Tuesday, June 4, 2019

ಬೇಕಾಗಿದ್ದಾರೆ ಹನಿ ನೀರ ದಾಸೋಹಿ!

ಎಲ್ಲೆಂದು ಅರಸಲಿ
ಹನಿ ನೀರನು
ಯಾರನ್ನು ಕೇಳಲಿ
ತುಸು ಜಲವನು

ಕಂಬನಿಯ ಸುರಿಸಲೂ ನೀರಿಲ್ಲ
ಬರಿದಾದ ನದಿಯೊಡಲಲಿ 
ಕಾಲುವೇಲಿ ಹರಿಸಲೂ ಜಲವಿಲ್ಲ
ಆರಿರುವ ಏರಿಯೊಳಗೆ

ಬರಿದಾದ ಕೆರೆ ಕಟ್ಟೆಗಳು
ಭಾಸವಾಗಿವೆ ಇಂದು
ಚಿಣ್ಣರೆಲ್ಲರು ಆಟ ಆಡುವ
ಮೈದಾನವೇ ಇದೆಂದು

ನೀರ ಹನಿ ಬಿಂದುವಿಗಾಗಿ
ಶುರುವಾಗಿದೆಲ್ಲೆಡೆ ಹಾಹಾಕಾರ
ಲಗ್ನವಾಗಿಲ್ಲ ಜೊತೆಯಾಗಿ
ಹುಡುಕಿ ಹಿಡಿದರೂ ಕಪ್ಪೆ ಸಂಗದವರ

ಮಠ ಮಂದಿರಗಳಲಿ
ಇಳಿಮುಖವಾಗಿದೆ ಭಕ್ತರ ಸಂಖ್ಯೆ
ಊರೂರ ಬೀದಿಗಳಲಿ
ಮಾಡಬೇಕಾಗಿದೆ ನೀರ ದಾಸೋಹಿ ಸಖ್ಯ

ಕೇರಿಯಲೊಬ್ಬರಂತೆ ಸಿಗುತಾರೆ
ನೀಡಲು ಹಣದ ಸಾಲ
ನೀರಿಲ್ಲದೆ ಬವಣೆಯಲಿ ಬೇಯುತಾರೆ
ಏರುತ ದಾಹವೆಂಬ ಶೂಲ

ಅದೆಂದೂ ಬರುವುದೋ?
ಕರಿಮೋಡ ಕರಗಿ ನೀರಾಗಲು
ಬತ್ತಿದೊಡಲ ತುಂಬುತ
ಬೆಳೆಯುವ ಕೃಷಿಕನ ನಗಿಸಲು

ಕೈ ಮುಗಿದು ಬೇಡಿದರೂ
ಕರುಣಾಮಯಿಯ
ಕಲ್ಲಾಗಿ ಬರಲಿಲ್ಲ ಕರಿಮೋಡ
ಸರಿಸಲು ಜಲಧಾರೆಯ

No comments:

Post a Comment