Wednesday, November 13, 2013

...ನನಗೆ ನಾ ಮಾಡಿದ್ದೇ ಸರಿ...

ನಮ್ಮ ಯೋಚನಾ ಶಕ್ತಿಯು ಸದಾ ಸ್ವಾರ್ಥ ಹಿತಾಸಕ್ತಿಯನ್ನೆ ಬಯಸುತ್ತಿರುತ್ತದೆ. ಒಳಿತಿನ ಮಜಲಿನಲ್ಲಿ ಮೇಲೇರುವ ಕನಸನ್ನು ಕಾಣುತ್ತ, ನಾ ಮಾಡಿದ್ದೇ ಸರಿ ಎನ್ನುತ್ತ ಮುಂದೆ ಸಾಗುವುದು ಮನುಜನ ಸಹಜ ಗುಣವಾಗಿದೆ. ನನಗೆ ನಾ ಮಾಡಿದ್ದೇ ಸರಿ ಎನ್ನುವುದು ಧನಾತ್ಮಕ ಮತ್ತು ಋಣಾತ್ಮಕ ಎಂಬ ಎರಡು ಚಿಂತನೆಯನ್ನು ಹೊಂದಿದ್ದು ಅವುಗಳನ್ನು ವಿಶ್ಲೇಷಿಸೋಣ.

ನಮಗೆ ನಾವು ಮಾಡುತ್ತಿರುವುದು ಸರಿ ಎಂದು ಅನಿಸುವುದು ಸಹಜ. ಅದೇ ರೀತಿ ಬೇರೆಯವರು ಮಾಡಿದ ಕೆಲಸದಲ್ಲಿ ತಪ್ಪು ಹುಡುಕುವುದು, ತಪ್ಪು ಇರದಿದ್ದರೂ ಅದು ತಪ್ಪು ಇದು ತಪ್ಪು ಎಂದು ಕ್ಯಾತೆ ತೆಗೆಯುವುದು ಮಾನವ ಗುಣ. ಬೇರೆಯವರು ಮಾಡುವ ಕೆಲಸದಲ್ಲಿ ಅದು ಸರಿಯಿಲ್ಲವೆನ್ನುತ್ತ ನಿಂದಿಸುವುದು, ಅವಹೇಳನ ಮಾಡುವುದು, ಅವಮಾನಿಸುವುದು ತಾ ಮಾಡುವುದು ಸರಿ ಎಂಬ ಅಹಂಕಾರದ ದರ್ಪ.

ನಾವು ಮಾಡುವ ಕೆಲಸದ ಮೇಲೆ ನಂಬಿಕೆಯನ್ನಿಟ್ಟು ಮುನ್ನುಗ್ಗುವುದು ಧನಾತ್ಮಕ ಚಿಂತನೆಯಾದರೆ, ಒಳ್ಳೆಯ ಉದ್ದೇಶವಾದರೆ ಅದು ಆತ್ಮವಿಶ್ವಾಸದ ಎತ್ತರದ ಮಟ್ಟವಾಗಿರುತ್ತದೆ. ಒಂದು ಒಳ್ಳೆಯ ಕೆಲಸ ಮಾಡುವಾಗ ಸರಿಯಾದುದನ್ನು ಯೋಚಿಸಿ ಬೇರೆಯವರ ಮಾತಿಗೆ ಮಣೆ ಹಾಕದೆ ಗಾಢನಂಬಿಕೆಯಿಂದ ಕಾರ್ಯ ಸಾಧನೆ ಮಾಡುವುದು ನಮಗೆ ಮತ್ತು ಪರರಿಗೆ ಒಳಿತನ್ನು ಮಾಡುತ್ತದೆ.

ಬರೆ ಸ್ವಾರ್ಥ ಸಾಧನೆ, ಪರರಿಗೆ ಉಪದ್ರವ ನೀಡುವ ಕೆಲಸ, ತಾನು ಮತ್ತು ತನ್ನವರ ಒಳಿತನ್ನು ಬಯಸುತ್ತ ಪರರನ್ನು ನಿಂದಿಸುವುದು ಅಹಿಂಸಾತ್ಮಕ ಹಿಂಸಾಚಾರವಾಗಿರುತ್ತದೆ. ಎಲ್ಲರು ತನ್ನ ಕೇಳಿಯೆ ಮುನ್ನಡೆಯಬೇಕು ಸಮಸ್ತ ಆಗು ಹೋಗುಗಳೆಲ್ಲವು ತನ್ನಿಂದಲೆ ನಡೆಯಿತು ಎನ್ನುವಂತಾಗಬೇಕೆನ್ನುವ ವ್ಯಕ್ತಿತ್ವ ಜಗಳಕೆ ಕಾರಣವಾಗುತ್ತದೆಯೆ ಹೊರತು ನೆಮ್ಮದಿಯನ್ನು ನೀಡುವುದಿಲ್ಲ. ತಾನು ಏನುಬೇಕಾದರು ಮಾಡಬಹುದು, ಯಾರ ಹತ್ತಿರವಾದರು ಮಾತಾಡಬಹುದು ಆದರೆ ಪರರು ತಾ ನುಡಿದಂತೆ ನೆಡೆಯಬೇಕು ಎಂಬ ಕಟ್ಟಾಚಾರಗಳು ಕುಟುಂಬದಲ್ಲಿ, ಗುಂಪುಗಳಲ್ಲಿ, ಸಾರ್ವಜನಿಕ ಕ್ಷೇತ್ರಗಳಲ್ಲಿ ವಾಗ್ವಾದಕ್ಕೆ, ಮನಸ್ತಾಪಕ್ಕೆ ಕಾರಣವಾಗುತ್ತದೆ.

ಎಲ್ಲರಿಗು ಅವರವರ ಮೂಗಿನ ನೇರಕ್ಕೆ ತಮಗೆ ತಾವು ಮಾಡಿದ್ದೆ ಸರಿ ಎನಿಸಿರುತ್ತದೆ ಹಾಗಾಗಿ ಅದನ್ನೆ ಮುಂದುವರೆಸುತ್ತಾರೆ. ಅದರೆ ಅದು ಬೇರೆಯವರ ದೃಷ್ಠಿಯಲ್ಲಿ ತಪ್ಪಾಗಿಯೆ ಇರುತ್ತದೆ. ಎಲ್ಲರಿಗು ಸರಿ ಮಾಡಲು ಸ್ವತಃ ಪರಮಾತ್ಮನಿಗೆ ಸಾಧ್ಯವಿಲ್ಲವಂತೆ ಹೀಗಿರುವಾಗ ಕೇವಲ ಮನುಷ್ಯರಾದಂತಹ ನಾವು ಎಲ್ಲರಿಗೆ ಸರಿ ಮಾಡಲು ಸಾಧ್ಯವಾಗದ ಮಾತು. ಕನಿಷ್ಠಪಕ್ಷ ನಾವು ನಮ್ಮವರಿಗೆ, ನಮ್ಮ ಕುಟುಂಬದವರಿಗೆ, ನಮ್ಮ ಹಿತವನ್ನು ಬಯಸುವವರಿಗೆ, ನಮ್ಮ ಜೊತೆಯಿರುವವರಿಗೆ ಸರಿಯಾಗುವಂತೆ ಮಾಡುವುದು ಮನುಜ ಧರ್ಮವಾಗಿರುತ್ತದೆ.

ತಾನೆ ಶ್ರೇಷ್ಟ, ಎಲ್ಲವು ತನ್ನಣಿಯಂತೆ ನಡೆಯಬೇಕು, ತನ್ನ ಪರವಾನಗಿ ಇಲ್ಲದೆ ಹುಲ್ಲ ಕಡ್ಡಿ ಚಲಿಸ ಬಾರದು ಎಂಬ ದುರಾಲೋಚನೆ ಮನುಜನನ್ನು ಏಕಾಂಗಿಯನ್ನಾಗಿ ಮಾಡುತ್ತದೆಯೆ ಹೊರತು ಸಂಗ ಜೀವಿಯನ್ನಾಗಿ ಮಾಡದು. ಸರ್ವರನ್ನು ಒಗ್ಗೂಡಿಕೊಂಡು ಆತ್ಮವಿಶ್ವಾಸದಲಿ ಎದುರಿಸುವ ಚಾಣಾಕ್ಯತನದ ಅಗತ್ಯತೆಯು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬಂತೆ ಮಾಡುತ್ತದೆ. ಹಾಗಾಗಿ ನನಗೆ ನಾ ಮಾಡಿದ್ದೇ ಸರಿ ಎಂಬ ಆತ್ಮವಿಶ್ವಾಸವಿರಬೇಕೆ ಹೊರತು ದುರಾಲೋಚನೆಯ ಅಹಂಕಾರವವಿರಬಾರದು.

6 comments:

  1. ಚೆನ್ನಾಗಿ ಬರೆದಿದ್ದೀರಿ...
    ಇಷ್ಟವಾಯ್ತು ನಿಮ್ಮ ಲೇಖನ... ಧನ್ಯವಾದಗಳು...

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete
  2. ಮನೋವಿಶ್ಲೇಷಣೆಗೆ ಒಳಪಡುವ ಬರಹ. ಪ್ರತಿ ಮನುಷ್ಯನೂ ಪರರ ಸರಿ ತಪ್ಪುಗಳ ಹುಡುಕಾಟದಲ್ಲಿ ಮುಳುಗಿ, ತಾ ಮಾಡಿದ್ದೇ ಸರಿ ಬೇರೆಯವರು ಮಾಡಿದ್ದು ಎಷ್ಟು ಸರಿ ಎಂದು ತರ್ಕಿಸುವುದು ಸರಿಯಲ್ಲ.ಚಂದದ ನಿರೂಪಣೆ....

    ReplyDelete
  3. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

    ReplyDelete
  4. manushya aatmavimashege olapadisikolluva vicharagalu chennagi bandive vinayak.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.

      Delete