Saturday, September 29, 2012

|| ಶೃತಿ ಸೇರಿಸು ||

ಮನ ರಮಿಸೊ ತಂಪು ತಂಗಾಳಿಯಲಿ
ಮಬ್ಬಾದ ಮುಸ್ಸಂಜೆ ವೇಳೆಯಲಿ
ಅಂಬರಕೆ ಇರುಳಿನಾಗಮನವಾಗುತಿರಲು
ಭೋರ್ಗರೆವ ಕಡಲಿನಲೆಗಳು
ದಡದಲಿ ಕೂತಿಹ ನನ್ನನ್ನು ಸೋಕಲು
ಸಂಗಾತಿ ಬೇಕೆಂಬ ಆಸೆಯು
ಮನದಾಳದಲಿ ಇಂಗಿರಲು ಜೊತೆಯಾಗಲು ಬಾ ||

ಮೂಡುತಿಹ ನಕ್ಷತ್ರಗಳನು
ನಿನ ಕಣ್ಣಂಚಲಿ ಕಾಣುವಾಸೆ ನನ ಕಣ್ಣಿಗೆ
ಬೆಳದಿಂಗಳು ಅಸುನೀಗಿದರೆ
ಋತುಮಾನವ ತೆಗಳುವವಾಸೆ ಈ ಜೀವಕೆ
ಸೋಂಕಿನಲಿ ಸೊಂಪಾಗಿ
ರಾಗದಲಿ ಹಾಡುತಿಹೆನು ನಿನ ಆಗಮನಕೆ
ಬಳಿ ಬಂದು ಶೃತಿ ಸೇರಿಸು
ಲಯ ತಪ್ಪದಂತೆ ನನ ಬಾಳ ಗಾನಕೆ ||

ಏಕಾಂತ ಕಾಡುತಿದೆ
ನಿನ ಸನಿಹದ ಬಯಕೆಯತಿಯಾಗಲು
ಮನದಾಳದ ಮಾತನು
ಪಿಸುಗುಡುವಾಸೆ ನಿನ್ನೊಂದಿಗೆ
ಸಂಗಡಕೆ ನೀನಿರಲು
ಮನದಕಾಮನೆಗಳೆಲ್ಲವು ದೂರಾಗಲು
ಬದುಕಿನ ಅರ್ಧಾಂಗಿಯಾಗಲು
ಆ ಸ್ವರ್ಗವ ಬಯಸೆನು ಕಿಚ್ಚು ಹಚ್ಚಲು ||

ಗುರಿ ಮುಟ್ಟುವ ತನಕ,
ವಿನಾಯಕ ಭಾಗ್ವತ

No comments:

Post a Comment