವನ ಶೈಲಿಯಲ್ಲಿ ಬಂದಿರುವ ಸಂಭ್ರಮದ ಕ್ಷಣಗಳನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ಅದಕ್ಕೊಂದು ಸಮರ್ಥನೆ ನೀಡಲು ಮುಂದಾಗುತ್ತಿರುವುದು ವಿಪರ್ಯಾಸವಾಗಿದೆ. ಇಂದ್ಯಾಕೆ ನಮ್ಮ ಹಬ್ಬದ ದಿನಗಳು ಸಂಭ್ರಮವನ್ನು ಕಳೆದುಕೊಳ್ಳುತ್ತಿದೆ ಎಂದು ಸ್ವಲ್ಪ ಓರೆಗಲ್ಲಿಗೆ ಹಚ್ಚಿ ನೋಡಿದಾಗ ಆದ ಬದಲಾವಣೆಯ ದರ್ಶನವಾಗುವುದಂತು ಖಂಡಿತ. ಏನಿತ್ತು, ಏನಾಯ್ತು, ಏನಾಗುತ್ತಿದೆ ಎನ್ನುವುದರ ಬಗ್ಗೆ ನಮ್ಮ ಗಮನವನ್ನು ಹರಿಸಿದಾಗ ಗೋಚರಿಸುವ ನಿದರ್ಶನಗಳು ನಮ್ಮೆದುರಿಗೆ ಹೀಗೆ ಬರುತ್ತದೆ.

ಕೆಲವು ವರ್ಷಗಳ ಹಿಂದೆ ನಮ್ಮ ಜನರು ಹಳ್ಳಿಯ ಜೀವನಕ್ಕೆ ಮನ್ನಣೆ ಹಾಕಿ ಅದರಂತೆ ಬದುಕಲು ಮತ್ತೆ ಅಲ್ಲಿಯ ಬದುಕಿನ ಶೈಲಿಗಳಿಗೆ ಜೈ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಬಹುತೇಕ ಮಂದಿ ಪೇಟೆಯ ಬದುಕಿಗೆ ಒಗ್ಗಿಕೊಳ್ಳಲಾರಂಭಿಸಿರುವುದರಿಂದ ನಮ್ಮ ಬದುಕಿನ ಪರಿಗಳು ಬದಲಾಗಿರುವುದೇ ಹಬ್ಬ ಹರಿದಿನಗಳು ಮಂದವಾಗುತ್ತಿರಲು ಮುಖ್ಯ ಕಾರಣವಾಗಿದೆ. ಬಹುಪಾಲು ಜನರು ಹಳ್ಳಿಯಿಂದ ನಗರಗಳಿಗೆ ಬಂದಿರುವುದರಿಂದ ಈ ಹಬ್ಬ ಹರಿದಿನಗಳು ತನ್ನ ಮೂಲ ಖುಷಿಯನ್ನು ಕಳೆದುಕೊಂಡು ನಾಟಕೀಯ ಸಂಭ್ರಮದ ಜಡತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ಹಬ್ಬ ಹರಿದಿನಗಳ ಸಂಭ್ರಮದ ಬಗ್ಗೆ ಯೋಚಿಸುವ ಮನ ಬೇಸರಿಸುತ್ತಿದೆ.

ಈ ದಿನಗಳಲ್ಲಿ ಹಬ್ಬಗಳು ತನ್ನ ಸಂಭ್ರಮವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಹಲವು ಕಾರಣಗಳನ್ನು ಅವಲೋಕಿಸಿದಾಗ ನಿಜವಾದ ಬದಲಾವಣೆಯ ಅರಿವಾಗುತ್ತದೆ. ಮೊದಲು ಹಬ್ಬ ಬಂತೆಂದರೆ ಮಕ್ಕಳಿಗೆ ಖುಷಿ, ಮನೆಯ ಪುರಷ ಮತ್ತು ಮಹಿಳೆಯರಲ್ಲಿ ಸಂಭ್ರಮ, ಸಡಗರ, ಹಾಗೆ ಮನೆಯ ಯಜಮಾನನಿಗೆ ಮಾತ್ರ ಸಡಗರದ ಜೊತೆ ಯೋಚನೆ, ಭಯ, ದುಗುಡ ಕಾಣುತ್ತಿತ್ತು. ಏಕೆಂದರೆ ಮಕ್ಕಳಿಗೆ & ಮನೆ ಮಂದಿಗೆಲ್ಲ ಆಟ ಮತ್ತು ಹೊಸ ಬಟ್ಟೆ ಸಿಗುತ್ತದೆ ಎಂಬ ಆಶಾವಾದದ ಕ್ಷಣವಾಗಿತ್ತು ಆದರೆ ಯಜಮಾನನಿಗೆ ತುಂಬಾ ಹಣ ಹೊಂದಿಸಿ ಬೇಕಾದುದನ್ನೆಲ್ಲ ಹೇಗೆ ತರುವುದು ಎಂಬ ಯೋಚನೆ, ಹಣ ಹೊಂದಿಸಲಾಗುತ್ತದೆಯೋ ಇಲ್ಲವೋ ಎಂಬ ಭಯ, ಸಾಲ ಮಾಡಿದ ಹಣ ಅಗತ್ಯಕ್ಕಿಂತ ಜಾಸ್ತಿ ಖರ್ಚಾದರೆ ಎಂಬ ದುಗುಡ ಹೀಗೆ ಹಬ್ಬ ಹರಿದಿನಗಳು ತನ್ನದೇ ಆದ ಸಂಭ್ರಮವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದ್ದವು.

ಆದರೆ ಇಂದು ಹಲವಾರು ಮಂದಿ ಹಳ್ಳಿಯನ್ನು ಬಿಟ್ಟು ನಗರಗಳಿಗೆ ಉದ್ಯೋಗಾರ್ಥಿಗಳಾಗಿ ಬಂದಿದ್ದಾರೆ. ಅದು ಅಲ್ಲದೇ ನಗರಗಳಲ್ಲಿ ತುಂಬಿಕೊಂಡಿರುವ ಮಾಲ್ ಮತ್ತು ಆಭರಣ ಮಳಿಗೆಗಳು, ಹೊಟೆಲ್ ಮತ್ತು  ವೈವಿಧ್ಯಮಯ ಅಂಗಡಿಗಳು ಜನರ ಆಸಕ್ತಿಯನ್ನು ಮೊದಲಿನಂತೆ ಯಾವುದೋ ಒಂದು ದಿನದ ಸಂಭ್ರಮಕ್ಕೆ ಕಾಯದೆ, ಬೇಕೆಂದಾಗ ಪಡೆದುಕೊಳ್ಳುವ ಅವಕಾಶಗಳಿರುವುದರಿಂದ ಜನರಿಗೆ ಈ ಹಬ್ಬ ಹರಿದಿನಗಳೆಂದರೆ ಮೊದಲಿನ ಹಾಗೆ ಸಂಭ್ರಮಿಸುವ ದಿನವಾಗದೆ ವಿಶ್ರಮಿಸುವ ಕ್ಷಣಗಳಗುತ್ತಿರುವುದಕ್ಕೆ ಮುಖ್ಯ ಕಾರಣವೆನ್ನಬಹುದು. ಅದು ಅಲ್ಲದೆ ಆನ್-ಲೈನ್ ವ್ಯವಹಾರಗಳು ಜಾಸ್ತಿ ಪ್ರಚಲಿತಕ್ಕೆ ಬಂದಿರುವುದರಿಂದ ಹಾಗೂ ಈ ಮಾಲ್ ಮತ್ತು ಹೊಟೆಲ್-ಗಳು ಹಳ್ಳಿಗಳಿಗೂ ವ್ಯಾಪಿಸಿರುವುದರಿಂದ ಹಳ್ಳಿಗಳಲ್ಲೂ ಹಬ್ಬದ ಸಂಭ್ರಮ ಮರೆಯಾಗುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.

ಮನೆಯಿಂದ ಹೊರಗಡೆಗೆ ಬಿಡದೆ ಮಕ್ಕಳನ್ನು ಮನೆಯೊಳಗೆ ಕೂಡಿಹಾಕುವ ಈ ಆಧುನಿಕ ಸಂಸ್ಕೃತಿ ಮಾನಸಿಕವಾಗಿ ಮಕ್ಕಳನ್ನು ಕುಬ್ಜರನ್ನಾಗಿ ಮಾಡುತ್ತಿದೆ. ಮೊದಲೆಲ್ಲ ಹಬ್ಬದ ದಿನಗಳು ಬಂತೆಂದರೆ ಆ ಆ ಹಬ್ಬದ ಸಮಯ ಸಂದರ್ಭಕ್ಕನುಸಾರವಾಗಿ ಬಗೆ ಬಗೆಯ ಆಟೋಟಗಳು ಮಕ್ಕಳಲ್ಲಿ ಕಂಡುಬರುತ್ತಿದ್ದವು. ಆದರೆ ಇಂದು ಮೊಬೈಲ್ ಆಟ, ಗಣಕ ಯಂತ್ರದ ಆಟಗಳಿಗೆ ದಾಸರಾಗಿರುವ ಮಕ್ಕಳಲ್ಲಿ ದೈಹಿಕ ಸೂಕ್ಷ್ಮತೆಗಳು, ತೊಂದರೆಗಳು ಕಾಣಿಸುತ್ತಿವೆ ಹಾಗೂ ಹಬ್ಬದ ಮೂಲ ಸಂಭ್ರಮ ಅಡಗುತ್ತಿರಲು ಇದೊಂದು ಸಂಕಲಿತ ಉದಾಹರಣೆಯಾಗಿದೆ. ಏಕೆಂದರೆ ಮಕ್ಕಳ ಸಡಗರವು ಯಾವುದೇ ಹಬ್ಬ ಹರಿದಿನಗಳ ಸಂಭ್ರಮವನ್ನು ವೃದ್ಧಿಸುತ್ತದೆ ಎನ್ನುವುದನ್ನು ಮರೆಯಬಾರದು.

ಆನ್-ಲೈನ್ ವ್ಯವಹಾರಗಳು ಹೆಚ್ಚಾಗುತ್ತಿರುವುದರಿಂದ ದೈಹಿಕ ಆಯಾಸವಿಲ್ಲದೆ ಬೇಕಾದುದನ್ನು ಮನೆ ಬಾಗಿಲಲ್ಲೇ ಪದೆದುಕೊಳ್ಳುವ ಅನುಕೂಲಗಳು ಮಾನವನ ದೇಹಕ್ಕೆ ವ್ಯಾಯಾಮದ ಕೊರತೆ ಎದುರಾಗಲು ಮತ್ತು ಹಬ್ಬಗಳ ನಿರೀಕ್ಷಣೆಯ ಸಂಭ್ರಮ ಮರೆಯಾಗಲು ಪ್ರಮುಖವಾದ ಕಾರಣಗಳು. ಮೊದಲೆಲ್ಲ ಹಬ್ಬದ ಸಂಭ್ರಮಕ್ಕೆ ಹಾತೊರೆಯುತ್ತಿದ್ದ ಜನಗಳು ಈಗ ಹಬ್ಬ ಬಂತೆಂದರೆ ರಜೆ ಸಿಗುತ್ತದೆ, ತಲೆತಿನ್ನುವ ಕೆಲಸವಿಲ್ಲದೆ ಆರಾಮವಾಗಿ ಮನೆಯಲ್ಲೇ ವಿಶ್ರಮಿಸಬಹುದೆಂದು ಚಿಂತಿಸುವುದರಿಂದ ಹಬ್ಬದ ಸಂಭ್ರಮ ಕ್ಷೀಣಿಸುತ್ತಿದೆ. ಅಮೃತ ಅತಿಯಾದರೆ ವಿಷವೆಂದು ಹೇಳುತ್ತಾರೆ ಹಾಗೆ ಪ್ರತಿನಿತ್ಯ ಬೇಕಾದ ಅವಶ್ಯಕ ವಸ್ತುಗಳಾದ ಬಟ್ಟೆ, ತಿಂಡಿ, ಆಟಗಳು ಆಯಾಸವಿಲ್ಲದೆ ದೊರೆಯುವುದರಿಂದ ಆಗಾಗ ಬರುವ ಹಬ್ಬದ ಸಂಭ್ರಮ ಅಡಗಿರಲು ಸ್ಪಷ್ಟ ಕಾರಣಗಳಾಗಿದೆ. ಇದು ಬದಲಾಯಿಸಲು ಆಗದೇ ಇರುವಂತ ಬದಲಾವಣೆಯಾಗಿದೆಯೆಂದರೆ ತಪ್ಪಾಗಲಾರದು.

Wednesday, August 5, 2015

ಶುಭ ವಿದಾಯ

ಒಳ ಮನಸಿನ ಕಡಲಿನಲಿ
ಬಾವಗಳ ಮಥನವು
ಸುತ್ತು ಹಾಕಿದ ದಾರದಲಿ
ಒಂದು ಎಳೆಯು ಹುಸಿದಿಹುದು
ದಾರ ಹರಿದ ಕ್ಷಣದಲಿ
ಹುಳಿ ಮೊಸರಿನಂತೆ ನಾನು

ಹರಿವ ನದಿಯು ನೀನು
ತಡೆದು ನಿನ್ನ ಪ್ರಿತಿಯಿಂದ
ಬಯಸಿದ ಒಲವ ತಂಬಲು
ವ್ಯರ್ಥ ಪ್ರಯತ್ನದ ಮೂರ್ಖ ನಾನು

ನೀರಿನಂತೆ ಹರಿವ ಆಸೆಗೆ
ಹಿಡಿದೆ ಕುಟಿಲ ಪಥಗಳನು
ಸಾಗುವೆ ಜಟಿಲ ಕಾನನದಲಿ
ಎಂಬ ಯೋಚನೆಯ ಮಾಡದೆ

ಸೂಕ್ಷ್ಮವಾಗಿ ತಿಳಿಯದ
ಹಿತ್ತಾಳೆ ಕಿವಿಯು ನಿನದು
ಬೇರೆಯವರ ಮಾತಿನಲ್ಲಿ
ಮರೆತೆ ನಿನ್ನ ಜೀವದ ಒಳಿತನು

ನಿನ್ನ ಬಯಕೆಯು ಬದುಕಲಿ ಮಾಡುವ
ನಾಲ್ಕು ದಿನ ಸುತ್ತುವ ಮಜದ ಘಳಿಗಯು
ಕಳೆದುಕೊಂಡಿರುವೆ ನಿಯತ್ತಿನ ಕಾಳಜಿಯನು
ಮತ್ತೆ ಸಿಗುವ ಅವಕಾಶದ ಭರವಸೆಯಿಲ್ಲದೆ

ನನ್ನ ಮನಕೆ ಘಾಸಿಯಾದ ನೋವು
ಉಳಿದಿಲ್ಲ ಪಡೆದ ನಂಬಿಕೆಯ ಮಾತು
ಬದುಕಲ್ಲಿ ಅನುಭವಿಸಿದೆ ಪ್ರಾಯಶ್ಚಿತ
ಹೇಳುವೆ ಶುಭ ಕಾಮನೆಗಳ ವಿದಾಯ

Monday, July 20, 2015

ಜಿಜ್ಞಾಸೆ

ಒಂದೇ ಸಾಲಿನಲ್ಲಿ ಬರೆಯಲೆ
ನಿನ್ನ ಅಂದವ
ಪದಗಳಿಗೆ ನಿಲುಕದಂತ
ಗುಪ್ತ ಸೌಂದರ್ಯವ
ಹೋಲಿಕೆಯಿರದ ಭಾವಗಳೆಲ್ಲ
ಭಾವನೆಗೆ ಸ್ಪೂರ್ತಿ ತುಂಬಲು
ಅಗಲಿ ಹೋಗುವ ಚಿತ್ತಕೆಂದು
ಜೀವ ಬಾರದು

ಸುಪ್ತ ಮನಸಿನ ಆಳದಲ್ಲಿ
ನೂರಾರು ಚಿಂತನೆ
ನಿನ್ನ ಚಂದಕೆ ಅವಧಿಯಿಹುದೇ
ಎಂಬ ಯೋಚನೆ
ಬಾಹ್ಯ ರೂಪವೋ ಒಳಗಿನಂದವೋ
ಯಾವುದು ಸೂಕ್ತವೆಂಬ ಕಲ್ಪನೆ

ಮರ್ಕಟದಂತಹ ಮನಸ್ಸಿನಲ್ಲಿ
ಉಳಿಯುವುದೇ ಸ್ಥಿರ ಭಾವನೆ
ಮುಪ್ಪಾಗುವ ಮುಖದಲ್ಲಿ
ಇರುವುದೇ ಆಕರ್ಷಣೆ
ಮುಖವೋ ಚಿತ್ತವೋ
ಗೌಪ್ಯವಾದ ಪರಿಕಲ್ಪನೆ

ಬಾಹ್ಯವಾದ ಮಾರ್ಪಾಟು
ವಯಸ್ಸಿನ ಸಹಜ ಗುಣ
ಮನಸ್ಸಿನ ಬದಲಾವಣೆ
ಸಾಂದರ್ಭಿಕ ಸನ್ನಿವೇಶ
ಅಂದವೋ ಚಂದವೋ
ಬಗೆಹರಿಯದ ಜಿಜ್ಞಾಸೆ 

Saturday, July 18, 2015

ದಾರಿ ತಪ್ಪಿದ ಪಯಣ

ಅರ್ಥವಿರದ ಅನುರಾಗದಲ್ಲಿ
ಅನುಬಂಧವೆಲ್ಲಿ ಹುಡುಕಲಿ
ನನಸು ಮಾಡಲು ಕನಸುಗಳನು
ಬಾಂಧವ್ಯಬೇಕು ಬದುಕಲಿ

ತಂತಿಯಿರದ ವೀಣೆಯಲ್ಲಿ
ರಾಗ ಹೇಗೆ ನುಡಿಸಲಿ
ಗಾನ ನಾಟ್ಯಕೆ ತಾಳ ಹಾಕಲು
ನಾದ ನುಡಿತಕೆ ಸ್ವರವೇ ಬಾರದು

ಲಯವೇ ಇಲ್ಲದ ಹಾಡಿನಲ್ಲಿ
ಮನದ ನೋವಿನ ಕುಣಿತವು
ಪ್ರಾಸವಿರದ ಪದ್ಯದಲ್ಲಿ
ಪದಕೆ ಅರ್ಥವೇ ಕಾಣದು

ಬಂದೇ ಬರುವೆನು ಹಾಡುತ
ಹೊಂದಿ ಬಾಳುವೆ ಸೋಲುತ
ಗಾನ ಕೇಳಲು ತಲೆದೂಗುತ
ಮುಸ್ಸಂಜೆ ಮೌನಕೆ ಶರಣಾಗುತ

ಭಾಸ್ಕರ ಮೂಡಲು ಅರಿಶಿನವು
ಚಿಲಿಪಿಲಿ ಹಾಡಿನ ಸ್ವಾಗತವು
ದಿನವು ಏರಲು ಸುಡುಶಾಖವು
ಶಾಂತವಾಗಲು ಇಂಪಾದ ಸಂಗೀತವು

ಕರ್ಕಶವಾಗದಿರಲು ಸಾಮಗಾನಕೆ
ಸ್ವರ ಏರಿಳಿತದ ಮಾಧುರ್ಯವು
ದಾರಿ ತಪ್ಪಿದ ಬಾಳ ಪಯಣಕೆ
ಅನುಭವಿಗಳ ಮಾರ್ಗದರ್ಶನವು

Thursday, July 16, 2015

ಪದಗಳ ಮರೆತ

ಮರೆತೆ ನಿನ್ನ ಮಾತ ಕೇಳಿ
ಕವಿತೆಯಾಗೋ ಪದಗಳ
ಅರಿತೆ ನನ್ನ ಭಾವ ಹಾಡಿ
ಮನಸ ಕಾಡೋ ಸ್ತುತಿಗಳ
ಜೀವವಿಲ್ಲದ ಕಲ್ಪನೆಗಳಿಗೆ
ಕನಸಿನಲ್ಲಿ ಬದುಕಿದೆ
ಪ್ರೀತಿಯಿಲ್ಲದ ಜೀವಿಗಳಿಗೆ
ನನಸಿನಲ್ಲಿ ನೋವಿದೆ
ಕನಸು ನನಸಿನ ಬಾಳಿನಲ್ಲಿ
ಏಳುಬೀಳಿನ ಪದರಗಳಿವೆ

ಸುಡುಗಾಡಿಗೆ ಹೋದ ದೇಹಕೆ
ಅಗ್ನಿ ಸ್ಪರ್ಶಿಸೋ ಸಂಭ್ರಮ
ಹುಡುಗಾಟದ ತುಂಟ ಮನಸಿಗೆ
ಸಮಯ ದೂಡಲು ಅಕ್ರಮ
ದ್ವದ್ವ ನೀತಿಯ ರೀತಿಗಳಿಗೆ
ಬದುಕ ಪ್ರಾಮುಖ್ಯತೆಗೆ ತರ್ಪಣ

ತನ್ನ ಮಾತಿನ ಬೆಲೆಯನರಿಯದೆ
ತಪ್ಪು ಕಲ್ಪನೆಯ ಅನುಭವ
ಜಗಳವಾಡಲು ಮಾತುಮಾತಿಗೆ
ಸ್ಪೂರ್ತಿ ತೊರೆದ ಕಂಪನ
ಎದೆಯ ಅಗತ್ಯಕೆ ಸ್ಪಂದನೆಯು
ದುರೆಯದೆ ಕಾಡುವ ನಿಬಂಧನೆಯು

Tuesday, June 23, 2015

ಹಸೆಮಣೆ

ಬಾಸಿಂಗ ಕಟ್ಟಿರುವೆ
ಪೇಟವನು ಹಾಕಿರುವೆ
ನಿನಗಾಗಿ ಕಾದಿರುವೆ
ಹಸೆಮಣೆಯಲಿ

ವೈದಿಕರ ಬಾಯಲಿ ಮಂತ್ರವು
ಮಾಡುತಲಿ ಕೈಂಕರ್ಯವನು
ಮುಗಿಸಲು ಕೂತಿರುವೆ
ಹಸೆಮಣೆಯಲಿ

ಸ್ನೇಹಿತರು ನುಡಿದಿಹರು
ಕಿಚಾಯಿಸೋ ಮಾತನು
ನಾಚುತ ತಲೆತಗ್ಗಿಸಿರುವೆ
ಹಸೆಮಣೆಯಲಿ

ಚಿಕ್ಕ ಮಕ್ಕಳ ತುಂಟತನ
ನನಗಾದ ಮುಜುಗರವ
ನೀ ಕೂತು ಬಗೆಹರಿಸು

ಬರಲಿ ಭರವಸೆ ಇರಲಿ

ಎಲ್ಲೋ ದೂರದಲಿ ಕಾಣುತಿದೆ
ಹಸಿರು ತುಂಬಿದ ಮೆಟ್ಟಿಲುಗಳು
ಮುಂದೆ ನುಗ್ಗುವೆ ತಾಳ್ಮೆಯಿಂದ
ಮೆಟ್ಟಿಲೇರಿ ಮೇಲೆ ನಿಲ್ಲಲು

ಬಿಡಿಸಿ ಹೇಳು ಬರುವ ತೊಡಕನು
ವಿವರಿಸು ಪಾರಾಗುವ ಪರಿಯನು
ಹರಸು ನನ್ನನು ಗುರಿಯ ತಲುಪಲು
ದೂರದಲ್ಲಿನ ಮೆಟ್ಟಿಲನೇರಲು

ಸೂಕ್ಷ್ಮ ಮನಸಿನ ಸುಪ್ತ ಕನಸಲಿ
ಕಾಣದಿರಲಿ ಗುಪ್ತವಾದ ಕಲ್ಪನೆ
ಬರಲಿ ಕ್ಷಣಗಳು ಭರವಸೆಯಲಿ
ಇರಲಿ ನಂಬಿಕೆಯು ಬದುಕಿನಲಿ

ಮೌನದ ಮನ

ಮರದಾ ಮ್ಯಾಲೆ
ಕೂಗೋ ಹಕ್ಕಿ
ಇಂದು ಯಾಕೋ
ಎದೆಯಾ ಒಳಗೆ
ಕಿರುಚಿದಂತೆ ಆರೋಹಣ

ಮುಖವು ನಗಲು
ಹರ್ಷದ ಹೊನಲು
ಹೆಪ್ಪುಗಟ್ಟಿದ
ಮನಸಿನ ಒಳಗೆ
ಹೇಳಲಾಗದ ಆಕ್ರಂದನ

ಇಡುವ ಹೆಜ್ಜೆ
ಗುರುತಾದರೆ
ಮುಂದಿನ ಯುಗಕೆ
ಇತಿಹಾಸವು

ದೂರ ಹೋಗು
ಎಂದಾಕ್ಷಣ
ಅರಳಿದ ಪ್ರೀತಿ
ಬಾಡೋಗದು

ನಿನಗಾಗೆ ಇರವ
ಈ ಹೃದಯಕ್ಕೆ
ನಲಿಯುವ ಆಸೆ
ಮಣ್ಣಾಯಿತು

ಬಂದೇ ಬರುವೆ
ಒಂದು ದಿನ
ನಿನ ಒಂಟಿತನಕೆ
ಸ್ಪಂದಿಸಲು

ಮೋಡ ಕರಗಲು

ಕಾರ್ಮೋಡ ಹರಿದಿರಲು
ಹೊಂಬಿಸಿಲು ಹರಡಿಹುದು
ನನ್ನವಳ ಮನದಲ್ಲಿ
ನಾನೇ ಇರಲು
ಹುಸಿಮುನಿಸು ಕರಗಿರಲು
ಗಾಂಭೀರ್ಯ ಅಡಗಿಹುದು
ಒಲವಿನ ಮಲ್ಲಿಗೆಯು
ಅರಳುತಾ ಇರಲು

ಕಣ್ಣೋಟ ಕಂಡಾಗ
ಬೆಳ್ಳು ಮೂಡಿದ ಹಾಗೆ
ಅವಳ ಹುಡುಗಾಟವೇ
ನನ್ನ ಮನದಾಳದ ಬಯಕೆ

ಕೋಪದಲಿ ಗುಡುಗಿರಲು
ಮುಖವೆಂಬ ಕಮಲವು
ಕೆಸರಿನ ಗುಡ್ಡೆಯಲಿ
ತೊರೆದ ನೋವಿನ ಭಾವವು

ನನ್ನವಳ ನಗುವಿನಲಿ
ಪ್ರತಿಕ್ಷಣದ ನೋವಿನಲಿ
ಉಸಿರಾಟದ ಗಾಳಿಯಲಿ
ಸಹಬಾಗಿಯೆಂದು ನಾನೇ ಇರಲಿ

ಬೇಸರಿಸಲು ಅವಳಲ್ಲಿ
ಮನವು ನೋಯುವುದಿಲ್ಲಿ
ಹಂಬಲಕೆ ಗುರಿಯಾಗಿ
ಬಯಸುತ ನಾನಾಗುವೆ ನಿಗರ್ವಿ

ಅವಳೆಂದು ದೂರಾಗಳು
ನನಗಾಗೆ ಬದುಕುವಳು
ಮೋಡ ಕವಿಯುವುದು
ಕರಗಿ ನೀರಾಗುವುದು

ಮುಂಜಾನೆ ಅರಿಶಿನವು
ಮುಸ್ಸಂಜೆ ಕುಂಕುಮವು
ನಡು ರವಿಯ ಶಾಖವು
ಮುದ್ದು ಮನಸಿನ ಕೋಪವು

ಒಂದು ನಿಮಿಷದ ಕೋಪ
ಹಲವು ದಿನ ಮೈ ತಾಪ
ಬಿಟ್ಟು ಬದುಕುವ ಗಾಂಪ
ನಾನಾದರೆ ನೋವು ಸಂತಾಪ

ಅಪ್ಪಿಯೆಂಬುವ ಮಾತು
ಒಂದಾಗುವ ಸೂಚನೆಯು
ವಸಂತನ ಆಗಮನವು
ಕೋಗಿಲೆಯು ಕೂಗುತಿರಲು

ಬಹುನಿರೀಕ್ಷಣೆ

ಚೂರೇ ಚೂರು
ಬೆಳಕು ಬೇಕು
ಬದುಕು ಈಗ ಬೆಳಗಲು
ಮಿಂಚು ಹುಳುವಿನ
ಬೆಳಕಾದರೂ ಸಾಕು
ಬಾಳು ಎಂದೂ ಮಿನುಗಲು

ಹರಿವ ನದಿಯ ತೀರದಲ್ಲಿ
ಬರಡು ಭೂಮಿಯ ಹಾಗಿದೆ
ಘಾಸಿಯಾದ ಈ ಮನವು
ಮೇಘ ಹುಡುಕುವ ವೇಳೆ
ನೀಲ ಆಗಸ ಅರಸಿದಂತೆ

ಖಾಲಿ ಮರಳುಗಾಡಿನಲ್ಲಿ
ಮೋಡ ಕವಿದ ಹಾಗಿದೆ
ಭರವಸೆಯ ಇಣುಕು ನೋಟ
ಗುಡುಗು ಮಿಂಚಿನ
ಹಿಂದ ಮಳೆ ನಿರೀಕ್ಷಸಿದಂತೆ

ಸೂತ್ರ ಹರಿದ ಬುಗುರಿಯಾಗು
ಮನಬಂದ ಹಾಗೆ ತಿರುಗಲು
ಕೋಪ ತೊರೆದು ಯೋಚಿಸು
ಒಳಿತ ನೆನೆದು ಮೃದುವಾಗಿ
ನೋಡು ನಿನ್ನೊಳಗಿನ ಅಂದವ

Friday, April 10, 2015

ಚಿಗುರದ ಎಲೆಗಳು

ಹಗೆಯಲಿ ನಿರ್ಲಕ್ಷ್ಯವು
ಜಿದ್ದಿನಲಿ ನಿಷ್ಕಾಳಜಿಯು
ಮಾನಸಿಕ ಹಿಂಸೆಯೆ ಬದುಕಾಗಿದೆ

ಕೆಲಸದಲಿ ಮನಸಿಲ್ಲ
ಬೇರೇನೂ ಬೇಕಿಲ್ಲ
ಮನವು ಮಿಡಿಯುತಿದೆ ನಿನಗಾಗಿಯೆ

ಇದ್ದಾಗ ಕಿರಿಕಿರಿಯಾಗಿ
ಸತ್ತಾಗ ಸರಿಯಾಗಿ
ಕಾಣುವುದೇ ಪ್ರೀತಿಯ ಪರಮಾವಧಿ

ನಿನಗಾಗಿ ನಾನೆಂದು
ನನ್ನೊಲವು ನಿನಗೆಂದು
ಶುರುವಲ್ಲಿ ಭರವಸೆಯ ಸಂಭಾಷಣೆ

ಉಳಿದಿಲ್ಲ ಮಾತು
ನುಡಿಯೆಲ್ಲ ಬರಿ ತೋಪು
ಅನುರಾಗ ಹಾಳಾಯ್ತು ಅಹಂಮಿನಲಿ

ಮಾತುಗಳೆ ಹಿಂಸೆಯು
ಉಳಿದವರೆ ಮುಖ್ಯವು
ನೀ ಕಂಡಾಗ ಬಾಳಿನಲಿ ನೆಮ್ಮದಿಯನು

ಕಳೆದಂತೆ ದಿನವೆಲ್ಲ
ಹಳಸಿಹುದು ಪ್ರೀತಿ
ಸಾವನು ಬಯಸಿಹುದು ವಿರಹದಲ್ಲಿ

ರಂಗಿಲ್ಲ ಕಾಮನಬಿಲ್ಲಿನಲಿ
ಅಳುತಿರಲು ಮೇಘಗಳು
ಮಳೆಯೆಂಬ ಕಂಬನಿಯ ಸುರಿಸುವಾಗ

ಚಳಿಗಾಲ ಬಂದಿರಲು
ಎಲೆಗಳೆಲ್ಲ ಉದುರಿರಲು
ಚಿಗುರಲು ವಸಂತನ ನಿರೀಕ್ಷೆಯಲಿ

ಬರಬಹುದೇ ದಿನವು
ನಾ ಸತ್ತ ಮರು ಕ್ಷಣದಿ
ನನ ಜೀವ ಖುಷಿಯಲ್ಲಿ ನಗುತಲಿರಲು

Wednesday, April 8, 2015

ಪ್ರೀತಿಯ ಅಹಂ

ಹೋಳಿಯ ಹಬ್ಬದಿ
ಓಕಳಿಯಾಡಲು
ಬಣ್ಣಕೆ ರಂಗಿಲ್ಲ
ಪ್ರೀತಿಯ ಹೆಸರಲಿ
ಜೀವವು ಬೆರೆಯಲು
ಸಮಯವು ಒದಗಿಲ್ಲ
ಚಂದ್ರನು ಬಂದನು
ಸುಡು ಬೆಳದಿಂಗಳ ತಂದನು
ಉರಿಯಲು ಮೈ ಮನವೆಲ್ಲ

ತನ್ನ ಅಹಂಮ್ಮಿನ ಕೋಟೆಯಲಿ
ತಾ ಮಾಡುವುದೇ ಸರಿಯೆಂದು
ತಮಗ್ಯಾಕೆ ಪರಸ್ಪರರ ಹಂಗೆಂದು
ದರ್ಪವು ತುಂಬಿದ ಮನದಲ್ಲಿ
ಜಿದ್ದಾಜಿದ್ದಿನ ಹುಸಿಮುನಿಸು

ನನಗಾಗೇ ಬೇಕು ನನ್ನವಳು
ಮುಡಿಪಾಗಿಡಬೇಕು ಪ್ರತಿಕ್ಷಣಗಳನು
ನನ್ನವಳ ಪ್ರತಿ ಅವಶ್ಯಕತೆಯಲಿ
ನಾನೇ ಮೊದಲಿಗನಾಗುವ ಹಂಬಲಕೆ
ವಿರಹದ ಆಕ್ರೋಶವು ದನಿಯಾಗುತಿದೆ

ಹಕ್ಕಿಯಂತೆ ಹಾರಾಡುವ ಬಯಕೆಯು
ಸ್ವಾವಲಂಬಿಯ ದುಡಿಮೆಯ ದರ್ಪಕೆ
ಪ್ರಭಾವದಿ ಹೊಂದಲು ಬದುಕಿನ ಇಂಗಿತ
ಅಹಂಕಾರದಿ ತೊರೆಯಲು ಅನುಬಂಧವನು
ಮದುವೆಯ ನಂತರ ಮುಂದಿನ ಮಾತುಗಳು

ಒಪ್ಪದ ಮನಸಲಿ ತೊರೆಯಲು ಇಬ್ಬರು
ಸೊಕ್ಕಿನ ಮಾತಲಿ ದೂರುವರು
ಸರಿಯಾಗದೆ ಒಲವಿದೆ ಮೆಚ್ಚಿದ ಮನಸಲಿ
ಎದೆಯಾಳವ ಅರಿಯುವ ಕೊರತೆಯಲಿ
ಸಾಗುತ ದೂರ ಸಾಗರ ತೀರದಲಿ

Friday, April 3, 2015

ಕವಿ ನುಡಿ ಹೂವಾಗಬೇಕಾದರೆ ಜನ ನುಡಿ ಬೇರಾಗಿರಬೇಕು

ನಮ್ಮ ನಾಡು-ನುಡಿ, ಜನ-ಮನ ಒಂದು ಭಾಷೆಯ ಏಳಿಗೆಗೆ ದೃಢವಾದ ವೇದಿಕೆಯಾಗಿರಬೇಕು ಎನ್ನುವುದು, ಒಳಾರ್ಥದಲ್ಲಿ ಕಾರ್ಯಸೂಚಿಯೆಂದು.
ಕವಿ ನುಡಿ ಹೂವು
ಜನ ನುಡಿ ಬೇರು
ಇದರ ಅರ್ಥ ವಿಶ್ಲೇಷಣೆ ತಿಳಿದರೆ ಪ್ರತಿಯೊಬ್ಬ ಕನ್ನಡಿಗನು ರೇಖನಿಗಾಗಿ ಕನ್ನಡವನ್ನು ಕಂಗ್ಲೀಷನ್ನಾಗಿ ಪರಿವರ್ತಿಸುವುದ ಬಿಟ್ಟು ಬೇರೆ ಭಾಷೆಯ ದಾಸನಾಗುವ ಗೋಜಿಗೆ ಹೋಗುವುದಿಲ್ಲ. ಅವಶ್ಯಕತೆಗೆ ಅನುಸಾರವಾಗಿ ಬೇರೆ ಭಾಷೆಯ ಮಾತುಗಳನ್ನಾಡಿ ದಿನದ ಪ್ರತಿಯೊಂದು ಚಟುವಟಿಕೆಗೆ ಕನ್ನಡದ ಭಾಷೆಯ ಸವಿ ನೊಬಗಿನಲ್ಲಿ ನಮ್ಮ ಕನ್ನಡಿಗರು ವ್ಯವಹರಿಸಿದರೆ ಭಾಷೆಯ ಬೇರನ್ನು ಸುಭದ್ರವಾಗಿರಿಸಲು ಸುಲಭವಾಗುತ್ತದೆ. ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯನ್ನು ಸರಾಗವಾಗಿ ಮಾತನಾಡಲು ಪ್ರಾರಂಭಿಸಿದಾಗ ಮಾತ್ರ ಅದು ಜನ ನುಡಿಯಾಗಿ ಗಟ್ಟಿಯಾದ ಬೇರಾಗುತ್ತದೆ. ಹಾಗೆ ಗಟ್ಟಿಯಾದ ಓದುಗರು ಇರುವಾಗ ಮಾತ್ರ ಕವಿಗಳು ಬರೆದಿರುವ ಸಾಲುಗಳು ಹೂವಾಗಲು ಸಾಧ್ಯವಾಗುವುದು.

ಪ್ರತಿ ೩೦ ವರ್ಷಗಳಿಗೊಮ್ಮೆ ಭಾಷೆಯಲ್ಲಿ ಬದಲಾವಣೆ ಸಹಜವೆಂಬುದು ಹಿರಿಯರ ಮಾತು. ಹಾಗೆಂದ ಮಾತ್ರಕ್ಕೆ ಕಂಗ್ಲೀಷ ಇದು ಬದಲಾಗುವ ಭಾಷೆಯ ಪರಿಯಲ್ಲ. ಇದು ಕನ್ನಡ ಭಾಷೆಯ ಅಳಿವಿಗೆ ಹುಟ್ಟಿರುವ ಕೂಸು. ಹಾಗಾಗಿ ಇದರ ಅನುಸರಣೆಯನ್ನು ಬಿಟ್ಟು, ಕೀಳರಿಮೆ ಭಾವನೆಯ ಮನಸ್ಸನ್ನು ದೂರಾಗಿಸಿ ಕನ್ನದವನ್ನು ಜನ ನುಡಿಯ ಸುಭದ್ರ ಬೇರಾಗಿಸುವ ಗುರುತರ ಜವಾಬ್ಧಾರಿಯು ನಮ್ಮ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಜನ ನುಡಿ ಬೇರಾಗಲು ಮಾಡಬೇಕಾಗಿರುವ, ಆಗಬೇಕಾಗಿರುವ ಕಾರ್ಯಗಳ ಬಗ್ಗೆ ನಮ್ಮ ವಿಚಾರಧಾರೆ ಹರಿದಾಗ ಗಮನಕ್ಕೆ ಬರುವುದು ಹಲವು ಅಂಶಗಳು. ಸಾಮಾನ್ಯವಾಗಿ ಮನಃಪಟಲಕ್ಕೆ ಬರುವ ಕೆಲವು ಅಂಶಗಳ ಬಗ್ಗೆ ಚರ್ಚಿಸೋಣ.

ಮೊದಲನೆಯದಾಗಿ ನಮ್ಮ ಕನ್ನಡದ ಮಹಿಳಾಮಣಿಗಳು ಬೇರೆಯವರ ಅನುಕರಣೆಯನ್ನು ಬಿಟ್ಟು ತಾವು ಮಾತಾಡಿ ಮಕ್ಕಳು ಸಹ ಕನ್ನಡವನ್ನೆ ಮಾತಾಡುಂತೆ ಪ್ರೆರೇಪಿಸಬೇಕಾಗಿದೆ. ಹೀಗೆ ನಮ್ಮ ನೆರೆಯ ತಮಿಳರು ತಮ್ಮ ಭಾಷೆಯ ಮೆರವಣಿಗೆಗಾಗಿ ಉಳಿದ ಭಾಷೆಗಳನ್ನು ಅವಶ್ಯಕ್ಕಿಂತ ಕಡಿಮೆಯಾಗಿ ಅನುಸರಿಸುತ್ತಾರೋ ಹಾಗೆ ನಮ್ಮ ಕನ್ನಡಿಗರು ಸಹ ಅವರಷ್ಟಲ್ಲದಿದ್ದರೂ ನಮ್ಮ ಕನ್ನಡ ಭಾಷೆಯೆಂಬ ಮರದ ಬೇರು ಗಟ್ಟಿಯಾಗಿ ಒಳ್ಳೊಳ್ಳೆಯ ಹೂ ಬಿಡುವಂತೆ ಕನ್ನಡದ ಬಳಕೆಮಾಡಬೇಕಾದ ಅನಿವಾರ್ಯತೆ ಬಂದೊದಗಿದೆಯೆಂದರೆ ತಪ್ಪಾಗಲಾರದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬ ಕನ್ನಡತಿಯು ಸಹ ಕನ್ನಡದ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಅಗತ್ಯತೆ ನಿಮ್ಮ ಮುಂದಿದೆ. ಭಾಷೆಯ ಉಳಿವಿಗೆ ಸ್ತ್ರೀಯರ ಪಾತ್ರ ಪ್ರಮುಖವಾದದ್ದು. ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರ ಬೆಳೆದಿರುವಾಗ ಅದರಲ್ಲಿ ಉದ್ಯೋಗ ಮಾಡುವ ಅನಿವಾರ್ಯತೆ ಬಂದೊದಗಿರುವಾಗ ಇನ್ನು ಕನ್ನಡವೆಂದು ಕೂತಿರಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಕೆಯಾಗುವಂತಹ ಪದಗಳಿಗೆ ಕನ್ನಡ ಅನುವಾದ ಪದಗಳನ್ನು ನಮ್ಮ ಭಾಷಾ ತಜ್ಞರು ತಿಳಿಸಿರುವಾಗ ಅದನ್ನು ಅನುಸರಿಸುವುದು ಒಳಿತಲ್ಲವೇ? ಕೆಲವೊಂದು ನಾಮಪದಗಳನ್ನು ಹಾಗೆಯೇ ಉಚ್ಚರಿಸ ಬೇಕಾಗುತ್ತದೆ. ಉದಾಹರಣೆಗೆ ಮ್ಯಾಕ್ಸ್-ವೆಲ್ ಅಂತ ಹೆಸರಿರುವ ವ್ಯಕ್ತಿಯನ್ನು ಹಾಗೆಯೇ ಕರೆಯಬೇಕಾಗುತ್ತದೆಯೇ ಹೊರತು ಜಾಸ್ತಿ-ಆರಾಮ ಅಥವಾ ಗರಿಷ್ಠ-ಸರಿಯೆಂದು ಅನುವಾದಿಸಿ ಹೇಳುವುದು ಸರಿಯಾಗುವುದಿಲ್ಲ. ಹೀಗಿರುವಾಗ ಕೆಲವು ಶಬ್ದಗಳನ್ನು ನಾಮಪದವಾಗಿಯೇ ಬಳಸಬೇಕಾಗುತ್ತದೆ. ಇಂತಹವುಗಳನ್ನು ಹೊರತು ಪಡಿಸಿ ಉಳಿದವುಗಳನ್ನು, ಕನ್ನಡ ಅನುವಾದಗಳನ್ನು ಚಾಲ್ತಿಗೆ ತರುವಲ್ಲಿ ನಾವು ಪ್ರಯತ್ನಿಸಬೇಕಾಗಿದೆ. ಹೇಳಿರುವ ತತ್ವಗಳಿಗೆ ಚರ್ಚೆ ಮಾಡಬಹುದು ಆದರೆ ನಿರ್ಧರಿತ ಅರ್ಥಗಳಿಗೆ ಪ್ರಶ್ನೆ ಮಾಡವುದು ಸರಿಯಲ್ಲಉದಾಹರಣೆಗೆ- ಸಮಾನ್ಯವಾಗಿ ದಿನಚರಿಯಲ್ಲಿ ಬಳಕೆಯಾಗುವ ಶಬ್ದ ಜೆರೆಕ್ಸ್ ಅಂದರೆ ಕನ್ನಡದಲ್ಲಿ "ಪಡಿಪತ್ರ" ಎಂದು. ಇದಕ್ಕೆ ತರ್ಕ ಮಾಡುವುದು ಸರಿಯಲ್ಲ ಯಾಕೆಂದರೆ ನಿರ್ಧಸುವುದಕ್ಕಿಂತ ಮೊದಲೇ ಚರ್ಚೆ ಮಾಡಿ ನಿರ್ಧರಿತವಾಗಿದೆ.

ನಮಸ್ಕಾರ ಎಂಬ ಪದ ನೀರು ಆವಿಯಾಗುವಂತೆ ಮರೆಯಾಗುತ್ತಿದೆಂಬ ಭಾವ ತೋರ್ಪಡುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಗುಡ್-ಮಾರ್ನಿಂಗ್, ಗುಡ್-ನೈಟ್ ಎಂಬ ಪದ ಬಳಕೆ ದಿನಚರಿಯಾಗುತ್ತಿದೆ. ಅಲ್ಲದೆ ಅದರ ಕನ್ನಡಾನುವಾದ ಶುಭೋದಯ, ಶುಭರಾತ್ರಿ ಪದಗಳು ಜನಿಸಿವೆ. ಆದರೆ ಆಂಗ್ಲ ಭಾಷೆಯಲ್ಲಿಯೂ ಗ್ರೀಟಿಂಗ್ಸ್ ಎಂಬ ಪದ ಬಳಕೆ ಇದೆ. ಇದು ಸರ್ವ ಸಮಯದಲ್ಲೂ ಶುಭಾಶಯ ಕೋರುವ ಪದ. ಗ್ರೀಟಿಂಗ್ಸ್ ಪದವು ನಮ್ಮ ಕನ್ನಡದ ನಮಸ್ಕಾರ ಪದಕ್ಕೆ ಸಮನಾಗಿದೆ. ಆದರೆ ನಮ್ಮ ಜನಗಳು ನಮಸ್ಕಾರ ಎಂಬ ಪದ ಬಿಟ್ಟು ಆಂಗ್ಲ ಸಂಸ್ಕೃತಿಯ ಅನುಯಾಯಿಗಳಾಗುತ್ತಿರುವುದು ವಿಪರ್ಯಾಸ. ನಾವೆಲ್ಲ ಸೇರಿ ನಮಸ್ಕಾರ ಎಂಬ ಪದವನ್ನು ಮರು ಬಳಕೆ ಮಾಡಿ ನಮ್ಮ ಸಂಸ್ಕೃತಿಯನ್ನು ಮುಂದುವರಿಸುವ ಅನಿವಾರ್ಯತೆ ನಮ್ಮ ಎದುರಿಗಿದೆ.

ಹೂವುಗಳು ಬಾಡುತ್ತಿರಲು ದೂರದರ್ಶನದ ಪ್ರಭಾವ ಜಾಸ್ತಿಯಾಗಿರುವುದಾಗಿದೆ. ಹೂ ಅಂದರೆ ಕವಿತೆ, ಕಥನ, ಕಾದಂಬರಿ, ಲೇಖನ, ಪ್ರಬಂಧ, ಮಹಾಕಾವ್ಯದಂತಹ ಕನ್ನಡದ ಪುಸ್ತಕಗಳ ಓದುಗರಿಗೆ ಬರಗಾಲ ಬಂದಂತಾಗಿರುವುದಕ್ಕೆ ಕಾರಣ ಬೆಳೆದಿರುವ ತಂತ್ರಜ್ಞಾನದ ಕೂಸು ದೂರದರ್ಶನ. ದೂರದರ್ಶನವನ್ನೆ ಹೆಚ್ಚೆಚ್ಚು ವೀಕ್ಷಿಸುವ ಜನಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಕಂಗ್ಲೀಷ ಎಂಬ ಪದಗಳು ಭಯ ಹುಟ್ಟಿಸಿವೆ. ಯಾಕೆಂದರೆ ಧಾರವಾಹಿ ನೋಡುವ ಮಹಿಳೆಯರು ಕಂಗ್ಲೀಷನ್ನು ಹೊಸ ಜಾಯಮಾನವೆಂದು, ರೇಖನಿಯೆಂದು ತಿಳಿದು ಅದನ್ನೇ ಅನುಸರಿಸುತ್ತಿರುವುದಾಗಿದೆ. ಯಾಕೆ ಹೀಗಾಯ್ತೆಂದರೆ ಧಾರವಾಹಿಗಳಲ್ಲಿ ಬಳಸುವ ಭಾಷಾ ಪ್ರಯೋಗದಿಂದಾಗಿದೆ. ಆಧುನಿಕ ಜಗತ್ತಿನಲ್ಲಿ ಆಂಗ್ಲ ಭಾಷೆಯನ್ನು ಸೇರಿಸಿ ಮಾತನಾಡುವುದು ರೇಖನಿಯೆಂದು ತಿಳಿದಿರುವ ಮಾಧ್ಯಮ ತಂತ್ರಜ್ಞರಿಂದಾಗಿದೆ. ಧಾರವಾಹಿಗಳ ನಟ-ನಟಿಯರು, ಕಾರ್ಯಕ್ರಮ ನಿರೂಪಕರು, ಸುದ್ಧಿವಾಹಿನಿಯಲ್ಲಿ ಬರುವ ಸುದ್ಧಿ ವಾಚಕರು, ಸಂದರ್ಶನಕ್ಕೆ ಬರುವ ಚಿತ್ರ ನಟ-ನಟಿಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ರಾಜಕೀಯ ಮುಖಂಡರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಿದರೆ ಅದನ್ನು ನೋಡುವ ಜನರು ಸಹ ಅವರನ್ನೆ ಹಿಂಬಾಲಿಸಿ ಕನ್ನಡದ ಮೆರವಣಿಗೆ ಮಾಡುವುದರಲ್ಲಿ ಸಂದೇಹವಿಲ್ಲ.

ಮುಂದಿನ ಪೀಳಿಗೆಯನ್ನು ಸಹ ಕನ್ನಡದ ಕುವರರಾಗಿಯೆ ಮುಂದುವರಿಯುವಂತೆ ಮಾಡಲು ನಮ್ಮ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಧುರೀಣರಿಂದಷ್ಟೇ ಸಾಧ್ಯ. ಅಲ್ಲದೇ ವಲಸೆ ಬಂದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲಿಕ್ಕೆಂದು ವ್ಯವಹಾರಶಾಹಿ ಕಾಯಿದೆಯನ್ನು ಕನ್ನಡದಲ್ಲೆ ನಡೆಯಬೇಕೆಂದು ತಾಕೀತು ಮಾಡುವುದು ಮತ್ತು ನಿಯಮ ಉಲ್ಲಂಗನೆಯಾಗದಂತೆ ಎಚ್ಚರಿಕೆ ವಹಿಸಿ ಅಗತ್ಯಕ್ರಮ ಕೈಗೊಳ್ಳಬೇಕಾಗಿದೆ. ವಲಸೆ ಬಂದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಆಗದಿದ್ದರೆ ಪರವಾಗಿಲ್ಲ, ಅವರ ಮಕ್ಕಳು ಕನ್ನಡದಲ್ಲೇ ವ್ಯವಹರಿಸುವಂತೆ ಮಾಡಲಿಕ್ಕೆ ಸಾಧ್ಯವಿದೆ. ಹೇಗೆಂದರೆ ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಲಿಕೆ ಮತ್ತು ಕನ್ನಡದಲ್ಲೇ ಚಟುವಟಿಕೆಗಳು ನಡೆಯಬೇಕೆಂಬ ನಿಯಮವನ್ನು ಕಡ್ಡಾಯ ಮಾಡಬೇಕಾಗಿದೆ. ಹೀಗೆ ಮಾಡಿದರೆ ಮುಂದಿನ ಪೀಳಿಗೆಯವರು ಕನ್ನಡದ ಬಳಕೆ ಮಾಡುವಂತೆ ಪ್ರೆರೇಪಿಸಿದಂತಾಗುತ್ತದೆ. ಇದಕ್ಕೆ ಆಂಗ್ಲ ಭಾಷಾ ಮಾಧ್ಯಮ ಶಾಲಾ ಶಿಕ್ಷಕ/ಶಿಕ್ಷಕಿಯರು ಸಹ ಸಹಕರಿಸಿ ಕನ್ನಡದಲ್ಲೆ ಘಟನೆಗಳು ಸಂಭವಿಸುವಂತೆ ನೋಡಿಕೊಳ್ಳಬೇಕು. ಇದನ್ನ ನಮ್ಮ ರಾಜಕಾರಣಿಗಳು ಅರ್ಥೈಸಿಕೊಂಡು ಕಾರ್ಯಪ್ರವರ್ತರಾಗಬೇಕಾಗಿದೆ.

ಇವೆಲ್ಲವುಗಳು ನಡೆದರಷ್ಟೇ ಸಾಲದು ಅವುಗಳಿಗೆ ಪುಷ್ಠಿ ನೀಡುವಂತೆ ನಮ್ಮ ಕನ್ನಡ ಪರ ಹೋರಾಟಗಾರರು, ಸಂಘ-ಸಂಸ್ಥೆಗಳು, ಜನಗಳು ಎಚ್ಚರವಹಿಸಬೇಕಾಗಿದೆ. ಕನ್ನಡದಲ್ಲಿ ಕಲಿತವರನ್ನು ಹೀನರಾಗಿ ಕಾಣುವುದು, ಹೀಯಾಳಿಸುವುದು, ಅಂಥವರ ತೇಜೋವಧೆ ಮಾಡುವುದನ್ನು ತಪ್ಪಿಸಬೇಕು. ಅಂತಹವುಗಳು ಕಂಡುಬಂದಲ್ಲಿ ಕನ್ನಡ ಕಲಿತವರ ಪರವಾಗಿ ನಿಂತು ಹೀಯಾಳಿಸುವವರ ಗಮನ ಸೆಳೆದು ಕಣ್ತೆರೆಸಬೇಕಾಗಿದೆ. ಜನ ಸಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಇತರ ಭಾಷಾ ಮಾಧ್ಯಮದಲ್ಲಿ ವ್ಯವಹರಿಸಿ ಉಳಿದ ಸಮಯದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಕನ್ನಡದಲ್ಲೆ ವ್ಯವಹರಿಸಿದರೆ, ಕನ್ನಡ ಮಾತಾಡಿದರೆ ತುಚ್ಛವಾಗಿ ಕಾಣುತ್ತಾರೆಂಬ ಕೀಳರಿಮೆ ಭಾವನೆ ದೂರವಾಗಿ ಕನ್ನಡದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಕೆಲವರ ನಿಲುವೇನೆಂದರೆ ಹರಿಯುವ ನೀರೆತ್ತ ಹರಿಯುತ್ತದೆಯೋ ಹಾಗೆ ಸಾಗುಬೇಕೆನ್ನುವುದು. ಆದರೆ ಹರಿಯುವ ನೀರು ಝರಿಯಲ್ಲಿ ಧುಮುಕುವುದು ಅಂತಾದರೆ ಅದರಂತೆ ಸಾಗುವವರು ಬೀಳುತ್ತಾರೆನ್ನುವುದು ಪಕ್ಕಾ. ಹೀಗಾಗಿ ಹರಿಯುವ ನೀರಿಗೆ ವಿರುದ್ಧವಾಗಿ ಈಜಿದರೆ ಬದುಕು ಮೊದಲು ಕಷ್ಟವೆನಿಸಿದರೂ ಮುಂದೆ ಸುಖಮಯವಾಗುತ್ತದೆ. ಎಲ್ಲರೂ ನೀರು ಹರಿದಂತೆ ಸಾಗಿದರೆ, ನೀರ ಹರಿವಿಗೆ ವಿರುದ್ಧವಾಗಿ ಈಜಿ ನಿಲ್ಲುವವನು ಎಲ್ಲರ ಪ್ರಶಂಸೆಗೆ ಪಾತ್ರನಾಗುತ್ತಾನೆ. ನಾವು ಕನ್ನಡಿಗರೂ ವಿಶಾಲ ಹೃದಯಿಗಳು ನಿಜ ಆದರೆ ಪರ ಭಾಷಾ ಅಥವಾ ಪರ ಸಂಸ್ಕೃತಿ ಅನುಯಾಯಿಗಳಲ್ಲವೆಂಬುದನ್ನು ಸಾಬೀತುಪಡಿಸಬೇಕಾಗಿದೆ. ನಾವು ಸ್ವಾಭಿಮಾನಿಗಳು ಎಂಬ ಹೆಮ್ಮೆ ನಮಗಿದ್ದರೆ ಸಾಕು ನಮ್ಮ ಕನ್ನಡ ನುಡಿಯ ಬೇರು ಗಟ್ಟಿಯಾಗುವುದರಲ್ಲಿ ಅನುಮಾನವಿಲ್ಲ.

Tuesday, March 31, 2015

ಹುಟ್ಟೋ ಮನೆಯಲ್ಲಿ ಮದುವೆಯೆಂಬ ಸಾವು

ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿಯಾಗಿ ಸಮಾಜದ ಒಳಿತನ್ನು ಬಯಸಿದ ವ್ಯಕ್ತಿ ವೃತ್ತಿಯ ನಂತರ ಉಳಿದ ತನ್ನ ವಯಕ್ತಿಕ ಸಮಯವನ್ನು ಸಹಾಯ ಸಹಕಾರಗಳಿಗೆ ಮೀಸಲಿಟ್ಟು ಜನರೊಳಗೊಂದಾಗು ಮಂಕುತಿಮ್ಮ ಎಂಬಂತೆ ಬದುಕುತ್ತಿದ್ದ. ಸಹಾಯ ಬೇಡಿದವರಿಗೆ ತನ್ನ ಕೈಯಲ್ಲಾದ ಸಹಾಯ ಮಾಡಿದ, ಎಲ್ಲರೊಂದಿಗೆ ಬೆರೆತು ಉತ್ತಮ ಬಾಂಧವ್ಯ ಬೆಳೆಸಿಕೊಂಡು ತನ್ನದೆ ಆದ ಛಾಪು ಮೂಡಿಸಿಕೊಂಡು ಗುರುತಿನ ವ್ಯಕ್ತಿಯಾದ. ಟೀಕೆ ಟಿಪ್ಪಣಿಗಳಿಗೆ ಬೆಲೆ ಕೊಡದೆ ತನ್ನ ತಪ್ಪಿಗೆ ಕ್ಷಮೆಯಾಚಿಸಿ ಏನನ್ನೋ ಸಾಧಿಸಬೇಕೆಂಬ ಹಂಬಲದಿಂದ ಜೀವನ ನಡೆಸಲಾರಂಭಿಸಿದ.

ತೃಪ್ತಿದಾಯಕ ವೃತ್ತಿ ಜೀವನವ ನಡೆಸುತ್ತಿದ್ದ ವಿಪ್ಲವನು ತಾನು ಏಕಾಂಗಿಯಾಗಿದ್ದರೂ ಪ್ರೇಮಿಗಳಿಗೆ ಸಹಾಯ ಮಾಡುವುದರೆಂದರೆ ಏನೋ ಖುಷಿ. ತನ್ನ ವಯಕ್ತಿಕ ಸಮಸ್ಯೆಯಂತೆ ಉಳಿದವರ ಸಮಸ್ಯೆಗೆ ಸ್ಪಂದಿಸುತ್ತಿದ್ದ. ಉತ್ತಮ ಸಂಬಳ ಪಡೆಯುತ್ತಿದ್ದ ಈತ ಏಕಾಂಗಿಯಾದರೂ ವಾಸಿಸಲು ದೊಡ್ಡ ಮನೆ, ಓಡಾಡಲು ವಾಹನ ಮತ್ತು ಬೇಕಾದ ಅವಶ್ಯಕತೆಗಳನ್ನು ಹೊಂದಿದ್ದ ಮತ್ತು ಅವಶ್ಯಕತೆಯಿದ್ದವರಿಗೆ ತನ್ನ ಹತ್ತಿರವಾದ ಅಲ್ಪ ಧನ ಸಹಾಯವನ್ನು ಮಾಡಲಾರಂಭಿಸಿದ.

ವೃತ್ತಿಯಲ್ಲಿ ಮುಂದಾಳುವಾಗಿ ಕಾರ್ಯ ನಿರ್ವಹಿಸುತ್ತಿದ್ದ ಈತ ತನ್ನದೇ ಗುಂಪಿನ ಸಹೋದ್ಯೋಗಿಗಳ ನಡುವಿನಲ್ಲಿ ಆಗಿರ್ತಕ್ಕಂತಹ ಪ್ರೇಮಾಂಕುರದ ಕುರುಹುಗಳನ್ನು ತಿಳಿದರೂ ಸುಮ್ಮನಿರುತ್ತಾನೆ. ಒಂದು ದಿನ ಅವರ ಬಾಯಿಂದನೆ ಹೊರಹಾಕಿಸಬೇಕೆಂದು ಚಿಕ್ಕ ಕಾರ್ಯದ ಒತ್ತಡವನ್ನು ಅವರ ಮೇಲೆ ಹೇರುತ್ತಾನೆ.

ವಾರಾಂತ್ಯದ ಸಂಭ್ರಮದಲ್ಲಿ ಸುತ್ತಾಡುವ ಉಪಾಯ ಮಾಡಿದ್ದ ಪ್ರೇಮಿಗಳಿಗೆ ನಿರಾಸೆಯಾಗಿ ಬೇಸರಿಸುತ್ತಾರೆ. ಅದಲ್ಲದೆ ಇಲ್ಲಸಲ್ಲದ ಕುಂಟು ನೆಪ ಹೇಳಿ ಕಾರ್ಯದೊತ್ತಡದಿಂದ ತಪ್ಪಿಸಿಕೊಳ್ಳ ಬಯಸುತ್ತಾರೆ. ಆದರೆ ಇದನ್ನು ಮೊದಲೇ ಅರಿತಿದ್ದ ವಿಪ್ಲವನು ಸುತಾರಾಂ ಒಪ್ಪುವುದಿಲ್ಲ. ಆಗ ಯಾಕೆ ಏನು ಎಂದು ಏನು ತಿಳಿಯದವನಂತೆ ಪ್ರಶ್ನಿಸಿ ಅವರೇ ಗೌಪ್ಯವಾಗಿ ಹೇಳುವಂತೆ ಮಾಡಿ ಅವರ ನಡುವಿನ ಪ್ರೇಮಾಂಕುರವನ್ನು ತಿಳಿದು ಅವರಿಗೆ ಅನುಕೂಲವಾಗುವಂತೆ ಸಹಾಯ ಮಾಡುತ್ತಾನೆ.

ಒಂದು ದಿನ ಅವರ ತಿರುಗಾಟಕ್ಕೆ ತೊಂದರೆಯಾಗುತ್ತದೆ. ಆಗ ವಿಪ್ಲವನು ತನ್ನ ಗಾಡಿಯನ್ನು ಕೊಡುತ್ತಾನೆ ಮತ್ತು ಸುತ್ತಾಡಿ ಆರಾಮಾಗಿ ಸಂತೋಷದಿಂದ ಹೋಗಿ ಬನ್ನಿ ಎಂದು ಹೇಳಿ ಕಳಿಸಿಕೊಡುತ್ತಾನೆ. ವಾಪಸ್ಸಾದ ನಂತರ ಅವರ ನಡುವಿನ ಪ್ರೇಮಾಂಕುರವನ್ನು ಮನೆಯಲ್ಲಿ ಹೇಳಲು ತಿಳಿಸುತ್ತಾನೆ. ಈತನ ಮಧ್ಯಸ್ಥಿಕೆಯನ್ನು ಅವರು ಬಯಸುತ್ತಾರೆ. ಏಕೆಂದರೆ ಅವರು ಅಂತರ್ಜಾತಿಯ ಪ್ರೇಮಿಗಳಾಗಿದ್ದರು. ಅವರ ನಡುವೆ ಜಾತಿಯೆಂಬ ಬೂತವೆಲ್ಲಿ ಅವರ ಪ್ರೀತಿಗೆ ಕುತ್ತು ತರುತ್ತದೆಯೇನೋ ಎಂಬ ಭಯ ಅವರಿಬ್ಬರನ್ನು ಕಾಡುತ್ತಿತ್ತು.

ಪ್ರತಿ ಹದಿನೈದು ದಿನಕ್ಕೊಮ್ಮೆ ತನ್ನ ಊರಿಗೆ ಹೋಗಿ ಬರುತ್ತಿದ್ದ ಸೌಜನ್ಯ ಒಂದು ದಿನ ವಿಪ್ಲವನ ಸಲಹೆಯಂತೆ ಅತಿಯಾದ ಸಲುಗೆಯಿಂದ ಪ್ರೀತಿಯಿಂದಿದ್ದ ತನ್ನ ತಂದೆಯ ಬಳಿ ಮಾತನಾಡುತ್ತಾಳೆ. ಅಪ್ಪ ನನ್ನ ಸ್ನೇಹಿತೆಯೊಬ್ಬಳು ಬೇರೆ ಜಾತಿಯ ಹುಡುಗನೊಂದಿಗೆ ಓಡಿಹೋಗಿರುವುದಾಗಿ ಹೇಳುತ್ತಾಳೆ. ಆಗ ಅವಳ ಅಪ್ಪ ಮುಂದೇನಾಯಿತೆಂದು ಕೇಳುತ್ತಾನೆ. ಇವಳು ಮುಂದುವರೆಸುತ್ತ ಅವಳನ್ನು ಹಿಡಿದು ತರುವಲ್ಲಿ ಅವಳ ಪಾಲಕರು ವಿಫಲರಾಗಿ ರೋಧಿಸುತ್ತಿದ್ದಾರೆ ಎನ್ನುತ್ತಾಳೆ. ಹಾಗೆ ಮುಂದುವರೆದು ನಾನು ಸಹ ಹಾಗೆ ಮಾಡಿದರೇನು ಮಾಡುತ್ತೀಯಾ ಎಂದು ಕೇಳುತ್ತಾಳೆ. ಅದಕ್ಕೆ ಪ್ರತಿಯಾಗಿ ಅವಳಪ್ಪ ಉತ್ತರಿಸುತ್ತಾ ಮಗಳೆ ನೀ ಹಾಗೆ ಮಾಡ ಬೇಡ, ನೀ ಹಾಗೆ ಮಾಡಿದರೆ ನನ್ನ ಮರ್ಯಾದೆ, ಪ್ರತಿಷ್ಠೆ ಹಾಳಾಗುತ್ತದೆ ಎಂದು ಹೇಳುತ್ತಾನೆ.

ವಿಪ್ಲವ ಹೇಳಿದ್ದನ್ನು ಮಾಡಿ ಮರಳಿದ ಸೌಜನ್ಯ ಅವಳ ಅಪ್ಪನ ಪ್ರತಿಕ್ರೀಯೆ ಎನೆಂಬುದನ್ನು ವಿವರಿಸಿದಳು. ಲೋಹಿತನ ಮನೆಯಲ್ಲಿ ಹೇಳಿದ ಕೂಡಲೆ ಮಗನ ಇಷ್ಟಕ್ಕೆ ವಿರೋಧವಾಗಿ ಮಾತಾಡದೆ ಒಪ್ಪಿಗೆಯನ್ನು ಸೂಚಿಸುವರು. ಇದರಿಂದಾಗಿ ಒಂದು ಕಡೆಯ ಸಮಸ್ಯೆ ಇಲ್ಲ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಸೌಜನ್ಯಳ ತಂದೆಗೆ ಇಲ್ಲಿಗೆ ಬರುವಂತೆ ಹೇಳಲು ಸೂಚಿಸಲು ಹೇಳುತ್ತಾನೆ.

ಪ್ರತಿ ೧೫ ದಿನಕ್ಕೆ ಊರಿಗೆ ತೆರಳುತ್ತಿದ್ದ ಸೌಜನ್ಯ ವಾರ ಅವಳು ಹೋಗದೆ ತನ್ನ ತಂದೆಯನ್ನೆ ಆವಳಿರುವಲ್ಲಿಗೆ ಕರೆಸುವಳು. ಹಾಗೆ ತನ್ನ ವೃತ್ತಿ ಸಹೋದ್ಯೋಗಿಗಳಿಗೆ ಎಂದು ಹೇಳಿ ವಿಪ್ಲವ ಮತ್ತು ಲೋಹಿತರಿಬ್ಬರಿಗೆ ಒಂದು ಔತಣ ಕೂಟವನ್ನು ಏರ್ಪಡಿಸುತ್ತಾಳೆ. ಆಗ ಅಲ್ಲಿಗೆ ಬರುವ ಅವರಿಬ್ಬರು ಅವಳ ತಂದೆಯನ್ನು ಮಾತನಾಡಿಸಲಾರಂಭಿವರು.

ವಿಪ್ಲವನು ಸೌಜನ್ಯಳಿಗೆ ಮೊದಲೇ ಹೇಳಿದಂತೆ ನಿನ್ನ ಮೊಬೈಲಿಗೆ ತಪ್ಪಿದ ಕರೆಯೊಂದನ್ನ ನೀಡುತ್ತೇನೆ ಆಗ ನೀನು ಆಫೀಸಿನಿಂದ ಕರೆ ಬಂತೆಂದು ಹೇಳಿ ಅಲ್ಲಿಂದ ಹೊರಗಡೆಗೆ ಹೋಗು ಎಂದಂತೆ ಅವಳು ಚಾಚು ತಪ್ಪದೆ ಹಾಗೆ ಮಾಡುತ್ತಾಳೆ. ಆಗ ಅವಳ ತಂದೆಯೊಂದಿಗೆ ಮಾತನ್ನು ಮುಂದುವರೆಸಿ ತಿರುಗಿ ಕಟ್ಟು ಕತೆಯಾದಓಡಿ ಹೋದ ಮಗಳ ಪ್ರೇಮ ಪುರಾಣವನ್ನು’ ಮುಂದುವರೆಸುತ್ತಾನೆ.

ವಿಪ್ಲವನು ಮಾತು ಮುಂದುವರೆಸುತ್ತ ನೋಡಿ ಸಾರ್ ಮಕ್ಕಳ ಆಸೆಯನ್ನು ಅರಿಯದ ಹೆತ್ತವರಿಗೆ ಅವರ ಮುದಿ ವಯಸ್ಸಿಗೆ ಮಕ್ಕಳಿಂದ ನೆರವನ್ನು ಬಯಸುವ ಹಕ್ಕಿಲ್ಲ ಎನ್ನುತ್ತಾನೆ. ಹಾಗೆ ಮಕ್ಕಳು ಅವರ ಆಣತಿಯಂತೆ ಬದುಕಬೇಕೆನ್ನುವುದಾದರೆ ಇವರಿಗೇಕೆ ಮಕ್ಕಳು ಬೇಕು? ಮಕ್ಕಳಿಗೇನು ಅವರದೆ ಆದ ಆಸೆ ಆಕಾಂಕ್ಷೆಗಳಿರುವುದಿಲ್ಲವೇನು? ಬೇರೆಯವರಿಗೆ ಮಕ್ಕಳಿದ್ದಾರೆಂದು ಇವರು ಮಕ್ಕಳಿಗೆ ಜನ್ಮ ನೀಡುವುದಾದರೆ ನಿರ್ಜೀವ ಗೊಂಬೆಗಳಿಗೂ ಮಕ್ಕಳಿಗೂ ವ್ಯತ್ಯಾಸವೇ ಇಲ್ಲವೆಂದಾಗುತ್ತದೆ. ಪಾಲಕರು ಅವರ "ಚಟಕ್ಕೆ ಮಕ್ಕಳಿಗೆ ಜನ್ಮ ನೀಡುತ್ತಾರೆ, ಹಠಕ್ಕೆ ಮಕ್ಕಳ ಮದುವೆ ಮಾಡುತ್ತಾರೆ" ಎಂದು ಹೇಳುತ್ತಾನೆ. ಜಾತಿಯಾವುದಾದರೇನು? ಕುಲ ಗೋತ್ರ ಯಾವುದಾದರೇನು? ಜೊತೆಯಾಗಿ ಬದುಕುವ ಜೀವಗಳು ಒಬ್ಬರನ್ನೋಬ್ಬರು ಅರ್ಥೈಸಿಕೊಂಡಾಗ ಮಾತ್ರ ಬದುಕಿಗೊಂದು ತಾತ್ಪರ್ಯ, ಹಸನಾದ ಬಾಳಿಗೆ ನಾಂದಿ ಎಂದಾಗ ಅವಳಪ್ಪನಿಗೆ ಜ್ಞಾನದ ಕಣ್ಣು ತೆರೆದಂತಾಗುತ್ತದೆ.

ಹುಟ್ಟಿಸಿದ ಹೆಣ್ಣಿಗೆ ತವರು ಮನೆ ಮದುವೆಯ ನಂತರ ಸಂಬಂಧಿಯ ಮನೆಯಾಗುತ್ತದೆ. ಆಗ ಅವಳು ಭೂಮಿಯ ಮೇಲೆ ಬದುಕಿದ್ದರೂ ತಂದೆಯ ಮನೆಯಿಂದ ಸತ್ತಂತೆ. ಮದುವೆ ಎಂದರೆ ಸಾವಂತೆ ಹೆಣ್ಣಿಗೆ ತಾನು ಹುಟ್ಟಿದ ಮನೆಯಿಂದ ಮಾತ್ರ. ಹಾಗಾಗಿ ಅವಳಿಷ್ಟಕ್ಕೆ ಬೆಲೆ ಕೊಡದೆ ಮದುವೆ ಮಾಡಿ ಮುಗಿಸುತ್ತಾರೆ. ಸತ್ತ ಮೇಲೆ ಏನಾಗ್ತಾರೆ ಅಂತ ಗೊತ್ತಿಲ್ಲ ಹಾಗೆ ಹೆಣ್ಣಿಗೆ ಮದುವೆ ಎನ್ನುವುದು ಸಹ. ತಂದೆ ಮನೆಯ ಹುಟ್ಟು ಮದುವೆಯ ಮೂಲಕ ಸಾವು, ಸಾವು ಅಂತ ಅಂದಾಗ ಅವಳಪ್ಪನಿಗೆ ಹೊಟ್ಟೆಯ ಕರುಳು ಕಿತ್ತು ಬಂದಂತಾಗುತ್ತದೆ.

ಇವರು ಕೂತಿದ್ದ ಜಾಗಕ್ಕೆ ಮರಳಿದ ಸೌಜನ್ಯ ಊಟ ಮುಗಿಯುತ್ತಿದ್ದಂತೆ ತಿರುಗಿ ಊರಿಗೆ ಹೋಗುವ ತಂದೆಯನ್ನು ಬಿಳ್ಕೊಡಲು ಬಸ್ ನಿಲ್ದಾಣಕ್ಕೆ ತಂದೆಯೊಟ್ಟಿಗೆ ಬರುತ್ತಾಳೆ. ಆಗ ವಿಪ್ಲವನ ಮಾತನ್ನೇ ಯೋಚಿಸುತ್ತ ಕೂತಿದ್ದ ಅವಳ ತಂದೆ, ವಿಪ್ಲವನ ವಯಸ್ಸೆಷ್ಟು ಎಂದು ಕೇಳಿದಾಗ ಅವರಿಗೆ ೨೪ ವರ್ಷ ಎಂದೆನ್ನುತ್ತಾಳೆ. ವಯಸ್ಸು ಚಿಕ್ಕದಾದರೂ ಎಷ್ಟು ಪಕ್ವವಾದ ಮಾತನ್ನಾಡ್ತಾರೆ ಎಂದಾಗ ಸೌಜನ್ಯ ಉತ್ತರಿಸುತ್ತಾಳೆ, ಅಪ್ಪ ಅವರು ನಿಜವಾದ ಮಾತುಗಳನ್ನೇ ಹೇಳುತ್ತಾರೆ, ಅದರೆ ಅದನ್ನು ಅರ್ಥೈಸಿಕೊಂಡಾಗ ಮಾತ್ರ ಸತ್ಯದ ಅರಿವಾಗುತ್ತದೆ ಇಲ್ಲದಿದ್ದರೆ ಮೊಂಡತನದ ಮಾತುಗಳಂತೆ ಅಪಹಾಸ್ಯಕ್ಕೆ ಗುರಿಯಾಗುತ್ತದೆ ಎಂದೆನ್ನುತ್ತಾಳೆ.

ಹೌದು ಮಗೆಳೆ ಎಂದು ಹೇಳಿ ಬಸ್ಸನ್ನು ಹತ್ತಿ ಮರಳುತ್ತಾನೆ. ಮನೆಗೆ ಹೋದ ಮೇಲೆ ವಿಪ್ಲವನ ಮಾತನ್ನೇ ಯೋಚಿಸುತ್ತ ಕೂರುತ್ತಾನೆ. ಆಗ ಅವನಿಗೆ ಬಹುಶಃ ನನ್ನ ಮಗಳಿಗೇನಾದರೂ ಬೇರೆ ಜಾತಿಯ ಹುಡುಗನೊಂದಿಗೆ ಪ್ರೇಮಾಂಕುರವಾಗಿರಬಹುದೇ? ನನ್ನ ಮಗಳು ಓಡಿ ಹೋಗಿ ನನ್ನ ಮರ್ಯಾದಿ ತೆಗೆದರೇನು ಮಾಡುವುದು? ಎಂಬೆಲ್ಲ ಹಲವಾರು ಪ್ರಶ್ನೆಗಳು ಆತನನ್ನು ಕಾಡತೊಡಗುತ್ತದೆ. ಆಗ ಮಗಳಿಗೆ ಕರೆ ಮಾಡಿ ಕೇಳಿದಾಗ,ಮನೆಗೆ ಬಂದಾಗ ಉತ್ತರಿಸುವೆ ಎಂದೆನ್ನುತ್ತಾಳೆ’.

ಮಗಳು ಮನೆಗೆ ಬಂದಾಗ ಎಲ್ಲವನ್ನು ಕೇಳಿ ತಿಳಿಯುತ್ತಾನೆ. ನಿಜವಾಗಿಯು ಅವಳಿಗೆ ಬೇರೆ ಜಾತಿಯ ಹುಡುಗನೊಂದಿಗೆ ಪ್ರೇಮಾಂಕುರ ಆಗಿರುವುದನ್ನು ತಿಳಿದು ದಿಗ್ಭ್ರಮೆಗೊಳಗಾಗುತ್ತಾನೆ. ಆಗ ಮಗಳ ಮನಸಿಗೆ ನೋವಾಗಿ ಹೇಳುತ್ತಾಳೆ, ಅಪ್ಪ ನಿನಗೆ ಇಷ್ಟವಿಲ್ಲದಿದ್ದರೆ ನಿಜವಾಗಿಯು ಅವನನ್ನು ತೊರೆದು ನೀ ತೋರಿಸಿದವನನ್ನೆ ಮದುವೆಯಾಗಿ ಹೆಣದಂತೆ ಬದುಕುತ್ತೇನೆ ಎಂದು ಹೇಳುತ್ತಾಳೆ. ಆಗ ಎನೂ ಉತ್ತರಿಸದ ಅವಳಪ್ಪ ದಿನ ಬಿಟ್ಟು ಕರೆ ಮಾಡಿ ನಿನ್ನಿಷ್ಟಕ್ಕೆ ನನ್ನ ಒಪ್ಪಿಗೆಯಿದೆ ಎಂದೆನ್ನುತ್ತಾನೆ. ಅಲ್ಲದೆ ವಿಪ್ಲವನ ಮಾತನ್ನು ತಿಳಿದಾಗ ಬದುಕಿನ ನಿಜರ್ಥ ಅರಿವಾಯಿತು ಎಂದು ಹೇಳಿ ಯಾರವ ಹುಡುಗನೆಂದು ಕೇಳುತ್ತಾನೆ.

ಆಗ ಸಂತೋಷದಿಂದ ಮಗಳೆನ್ನುತ್ತಾಳೆ, ನೀನು ನೋಡಿದ್ದೀಯ, ಅವನೊಂದಿಗೆ ಮಾತನಾಡಿದ್ದೀಯ ಎಂದಾಗ ಇವನಿಗೆ ತಲೆಯಲ್ಲಿ ಹುಳ ಬಿಟ್ಟ ಹಾಗಾಗಿ ಯಾರವ ಯಾರವನೆಂದು ಪದೆ ಪದೆ ಯೋಚಿಸ ತೊಡಗುತ್ತಾನೆ. ಆಗ ಸೌಜನ್ಯ ಹೇಳುತ್ತಾಳೆ ಅವನೇ ಲೋಹಿತನೆಂದು. ಇಲ್ಲಿಗೆ ಬಂದಾಗ ಅವನೊಂದಿಗೆ ನೀನು ಮಾತಾಡಿದ್ದೀಯ ಎಂದಾಗ, ಓಹೋ ಇದು ನಿಮ್ಮ ಪೂರ್ವ ನಿಯೋಜಿತ ಉಪಾಯವೇ? ನನ್ನನ್ನು ಒಪ್ಪಿಸಲು ನೀವು ಮಾಡಿದ ತಂತ್ರವೇ? ಎಂದು ಕೇಳಿದಾಗ ಅಲ್ಲಪ್ಪ ಇದು ವಿಪ್ಲವರ ಉಪಾಯವೆನ್ನುತ್ತಾಳೆ. ಆಗ ಸಂತೋಷದಿಂದ ಒಪ್ಪಿಕೊಂಡು ಮದುವೆಗೆ ಕರೆ ನೀಡಿ ಕೆಲವು ತಿಂಗಳ ಒಳಗಾಗಿ ಮದುವೆ ಮಾಡಿ ಮುಗಿಸುತ್ತಾನೆ.

ಇದರೊಂದಿಗೆ ಹುಟ್ಟಿಸಿದ ಮಗಳ ಮದುವೆಯನ್ನು ಸಾವಾಗದಂತೆ ಅವಳಿಷ್ಟಕ್ಕೆ ಪ್ರಾಧಾನ್ಯತೆ ನೀಡಿ ಮದುವೆ ಮಾಡಿ ಕಳುಹಿಸಿ ಕೊಡುತ್ತಾನೆ. ವಿಪ್ಲವನು ತನ್ನ ಮಾತು, ಸಮಯ ಪ್ರಜ್ಞೆ, ಸಮಯೋಚಿತ ನಿರ್ಧಾರ, ಕೊಟ್ಟ ಉಪಾಯ ಫಲಿಸಿತೆಂದು ಸಮಾಧಾನಿಸಿ ತನ್ನ ಸಹಾಯದ ವರ್ತನೆಯನ್ನು ಮುಂದುವರೆಸಿಕೊಂಡು ಎಲ್ಲರೊಳಗೊಂದಾಗುತ್ತ ಬದುಕಿದ.