Wednesday, April 5, 2017

ಅಪರಿಚಿತ ದಾರಿಹೋಕ ದಾರಿ ತೋರಿದಾಗ

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಪರಿಚಯವಿರದ ಪಯಣಕ್ಕೆ ಮುಂದಾದ ತರುಣನ ತರಾತುರಿಯಲ್ಲಿ ಮುನ್ನುಗ್ಗುತ್ತಿದ್ದ. ನೆಂಟರೊಬ್ಬರ ಮನೆಯ ವಿಶೇಷ ಪೂಜೆಯ ಕರೆಗೆ ಮನೆಯವರ ಪ್ರೇರಣೆಯೊಂದಿಗೆ ಬಸ್ ಹತ್ತಿ ಹೊರಟ. ಎಲ್ಲಿಳಿಯ ಬೇಕು, ಹೇಗೆ ಹೋಗ ಬೇಕೆಂದು ಕೇಳಿ ತಿಳಿದಿದ್ದ ತರುಣ ಒಂದು ಬಸ್ಸನ್ನು ಇಳಿದು ತಲುಪಬೇಕಾದ ಸ್ಥಳಕ್ಕೆ ಹೋಗುವ ಬಸ್ ಹತ್ತಿ ಹೊರಟ. ಬಸ್ಸಿನ ನಿರ್ವಾಹಕನ ಹತ್ತಿರ ಕೇಳಿಕೊಂಡು ಇಳಿಯ ಬೇಕಾದ ನಿಲ್ದಾಣದಲ್ಲಿ ಇಳಿದ. ಆದರೆ ಅಲ್ಲಿಂದ ನೆಂಟರ ಮನೆಗೆ ಹೋಗಲು ಇದ್ದಿದ್ದು ಕಾಲು ಹಾದಿ. ಅದೂ ಕಡಿದಾದ ಕಾಡಿನ ಮಧ್ಯೆ ಕಿರಿಕಿರಿಯೆಂದು ಕೂಗುತ್ತಿದ್ದ ಕಾಡು ಜಿರಲೆಯ ನಾದದ ಕೂಗಿಗೆ ಹೆಜ್ಜೆ ಹಾಕುತ್ತ ಮನೆಯವರು ಹೇಳಿದಂತೆ ಸಾಗುತ್ತ ಗುರಿಯತ್ತ ಮುನ್ನೆಡೆದ. ಹಾಗೆ ಒಬ್ಬನೆ ನಡೆಯುತ್ತ ಮುಂದೆ ಹೋಗುತ್ತಿದ್ದಾಗ ಅವನಿಗೆ ಎದುರಾಗಿದ್ದು ಕವಲು ದಾರಿ. ಆಗ ಕಂಗಾಲಾದ ತರುಣ ಬಲಗಡೆಯ ದಾರಿಯಲ್ಲಿ ಹೋಗಲೇ? ಅಥವಾ ಎಡಬದಿಯ ದಾರಿಯಲ್ಲಿ ಮುನ್ನಡೆಯಲೇ? ಎಂದು ವಿಚಾರ ಮಾಡುತ್ತ ಮಧ್ಯದಲ್ಲಿ ನಿಂತು ಯೋಚಿಸಿದ.

ಬಿಸಿಲು ತಲೆಯ ಮೇಲಿಂದ ಸುಡುವ ಹೊತ್ತಾದರೂ ಕಾಡಿನ ಮಧ್ಯೆ ಮರಗಳ ನೆರಳಿನಲ್ಲಿ ನಿಂತಿದ್ದ ತರುಣ ಯಾವ ದಾರಿಯಲ್ಲಿ ಹೋಗಬೇಕೆಂದು ಗೊತ್ತಾಗದೇ ಗಲಿಬಿಲಿಯಾಗಿದ್ದ ತರುಣನಿಗೆ ಕಂಡಿದ್ದು ದೂರದಲ್ಲಿ ಬರುತ್ತಿದ್ದ ಬಿಳಿ ಕೂದಲಿನ ಮುದುಕ. ಆ ಮುದುಕ ಹತ್ತಿರ ಬರುತ್ತಿದ್ದಂತೆ "ಅಜ್ಜ ಕವಲು ಮನೆಗೆ ಹೋಗುವ ದಾರಿ ಯಾವುದೆಂದು" ಕೇಳಿದ. ಅದಕ್ಕೆ ಉತ್ತರಿಸುತ್ತ, ನೀನು ಈ ಪ್ರದೇಶಕ್ಕೆ ಹೊಸಬನೇ ಎಂದು ಪ್ರಶ್ನಿಸಿದ. ಹೌದು ಎಂದ ತರುಣ ಅಲ್ಲಿಗೆ ಹೋಗುವ ದಾರಿಯಾವುದೆಂದು ಹೇಳಜ್ಜ ಹೊತ್ತಾಯಿತು ಎನ್ನುತ್ತಾನೆ. ಎರಡು ದಾರಿಯು ಅವರ ಮನೆಗೆ ಹೋಗುತ್ತದೆ ಆದರೆ ಅವರ ಮನೆ ಇರುವುದು ಹಲವಾಗು ಮನೆಗಳ ನಡುವೆ ಎಂದಾಗ ಮತ್ತೆ ಗೊಂದಲಕ್ಕೊಳಗಾಗುತ್ತಾನೆ. ಆಗ ಮುದುಕ ಹೇಳುತ್ತಾನೆ ನಡೆ ನಿನ್ನ ಜೊತೆಗೆ ನಾನು ಬರುತ್ತೇನೆ, ನಿನಗೆ ಮನೆಯನ್ನು ತೋರಿಸುತ್ತೇನೆ ಎಂದು ಹೇಳಿ ತರುಣನ ಜೊತೆ ಹೆಜ್ಜೆ ಹಾಕುತ್ತಾನೆ.

ಮುನ್ನಡೆಯುತ್ತಾ ತರುಣನ ಜೊತೆ ಮಾತಿಗಿಳಿದ ಅಜ್ಜ ಕೇಳುತ್ತಾನೆ ನಿನಗೆ ಭಯ ಜಾಸ್ತಿಯಾ? ಎಂದಾಗ ತರುಣ ಹಾಗೇನಿಲ್ಲ ಎಲ್ಲೋ ಅಲ್ಪ ಸ್ವಲ್ಪ ಹೆದರುತ್ತೇನೆ ಅಂತೇಳುತ್ತಾನೆ. ಹಾಗಾದರೆ ದೆವ್ವಗಳೆಂದರೂ ಭಯವಿಲ್ಲವೇ? ದೆವ್ವಗಳ ಜೊತೆಗೆ ಮಾತನಾಡುವೆಯಾ? ಎಂದು ಕೇಳಿದಾಗ ತರುಣ ಸ್ವಲ್ಪ ಅಂಜಿಕೆಯಿಂದಲೆ ಹೆದರಿಕೆಯಿಲ್ಲ, ಅವುಗಳನ್ನೆಲ್ಲ ನಾನು ನಂಬುವುದಿಲ್ಲ ಎನ್ನುತ್ತಾನೆ. ಅಷ್ಟರಲ್ಲಿ ತಲುಪಬೇಕಾಗಿದ್ದ ಮನೆಯು ಹತ್ತಿರದಲ್ಲಿ ಕಾಣಿಸಿತು. ಅಲ್ಲಿದೆ ನೀನು ಹೋಗಬೇಕಾದ ಮನೆಯೆಂದು ತೋರಿಸಿದ. ಆಗ ಅಜ್ಜನಿಗೆ ಧನ್ಯವಾದ ಹೇಳಬೇಕೆಂದು ಅಜ್ಜಾ ಎನ್ನುತ್ತಾನೆ. ಏನು ಮಗಾ, ನೀನು ದೆವ್ವಗಳನ್ನು ನಂಬುವುದಿಲ್ಲ ಅಲ್ಲವೇ? ಎಂದು ಕೇಳುತ್ತಾನೆ. ಇಲ್ಲಾ ಎಂದು ಹೇಳುತ್ತಾ ತಿರುಗಿದಾಗ ಬಳಿಯಿದ್ದ ಅಜ್ಜನನ್ನು ಕಾಣದೇ ಕಂಗಾಲಾಗಿ ಕರೆಯಲಾರಂಭಿಸುತ್ತಾನೆ ಅಜ್ಜಾ....!  ಅಜ್ಜಾ.......!!

No comments:

Post a Comment