Tuesday, October 7, 2014

ಸುರಕ್ಷತೆಯ ಭಯ ಪ್ರಯಾಣಿಕರಿಗಿಲ್ಲ ಅಭಯ

ನಾವು ಪ್ರಯಾಣಿಸುವಾಗ ನಮ್ಮ ಪ್ರಯಾಣ ಎಷ್ಟು ಸುರಕ್ಷಿತವೆಂದು ಯೋಚಿಸಿದರೆ ಮನೆಯಿಂದ ಹೊರ ಹೋಗುವುದನ್ನು ವಾಹನಗಳಲ್ಲಿ ಬಿಟ್ಟು ನಡೆದುಕೊಂಡೆ ಹೋಗುವುದನ್ನು ರೂಡಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸ್ವಂತ ವಾಹನವಾಗಲಿ, ಸರ್ಕಾರಿ ವಾಹನಗಳಾಗಲಿ, ಖಾಸಗಿ ವಾಹನಗಳಾಗಲಿ ಸಂಚಾರ ಸ್ತಂಭನ (Traffic Jam) ದಿಂದ ತಪ್ಪಿಸಿಕೊಳ್ಳಲಾಗಲಿಕ್ಕಿಲ್ಲ. ಇದು ಬೆಂಗಳೂರಿನಂತಹ ಮಹಾನಗರಿಯಲ್ಲಿ ಪ್ರತಿಕ್ಷಣ ಕಾಡುವ ಭಯ.

ಊರು ಬೆಳೆಯುತ್ತಿದೆ ಹಾಗೆ ವಾಹನ ಸಂಚಾರ ದಟ್ಟಣೆಯಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಸ್ವಂತ ದ್ವಿಚಕ್ರ ಮತ್ತು ನಾಲ್ಕುಚಕ್ರ ವಾಹನಗಳ ಕಾರುಬಾರು. ನಾಲ್ಕುಚಕ್ರ ವಾಹನದಲ್ಲಂತು ಒಬ್ಬನಿಗಾಗಿ ಜನರಿಗೆ ಬೇಕಾಗುವಷ್ಟು ಜಾಗದ ವ್ಯಯ. ಇದರಿಂದಾಗಿಯೆ ಸಂಚಾರ ಸ್ತಂಭನ (Traffic Jam) ಹೆಚ್ಚಾಗಿರುವುದು ಮತ್ತು ಜಾಸ್ತಿಯಾಗುತ್ತಿರುವುದು. ಇವುಗಳಿಂದ ಅಪಘಾತಗಳು ಜಾಸ್ತಿಯಾಗುತ್ತಿದ್ದು ಆಸ್ಪತ್ರೆಗಳಲ್ಲಿ ಜಾಗವಿಲ್ಲದಂತಾಗುತ್ತಿದೆ.

ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದಿರುವುದರಿಂದ, ಪೋಲಿಸರ ಕಣ್ಣು ತಪ್ಪಿಸಿ ಸಂಚಾರಿ ನೀತಿ ನಿಯಮಗಳನ್ನು ಗಾಳಿಗೆ ತೂರುವುವರಿಂದ, ಖಾಸಗಿ ಕಂಪನಿಗಳ ಕರೆದೊಯ್ಯುವ ವ್ಯವಸ್ಥೆಯಿಂದಾಗಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ನಿರ್ವಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ, ಮೇಲಿನ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದು ದೊಡ್ಡ ಜನವೆಂದು ಅಂತಸ್ತನ್ನು ತೊರಿಸಲಿಚ್ಚೆಪಡುವ ಮೂರ್ಖರಿಂದಾಗಿ, ಕುಡಿದು ಚಾಲನೆ ಮಾಡುವುದರಿಂದಾಗಿ, ವಾಹನದಲ್ಲಿ ಅಥವಾ ಹಿಂಬದಿಯಲ್ಲಿ ಹುಡುಗಿಯನ್ನು ಕೂರಿಸಿಕೊಂಡು ಮತ್ತು ಹುಡುಗಿಯರನ್ನು ಆಕರ್ಷಿಸಲಿಕ್ಕೆಂದು ಅತಿವೇಗದಲ್ಲಿ ಚಾಲನೆ ಮಾಡುವ ಹುಂಬರಿಂದಾಗಿ ಸಂಚಾರ ಸ್ತಂಭನ, ಅಪಘಾತಗಳು ಮತ್ತು ಸಾವು ನೋವುಗಳು ಆಗುತ್ತಿರುವುದು ವಿಷಾದನೀಯ ಮತ್ತು ಭಯಕ್ಕೆ ಕಾರಣವಾಗುತ್ತಿರುವ ಕೆಲವು ನಿದರ್ಶನಗಳು.

ಹಾಗೆ ನಮ್ಮ ಬಿ.ಎಂ.ಟಿ.ಸಿ ಬಸ್ಸಿನ ಕೆಲವು ನಿಷ್ಕಾಳಜಿಯುತ ಚಾಲಕರಿಂದಲೂ ಮತ್ತು ಕೆಲವು ಬಿ.ಎಂ.ಟಿ.ಸಿ ವ್ಯವಸ್ಥಾಪಕ ಅಧಿಕಾರಿಗಳಿಂದಾಗಿಯೂ ಸಂಚಾರ ಭಯ ಹೆಚ್ಚುತ್ತಿದೆ. ಬಸ್ಸಿನ ಒಳಬದಿಯಲ್ಲಿ ಚಾಲಕರ ಆಜುಬಾಜಿನಲ್ಲಿ ಅಂಟಿಸಿರುವ ಸೂಚನಾ ಫಲಕವನ್ನು ನೀವು ಗಮನಿಸಿರಬಹುದು. ಅದೇನೆಂದರೆ "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಎಂದು. ಆದರೆ ಇಲ್ಲಿಯೆ ನೋಡಬಹುದು ನಮ್ಮ ಬಿ.ಎಂ.ಟಿ.ಸಿಯ ವ್ಯವಸ್ಥಾಪಕರ ಎಡವಟ್ಟುಗಳನ್ನು. ಚಾಲಕರೊಬ್ಬರನ್ನೆ ಇಟ್ಟು ಬಸ್ಸಿನ ಚಾಲನೆ ಮತ್ತು ನಿರ್ವಹಣೆಯನ್ನು ಮಾಡಿಸಿಕೊಂಡು, ಇಂತಿಷ್ಟೆ ಸಮಯದ ಮಿತಿಯಲ್ಲಿ ನಿರ್ದಿಷ್ಟ ಸ್ಥಳವನ್ನು ತಲುಪಬೇಕೆಂದು ಷರತ್ತನ್ನು ವಿಧಿಸಿ ಯರ್ರಾಬಿರ್ರಿ ಚಾಲನೆ ಮಾಡಲು ಪ್ರಚೋಧಿಸುತ್ತಿರುವುದನ್ನು ಕಾಣಬಹುದು.

ನಿರ್ವಾಹಕರಿಲ್ಲದಿರುವಾಗ ಹೀಗೆತಾನೆ ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸದೇ ಇರಲಿಕ್ಕೆ ಸಾಧ್ಯ. ಅದಷ್ಟೆ ಅಲ್ಲದೆ ಚಾಲಕ ಮತ್ತು ನಿರ್ವಾಹಕನಾಗಿ ಒಬ್ಬನೆ ಕಾರ್ಯನಿರ್ವಹಿಸಿದರೆ ಅವರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಹೇಳಿ ಅಪಘಾತ ಮತ್ತು ಅವಗಡಗಳು ಸಂಭವಿಸುವುದಕ್ಕೆ ಪ್ರಚೋಧಿಸುತ್ತಿರುವುದು ಖಂಡನೀಯ. ಯಾಕೆಂದರೆ ಇಳಿಯುವ ಸ್ಥಳಕ್ಕಾಗಿ, ಟಿಕೇಟ್ ಗಾಗಿ, ಚಿಲ್ಲರೆ ಹಣವನ್ನು ತಿರುಗಿ ಪಡೆಯಲಿಕ್ಕಾಗಿ, ನಿಲ್ಲಿಸುವಿರಾ ಎಂದು ಕೇಳಲಿಕ್ಕಾಗಿ, ಹೋಗುವ ಪ್ರದೇಶದ ಮಾರ್ಗದ ಮಾಹಿತಿಗಾಗಿ ಚಾಲಕರನ್ನು ಮಾತನಾಡಿಸಲೇ ಬೇಕಾಗುತ್ತದೆ. ಹೀಗಿರುವಾಗ ಬಸ್ಸಿನ ಒಳಬದಿಯಲ್ಲಿರುವ ಫಲಕಕ್ಕೆ ಇನ್ನೆಲ್ಲಿಯ ಬೆಲೆ ಇರುತ್ತದೆ..? ಸಂಚಾರಿ ನಿಯಮವನ್ನು ಸರ್ಕಾರಿ ಅಧಿಕಾರಿಗಳೇ ಮುರಿದಿರುವಾಗ ಭಯ ಕಾಡಿಯೇ ಕಾಡುತ್ತದೆ. ಅದು ಅಲ್ಲದೆ ಇದು ಚಾಲಕರ ಕಣ್ತಪ್ಪಿಸಿ ಟಿಕೇಟ್ ರಹಿತ ಪ್ರಯಾಣಿಸುವವರಿಗೆ ಪ್ರಚೋಧನೆ ನೀಡಿ ಅನುವುಮಾಡಿಕೊಡುತ್ತದೆ. ನೀಡಿದ ಸಮಯದಲ್ಲಿ ನಿರ್ಧಿಷ್ಟ ಸ್ಥಳಗಳನ್ನು ತಲುಪದಿದ್ದರೆ ಅವರಿಗೆ ತೊಂದರೆ ನೀಡಿ ಕಿರಿಕಿರಿ ಮಾಡುವ ಮೇಲಾಧಿಕಾರಿಗಳು ಇದ್ದಾರೆ ಹಾಗೆ ದ್ವಿಪಾತ್ರ ಮಾಡಿಯೂ ತಡವಾಗಿ ಬಂದವರ ತುಟ್ಟಿಭತ್ಯೆಗೆ ಕತ್ತರಿ ಬೀಳುತ್ತದೆಯೆಂದು ದ್ವಿಪಾತ್ರ ಮಾಡಿದ ಚಾಲಕರನ್ನೆ ಕೇಳಿ ತಿಳಿದಿದ್ದೇನೆ.

ಬೆಳಕು ಚೆಲ್ಲಬೇಕಾದ ಸಂಚಾರಿ ಆರಕ್ಷಕರೆ ಕೆಲವೊಂದು ಬಾರಿ ನೀತಿ ನಿಯಮಗಳನ್ನು ಮುರಿದು ಚಲಿಸುವುದು ಕಂಡುಬರುತ್ತಿದೆ. ಇದು ಸಹ ಉಳಿದವರನ್ನು ಪ್ರಚೋಧಿಸುತ್ತದೆ. ಅದು ಅಲ್ಲದೆ ಆರಕ್ಷಕರ ಜೇಬಿನಲ್ಲಿ ಹಣವಿಲ್ಲದಿದ್ದಾಗ ಹೆಚ್ಚಿನದಾಗಿ ದ್ವಿಚಕ್ರ ವಾಹನಗಾರರನ್ನೆ ಹಿಡಿದು ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಿ ರಸೀದಿ ನೀಡದೆ ಹಣ ಕಿತ್ತುಕೊಳ್ಳುವ ಆರಕ್ಷಕರಿಂದಾಗಿ ಪರವಾನಗಿ ಪುಸ್ತಕವನ್ನು ತರದೆ ಕದ್ದು ಸಂಚರಿಸುವವರಿಂದಲೂ ಕೆಲವೊಂದು ಅವಗಢಗಳು ಸಂಭವಿಸುತ್ತವೆ. ಹಾಗೆ ಗೌರವನ್ವಿತ ಆರಕ್ಷಕ ಇಲಾಖೆಯ ಮೇಲಿನ ಗೌರವ ಹಾಳಾಗುತ್ತಿರುವುದು ವಿಷಾದನೀಯ.

ಬಸ್ಸಿನಲ್ಲಿ ಹಾಕಿರುವ ಚಿಕ್ಕ ಫಲಕಕ್ಕೆ ಅದರದೆ ಆದ ಒಳಾರ್ಥವಿದೆ. "ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು" ಇದು ನಿಜವಾದ ಮಾತು. ಆದರೆ ಒಬ್ಬಿಬ್ಬರು ದ್ವಿಪಾತ್ರಿ ಚಾಲಕರನ್ನು ಮಾತನಾಡಿಸುವಾಗ ಇನ್ನುಳಿದ ಪ್ರಯಾಣಿಕರಿಗೆಲ್ಲಿರುತ್ತದೆ ಸುರಕ್ಷತೆಯ ಅಭಯ...? ಯಾಕೆಂದರೆ ಚಾಲಕರ ಗಮನ ಚಾಲನೆಯಿಂದ ಬೇರೆಡೆಗೆ ಹೋಗುತ್ತದೆ ಮತ್ತು ಇದರಿಂದ ಅಪಘಾತ ಸಂಭವಿಸಬಹುದು. ಅದು ಅಲ್ಲದೆ ವೇಗವಾಗಿ ಚಲಿಸುವ ಮತ್ತು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗುವ ವಾಹನಗಳಿಂದಾಗಿ ಸುರಕ್ಷತೆಯ ಭಯಕಾಡುವುದಂತು ನಿಜ.

Tuesday, September 30, 2014

ಅರ್ಧ ಸತ್ಯ

ಕಳೆದ ಘಳಿಗೆಯ
ಅರಿವ ಸಮಯ
ಕೇಳಿದ ಮಾತುಗಳೆಲ್ಲ
ನಿಜದ ಕೂಸುಗಳಲ್ಲ
ಹೀಗೆ ಇತ್ತು ವಿಷಯದಲ್ಲಿ
ಏನೋ ಆಯ್ತು ಬದುಕಿನಲ್ಲಿ
ಅದನು ನೀನು ನಂಬುವ ಮೊದಲೆ
ನಿರ್ಣಯದ ಹೆಜ್ಜೆಗಳು ಸಲ್ಲದು...

ಕ್ರಿಯೆಯ ಕತೃವು ಯಾರಾದರೇನು
ಕಾರ್ಯಕೆ ಕಾರಣವು ಬೇರೆ ಇರಲು
ಮಾಡಿದ ಕೈಗಳಾವುದೋ
ಬಿಂಬಿಸುವ ಹೆಸರು ಇನ್ಯಾರದೋ
ಕೂಲಂಕುಶವಾಗಿ ತಿಳಿಯಲು
ಸತ್ಯದನಾವರಣ ಆಗುವುದು...

ಯಾರೋ ಮಾಡುವ ಕೆಲಸದಲ್ಲಿ
ಮಧ್ಯ ಬರುವರು ಬೇರೆ ಯಾರೋ
ಮಾಡದ ಚಟುವಟಿಕೆಯಲಿ
ತೇಲುವ ಗಾಳಿಮಾತಿನಲಿ
ಬರುವ ಹೆಸರಿನ ಹಿಂದೆ ಇರುವುದು
ಗುರುತಿಗೆ ಕಾಣದ ಅರ್ಧ ಸತ್ಯವು...

Monday, September 29, 2014

1)ನೀರಲ್ಲಿ...                           2)ಮನೆಯಲ್ಲಿ...                           3)ಜೇಬಿನಲ್ಲಿ...
ಈಜುವೆನು                           ಅಡ್ಡಿಯಾಗಿರಲು                             ಹಣದಕಂತೆ
ಗಾಳಿಯಲ್ಲಿ...                         ಪ್ರೀತಿಯಲ್ಲಿ...                                ಬೀಗದಲ್ಲಿ...
ತೇಲುವೆನು                           ಸಂಶಯಬಂದಿರಲು                       ಆಸ್ತಿಗಳಿಕೆ
ಮುನಿಸಲ್ಲಿ...                          ಮೌನದಲಿ...                                 ಯಾಕಿಲ್ಲ...
ಮುದುಡುವೆನು                       ಒಂಟಿಯಾಗಿರಲು                          ಅರಿವ ಮನಸು
ಸೊಗಸಲ್ಲಿ...                           ಕನಸೆಲ್ಲಿ...                                     ಬೇಕಲ್ಲ...
ಸಿಹಿಯಾಗುವೆನು                     ಜೊತೆಯಾಗಿರಲು                         ಬಾಳೋಕೆ ನೀಯತ್ತು
ಮನದ ಭಾವ ಬೆರೆತಾಗ           ಅವನು ಬಳಿಗೆ ಬಂದಾಗ                 ಅಸ್ತಿ ಗಿಸ್ತಿ ಅಂದಾಗ
ಕಿಡಿಯು ಕಿಚ್ಚಾಗಿ ಉರಿದಾಗ      ದೂರ ಅಗೋ ಮಾತೇಕೆ?               ಜಾತಿ ಗೀತಿ ಬಂದಾಗ
ಮಾತು ಮುದುಡಿ ಮೌನ.         ಅವಳು ದೂರ ನಿಂತಾಗ                  ವಿರಸ ವಿರಹದ ಮೌನ.
                                          ಬಯಸೋ ಮನಸು ನಿನಗೇಕೆ?
                                           ಅದುವೆ ವಿಧಿಯ ಆಟ.


ನಿಜವು ಎಂಬ ಸತ್ಯವನು ಮರೆಯೋದಲ್ಲ
ದಾರದಲ್ಲಿ ಸಾಯೋದಲ್ಲ
ಜಗಳಾಟ ಆಡೋದಲ್ಲ
ಕಣ್ಣೀರು ಹಾಕೋದಲ್ಲ
ಸಪ್ಪೆಯಾಗಿ ಸವೆಯೋದಲ್ಲ
ಹಗೆಯನು ಮಾಡೋದಲ್ಲ
ಜೀವ ಮಿಡಿತ ಅರಿಯೇ ಬದುಕು.

ಕಿರುಚಿ ಕೂಗಿ ಮನಸನು ಮುರಿಯೋದೇಕೆ?
ಕನಸುಗಳ ಕದಡೋದೇಕೆ?
ಒಂಟಿಯಾಗಿ ಬಾಳೋದೇಕೆ?
ಒಲವನು ಒಡೆಯೋದೇಕೆ?
ಮೋಸವನು ಮಾಡೋದೇಕೆ?
ಅರ್ಥವಾದ ಜೀವನವೆ ಸಾಕೆ?
ನಂಬಿ ಬರುವ ಜೀವವೇ ಬದುಕು.

Tuesday, September 23, 2014

ಪೂರ್ಣದಿಂದ ಪರಿಪೂರ್ಣದೆಡೆಗೆ ಸಾಗಲು ಜಯತಂದ ಸಂವತ್ಸರ ವಿಜಯದೆಡೆಗೆ

                              “ಪುರುಷೋತ್ತಮ ಶ್ರೀರಾಮನನ್ನು ಸ್ಮರಿಸುತ್ತ”

  
ಹರೇ ರಾಮ,

ಏನೋ ಒಂದು ಗಾಳಿಮಾತು ಜನ ಮಾನಸದಲ್ಲಿ ಹರಿದಾಡುತ್ತದೆನ್ನುವುದು ಮೂರ್ಖರಿಗೆ ಸಂದ ಜಯವೆಂದು ಭಾವಿಸುವುದಾದರೆ ಗಾಳಿಮಾತು ನಿಜವಾಗದೆ ಗಾಳಿಯಲ್ಲಿಯೇ ತೇಲಿ ಹೋಯಿತೆನ್ನುವುದು ಅಥವಾ ಉಳಿದಿದೆಯೆನ್ನುವುದಾದರೆ ಅದು ತೇಲಿಯೇ ಹೋಗುವುದೆನ್ನುವುದು ಸದಾ ಒಳಿತನ್ನೆ ಬಯಸುವವರಿಗೆ, ಒಳ್ಳೆಯದನ್ನೆ ಮಾಡಿದವರಿಗೆ ಮುಡಿಗೇರಿದ ಕಿರೀಟವೆಂದು ಹರ್ಷಿಸಬೇಕು. ಗಾಳಿ ಬೀಸಿದರೆ ಮೋಡ ಕವಿಯುತ್ತದೆ ಆದರೆ ಅದೆ ಗಾಳಿ ಇನ್ನು ಜೋರಾಗಿ ಬೀಸಿದರೆ ಮೋಡ ಹರಿದು ನಿಷ್ಕಲ್ಮಶ ಆಕಾಶ ಕಂಡ ಹಾಗೆ ಬಂದಿರುವ ಆರೋಪ ಅಪರಾಧವಾಗದೆ ಆಪಾಧಿಸಿದ ಅಧಮರ ಅಧಪತಕ್ಕೆ ಕಾರಣವಾಗುವುದು..

ಸಂಸ್ಥಾನದ ಹಿಂದು ಮುಂದು ಮೊದಲಿನಿಂದಲು ಆರಾಧಿಸುತ್ತ ಬಂದಿರುವ ಕೊತ್ಯಾಂತರ ಅನುಯಾಯಿಗಳಿದ್ದಾರೆ ಹಾಗೆ ಅದು ಕೂಡ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಭೀತಾಗಿದೆ. ಸತ್ಯ, ಧರ್ಮ, ಸಂಸ್ಕಾರವು ಎಲ್ಲಿರುತ್ತದೆಯೋ ಅಲ್ಲಿರುತ್ತದೆ ಜಯವೆಂಬ ಹೂವು. ನಿಯತ್ತಿನ ಆರಾಧನೆಗೆ, ಭಜನೆಗೆ, ಭಕ್ತಿಗೆ ಏಕಾಗ್ರಚಿತ್ತ ಪೂಜೆಗೆ ಆದ ಸತ್ವಪರೀಕ್ಷೆ ಸ್ವಲ್ಪ ದಿನಗಳಲ್ಲೇ ಅತಿ ಹೆಚ್ಚಿನ ಮೊತ್ತಗಳಿಸಿದ ಉತ್ತೀರ್ಣದ ಫಲಿತಾಂಶದಲ್ಲಿ ಕೊನೆಗಾಣುವುದೇ ವಿನಃ ಬತ್ತದ ಕಡಲಂತಾಗುವುದಿಲ್ಲ.

ತಾಯಿ ಸೀತಾಮಾತೆಗೆ ತಪ್ಪದ ಅಗ್ನಿಪರೀಕ್ಷೆ ಹುಲು ಮಾನವರಾದ ನಮಗೆ ಬರದೇ ಇರುತ್ತದೆಯೇ...? ಶ್ರೀರಾಮ ಸ್ವರೂಪಿಯಂತೆ ಪ್ರಜ್ವಲಿಸುವ ಶ್ರೀ ಸಂಸ್ಥಾನ, ಎದುರಾಗಿರುವ ಎಡವನ್ನು ನೀರಿನ ಮೇಲೆ ನಡೆದಂತೆ ಸಾಗಿ ದಾಟಿಬರುತ್ತದೆ. ಅಗ್ನಿ ಪರೀಕ್ಷೆಯಲ್ಲಿ ಸುಡದ ತಾಯಿ ಸೀತೆ, ಎಷ್ಟು ಪರಿಶುದ್ಧಳು ಎನ್ನುವುದು ಪುರುಷೋತ್ತಮ ಮತ್ತು ಪ್ರಪಂಚಕ್ಕೆ ತಿಳಿಯಿತು ಹಾಗೆ ಏನೆ ಆಪಾದನೆ ಬಂದರೂ, ಅವಗಡ ಎದುರಾದರೂ ಅವುಗಳೆಲ್ಲವನ್ನು ಜನ ಶ್ರೀರಾಮನ ಕೃಪೆ, ಸತ್ಯ-ಧರ್ಮದ ಸಿದ್ಧಿ, ಜನಬಲ, ಆತ್ಮಸ್ಥೈರ್ಯ ಇವೆಲ್ಲವು ಸಂಸ್ಥಾನದ ಜೊತೆ ಇರುವಾಗ ಸತ್ಯಕ್ಕೆ, ಧರ್ಮಕ್ಕೆ, ಕಣ್ಣು ಮುಚ್ಚಿ ಕಾಣುವ ಕಾನೂನಿಗೆ, ನೀತಿ ನಿಯತ್ತಿಗೆ ಗೆಲುವು ಸಲ್ಲುತ್ತದೆ.

ನಮ್ಮ ಜನಗಳು ಹೇಗಪ್ಪ ಅಂತಂದರೆ ಅಪ್ಪ ಹೇಳಿದರೆ ಮಾತ್ರ ಅದು ನಿಜ, ತಾನು ಕಂಡಿದ್ದು ಅನುಭವಿಸಿದ್ದು ಎಲ್ಲಾ ತಾತ್ಪೂರ್ತಿಕ, ನೀರ ಮೇಲಿನ ಗುಳ್ಳೆಯಂತೆ ಎನ್ನುವವರು ಹಲವರು. ಹಾಗೆ ರಾಮಾಯಣ ಸುಳ್ಳು ಅದೊಂದು ಪುರಾಣ, ಕೃತಿ ಎಂದು ಹೇಳುತ್ತಿದ್ದ ಹಲವರು ಇಂದು ಅದು ನಡೆದದ್ದು ನಿಜವೆಂದು ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಭಾರತದಿಂದ ಶ್ರೀಲಂಕಾಗೆ ಕಟ್ಟಿದ ಕಲ್ಲಿನ ಸೇತುವೆಯ ಕುರುಹು ದೊರೆತಿದ್ದು ಅದನ್ನೆ ನಮ್ಮ ವಿಜ್ಞಾನಿಗಳು ಒಪ್ಪಿರುವುದು ಇದಕ್ಕೊಂದು ವರ್ತಮಾನದ ಉದಾಹರಣೆ. ಆದರೆ ವಿಷಯದಲ್ಲಿ ಹಾಗಾಗಲಿಲ್ಲ, ಕೆಲವು ದುಡ್ಡು ಮಾಡುವ ಸಂಜೆ ಪತ್ರಿಕೆಗಳಷ್ಟೆ ಗಾಳಿಮಾತನ್ನು ನಡೆದ ಸತ್ಯವೆಂಬಂತೆ ಬರೆದಿವೆಯಷ್ಟೆ ಹೊರತು ಯಾವೊಂದು ಸಭ್ಯ ದಿನ ಪತ್ರಿಕೆಯು ಇಲ್ಲಸಲ್ಲದನ್ನು ಪ್ರಕಟಿಸದಿಲ್ಲದಿರುವುದು ಸ್ವಾಗತಾರ್ಹ. ಅದು ಅಲ್ಲದೆ ಯಾವೊಬ್ಬ ಯುವಕ/ಯುವತಿಯರು ಸಹ ಇಲ್ಲ ಸಲ್ಲದ್ದನ್ನು ಮಾತಾಡುತ್ತಿಲ್ಲ ಹಾಗೆಯೆ ಅದನ್ನು ನಂಬುತ್ತಿಲ್ಲ. ಇದರಿಂದಾಗಿ ಮಾನ ಹೋಯಿತು, ಕಪ್ಪು ಚುಕ್ಕೆಯಾಯಿತೆನ್ನುವ ಗೋಜಿಗೆ ಹೋಗುವ ಅಗತ್ಯವಿಲ್ಲ.

ಗುರುಗಳೆ ನಿಮ್ಮ ಪೂಜೆ ನಿಜ, ನಿಮ್ಮ ಮಾತು ಸತ್ಯ, ನಿಮ್ಮ ನಡೆ ಧರ್ಮ, ನಿಮ್ಮ ಭಕ್ತಿ, ಆರಾದನೆಯೇ ನಿಯತ್ತು. ಇವನ್ನೆಲ್ಲ ಕ್ರೂಡಿಕರಿಸಿ ನಿಮ್ಮ ಸ್ಥಿರತೆಯನ್ನು ಪರೀಕ್ಷಿಸಲು ರಾಮನೇ ಒಡ್ಡಿದ ಸವಾಲಿನಲ್ಲಿ ನೀವು ನಿಮ್ಮ ಧೃಡತೆಯನ್ನು ತೋರಿಸಿದ್ದೀರಿ, ಇದರಲ್ಲಿನ ಯಶಸ್ಸು ಶ್ರೀರಾಮನಿಗೆ ನೀವು ಸಮರ್ಪಿಸಿದ ಖುಷಿ. ಆಗ ತಂದೆ ಶ್ರೀರಾಮ ಹೇಳಿಕೊಳ್ಳುತ್ತಾನೆ ಭುವಿಯಲ್ಲಿನ ಜನರೆಲ್ಲ ನೀತಿ ನಿಯತ್ತನ್ನು ಕಳೆದುಕೊಂಡವರೆಂದು ಹೇಳುತ್ತೀರಿ ಆದರೆ ನೋಡಲ್ಲಿ ನಮ್ಮ ಶ್ರೀರಾಮನ ಅನುಯಾಯಿ, ಶ್ರೀರಾಮನ ಸ್ವರೂಪಿಯ ಸ್ಥಿರತೆಯನ್ನು ಎಂದು ಹೆಮ್ಮೆಯಿಂದ ಎದೆತಟ್ಟಿ ಹೇಳಿಕೊಳ್ಳುತ್ತಾನೆ. ಅದಕ್ಕೆ ನೀವು ಸಹ ಹೆಮ್ಮೆಯಿಂದ, ಧೈರ್ಯದಿಂದ ಮುನ್ನುಗ್ಗಿ. ನಾವು ಸಹ ನಿಮ್ಮೊಂದಿಗೆ ಸದಾ ಇರುತ್ತೇವೆ ಶ್ರೀರಾಮನೊಂದಿಗೆ ಇದ್ದ ಕಪಿ ಸೈನ್ಯದ ಹಾಗೆ.

ಶ್ರೀರಾಮನ ಅನುಗ್ರಹದಿಂದ ನಿಮ್ಮ ವೃತವಾದ ಚಾತುರ್ಮಾಸ್ಯ ನೆರೆವೇರಿತು ಎನ್ನುವುದಕ್ಕಿಂತ ರಾಮನೊಡ್ಡಿದ ಸತ್ವ ಪರೀಕ್ಷೆಯನ್ನು ಎದುರಿಸಲು ಹಿಂಜರಿಯದೆ, ಹೆದರದೆ ಎದೆಯೊಡ್ಡಿ ಎದುರಿಸಿ ನೀವು ಪೂರ್ಣಗೊಳಿಸಿದಿರಿ ಎನ್ನುವುದೇ ಸೂಕ್ತ ಹಾಗು ಸತ್ಯ. ಇದರಿಂದಾಗಿ ಕಿಡಿಗೇಡಿಗಳ, ಹೊಟ್ಟೆಕಿಚ್ಚಿನ ದ್ರೋಹಿಗಳಿಗೆ ನಿಮ್ಮ ದೃಢತೆಯ ಅರಿವಾಗಿದೆ. ಇನ್ನು ಮುಂದೆ ಇಂತಹ ಕಿಡಿಗೇಡಿತನ ಮಾಡಲು ಯಾರೊಬ್ಬನು ಮುಂದೆ ಬರವುದಿಲ್ಲ. ತಾಯಿ ಗೋ ಮಾತೆ ಹೇಗೆ ಎಲ್ಲ ನೋವು, ಕಷ್ಟಗಳನ್ನು ಸಹಿಸಿಕೊಂಡು ಬಿಳಿದಾದ ಹಾಲನ್ನು ಕೊಡುತ್ತದೆಯೋ ಹಾಗೆ ತಾವು ಸಹ ನಿಮ್ಮ ಎದೆಯಾಳದ ನೋವನ್ನು ನುಂಗಿಕೊಂಡು ಹಸನ್ಮುಖಿಯಾಗಿ ದೇಹಿ ಎಂದು ಬಂದ ಭಕ್ತರ ಪಾಲಿಗೆ ಸಾಕ್ಷಾತ್ ಶ್ರೀರಾಮನಂತೆ ಕಂಗೊಳಿಸಿದ್ದೀರಿ ಮತ್ತು ಆಶೀರ್ವದಿಸಿದ್ದೀರಿ. ಇದನ್ನರಿಯದ ಜನ ಸುಮ್ಮನಿದ್ದು ನಂತರ ಗೊತ್ತಾದಾಗ ಸೈನಿಕರಂತೆ ಸುತ್ತುವರಿದಿದ್ದು ಅವರ ಭಕ್ತಿ ಬಾವನೆ ತೋರ್ಪಡಿಸಿದ ಪರಿ ಗಮನಾರ್ಹ.

             ಚಾತುರ್ಮಸ್ಯದ ವೇದಿಕೆಯ ಪರದೆಯಲ್ಲಿ ಬರೆದಿದ್ದ ಸಾಲು
                              "ಜಯ ಚಾತುರ್ಮಾಸ್ಯ"
              "ಪೂರ್ಣದಿಂದ ಪರಿಪೂರ್ಣದೆಡೆಗೆ"

ಎಂಬ ನಿಮ್ಮ ಮಾತು ಸರಿಯಾಗಿದೆ. ಅಹಾ ಅದೆಂತಹ ಮಾತು ಅದೆಷ್ಟು ಅರ್ಥಗರ್ಭಿತವಾಗಿದೆ. ಸಂಸ್ಥಾನವೆ ಧೃತಿಗೆಡಬೇಡಿ, ನೀವು ಪೂರ್ಣರಾಗಿದ್ದೀರಿ ಹಾಗಾಗಿ ಇದು ಸರಿಯಾದ ಸಮಯ ಪರಿಪೂರ್ಣರಾಗಲು. ನಿಮ್ಮನ್ನು ಪೂರ್ಣದಿಂದ ಪರಿಪೂರ್ಣತೆಗೆ ಕೊಂಡೊಯ್ಯುವ ಸಂಧ್ಯಾಕಾಲದಲ್ಲಿ ಬಂದೊದಗಿದ ಹುಸಿ ಆರೋಪವೆ ಶ್ರೀರಾಮ ನೀಡಿದ ಅಗ್ನಿಪರೀಕ್ಷೆ ಎಂದು ತಿಳಿಯಬೇಕಾಗಿದೆ. ನೀವು ಪೂರ್ಣರಾಗಿದ್ದಿರುವುದಕ್ಕೆ ಅಲ್ಪರು, ಅನುಯಾಯಿಗಳು ಜಾತಿ ಬೇಧ ಮರೆತು ಇದು ನಮ್ಮ ಪೀಠವೆಂಬ ಗೌರವ ಭಾವದಿಂದ, ಉದ್ವೇಗದಿಂದ ಮಠವನ್ನು ಸುತ್ತುವರಿದು ಜನಶಕ್ತಿ ಪ್ರದರ್ಶನ ಮಾಡಿದ್ದು ಹಾಗೆ ನಿಮಗೆಷ್ಟು ಜನ ಬೆಂಬಲವಿದೆಯೆನ್ನುವುದನ್ನು ಸಾಬೀತುಪಡಿಸಿದ್ದು ನಡೆದ ಇತಿಹಾಸ. ಇದರಿಂದಾಗಿ ನಿಮ್ಮ ಅಂತರಾಳಕ್ಕೆ ತುಸು ಸಮಾದಾನವಾಗಿದ್ದರೆ ಅದು ನಿಮ್ಮ ಗೆಲುವಿನಲ್ಲೊಂದು.

 ಕಾಲು ಕೆರೆದು ಜಗಳವಾಡಿದರೆ ಎಂತಹ ಶಾಂತ ಸ್ವಭಾವದವರೆ ಸಿಟ್ಟಿಗೆದ್ದು ಎದುರಾಡುವಾಗ ತಾವು ರಾಮನ ಸ್ವರೂಪಿಯಾಗಿದ್ದರಿಂದ ರಾಘವನಾಗಿ ದುಷ್ಟರ ನಿಗ್ರಹ ಮಾಡಬೇಕಾಗಿದೆ. ನಿಮ್ಮ ಸಹನೆ ದುಷ್ಟರನ್ನು ರೊಚ್ಚಿಗೇಳಿಸಿ ಇಂತಹ ಮಾನಗೇಡಿ ಕೆಲಸಕ್ಕೆ ಅಣಿಯಾಗಲು ಕಾರಣವಾಯಿತೇ...? ಏನು ಎತ್ತ ಎನ್ನುವ ವಿಚಾರ ಸದಾ ನಮ್ಮ ಎದೆಯಾಳದಲ್ಲಿ ಕೊರೆಯುತ್ತಿರುವ ವಿಷಯ. ತಾಯಿ ಸೀತೆಯನ್ನು ಕದ್ದೊಯ್ದಿದುರಿಂದ ತಂದೆ ಶ್ರೀರಾಮ ರಾಘವನಾಗಿ ಧನಸ್ಸನ್ನು ಹಿಡಿದು ದುಷ್ಟ ರಾವಣನೆಡೆಗೆ ಬಾಣವನ್ನು ಹೂಡಿದ ಮತ್ತು ಅವನನ್ನು ಸಂಹರಿಸಿದ. ಹಾಗೆ ತಾವು ಸಹ ನಮ್ಮ ಗುರುವರ್ಯ ಶ್ರೀ ಶಂಕರಾಚಾರ್ಯರ ಪೀಠಕ್ಕೆ ಅಪವಾದ ಹೊರೆಸಿದ ದುಷ್ಟರ ನಿರ್ಣಾಮಕ್ಕೆ ಸಂಕಲ್ಪಿಸಿ ಮುಂದೆಂದು ಇಂತಹ ಅವಗಡಗಳು ಮರುಕಳಿಸದಂತಹ ಹೆಜ್ಜೆಯಿಟ್ಟು ಅಂತಹ ಕಿಡಿಗೇಡಿಗಳನ್ನು ಮಟ್ಟಹಾಕಿ ಎಂದು ನಿಮ್ಮ ಅನುಯಾಯಿಗಳು ಪೀಠದ ಆರಾಧಕರು ಪ್ರಾರ್ಥಿಸುತ್ತಾರೆ. ಹಲವಾರು ಹೆಂಗಳೆಯರು ಪೀಠದ ಸಲುವಾಗಿ ಕಣ್ಣೀರಿಟ್ಟಿದ್ದಾರೆ ಹಾಗೆ ಸಹಸ್ರ ಸಹಸ್ರ ಪುರುಷರು ಸಂಸ್ಥಾನಕ್ಕಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹಗಲು ರಾತ್ರಿಯೆನ್ನದೆ ನಿಮ್ಮ ಸುತ್ತ ಮಾನವ ಸೈನ್ಯವನ್ನೇ ನಿರ್ಮಿಸಿ ನಾಲಾಯಕ ಕಿಡಿಗೇಡಿಗಳಿಗೆ ಹೆದರಿಕೆಯನ್ನಷ್ಟೆ ಅಲ್ಲ ಆರಕ್ಷಕರ ಎದೆಯಲ್ಲು ನಡುಕಹುಟ್ಟುವಂತೆ ಮಾಡಿದ್ದಾರೆ.

ಗುರುಗಳೆ ಇಂದಿನ ನಿಮ್ಮ ನಡೆ ಪ್ರಜ್ವಲಿಸುವ ಸೂರ್ಯನತ್ತ. ಹೆದರಿಕೆ, ಅಂಜಿಕೆ ಇರಬೇಕಾದುದು ಕಳ್ಳರಿಗೆ ಸತ್ಯದ ಹಾಸಿಗೆಯಲ್ಲಿ ಮಲಗೇಳುತ್ತಿರುವ ಸಜ್ಜನರಿಗಲ್ಲ. ತಾವು ಹೆಜ್ಜೆಯಿಡಲು ಪ್ರತಿಯೊಂದು ಸ್ಥಳವು ಸಹ ತಾ ಮುಂದು ತಾ ಮುಂದು ಎಂದು ಮುಂಚೂಣಿಯಲ್ಲಿ ಹೊಡೆದಾಡುವಾಗ ಅವಶ್ಯಕತೆ ಬಂದಾಗ ತಾವು ಎತ್ತಕಡೆ ಹೆಜ್ಜೆಯಿಟ್ಟರು ಅದು ತಪ್ಪಲ್ಲ. ಗುರುವರ್ಯ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೂಗಿ ಹೇಳುವ ಜನಗಳು ನಿಮ್ಮೊಂದಿಗಿದ್ದಾರೆ, ಸತ್ಯ ನಮ್ಮೊಂದಿಗಿದೆ. ಅಳುಕುವ ಅಗತ್ಯತೆ ನಮಗಿಲ್ಲ. ಇದು ನಮ್ಮ ಪೀಠ, ಇವರೆ ನಮ್ಮ ಸಂಸ್ಥಾನವೆಂದು ಹರ್ಷಿಸಿ ಹೇಳಲು ಹಿಂದೇಟು ಹಾಕದೆ, ನಿಮ್ಮ ಬಲಕ್ಕೆ ನಿಮ್ಮ ಅನುಯಾಯಿಗಳ ಜನ ಸಮೂಹವೆ ನಿಮ್ಮೊಂದಿಗಿದೆ. ಬೇಸರಿಸದಿರಿ ಕಪ್ಪು ಚುಕ್ಕೆ ನಿಮಗಂಟಿತೆಂದು ಯಾಕೆಂದರೆ ಇದು ಕಪ್ಪು ಚುಕ್ಕೆಯಲ್ಲ ಬದಲಾಗಿ ಪರರ ಕಣ್ಣು, ಅಸೂಯೆ, ನಿಮಗೆ ನಾಟಬಾರದೆಂಬ ದೃಷ್ಠಿಬೊಟ್ಟು ಘಟನೆ ಎನ್ನುವುದು ನಮ್ಮೆಲ್ಲರ ಭಾವ.

ಅಪವಾದ ಹೊರೆಸಿದವರೆ ಅಪರಾಧಿಯಾಗಿ ಕಂಬಿಯ ಹಿಂದೆ ನಿಂತಾಗ ಹೇಳಿಕೆ ನೀಡುವಾಗ ಚಡಪಡಿಸಿ ಗೊಂದಲದ ಗೂಡಾಗಿದ್ದಾರೆ. ಹೀಗಿರುವಾಗ ತಿಳಿಯುತ್ತದೆ ಸತ್ಯವೆಲ್ಲಿದೆ ಎಂದು. ನೀವೆ ಹೇಳಿದಂತೆ ಹೇಗೆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಇನ್ನು ಹೊಳೆಯುತ್ತದೆಯೊ ಹಾಗೆ ಇಂತಹ ದೊಡ್ಡ ಆರೋಪವು ನಿಮ್ಮನ್ನು ಬೇಕಿಯಂತೆ ಸುಟ್ಟು ನೀವು ಇನ್ನೂ ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ ಯಾಕೆಂದರೆ ಸತ್ಯಕ್ಕೆ ಸಾವಿಲ್ಲ. ಇದು ಕತ್ತಲೆಯಂತೆ ನಿಮ್ಮನ್ನು ಕವಿದಿದೆಯೆಂದು ಭಾವಿಸಿ ಬೇಸರಿಸದಿರಿ, ನೋವಿನಲಿ ಕೊರಗದಿರಿ ಯಾಕೆಂದರೆ ಮಿನುಗುವ ನಕ್ಷತ್ರ ಹೊಳೆಯುವುದು ಸೂರ್ಯಾಸ್ತವಾದಾಗ ಮಾತ್ರ. ಆದರೆ ನೀವೀಗ ಪ್ರಜ್ವಲಿಸುವ ಸೂರ್ಯ ಮತ್ತು ಮಿನುಗುವ ನಕ್ಷತ್ರ ಯಾಕೆಂದರೆ ನೀವು ಸರ್ವ ಕಾಲದಲ್ಲಿಯೂ ಸರ್ವರು ಅಪೇಕ್ಷಿಸುವ ಅನರ್ಘ್ಯ ರತ್ನ.

      ಅಲ್ಪನ ಬರಹ ತಪ್ಪಾಗಿದ್ದರೆ ಕ್ಷಮಿಸಿ, ಮಾರ್ಗದರ್ಶಿಸಿ.

             ಅನಂತ ಅನಂತ ನಮನಗಳು ಸಂಸ್ಥಾನದ ಚರಣಾರವಿಂದಗಳಲ್ಲಿ.



ವಿನಾಯಕ ಗೋವಿಂದ ಭಾಗ್ವತ
ನೀಲಕೋಡ, ಕಡ್ಲೆ ವಲಯ,
ಚಂದಾವರ ಸೀಮೆ.