Friday, October 4, 2013

...ಆಚಾರ ಅನಾಚಾರಗಳ ನಡುವಿನಲ್ಲಿ ಸಂಪ್ರದಾಯದ ವಿಚಾರ...

ನಮ್ಮ ಧರ್ಮ, ನಮ್ಮ ಜಾತಿ, ನಮ್ಮ ಹರಕೆ ಮತ್ತು ನಮ್ಮ ಅನುಷ್ಠಾನಗಳ ಪ್ರಕಾರ ನಾವು ಅನುಸರಿಸುವ ನೀತಿಗಳನ್ನ, ನಂಬಿಕೆಗಳನ್ನ, ಬದ್ಧತೆಗಳನ್ನ ಸಂಪ್ರದಾಯದವೆಂದು ಕರೆದಿದ್ದಾರೆ. ಇವುಗಳನ್ನ ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿ ಅನುಸರಿಸುವುದು ಆಚಾರವೆ? ಅನಾಚಾರವೆ? ಎನ್ನುವುದು ವಿಚಾರಕ್ಕೆ ಬರುವ ಸಂಗತಿ. ಹಿಂಬಾಲಕರಾಗಿ ನಾವು ಅನುಸರಿಸುವ ಸಂಪ್ರದಾಯಗಳು ಎಷ್ಟರಮಟ್ಟಿಗೆ ಸರಿಯಾದುದು? ಮೂಡನಂಬಿಕೆಗಳಾವವು? ಯಾವುದು ಸರಿ? ಯಾವುದು ತಪ್ಪು? ಎಂಬ ವಿಚಾರಗಳ ಬಗ್ಗೆ ಚಿಕ್ಕ ಆತ್ಮಾವಲೋಕನ ಮಾಡಿಕೊಂಡಾಗ ತರ್ಕಗಳು ಸ್ಮೃತಿಗೆ ಬರುತ್ತವೆ.

ನಮ್ಮ ಹಿರಿಯರು ಮಾಡಿರುವುದೆಲ್ಲ ಶೋಷಣೆ ಮಾಡುವ ತರಹದ ಸಂಪ್ರದಾಯಗಳೆನ್ನುವುದು ನಮ್ಮ ಇಂದಿನ ಬುದ್ಧಿವಂತರೆಂದು ಕರೆಸುಕೊಳ್ಳುವ ಧೀಮಂತರ ವಾದ. ಹೀಗೆಂದ ಮಾತ್ರಕೆ ಹಿರಿಯರಿಗೆಲ್ಲ ಬುದ್ಧಿಯಿಲ್ಲವಾಗಿತ್ತೇ? ಅಥವಾ ನಮ್ಮ ಆಧುನಿಕ ಪೀಳಿಗೆಯವರಂಥ ವಿಚಾರ ಶಕ್ತಿಯಿಲ್ಲವಾಗಿತ್ತೇ? ಎನ್ನುವುದು ನಾವು ಅನುಮಾನಿಸಿ ರಾಮರ್ಶಿಸ ಬೇಕಾದುದೇ ಎನ್ನುವ ವಿವೇಚನೆಯಲ್ಲಿದ್ದೇವೆ.

ಹಿರಿಯರು ಮಾಡಿದ ರಸ್ತೆಗಳನ್ನು ನಾವು ಒಪ್ಪಿಕೊಳ್ಳುವ ಹಾಗೆ ಅವರು ಮಾಡಿದ ಸಂಪ್ರದಾಯಗಳನ್ನು ಒಪ್ಪಿಕೊಳ್ಳಬೇಕಾದುದು ನಮ್ಮ ಧರ್ಮ. ಅವರು ಮಾಡಿದ ರಸ್ತೆಗಳಿಗೆ ಹೊಸದಾದ ರೂಪ ನೀಡಿರಬಹುದು ಆದರೆ ಅವುಗಳನ್ನ ಬದಲಾಯಿಸಲಿಕ್ಕಾಗಲಿಲ್ಲ. ರಸ್ತೆಗಳ ಆದಿ ಮತ್ತು ಅಂತ್ಯ ಬದಲಾಗದ ಮೇಲೆ ಅವರು ಹೇಳಿದ ರೀತಿ ನೀತಿಗಳು ಅನುಸರಣೀಯವಾದುದು. ಅನುಸರಿಸುವ ಬದಲು ಅನುಕರಣೆ ಮಾಡಿ ವ್ಯಂಗ್ಯವಾಡುವುದು ಸಂಸ್ಕಾರವಿಲ್ಲದ ಸಂಚಾರಿಗಳ ಧಿಮಾಕು.

ಸಂಪ್ರದಾಯದ ಹೆಸರಿನಲ್ಲಿ ಅವರು ತಿಳಿಸಿದ ಸಲಹೆಗಳು ಉತ್ತಮ ಆರೋಗ್ಯಕ್ಕೆ ಬೇಕಾದುದು ಎನ್ನುವುದನ್ನ ನಾವು ಅರ್ಥೈಸಿಕೊಳ್ಳದೆ ಮೂದಲಿಸುವುದು ಸರಿಯಲ್ಲ. ಅಂತಹ ಕೆಲವೊಂದು ನೀತಿಗಳನ್ನ ಪರಾಮರ್ಶಿಸೋಣ. ಕುಳಿತು ಮೂತ್ರ ವಿಸರ್ಜಿಸಬೇಕು, ಕುಳಿತು ನೀರು ಕುಡಿಯಬೇಕು ಎನ್ನುವುದು ನಮ್ಮ ಕಿಡ್ನಿಯ ಮೇಲಾಗುವ ಹೊಡೆತವನ್ನು ತಪ್ಪಿಸಲಿಕ್ಕೆನ್ನುವುದು ಅದರ ಹಿಂದಿರುವ ಮೂಲ ತತ್ವ. ಮೂಗಿತಿ, ಓಲೆ, ಕಾಲಂಗುರಗಳನ್ನು ಸ್ತ್ರೀಯರು ಧರಿಸಬೇಕೆನ್ನುವುದು ಯಾವುದೇ ಕಟ್ಟುಪಾಡುಗಳೆಲ್ಲ ಬದಲಾಗಿ ಅವರ ಗರ್ಭಕೋಶದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲೆನ್ನುವುದು ನಮ್ಮ ಯುವ ಪೀಳಿಗೆಗೆ ತಿಳಿಯದೆ ಜರಿಯುವುದು ಕ್ರಮವಲ್ಲ.

ಮೂಢನಂಬಿಕೆ ಎನ್ನುವುದು ನಂತರದ ವಿಷಯ. ಸರಿಯಾದ ನಂಬಿಕೆಯನ್ನ ನಂತರದ ಜನತೆಯು ಮಾರ್ಪಡಿಸಿ ತಮಗೆ ಬೇಕಾದಂತೆ ಅನುಕೂಲವಾಗುವ ರೀತಿಯಲಿ ಮಾಡಿದ ನೀತಿಗಳೇ ಇಂದು ಮೂಢನಂಬಿಕೆಯೆಂದು ಕರೆಯಲ್ಪಡುವ ಬೊಡ್ಡು ಸಂಪ್ರದಾಯ. ಹೀಗೆಂದ ಮಾತ್ರಕೆ ಬೊಡ್ಡು ಸಂಪ್ರದಾಯಗಳ ಹಿಂದಿನ ಮೂಲಧಾತುವನ್ನು ಯಾರು ವಿಚಾರಿಸದೆ ಅವಹೇಳನ ಮಾಡುವುದು ಪ್ರಜ್ಞಾವಂತಿಕೆಯಲ್ಲ. ಮೂಢನಂಬಿಕೆಯ ಜೊತೆಯಲ್ಲೆ ನಂಬುವಂತಹ ವಿಚಾರ, ಸತ್ವ ಇದೆ ಎನ್ನುವುದನ್ನ ಶಬ್ಧವೆ ಹೇಳುತ್ತದೆ. ಮೂಢನಂಬಿಕೆಯನ್ನು ವಿಂಗಡಿಸಿದಾಗ ಮೂಢ+ನಂಬಿಕೆ ಎಂದಾಗುತ್ತದೆ. ಮೂಢ ಎಂಬ ಪದದ ಹಿಂದೆ ನಂಬಿಕೆ ಎಂಬ ಶಬ್ಧ ಇರುವ ಹಾಗೆ ಮೂಢನಂಬಿಕೆಯ ಹಿಂದೆ ನಂಬಲರ್ಹವಾದ ವಿಷಯವಿದೆಯೆಂಬುದನ್ನ ವಿಚಾರಿಸದೆ ಅವಿವೇಕಿಗಳ ಹಾಗೆ ಮಾತನಾಡುವುದು ಸಮಂಜಸವಲ್ಲ.

ಕೆಲವೊಂದು ಸಂಪ್ರದಾಯಗಳು ದಿಕ್ಕು ತಪ್ಪಿರುವಂತೆ ಭಾಸವಾದರು, ಅವುಗಳ ಬದಲಾವಣೆಗೆ ಮಾನವನ ಅವಶ್ಯಕತೆಯೆ ಕಾರಣ ಎನ್ನುವುದು ತಿಳಿಯ ಬೇಕಾದುದಾಗಿದೆ. ವರ್ತಮಾನದ ಅನುಕೂಲಕ್ಕೆತಕ್ಕಂತೆ ಮಾನವನ ಸ್ವಾರ್ಥ ಸಾಧನೆಗೆಂದು ಸಂಪ್ರದಾಯಗಳನ್ನ ಮಾರ್ಪಡಿಸಿ ಮತ್ತು ಹೊಸ ಸಂಪ್ರದಾಯಗಳನ್ನ ರಚಿಸಿ ಇಂದು ನಾವುಗಳು ಅವುಗಳನ್ನ ನಿಂದಿಸಿ ದೂರಾಗಿಸುವಂತೆ ಆಗಿವೆಯೆ ಹೊರತು ಹಳಬರು ಮಾಡಿದ ಮೂಲ ಸಂಪ್ರದಾಯಗಳಿಂದಲ್ಲ ಎನ್ನುವುದು ಸ್ಪಷ್ಟವಾಗುತ್ತದೆಅಲ್ಲದೆ ಬೊಡ್ಡು ಸಂಪ್ರದಾಯಗಳ ಹೆಸರಿನಿಂದ ಸ್ತ್ರೀಯರಿಗಾಗಲಿ, ಮಕ್ಕಳಿಗಾಗಲಿ ಅಥವಾ ಭಾವರ್ಥಿಗಳಿಗಾಗಲಿ ಕಿರುಕುಳ ನೀಡುವುದು ಪ್ರಶಂಸನೀಯ ಕೃತ್ಯವಲ್ಲ. ಇಂಥವುಗಳನ್ನ ಖಂಡಿಸಲ್ಲಿಕ್ಕೆಂದು ನಮ್ಮ ಯುವ ಪೀಳಿಗೆ ಪುಟಿದೆದ್ದು ಸಂಪ್ರದಾಯಗಳೆಲ್ಲ ಅರ್ಥವಿಲ್ಲದ್ದೆಂದು ನಿರ್ಲಕ್ಷಿಸುತ್ತಿರುವುದು ಮತ್ತು ಅವುಗಳ ಅವನತಿಗೆ ಕಾರವಾಗಿರುವುದು.

ನಮ್ಮಲ್ಲೇನಾಗಿದೆಯೆಂದರೆ ಅದನ್ನು ಮಾಡಬೇಕು, ಇದನ್ನ ಮಾಡಬಾರದು, ಹೀಗೆ ಇರಬೇಕು, ಹಾಗೆ ಇರಬಾರದು ಎಂದು ಹೇಳುತ್ತಾರೆಯೆ ಹೊರತು ಅದಕ್ಕೆ ಸ್ಪಷ್ಟ ಕಾರಣ ನೀಡದಿರುವುದು ಸಂಪ್ರದಾಯಗಳು ಬೊಡ್ಡಾಗುತ್ತಿವೆ. ಏಕೆ ಮಾಡಬೇಕು? ಏಕೆ ಮಾಡ್ಬಾರದು? ಎಂಬ ಪ್ರಶ್ನೆಗೆ ಉತ್ತರ ಸಿಗದಿರುವುದು ಪೂರ್ವಾಚರಗಳನ್ನ ಅಲಕ್ಷ್ಯ ಮಾಡಲು ಕಾರಣಗಳಾಗಿವೆ. ಅದು ಹೇಗಾಗಿದೆಯೆಂದರೆ ಅಪ್ಪ ಹಗ್ಗ ಹಾಕಿಕೊಂಡ ಮರಕ್ಕೆ ಮಗನು ಹಗ್ಗ ಹಾಕಿಕೊಳ್ಳಬೇಕೆಂತಾಗಿರುವುದು ಹಾಸ್ಯಾಸ್ಪದ. ಪಾರದರ್ಶಕತೆಯಿಂದ ಮಾತ್ರ ನಂಬಿಕೆಗೆ ಅರ್ಹವಾಗುವುದು. ಸಂಪ್ರದಾಯಗಳು ಆಚಾರವನ್ನು ಹೊಂದಿದೆಯೆ ಹೊರತು ಅನಾಚಾರಗಳನ್ನಲ್ಲ ಎಂಬ ವಿಚಾರ ನಿಚ್ಚಳವಾಗಬೇಕಿದೆ.

ಹಳೆಯವರು ಮಾಡಿದ ಸಂಪ್ರದಾಯದ ಹಿಂದೆ ಒಂದೊಂದು ವಿವೇಚನಾ ತತ್ವ ಅಡಗಿದೆ. ಈಗಿನ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಅದರ ಹಿಂದೆ ನಮ್ಮ ಹಿರಿಯವರು ಹೇಳಿದ ತತ್ವಗಳ ಮೂಲ ಅಡಗಿದೆ ಎನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ. ವಿಮಾನಯಾನ ಪುಷ್ಪಕವಿಮಾನದ ಬಳುವಳಿ ಎಂಬಂತೆ ಅವರು ಮಾಡಿದ ಪ್ರತಿಯೊಂದು ಸಂಪ್ರದಾಯದ ಹಿಂದು ಅರ್ಥಪೂರ್ಣವಾದ ಸಂಗತಿ ಅಡಗಿದೆ ಎನ್ನುವುದು ಗಣನೆಗೆ ತೆಗೆದುಕೊಳ್ಳಬೇಕಾದ ಮತ್ತು ಅನುಸರಿಸಬೇಕಾದ ವಿಷಯ. ಸಂಪ್ರದಾಯಗಳೆಂದರೆ ಕಟ್ಟು ಪಾಡುಗಳಲ್ಲ ಬದಲಿಗೆ ಅದೊಂದು ನೀತಿ. ಪ್ರತಿಯೊಂದು ಸಂಪ್ರದಾಯದ ಹಿಂದೊಂದು ಸತ್ಯ ಅಡಗಿದೆ. ಸತ್ಯದ ಅರಿವಾಗದೆ ಅವುಗಳು ಸರಿಯಿಲ್ಲವೆಂದು ಅಲ್ಲಗೆಳೆಯುವುದು ಸರಿಯಲ್ಲ. ಶೋಷಿತ ಸಂಪ್ರದಾಯಗಳನ್ನ ತೊರೆದು ಸರಿಯಾದುದನ್ನು ಪಾಲಿಸಬೇಕು.  

ನಮ್ಮ ಅನುಕೂಲಕ್ಕೆ, ನಮ್ಮ ದರ್ಬಾರಿಗೆ ಹಿರಿಯರು ಮಾಡಿಟ್ಟ ಸಂಪ್ರದಾಯಗಳು ತಡೆಯೊಡ್ಡುತ್ತವೆ ಎನ್ನುವುದಕ್ಕೆ ಅವುಗಳು ಸರಿಯಲ್ಲ, ಮೌಢ್ಯವಾದದ್ದು, ಅರ್ಥವಿಲ್ಲದ ಅನಾಚಾರಗಳೆಂದು ಆಚಾರವನ್ನು ತೆಗಳಿ ಕಡೆಗಣಿಸಿದರೆ, ನಿರ್ಲಕ್ಷಿಸಿದರೆ ಮೌಲ್ಯಯುತವಾದ ವಿಚಾರಧಾರೆಯಿಂದ ತಿರಸ್ಕೃತರಾಗುವುದಂತು ನಿಜ. ಅವುಗಳನ್ನ ನಿರ್ಲಕ್ಷಿಸಿ ತಿರಸ್ಕರಿಸದೆ ಅವುಗಳ ಅರ್ಥ ತಿಳಿದು ಅನುಸರಿಸಿದರೆ ತೊಂದರೆ, ಚಣೆ, ಅನಾರೋಗ್ಯವಿಲ್ಲದೆ ಬಾಳು ಹಸನಾಗುವುದಂತು ಖಚಿತ.

4 comments:

  1. ಸಂಪ್ರದಾಯದ ಹೆಸರಲ್ಲಿ ನಮ್ಮ ಹಿರಿಯರು ಮಾಡಿಟ್ಟ ಕಟ್ಟು ಪಾಡುಗಳನ್ನು ಅಲ್ಲಗಲೆಯಬಾರದು ಎನ್ನುವ ನಿಮ್ಮ ಲೇಖನ ನನಗೆ ಇಷ್ಟವಾಯಿತು.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete
  2. ಒಂದು ದೊಡ್ಡ ಸಮಸ್ಯೆ ಹಿರಿಯರು ತಮ್ಮ ಮುಂದಿನ ತಲೆಮಾರಿಗೆ ಕೆಲವು ಕಟ್ಟುಪಾಡುಗಳ, ಸಂಪ್ರದಾಯಗಳ ಹಿಂದಿನ ಒಳ್ಳೆಯ ಆಶಯಗಳನ್ನು, ಕಾರಣಗಳನ್ನು ತಿಳಿ ಹೇಳದೆ ಇರುವುದು.. ಯಾಕೆ ಮಾಡುತ್ತಿದ್ದೇವೆ.. ಏನು ಮಾಡುತ್ತಿದ್ದೇವೆ ಎಂದು ಅರಿಯದೆ ಇಂದಿನ ಯುವಪೀಳಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥ ಕಟ್ಟಿಕೊಂಡು ಮೂಡನಂಬಿಕೆ ಅಂತ ಹಿಂದಿನಿಂದ ನಡೆದುಕೊಂಡು ಬಂದ ಅದೆಷ್ಟೋ ಒಳ್ಳೆಯ ಆಚರಣೆಗಳಿಂದ ಇಂದು ವಿಮುಖವಾಗುತ್ತಿದೆ.. ಒಳ್ಳೆಯ ಬರಹ..

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete