Thursday, November 28, 2013

|| ಒಲವಿನಾರೈಕೆ ||

ಹರಿವ ನೀರಿನಲಿ
ಕಲ್ಲನ್ನು ಎಸೆದು
ಕಪ್ಪೆಯನು ಹಾರಿಸುವ
ಕೈಚಳಕವು...

ಚಂದ್ರ ತೇಲುತಲಿ
ಮೂಡುವ ಬಳೆಯೊಳಗೆ
ಒಳನುಸುಳುತ ಹೊರಬರುತ
ಅಲ್ಲಾಡಿಸುವ
ಜಲಕ್ರೀಡೆಯಾಡುತಿಹನು ...

ಕೆರೆಯಲ್ಲಿ ಜರಿಯಲ್ಲಿ
ಹರಿವ ಹೊಳೆಯಲ್ಲಿ
ನೀರ ಸದ್ದಿನಲು
ಕೇಳುತಿವೆ
ಅಕ್ಕರೆಯ ಮಾತುಗಳು...

ಹನಿ ಹನಿಯಲ್ಲು
ನೆನೆದಿರುವ ಭಾವ
ಮುಸುಕಿರುವ ಮಂಜಿನಲಿ
ಪ್ರೀತಿಯ ಮಳೆಯನು
ಧಾರೆಯೆರೆಯುವೆ ತೀರದಲಿ...

ಮನಸಿನ ಗೂಡಿನಲಿ
ನಿನ್ನನ್ನು ಕೂರಿಸಿ
ಒಲವಿನಾರೈಕೆ ಮಾಡುತ
ಸಮರ್ಪಿತನಾಗುವೆನು...

Wednesday, November 20, 2013

|| ಮಧುಚಂದ್ರ ||

ಹೂವು ಅರಳಲು
ದುಂಬಿಯ ಆಗಮನ
ತುಟಿಗೆ ತುಟಿ ಚುಂಬಿಸಲು
ಕಾಯಗಳ ಆಲಿಂಗನ
ಬೆವರ ಮಳೆಯಲಿ
ಸುಖದ ಕೋಡಿ
ಸ್ಪರ್ಶ ಹರ್ಷಕೆ
ತಣಿಯುವ ದೇಹದ ಕಾವುಗಳು...

ಮಧುವನು ಹೀರಲು
ತಣ್ಣಗೆ ನಾಚುತ
ಕೂಡುವ ಕಾಲದಿ
ಎಲ್ಲವ ಮರೆಯುತ
ಬೆರೆಯುವ ದೇಹವು
ಅಪ್ಪುಗೆಯಿಂದಲಿ
ಕಂಪನ ಎದೆಯಲಿ
ಢವ ಢವ ಸದ್ದಲಿ...

ಕರಗುವ ಮನಸಿದು
ಮತ್ತೇರಿಸುತಲಿ
ಮೈ ಮರೆಸುವುದು
ಸೇರುವ ತವಕದಿ
ಕೊರೆಯುವ ಚಳಿಯಲು
ಕಾವಿನ ಕ್ಷಣಗಳು
ಸುರಿಯುವ ಮಳೆಯನು
ಬಯಸುವ ಸಮಯವಿದು...

Monday, November 18, 2013

ವಿದ್ಯಾವಂತರು ಸಹ ಅನಕ್ಷರಸ್ಥರಂತೆ ವರ್ತಿಸಲಾರಂಭಿಸಿರುವುದು ಅನಾಗರೀಕತೆಗಿದು ನಾಂದಿಯೆ...! ?

ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಗಮನಹರಿಸಿ ಅವಲೋಕಿಸಿದಾಗ ಜನರೇಕೆ ಹೀಗಾಡುತ್ತಿದ್ದಾರೆ, ಏತಕೆ ಹೀಗೆ ವರ್ತಿಸುತ್ತಿದ್ದಾರೆ ಎನ್ನುವುದು ಯೋಚಿಸ ಬೇಕಾದ ಸಂಗತಿ. ವಿದ್ಯಾವಂತರು ತುಂಬಿರುವ ನಾಡಲ್ಲಿ ಅನಕ್ಷರತೆಯನ್ನು ಹೋಗಲಾಡಿಸುವ ಹೊತ್ತಲಿ ಮನುಷ್ಯರೇಕೆ ಮನುಷ್ಯತ್ವವನ್ನು ಮರೆಯುತ್ತಿದ್ದಾರೆ ಎಂಬ ಯೋಚನೆಯ ಹಿಂದೆ ಬಿದ್ದಾಗ ಗಮನಕ್ಕೆ ಬರುವ ವಿಷಯಗಳು ಆಶ್ಚರ್ಯಕರ ವಿಪರ್ಯಾಸವೆನಿಸುತ್ತದೆ.

ಹೀಗೊಂದು ಚಿಂತನೆಯ ಬೆನ್ನ ಹತ್ತಿದರೆ ಹಲವಾರು ಸಂಗತಿಗಳು ಅನಾವರಣಗೊಳ್ಳುತ್ತದೆ. ಓದಿ ಒಳ್ಳೆಯ ಹುದ್ದೆಯಲ್ಲಿರುವ ವಿದ್ಯಾವಂತನು ಸಹ ಮಾನವೀಯತೆಯ ಸಹಜ ಧರ್ಮವನ್ನು ಮರೆತಿದ್ದಾನೆ. ವಿದ್ಯಾವಂತರಾದ ಯುವಕರು ಸಹ ಅಮಾನವೀಯ ಕೃತ್ಯವೆಸಗುತ್ತಾರೆ, ಅವಿದ್ಯಾವಂತರಂತೆ ವರ್ತಿಸುತ್ತಾರೆ ಎಂದಾಗ ಓದಿ ಗಳಿಸಿದ್ದೇನು, ಓದಿನಿಂದಾದ ಉಪಯೋಗವೇನು ಎಂಬ ತಾತ್ಪರ್ಯದ ವಿಮರ್ಶೆ ನಡೆಯುತ್ತದೆ.

ಪ್ರತಿಯೊಬ್ಬ ಮನುಷ್ಯನು ಸಹ ತನ್ನ ಸ್ವಾರ್ಥ ಸಾಧನೆಯ ಹಿಂದೆ ಬಿದ್ದು ಉಳಿದದ್ದನ್ನು ನಿರ್ಲಕ್ಷಿಸುವುದು ಸರ್ವೆಸಾಮನ್ಯ. ಆತ ವಿದ್ಯಾವಂತನಾಗಲಿ ಅವಿದ್ಯಾವಂತನಾಗಲಿ ಅದು ಬೇರೆ ಬೇರೆಯದೆ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.  ಪ್ರತಿಯೊಭ್ಬರೂ ಸಹ ದೇಶದಿಂದ ನಮಗೇನಾಗಿದೆ ಎಂದು ಆಲೋಚಿಸುತ್ತಾರೆಯೆ ಹೊರತು ನಾವು ದೇಶಕ್ಕೇನು ನೀಡಿದ್ದೇವೆ ಎಂದು ಯೋಚಿಸುವುದಿಲ್ಲ.  ಒಬ್ಬೊಬ್ಬ ಪ್ರಜೆಯು ಸಹ ಸಂಪನ್ಮೂಲಗಳ ಸದುಪಯೋಗಕ್ಕೆ ಪ್ರಾಮುಖ್ಯತೆಯನ್ನು ನೀಡಿ ಸ್ವಲ್ಪ ಮಾತ್ರವನ್ನೆ ಉಳಿಸಿದರು ಅದು ಹನಿ ಹನಿ ಸೇರಿ ಹಳ್ಳವಾದಂತೆ ದೇಶಕ್ಕೆ ಕೊಡುಗೆಯಾಗಿ ಮಾರ್ಪಡುತ್ತದೆ.

ಇಂದಿನ ವಿದ್ಯಮಾನ ಹೇಗಾಗಿದೆಯೆಂದರೆ ಪ್ರತಿಯೊಬ್ಬನು ಓದಬೇಕು, ಇದು ಸ್ವೀಕೃತವಾಗಿರುವಂಥದ್ದು. ಯಾಕೆಂದರೆ ವಿದ್ಯೆ ಇಲ್ಲದ ಬಾಳು ಹದ್ದಿಗಿಂತಲು ಕಡೆ ಎಂಬ ನಾಣ್ನುಡಿಯಂತೆ ಪ್ರತಿಯೊಬ್ಬನು ಅಕ್ಷರಸ್ಥನಾಗ ಬೇಕಿರುವುದು ಅವಶ್ಯಕ. ಆದರೆ ಓದಿದವನೆಲ್ಲವನು ಬರೆ ಕಂಪನಿಯ ಉದ್ಯೋಗಸ್ಥನಾಗ ಬೇಕೆನ್ನುವುದು ಸರಿಯಲ್ಲ. ಕೃಷಿಕ ವೃತ್ತಿಯನ್ನು ಬಿಟ್ಟು ಬರೆ ಬೇರೆ ಉದ್ಯೋಗ ಮಾಡಲು ಪ್ರಾರಂಬಿಸಿದರೆ ಮುಂದೊಂದು ದಿನ ಕೃಷಿ ಮಾಡಲು ಜನರಿಲ್ಲದೆ ಉದ್ಯೋಗ ಲಭಿಸದೆ ನಿರುದ್ಯೋಗ ತಾಂಡವವಾಡುವುದು ಮತ್ತು ಆಹಾರಕ್ಕೆಂದು ಹಣವನ್ನೆ ತಿನ್ನಬೇಕಾದ ಪರಿಸ್ಥಿತಿ ಬರಬಹುದು.

ಹೀಗೆ ಮುಂದುವರಿದರೆ ಬೆಳೆಯಿಲ್ಲದೆ ಆಹಾರ ಲಭಿಸದೆ ಶಾಖಾಹಾರಿಯು ಸಹ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದುತಿಂದು ಹಸಿವನ್ನು ನೀಗಿಸಕೊಳ್ಳಬಹುದು ಆದರೆ ಅದು ಸಹ ಹೆಚ್ಛುಕಾಲ ನಡೆಯುವುದಿಲ್ಲ ಯಾಕೆಂದರೆ ನಾವೀಗಲೆ ಪ್ರಾಣಿಗಳ ಅವಸಾನಕ್ಕೆ ಕಾರಣವಾಗಿತ್ತಿದ್ದೇವೆ. ಅಳಿವಿನಂಚಿನಲ್ಲಿರುವ ಪ್ರಾಣಿ ವರ್ಗಗಳು ಮಾಯವಾಗಿ ತಿನ್ನುವ ಆಹಾರಕ್ಕು ಹಪತಪಿಸುವ ಹಾಗಾಗುತ್ತದೆ.

ಹಸಿವಿನ ಹಾಹಾಕಾರಕ್ಕಾಗಿ ತಿನ್ನಲೇನು ಸಿಗದೆ ಈ ಕುಲು ಮಾನವ ನರಭಕ್ಷಕನಾಗಿ ಬಲವಂಥರು ಮಾತ್ರ ಜೀವಿಸುತ್ತ ಮಾನವ ಸಂತತಿ ನಾಶವಾಗಿ ಅನಾಗರೀಕತೆಯು ತಲೆದೋರಿರುತ್ತದೆ. ಇವನ್ನೆಲ್ಲ ಅವಲೋಕಿಸಿದಾಗ ಕೃಷಿಯನ್ನು ಕಡೆಗೆಣಿಸುವುದೆಷ್ಟು ಸರಿ ಎಂಬ ವಿಚಾರವನ್ನು ನಮ್ಮ ಬುದ್ಧಿಮತ್ತೆಯ ಓರೆಗಲ್ಲಿಗೆ ಹಾಕುವುದು ಸೂಕ್ತ.

ವಿದ್ಯಾವಂಥ ನಾಗರೀಕರೆ ಇಂದು ದುಂದುವೆಚ್ಛ ಮಾಡುವಲ್ಲಿ ಮೊದಲಿಗರು. ನಮ್ಮ ಸಂಪನ್ಮೂಲಗಳ ಅವನತಿಗೆ ಕಾರಣೀಭೂತರು ಎಂದರೆ ತಪ್ಪಾಗಲಾರದು. ಏಕೆಂದರೆ ನಮ್ಮಲ್ಲಿ ತಲೆದೊರುತ್ತಿರುವ ಅವಶ್ಯಕತೆಗಳ ಕೊರತೆಗೆ ಇವರು ಮಾಡುವ ನಿಷ್ಕಾಳಜಿಯುತ ಬಳಕೆಯೆ ಮೂಲವಾಗಿದೆ. ಅವುಗಳು ವಿದ್ಯುತ್ ಬಳಕೆಯಲ್ಲಿರಲಿ, ಜಲ ಸಂಪನ್ಮೂಲದಲ್ಲಿರಲಿ, ಬೇರಾವುದೇ ಅವಶ್ಯಕತೆಯಲ್ಲಾದರೂ ಇವರೆ ನೇರ ಹೊಣೆಗಾರರಾಗಿರುತ್ತಾರೆ.

ಬೇರೆಯವರು ಬರುವ ವಿದ್ಯುತ್ ಬಿಲ್ಲನ್ನು ತುಂಬುವವರಾಗಿದ್ದರೆ ಮನಸಿಚ್ಛೆಯಂತೆ ಬಳಸುತ್ತ ಅನಾವಶ್ಯಕವಾಗಿ ಕಂಡ ಕಂಡಲ್ಲಿ ವಿದ್ಯುತ್ ದೀಪ ಉರಿಸುತ್ತ ನಿಷ್ಕಾಳಜಿಯುತರಾಗಿರುತ್ತಾರೆ. ಅನಾವಶ್ಯಕವಾಗಿರುವ ದೀಪ ನಂದಿಸಿ ಹನಿ ಹನಿ ಕೂಡಿ ಹಳ್ಳವಾದಂತೆ ಹಳ್ಳಿಗಳಲ್ಲಿ ವಿದ್ಯುತ್ ಕೋತ ಅನುಭವಿಸುತ್ತಿರುವ ಪ್ರಜೆಗಳಿಗೆ ನೆರವಾಗುವುದನ್ನು ಮರೆತು ಮೆರೆಯುತ್ತಾರೆ. ಹಾಗೆ ನೀರನ್ನು ಸಹ ವ್ಯತಿರಿಕ್ತವಾಗಿ ಉಪಯೋಗಿಸಿ ಪೊಲು ಮಾಡುವವರು ಬಹಳಷ್ಟಿದ್ದಾರೆ. ಈಗಾಗಲೆ ನೀರಿನ ಮಟ್ಟ ಕುಸಿದಿದ್ದು ಮುಂದೊದಗುವ ಪರಿಣಾಮವನ್ನು ಲೆಕ್ಕಿಸದೆ ವ್ಯಯಿಸುತ್ತಿರುವುದು ಅಮಾನುಷ ಕೃತ್ಯವಾಗಿದೆ.

ಅಷ್ಟೇ ಅಲ್ಲದೆ, ಊಟ ಮಾಡುವಾಗ ತಿನ್ನುವ ಆಹಾರವನ್ನು ತಿನ್ನುವುದಕ್ಕಿಂತ ಹಾಳುಮಾಡುವುದೆ ಜಾಸ್ತಿಯಾಗಿದೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮತ್ತೆ ಕೆಲವು ದಿನಚರಿಯ ಔತಣಕೂಟದಲ್ಲಿಯು ಸಹ ಅನ್ನ ಹಾಗೂ ಇತರೆ ತಿನಿಸನ್ನು ತಾನು ದೊಡ್ಡವನೆಂದು ತೊರಿಸಿಕೊಳ್ಳುವುದಕ್ಕೋಸ್ಕರ ಬಟ್ಟಲಿನಲ್ಲಿಯೇ ಹಾಳು ಮಾಡುತ್ತಿರುವುದನ್ನು ನೋಡಿದರೆ ಅಸಹ್ಯವೆನಿಸುತ್ತದೆ.

ಹೀಗೆ ಹಾಳುಮಾಡಿ ಎಲ್ಲವನ್ನು ವ್ಯಯಿಸುತ್ತಾ ವಿನಾಶದೆಡೆಗೆ ಕೊಂಡೊಯ್ದು ಮುಂದಿನ ಪೀಳಿಗೆಯವರು ಇತಿಹಾಸದಲ್ಲಿ ಓದಿ ತಿಳಿಯುವಂತೆ ಮಾಡುವ ದರಿದ್ರ ಕೆಲಸಕ್ಕೆ ಮುಂದಾಗಿರುವುದು ಖಂಡನೀಯವಾಗಿದೆ. ಗಮನಿಸಿ ತಿಳಿಯಬೇಕಾಗಿದ್ದು ಇವೆಲ್ಲವು ವಿದ್ಯಾವಂಥರೆಂಬ ಹಣೆಪಟ್ಟಿಧರಿಸಿದವರಿಂದಲೆ ಆಗುತ್ತಿರುವುದು ವಿಷಾದನೀಯ ಸಂಗತಿ. ಹೀಗೆ ಮುನ್ನೆಡೆದರೆ ಇದು ಅನಾಗರೀಕತೆಗೆ ಮುನ್ನುಡಿ ಬರೆಯುವ ಚಟುವಟಿಕೆಯಾಗುವುದರಲ್ಲಿ ಅನುಮಾನವಿಲ್ಲ. ಹೇಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವುದೋ ಹಾಗೆ ಕಾಲಚಕ್ರ ಸಹ ತಿರುಗಿ ನಾಗರೀಕನಾಗಿರುವ ಮನುಜನನ್ನು ಮತ್ತೆ ಪುನಃ ಅನಾಗರೀಕತೆಯತ್ತ ಕೊಂಡೊಯ್ಯುವ ಕಾಲ ಸಮೀಪಿಸುತ್ತಿದೆಯೇನೊ ಎಂಬ ಆತಂಕ ಮೂಡುತ್ತಿದೆ. ಅಕ್ಷರಸ್ಥರಾಗಿರುವ ನಾವು ಇಂತಹ ಪರಿಸ್ಥಿತಿಯಲ್ಲಿ ಅನವಶ್ಯಕವಾಗಿ ಒದಗಿರುವ ಸಂಪನ್ಮೂಲಗಳನ್ನು ಪೋಲು ಮಾಡುವುದನ್ನು ಸ್ವಯಂಪ್ರೇರಿತರಾಗಿ ತಡೆದು ಸದುಪಯೋಗ ಪಡಿಸಿಕೊಳ್ಳುವುತ್ತ ಹೆಜ್ಜೆ ಹಾಕೋಣ.

Friday, November 15, 2013

|| ಅನುರಾಗ ||

ಸೋತ ಕ್ಷಣಕೆ
ಸೇರೊ ಮನಸು
ನಲಿವಿನಾಸೆಯಲಿ...

ಹೊಮ್ಮುವುದು
ಮನದ ಪ್ರೀತಿ
ಕಾಳಜಿ ಮಾಡುತಲಿ...

ಹೃದಯದೊಳಗೆ
ಒಲವ ನೆತ್ತರು
ಪ್ರೇಮಿ ಹೆಸರ ಬರೆಯಲು...

ನೀನೆ ನನ್ನ
ಬದುಕು ಎಂದು
ಜೀವ ಭಾವವ ಅರ್ಪಿಸಲು...

ತೊಡಕು ಕಾಣದ
ಅನುರಾಗದಲ್ಲಿ
ಶೃಂಗಾರ ಕಾವ್ಯ ಬಾಳಿನಲ್ಲಿ...

Wednesday, November 13, 2013

...ನನಗೆ ನಾ ಮಾಡಿದ್ದೇ ಸರಿ...

ನಮ್ಮ ಯೋಚನಾ ಶಕ್ತಿಯು ಸದಾ ಸ್ವಾರ್ಥ ಹಿತಾಸಕ್ತಿಯನ್ನೆ ಬಯಸುತ್ತಿರುತ್ತದೆ. ಒಳಿತಿನ ಮಜಲಿನಲ್ಲಿ ಮೇಲೇರುವ ಕನಸನ್ನು ಕಾಣುತ್ತ, ನಾ ಮಾಡಿದ್ದೇ ಸರಿ ಎನ್ನುತ್ತ ಮುಂದೆ ಸಾಗುವುದು ಮನುಜನ ಸಹಜ ಗುಣವಾಗಿದೆ. ನನಗೆ ನಾ ಮಾಡಿದ್ದೇ ಸರಿ ಎನ್ನುವುದು ಧನಾತ್ಮಕ ಮತ್ತು ಋಣಾತ್ಮಕ ಎಂಬ ಎರಡು ಚಿಂತನೆಯನ್ನು ಹೊಂದಿದ್ದು ಅವುಗಳನ್ನು ವಿಶ್ಲೇಷಿಸೋಣ.

ನಮಗೆ ನಾವು ಮಾಡುತ್ತಿರುವುದು ಸರಿ ಎಂದು ಅನಿಸುವುದು ಸಹಜ. ಅದೇ ರೀತಿ ಬೇರೆಯವರು ಮಾಡಿದ ಕೆಲಸದಲ್ಲಿ ತಪ್ಪು ಹುಡುಕುವುದು, ತಪ್ಪು ಇರದಿದ್ದರೂ ಅದು ತಪ್ಪು ಇದು ತಪ್ಪು ಎಂದು ಕ್ಯಾತೆ ತೆಗೆಯುವುದು ಮಾನವ ಗುಣ. ಬೇರೆಯವರು ಮಾಡುವ ಕೆಲಸದಲ್ಲಿ ಅದು ಸರಿಯಿಲ್ಲವೆನ್ನುತ್ತ ನಿಂದಿಸುವುದು, ಅವಹೇಳನ ಮಾಡುವುದು, ಅವಮಾನಿಸುವುದು ತಾ ಮಾಡುವುದು ಸರಿ ಎಂಬ ಅಹಂಕಾರದ ದರ್ಪ.

ನಾವು ಮಾಡುವ ಕೆಲಸದ ಮೇಲೆ ನಂಬಿಕೆಯನ್ನಿಟ್ಟು ಮುನ್ನುಗ್ಗುವುದು ಧನಾತ್ಮಕ ಚಿಂತನೆಯಾದರೆ, ಒಳ್ಳೆಯ ಉದ್ದೇಶವಾದರೆ ಅದು ಆತ್ಮವಿಶ್ವಾಸದ ಎತ್ತರದ ಮಟ್ಟವಾಗಿರುತ್ತದೆ. ಒಂದು ಒಳ್ಳೆಯ ಕೆಲಸ ಮಾಡುವಾಗ ಸರಿಯಾದುದನ್ನು ಯೋಚಿಸಿ ಬೇರೆಯವರ ಮಾತಿಗೆ ಮಣೆ ಹಾಕದೆ ಗಾಢನಂಬಿಕೆಯಿಂದ ಕಾರ್ಯ ಸಾಧನೆ ಮಾಡುವುದು ನಮಗೆ ಮತ್ತು ಪರರಿಗೆ ಒಳಿತನ್ನು ಮಾಡುತ್ತದೆ.

ಬರೆ ಸ್ವಾರ್ಥ ಸಾಧನೆ, ಪರರಿಗೆ ಉಪದ್ರವ ನೀಡುವ ಕೆಲಸ, ತಾನು ಮತ್ತು ತನ್ನವರ ಒಳಿತನ್ನು ಬಯಸುತ್ತ ಪರರನ್ನು ನಿಂದಿಸುವುದು ಅಹಿಂಸಾತ್ಮಕ ಹಿಂಸಾಚಾರವಾಗಿರುತ್ತದೆ. ಎಲ್ಲರು ತನ್ನ ಕೇಳಿಯೆ ಮುನ್ನಡೆಯಬೇಕು ಸಮಸ್ತ ಆಗು ಹೋಗುಗಳೆಲ್ಲವು ತನ್ನಿಂದಲೆ ನಡೆಯಿತು ಎನ್ನುವಂತಾಗಬೇಕೆನ್ನುವ ವ್ಯಕ್ತಿತ್ವ ಜಗಳಕೆ ಕಾರಣವಾಗುತ್ತದೆಯೆ ಹೊರತು ನೆಮ್ಮದಿಯನ್ನು ನೀಡುವುದಿಲ್ಲ. ತಾನು ಏನುಬೇಕಾದರು ಮಾಡಬಹುದು, ಯಾರ ಹತ್ತಿರವಾದರು ಮಾತಾಡಬಹುದು ಆದರೆ ಪರರು ತಾ ನುಡಿದಂತೆ ನೆಡೆಯಬೇಕು ಎಂಬ ಕಟ್ಟಾಚಾರಗಳು ಕುಟುಂಬದಲ್ಲಿ, ಗುಂಪುಗಳಲ್ಲಿ, ಸಾರ್ವಜನಿಕ ಕ್ಷೇತ್ರಗಳಲ್ಲಿ ವಾಗ್ವಾದಕ್ಕೆ, ಮನಸ್ತಾಪಕ್ಕೆ ಕಾರಣವಾಗುತ್ತದೆ.

ಎಲ್ಲರಿಗು ಅವರವರ ಮೂಗಿನ ನೇರಕ್ಕೆ ತಮಗೆ ತಾವು ಮಾಡಿದ್ದೆ ಸರಿ ಎನಿಸಿರುತ್ತದೆ ಹಾಗಾಗಿ ಅದನ್ನೆ ಮುಂದುವರೆಸುತ್ತಾರೆ. ಅದರೆ ಅದು ಬೇರೆಯವರ ದೃಷ್ಠಿಯಲ್ಲಿ ತಪ್ಪಾಗಿಯೆ ಇರುತ್ತದೆ. ಎಲ್ಲರಿಗು ಸರಿ ಮಾಡಲು ಸ್ವತಃ ಪರಮಾತ್ಮನಿಗೆ ಸಾಧ್ಯವಿಲ್ಲವಂತೆ ಹೀಗಿರುವಾಗ ಕೇವಲ ಮನುಷ್ಯರಾದಂತಹ ನಾವು ಎಲ್ಲರಿಗೆ ಸರಿ ಮಾಡಲು ಸಾಧ್ಯವಾಗದ ಮಾತು. ಕನಿಷ್ಠಪಕ್ಷ ನಾವು ನಮ್ಮವರಿಗೆ, ನಮ್ಮ ಕುಟುಂಬದವರಿಗೆ, ನಮ್ಮ ಹಿತವನ್ನು ಬಯಸುವವರಿಗೆ, ನಮ್ಮ ಜೊತೆಯಿರುವವರಿಗೆ ಸರಿಯಾಗುವಂತೆ ಮಾಡುವುದು ಮನುಜ ಧರ್ಮವಾಗಿರುತ್ತದೆ.

ತಾನೆ ಶ್ರೇಷ್ಟ, ಎಲ್ಲವು ತನ್ನಣಿಯಂತೆ ನಡೆಯಬೇಕು, ತನ್ನ ಪರವಾನಗಿ ಇಲ್ಲದೆ ಹುಲ್ಲ ಕಡ್ಡಿ ಚಲಿಸ ಬಾರದು ಎಂಬ ದುರಾಲೋಚನೆ ಮನುಜನನ್ನು ಏಕಾಂಗಿಯನ್ನಾಗಿ ಮಾಡುತ್ತದೆಯೆ ಹೊರತು ಸಂಗ ಜೀವಿಯನ್ನಾಗಿ ಮಾಡದು. ಸರ್ವರನ್ನು ಒಗ್ಗೂಡಿಕೊಂಡು ಆತ್ಮವಿಶ್ವಾಸದಲಿ ಎದುರಿಸುವ ಚಾಣಾಕ್ಯತನದ ಅಗತ್ಯತೆಯು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ಮಾಡುತ್ತದೆ. ಹಾಗಾಗಿ ನನಗೆ ನಾ ಮಾಡಿದ್ದೇ ಸರಿ ಎಂಬ ಆತ್ಮವಿಶ್ವಾಸವಿರಬೇಕೆ ಹೊರತು ದುರಾಲೋಚನೆಯ ಅಹಂಕಾರವವಿರಬಾರದು.

Saturday, November 9, 2013

|| ಏನಿಲ್ಲ ||

ಹುಟ್ಟಿದವ ಬೆಳೆದು ಹಣ್ಣಾಗ ಬೇಕು
ಸತ್ತಾಗ ಸ್ಮಶಾನ ಸೇರಲೆ ಬೇಕು
ಬಾಳಲಿ ಏನಿದೆ ಎಂದು ಯೋಚಿಸು
ಜಗಳ ಮಾಡದೆ ಜಗವ ಪ್ರೀತಿಸು ||

ನಿನ್ನ ಉಳಿವು ಹರಣದಲ್ಲಿ
ನಿನ್ನ ಅಳಿವು ಮರಣದಲ್ಲಿ
ನಿನ್ನ ಗುರುತು ಚರಣದಲ್ಲಿ
ಬದುಕು ಮೂರು ದಿನಗಳಲ್ಲಿ ||

ಮನಸಿನೊಳಗೆ ಬದುಕ ಯುಕ್ತಿ
ಶಾಂತತೆಗೆ ಧ್ಯಾನದ ಭಕ್ತಿ
ಹೋರಾಟಕೆ ತೋಳಿನ ಶಕ್ತಿ
ಹೊಂದುವೆನು ಜೀವನ ಮುಕ್ತಿ ||

ಜೀವಬಂದಾಗ ತೊಂದರೆಯ ಆರಂಭ
ಒಳಿತಿಗಾಗಿ ಇಚ್ಛಿಸುವ ಆಧಾರ ಕಂಬ
ಇಲ್ಲದಿರುವುದನು ಬಯಸುತ ಬಾಳಲು
ಕಾಣದ ದೈವವ ಪ್ರಾರ್ಥಿಸುತ ಬೇಡುವುದು ||