Thursday, August 28, 2014

|| ಪ್ರಾಸಂಗಿಕ ಪ್ರಕ್ರಿಯೆ ||

ಮಡಿದ ಮನಸು
ಮಿಡಿದರೂನು
ಭಾವನೆಗೆಲ್ಲಿದೆ ಬೆಲೆಯು
ಜಗದ ನಿಯಮ
ನಿಂತಿರುವುದು
ಹುಟ್ಟ ಬರುವ ಸಂಬಂಧದಲಿ ||

ಹುಟ್ಟುತ ಆಡುತ
ಅಣ್ಣ ತಮ್ಮಂದಿರುಗಳು
ಬೆಳೆಯುತ ಆಗುವರು ದಾಯಾದಿಗಳು
ಜೊತೆಯಲೆ ಜಡೆಯನು
ಹಾಕಿದ ಸಹೋದರಿಯರು
ಮದುವೆಯ ನಂತರ ಸಂಬಂಧಿಗಳು ||

ಎತ್ತಣದಿಂದ ಎತ್ತಣಕ್ಕೆ
ಸಂಬಂಧಗಳು ಬೆಸೆದಿರುವುದೊ
ಬತ್ತಿದ ಭಾವನೆ ಹೊಳೆಯಲಿ ತೇಲುವವು
ಭಾವನೆಯಲಿ ಬೆಳೆಯುವ
ಸಂಬಂಧಗಳಿಗೆ ಬೆಲೆಯಿಲ್ಲ
ಅಪಾರ್ಥ ರೂಪದಲಿ ಮನಸ್ತಾಪವು ||

ಹೊಸದು ಸಂಗಕೆ
ಚಿತ್ತ ಸೆಳೆಯಲು
ಹಳೆಯ ಜೊತೆಯನು ತೊರೆಯುವರು
ಬೆರೆತ ಬೆಸುಗೆಗೆ
ಗುರುತೆ ಇಲ್ಲದೆ
ಮರೆತು ಮರೆಯಲಿ ಬಾಳುವರು ||

ಮನಸಿಗೆ ಹಿಡಿಸಿದ
ಹಾಗೆ ಮಾತುಗಳು
ವ್ಯಕ್ತವಾಗಲು ಕಲ್ಪನೆಯ ಕಡಲಿನಲಿ
ಸರ್ವವು ವ್ಯರ್ಥ
ಮಾಡಲು ಅಪಾರ್ಥ
ಮರ್ಯಾದೆಯಿರದು ಪ್ರಾಸಂಗಿಕ ಪ್ರಕ್ರಿಯೆಯಲಿ ||

Friday, August 22, 2014

ದೇವರು ಪಕ್ಷಪಾತಿಯೇ?

http://www.badari-poems.blogspot.in/2014/08/blog-post.html
(ಫೇಸ್ ಬುಕ್ಕಿನಲ್ಲಿ ಈ ಹೊತ್ತಿನವರೆಗೂ ದೊರೆತ ಪ್ರತಿಕ್ರಿಯೆಗಳಿವೆ:
ಇದಕ್ಕೆ ನನ್ನ ಕಾಮೆಂಟ್ ಹೀಗಿದೆ ನೋಡಿ...
ಇಲ್ಲಿ ಬರೆದ ಕಾಮೆಂಟ್ ನ್ನು ಓದಿದ ಮೇಲೆ ನನ್ನ ಮನಸ್ಸಿನಲ್ಲು ಕೆಲವೊಂದು ಜಿಜ್ಞಾಸೆಗಳು ಉದ್ಭವಿಸಿದವು.
ತಿರುಮಲೈರವರೆ ನಾನು ನಿಮ್ಮಷ್ಟು ದೊಡ್ಡವನಲ್ಲ, ತಿಳಿದವನು ಅಲ್ಲ ಆದರು ನನ್ನ ಮನಸಿನ ಗೊಂದಲಗಳನ್ನು ಹೊರ ಹಾಕುವ ಪ್ರಯತ್ನ ಮಾಡಿದ್ದೇನೆ. ನನ್ನ ಅನಿಸಿಕೆಯೇನೆಂದರೆ...
ದೇವರು ಪಕ್ಷಪಾತಿಯು ಅಲ್ಲ, ಸಾಹುಕಾರನು ಅಲ್ಲ. ಅವ ಸರ್ವಶ್ರೇಷ್ಠ, ಸರ್ವೋತ್ತಮ, ಸರ್ವವ್ಯಾಪಿ. ಅವನಾರು ಎಂಬುದೆ ಪ್ರಶ್ನೆಯಾದರೆ ನಮ್ಮ ಬದುಕಿಗೆ, ನಮ್ಮ ಬುದ್ಧಿವಂತಿಕೆಗೆ ಅರ್ಥವುಂಟೆ...?
ಈ ಜಗತ್ತೆಂದರೆ ದೇವರು, ನಮ್ಮ ನಂಬಿಕೆಯೇ ದೇವರು, ನಮ್ಮ ಅಸಹಾಯಕತೆಯನ್ನು ಕೇಳುವ ಕಲ್ಪನೆಯೇ ದೇವರು, ಎಲ್ಲರನ್ನು ಬದುಕಲು ಅಣಿಯಾಗಿಸುವ ಚೈತನ್ಯವೇ ದೇವರು. ಇದು ನನ್ನ ಅಭಿಪ್ರಾಯ.
ಹಾಗೆ ಮುಂದುವರಿಯುತ್ತ, ಆ ಪರಮಾತ್ಮನಿಂದ ಹೊರಟ ಆತ್ಮ ಮತ್ತೆ ಆ ಪರಮಾತ್ಮನನ್ನೇ ಸೇರುವ ಮಾರ್ಗದಲ್ಲಿ ಪಾರು ಮಾಡಬೇಕಾದ ಹತ್ತಾರು ಎಡರು ತೊಡರುಗಳನ್ನು ದಾಟಲು ಬೇಕಾದ ಚುಕ್ಕಾಣಿಗಳು ಮಾತ್ರ. ಅಂದರೆ ಆತ್ಮದ ವಾಹನವೆಂದರೆ ಈ ನರ ಮೃಗಗಳೇ...? ಆ ಪರಮಾತ್ಮನಲ್ಲಿ ಲೀನವಾಗುವುದೇ ಎಲ್ಲಾ ಜೀವಿಗಳ ಉದ್ದೇಶ್ಯ ಎಂದು ಹೇಳಿದ್ದೀರಿ ಹೀಗೆಂದುಕೊಂಡರೆ ಬದುಕುವ ಕರ್ಮ ಎಲ್ಲಿಂದ, ಯಾಕೆ, ಯಾವ ಕಾರಣಕ್ಕೆ ಎನ್ನುವ ಅನುಮಾನ ಮತ್ತು ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಎಲ್ಲ ಕರ್ಮಗಳನ್ನು ಬಿಟ್ಟು ಕೇವಲ ಧ್ಯಾನದತ್ತ ನಮ್ಮ ಮನಸ್ಸನ್ನು ಕೇಂದ್ರಿ ಕರಿಸುವುದೊಂದೇ ಉಳಿಯಬೇಕಾಗುತ್ತದೆ ಅಲ್ಲವೆ...?
ಎಲ್ಲ ಪ್ರಾಣಿಗಳೂ ಅವರವರ ಪೂರ್ವ ಕರ್ಮದನುಸಾರವಾಗಿ ಏನನ್ನು ಪಡೆಯಬೇಕೋ, ಎಷ್ಟನ್ನು ಪಡೆಯಬೇಕೋ ಮತ್ತು ಯಾವಾಗ ಪಡೆಯಬೇಕೋ ಆಯಾ ಸಮಯಕ್ಕೆ ಅಷ್ಟಷ್ಟನ್ನು ಪಡೆಯುತ್ತದೆ ಅಂದರೆ ಎಲ್ಲ ಪ್ರಾಣಿಗಳ ಆತ್ಮವೂ ಪೂರ್ವ ಜನ್ಮವನ್ನು ಪಡೆದಿರುತ್ತದೆಯೇ...? ಹಾಗಿದ್ದರೆ ಎಲ್ಲ ಕೆಲಸಗಳು ತೃಪ್ತಿದಾಯಕವಾಗಿ ಯಾವ ಪ್ರಾಣಿಯ ಬದುಕಿನಲ್ಲಿ ನಡೆಯುತ್ತದೆಯೋ ಆ ಪ್ರಾಣಿಗಳ ಆತ್ಮ ಹೊಸದಾಗಿ ರೂಪಗೊಂಡಿರುವುದೋ...?
ನಮ್ಮ ಬದುಕಿನಲ್ಲಿ ಋಣಾತ್ಮಕವಾದ ಘಟನೆಗಳು ಸಂಭವಿಸಿದರೆ ಆಗ ನಾವು ನಮ್ಮೆಲ್ಲ ಬದುಕಿನ ಹೊಣೆಗಾರ ದೇವನೆಂದು ಅವನನ್ನು ಜರಿಯುವುದು ಅಸೂಯೆಯಿಂದ ತೆಗಳುವುದು ನಮ್ಮ ಹತಾಶೆಯ ಪರಮಾಧಿಯೇ ಹೊರತು ಬೇರೆನು ಅಲ್ಲ ಎನ್ನುವುದು ನನ್ನ ಅನಿಸಿಕೆ. ಯಾಕೆಂದರೆ ಉಳಿದವರನ್ನು ಜರಿದರೆ, ಹೊಣೆಯಾಗಿ ಬಿಂಬಿತರಾದವರು ಎಗರಿ ಉತ್ತರಿಸುವುದರಿಂದ ಜಗಳ, ಮನಸ್ತಾಪಕ್ಕೆ ಹೆದರಿ, ಇಂತವುಗಳಿಂದ ತಪ್ಪಿಸಿಕೊಳ್ಳಲು ಕಾಣದ ದೇವನನ್ನು ಜರಿಯುತ್ತಾರೆ. ಯಾಕೆಂದರೆ ಅವ ತಿರುಗಿ ಮಾತನಾಡಲಾರ, ಜಗಳವಾಡಲಾರ ಎಂಬುದು ಪೂರ್ವ ನಿಯೋಜಿತವಾಗಿ ತಿಳಿದಿದ್ದರಿಂದ.
ಉಳ್ಳವರು ಶಿವಾಲಯ ಮಾಡುವರು' ಎಂದು ಬಸವಣ್ಣನವರು ಹೇಳುತ್ತಾ ' ಎನ್ನ ಕಾಲೇ ಕಂಬವಯ್ಯ, ಎನ್ನಾ ದೇಹವೆ ದೇಗುಲವಯ್ಯ ಶಿರವೇ ಹೊನ್ನ ಕಳಸವಯ್ಯಾ ' ಎಂದಿರುವುದು ಇಲ್ಲದವರ ಪರವಾಗಿ ಎತ್ತಿದ ದನಿ. ಏಕೆಂದರೆ ಅವರಿಗು ಗೊತ್ತು ಮನಸ್ಸೆಂಬ ಮರ್ಕಟದಿಂದ ಧ್ಯಾನ, ಪೂಜೆಯನ್ನು ಭಾವಪರವಶರಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ನಮ್ಮ ಭಕ್ತಿಯನ್ನು, ನಮ್ಮ ಅವಶ್ಯಕತೆಯನ್ನು ದೇವನಿಗೆ ತಲುಪಿಸಲು ಕಂಡುಕೊಂಡ ಮಾರ್ಗಗಳೇ ಈ ಹೋಮ, ಹವನ, ಅರ್ಚನೆ ಇತ್ಯಾದಿ. ಈ ಕರ್ಮಗಳನ್ನು ಮಾಡಿಸಲು ಮುಂದೆ ಬಂದ ಜನರ ಗುಂಪೇ ನಮ್ಮ ಬ್ರಾಹ್ಮಣರು. ಹಾಗೆಂದ ಮಾತ್ರಕ್ಕೆ ಬ್ರಾಹ್ಮಣರುಗಳು ದೇವರಲ್ಲ. ಆದರೆ ಅವರ ಕರ್ಯತತ್ಪರತೆ ಅವರನ್ನು ಗೌರವಿಸುವಂತೆ ಪ್ರೇರೇಪಿಸುತ್ತದೆ. ಬರ್ತ ಬರ್ತ ಅದು ಒಂದು ವೃತ್ತಿಯಾಗಿ ಸಮಾಜದ ಸಂಕೊಲೆಗಳಿಂದ ವಿದ್ಯಮಾನಗಳು ಬೇರೆ ಯಾದವೆ ಹೊರತು ಅದು ಅವರೆ ಬರೆದುಕೊಂಡ ಸ್ವಯಂಘೋಶಿತ ಬಿರುದಲ್ಲ. ಅಹಂ ಬ್ರಹ್ಮಾಸ್ಮಿ ಎಂದು ಸ್ವಾಮಿ ಜಗದ್ಗುರುಗಳಾದ ಶಂಕರಾಚಾರ್ಯರು ಹೇಳಿರುವುದು ದೇವರನ್ನು ನೋಡಲು ಬೆರೆಲ್ಲು ಹೋಗಬೇಕಾಗಿಲ್ಲ ಯಾಕೆಂದರೆ ಆ ಪರಮಾತ್ಮನ ಭಾಗವೇ ನಮ್ಮ ಈ ದೇಹದ ಆತ್ಮವಾಗಿರುವುದರಿಂದ ನಾನೇ ಬ್ರಹ್ಮ ಎಂದು ಹೇಳಿರುವುದರ ಉದ್ದೇಶವಾಗಿರಬಹುದಲ್ಲವೇ...? ಇದರಿಂದಾಗಿ ಶಿವಾಲಯ ಕಟ್ಟುವ, ಪುರೋಹಿತರನ್ನು ಸಂಪರ್ಕಿಸುವ ಗೋಜಿಗೆ ಹೋಗುವ ಕೆಲಸವಿಲ್ಲ.
ಇವುಗಳ ಸುತ್ತ ಓಡಾಡಿದಾಗ, ಇವುಗಳನ್ನು ಆಳವಾಗಿ ಯೋಚಿಸಿದಾಗ ಮೂಡುವ ಗೊಂದಲಗಳಿಗೆ ಉತ್ತರ ಹುಡುಕಲು ಆಗದೆ ಹೋದ ಪ್ರಶ್ನೆಯೇ ದೇವರು. ನಂಬಿಕೆ, ಭಕ್ತಿ, ಧ್ಯಾನ, ಸಮಾದಾನ ಇದೆ ದೇವರೆಂಬ ಪದದ ಉತ್ಪತ್ತಿಗೆ ಕಾರಣ. ಇವುಗಳನ್ನು ಮೀರಿ ಒಬ್ಬ ದೇವರಿದ್ದಾನೆ ಅಂತಾದರೆ ಅವನಿಗೆ ಎಲ್ಲಾ ಪ್ರಾಣಿಗಳು ಸಮಾನರು. ಯಾಕೆಂದರೆ ಎಲ್ಲಾ ಪ್ರಾಣಿಗಳ ದೇಹದಲ್ಲು ಆತ್ಮವಿರುತ್ತದೆ, ಆ ಆತ್ಮವೆಂಬುದು ಆ ದೇವರ ಭಾಗವಲ್ಲವೆ..? ಹೀಗಿರುವಾಗ ಆ ದೇವರು ಸಾಹುಕಾರ, ಪಕ್ಷಪಾತಿಯಲ್ಲ.
ಈ ಅಲ್ಪನ ಬುದ್ಧಿಗೆ ತಿಳಿದಂತೆ, ತೋಚಿದಂತೆ ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ, ತಿಳಿಸಿ. ಧನ್ಯವಾದಗಳು.

Tuesday, August 19, 2014

|| ನೋಡಿ ಜೋಡಿ ||

ನಿನ್ನಂದು ಕಂಡಾಗ
ಕವಿದಂತೆ ಮೋಡ
ನೀ ನಗಲು ತುಟಿಯಲ್ಲಿ
ಧರೆಗಿಳಿದಂತೆ ವರುಣ

ನೀ ನೀಡಲು ಉತ್ಸಾಹ
ಬದುಕಲು ಪ್ರೋತ್ಸಾಹ
ನನಗೆಂದು ಉಡುಗೊರೆ
ನೀ ಕೊಡುವ ಜನ್ಮ

ನಿನ್ನಿಂದ ನಡೆಯಲಿ
ನನ್ನ ಬಾಳ ಪಯಣ
ಇನ್ನೊಂದು ತಲೆಮಾರಿಗೆ
ನಮ್ಮಿಂದ ಜನನ

Thursday, August 14, 2014

|| ನೀ ಹೋದರೆ ||

ನೀ ತೊರೆದರೆ ನನ್ನ
ಜೀವ ಹೋಗುವ ಮುನ್ನ
ಆ ಚಂದ್ರನ ಕಣ್ಣಲ್ಲೂ
ನೀರು ಬರುವುದು
ಮುಸುಂಬ್ಳವ ಒರೆಸುತ
ಆ ಮೇಘ ಓಡುತಿರುವವು
ಮಳೆಯನ್ನು ಸುರಿಸಿ
ನಿನ್ನ ಹೆಜ್ಜೆ
ಗುರುತನ್ನು ಅಳಿಸಲು ||

ತೊಳೆಯುವೆನು ಚೊಕ್ಕದಾಗಿ
ಗೋಮಯವ ಹಾಕಿ
ಮನಸಲಿ ನೀ ಹಾಕಿದ
ಹಚ್ಚೆಯನು ಅಳಿಸಲು ಆಗದೆ
ಸೋಲುವೆನು ಸಾವಿನಲು
ಬೇತಾಳ ನಾನಾಗದೆ ||

ಹೊಸದಾದ ಸಂಗೀತ
ಲಯವಿರದ ರಾಗದಲಿ
ಸುಯ್ಯೆಂದು ಕೇಳುತ್ತಿದ್ದರೂ
ನೀ ಹೋದ ಘಳಿಗೆಯನು
ಒತ್ತಿ ಒತ್ತಿ ಹೇಳುತಿರುವವು
ನನ್ನೆದೆಯ ಬಡಿತಗಳು ||

Monday, August 11, 2014

ರಕ್ಷಾ ಬಂಧನವೇಕೆ ತೋರಿಕೆಯ ಬಂಧಗಳಾಗುತ್ತಿವೆ...?


ನಮ್ಮ ಬಾಲ್ಯವನ್ನು ನೆನೆದರೆ ಮರಳಿ ಮಗುವಾಗಿ ನಲಿಯುವಾಸೆ ಅಗುತ್ತದೆ. ನಮ್ಮ ಸಹೋದರಿಯರು ಕಟ್ಟುವ ರಕ್ಷಾ ಬಂಧನದ ದಿನವನ್ನು ನೆನೆಯಲು ಹೆಮ್ಮೆಯೆನಿಸುತ್ತದೆ. ಚಿಕ್ಕವರಾಗಿದ್ದಾಗ ಆ ದಿನವನ್ನು ಅದೆಷ್ಟೋ ಸಂಭ್ರಮದಿಂದ ಬೀಗುತ್ತಿದ್ದ ಕ್ಷಣಗಳು ಕಣ್ಣೆದುರಿಗೆ ಬಂದರೆ ಅಹ್ಲಾದಕರವೆಂದೆನಿಸುತ್ತದೆ.

ರಕ್ಷಾ ಬಂಧನದ ಉದ್ದೇಶ ಮರೆಯಾದಂತಿದೆ. ಇಂದು ರಕ್ಷಾ ಬಂಧನದ ಹಬ್ಬ ಬಂತೆಂದರೆ ಈ ದಿನ ಏನಕಪ್ಪ ಬಂತೆಂಬ ಭಾವ ಹೆಚ್ಚಿನದಾಗಿ ಎಲ್ಲ ಹುಡುಗರಲ್ಲಿ ಕಂಡುಬರುತ್ತಿದೆ. ಹಬ್ಬದ ವಾತವರಣ ಮರೆಯಾಗಿ ಅಡಗುವ ತಾಣ ಹುಡುಕುವ ಪರಿಸ್ಥಿತಿ ಬಂದೊದಗಿದೆ. ಯಾಕೆಂದರೆ ಮನದಲ್ಲಿ ಭಾವ ಇರದೆ, ಗೌರವವು ಇರದೆ ತೋರಿಕೆಯ ಮಾತು ಸಂಬಂಧದ ಸಂಕೊಲೆಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

ಮೊದಲೆಲ್ಲ ರಕ್ಷಾ ಬಂಧನ ಕಟ್ಟಿದರೆ ಹೆಮ್ಮೆ, ನಾನೊಬ್ಬ ಜವಾಬ್ಧಾರಿಯುತ ವ್ಯಕ್ತಿ, ನಮಗ್ಯಾರು ಕಟ್ಟುವರೋ ಅವರ ರಕ್ಷಣೆಯ ಹೊಣೆ ನನ್ನದು ಎಂಬ ಮನೋಭಾವ ಅಂದಿನ ಹುಡುಗರಲ್ಲಿತ್ತು. ಹಾಗೆ ಹುಡುಗಿಯರಲ್ಲೂ ಸಹ ನಮ್ಮಣ್ಣ ಅಥವಾ ನಮ್ಮ ಬಗ್ಗೆ ಕಾಳಜಿಯುಳ್ಳವರು ಎಂದು ಧೈರ್ಯದಿಂದ ತಲೆ ಎತ್ತಿ ನಡೆಯುತ್ತಿದ್ದರು, ಗೌರವದಿಂದ ಕಾಣುತ್ತಿದ್ದರು.

ಆದರೆ ಇಂದು....

ಹೆಚ್ಚಿನ ಜನರಲ್ಲಿ ಈ ಹಬ್ಬ ಬಂತಂದರೆ ಯಾಕಪ್ಪ ಬಂತು...? ಹೇಗೆ ತಪ್ಪಿಸಿಕೊಳ್ಳೋದು...? ಎಲ್ಲಿ ಅಡಗೋದು...? ಎಂಬ ಚಿಂತೆ ತಲೆದೋರಿದರೆ ಹುಡುಗರಲ್ಲಿ ಯಾರಿಗೆ ರಾಖಿ ಕಟ್ಟಿ ಅವರ ಕಾಟದಿಂದ ತಪ್ಪಿಸಿಕೊಳ್ಳಬೇಕು, ಯಾವ ಹಿಂಬಾಲಕರಿಗೆ ರಾಖಿ ಕಟ್ಟಿ ಅವರಿಂದ ಪಲಾಯನವಾಗಬೇಕೆಂಬ ಆಲೋಚನೆ ಶುರುವಾಗುತ್ತದೆ.

ರಕ್ಷಾ ಬಂಧನದ ಉದ್ದೇಶ, ಅದರ ಹಿಂದಿನ ನಿಯಮ ಮತ್ತು ನಿಯಂತ್ರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಂತಿದೆ. ದುಷ್ಟರ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಸಹೋದರಿಯರು ತಮ್ಮ ಸಹೋದರರಿಗೆ, ತಮ್ಮ ರಕ್ಷಕರಿಗೆ ವಿನಂತಿಸಿಕೊಳ್ಳಲು ಕಟ್ಟುವ ಕಂಕಣವೇ ಈ ರಕ್ಷಾ ಬಂಧನ. ಆದರೆ ಇಂದು ಇದನ್ನು ಕಟ್ಟಿದರೆ ಅಣ್ಣ ಎಂಬ ಅರ್ಥ ಬರುತ್ತದೆ ಅಥವಾ ಅಣ್ಣ ಎಂದಾಗುತ್ತದೆ ಎಂಬ ಭಾವ. ಹೀಗಾಗಿ ಯಾವುದಾದರು ಹುಡುಗರು ಹಿಂಬಾಲಿಸುತ್ತಿದ್ದರೆ ಅವರ ಕಾಟದಿಂದ ತಪ್ಪಿಸಿಕೊಳ್ಳಲು ರಾಖಿ ಕಟ್ಟುವ ಜಾಯಮಾನಕ್ಕೆ ತಿರುಗಿರುವುದು ಪವಿತ್ರ ರಕ್ಷಾ ಬಂಧನದ ಅರ್ಥಕ್ಕೆ ಚ್ಯುತಿ ಬಂದಂತೆ ಭಾಸವಾಗುತ್ತಿದೆ.

ಈ ರಾಖಿ ಕಟ್ಟಿದರೆ ಯಾರಾದರೂ ಸಹೋದರರಾಗುತ್ತಾರೆ ಅಂತಂದರೆ ಭಾವನೆಗೆ ಬೆಲೆ ಇಲ್ಲವೆಂದರ್ಥವೇ...? ಇದು ಸರಿಯಲ್ಲವೆನ್ನುವುದು ನನ್ನ ಭಾವನೆ. ಜನರಲ್ಲಿ ಭಾವನೆ ಇರಬೇಕು ಹಾಗಿದ್ದರೆ ಮಾತ್ರ ಯಾವುದೇ ಹಬ್ಬಕ್ಕಾಗಲಿ, ಯಾವುದೇ ಪದ್ಧತಿಗಾಗಲಿ ಒಂದು ಸಮಂಜಸ ಅರ್ಥ ಬರಲು ಸಾಧ್ಯ.

ದುಷ್ಟರಿಂದ ರಕ್ಷಣೆ ಪಡೆಯಲಿಕ್ಕೊಸ್ಕರ ತಮ್ಮ ತಮ್ಮ ಸಹೋದರರಿಗೆ & ರಕ್ಷಕರಿಗೆ ಕಂಕಣ ಕಟ್ಟಲೆಂದು ಪ್ರಾರಂಭಿಸಿದ ಪದ್ಧತಿ & ಸಂಪ್ರದಾಯ ಅದರ ಅರ್ಥ & ದಾರಿಯನ್ನು ತಪ್ಪುತ್ತಿರುವುದು ಬೇಸರದಸಂಗತಿಯಾಗಿದೆ. ರಕ್ಷಾ ಬಂಧನ ಕಟ್ಟಿದರೆ ಮಾತ್ರ ಹುಡುಗಿಯರಿಗೆ ಹುಡುಗರು ಸಹೋದರರಾಗುತ್ತಾರೆ ಎಂದಾದರೆ ರಕ್ಷಾ ಬಂಧನದ ವಾರ್ಷಿಕೊತ್ಸವವನ್ನು ಆರ್.ಎಸ್.ಎಸ್ ನಂತಹ ರಾಷ್ಟ್ರೀಯ ಸಂಘಗಳಲ್ಲಿ ಹುಡುಗರು ಹುಡುಗರಿಗೆ ಕಟ್ಟುವ ಅವಶ್ಯಕತೆ ಇಲ್ಲವಾಗಿತ್ತು. ರಾಖಿಯನ್ನು ಹುಡುಗರು ಹುಡುಗರಿಗೆ ಕಟ್ಟಿದರೆ ಕಟ್ಟಿದಂತ ಹುಡುಗರೇನು ಹುಡುಗಿಯರಾಗುತ್ತಾರೆಯೇ...? ಇಲ್ಲ, ಇದರರ್ಥವೇನೆಂದರೆ ನಮ್ಮ ರಕ್ಷಣೆಗೆ ನೀವುಗಳಿರಬೇಕು ಹಾಗೆ ನಿಮ್ಮ ರಕ್ಷಣೆಗೆ ನಾವುಗಳಿರುತ್ತೇವೆ ಎಂಬ ಸಂದೇಶವನ್ನು ರವಾನಿಸುವುದಷ್ಟೆ.

ಅದರ ಹೊರತಾಗಿ ದುಷ್ಟ ಹುಡುಗನಿಂದ ಕೊಡುವ ಕಾಟವನ್ನು ತಪ್ಪಿಸಿಕೊಳ್ಳಲು ರಕ್ಷೆಯನ್ನು ಕಟ್ಟಿ ಆ ದುಷ್ಟನನ್ನೆ ಸಹೋದರನನ್ನಾಗಿ ಮಾಡಿಕೊಳ್ಳಬೇಕೆಂಬ ಅರ್ಥವಲ್ಲ. ಹಾಗಿದ್ದರೆ ನೇರವಾಗಿ ಬರುವ ಆಪತ್ತು ಸುತ್ತುವರಿದು ಕಾಣದ ರೀತಿಯಲ್ಲಿ ಬೇರೊಂದು ದಾರಿಯಲ್ಲಿ ನಮ್ಮನ್ನು ಆವರಿಸುತ್ತದೆ. ನಮ್ಮ ಜನರ್ಯಾಕೆ ಈ ಪವಿತ್ರ ರಕ್ಷಾ ಬಂಧನದ ಪವಿತ್ರ ಬಂಧನದ ಅರ್ಥವನ್ನು ಅನರ್ಥವಾಗಿ ತಿರುಚಿಸಲು ಪ್ರಯತ್ನಿಸುತ್ತಿದ್ದಾರೋ ಎನ್ನುವುದೆ ಅರ್ಥವಾಗದೆ ಇರುವ ಪ್ರಶ್ನೆಯಾಗಿದೆ.

ಸಹೋದರಿಯ ಭಾವ ತುಂಬಿ ನೀಡುವ ಪ್ರೀತಿಗೆ ಮಿಗಿಲಾದ ಸಹೋದರಿಯ ಬಾಂಧವ್ಯವು ಮತ್ತೊಬ್ಬಳಿಂದ ಬಯಸಲಾಗದ ಸಂಬಂಧವಾಗಿರುತ್ತದೆ. ಈ ಒಳ್ಳೆಯ ಬಂಧನವು ಗಟ್ಟಿಯಾಗಿರಲೆಂಬ ಬಯಕೆಯನ್ನು ವ್ಯಕ್ತ ಪಡಿಸುವ ರೀತಿಯೆ ಈ ರಾಕ್ಷಾ ಬಂಧನದ ಹಬ್ಬ. ಆ ಶುಭ ದಿನದಂದು ದಾರ ಕಟ್ಟುವ ಮೂಲಕ ಭಾವ ವ್ಯಕ್ತ ಪದಿಸುತ್ತಾರೆ ಹೀಗಾಗಿ ಅದನು ನುಗುಲು ಹುಣ್ಣಿಮೆಯೆಂದು ಕರೆಯುತ್ತಾರೆ.