Monday, May 9, 2016

ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳಿ ಹೋಯ್ತು

ಸಾಂದರ್ಭಿಕ ಸನ್ನಿವೇಶ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವುದು ಸಹಜ. ನಾವು ಬೆಳೆದ ದಿನಗಳನ್ನು ಹಿಂತಿರುಗಿ ಇಣುಕಿ ನೋಡಿದರೆ ಬಹಳ ವಿಸ್ಮಿತ ಆಟೋಟಗಳು ನೆನಪಿಗೆ ಬರುತ್ತವೆ. ಆದರೆ ಇದೀಗ ಕಾಣುವುದು ಕ್ರಿಕೇಟ್ ಎಂಬ ಆಕರ್ಷಣೀಯ ಆಟದ ದಿನಗಳು ಒಂದಿನವಾಗಿ ಈಗೀಗ ಕ್ಷಣವಾಗಿದೆ. ಹೊರಂಗಣ ಕ್ರೀಡೆಗಳು ಮಕ್ಕಳನ್ನು ಸಮಾಜಮುಖಿಯಾಗುವಂತೆ ಮಾಡುತ್ತದೆ. ವ್ಯವಹಾರಿಕ ವಿವೇಚನೆಯನ್ನು ಮಾಡುತ್ತದೆ. ಅದಲ್ಲದೆ ಕಣ್ಣಮುಚ್ಚಾಲೆ ಹೊಸತು ಹುಡುಕುವಂತೆ ಪ್ರೇರೇಪಿಸುತ್ತದೆ. ಬಹುಷ್ಯಹ ಸಮ್ಮ ನಗರಗಳಲ್ಲಿ ಆಗುತ್ತಿರುವ ಹುಡುಗ/ಹುಡುಗಿಯರ ಉಪಟಳಗಳನ್ನು ಆಧರಿಸಿ ಒಂದು ಹಾಡು ಬರೆದರೆ ಅದು ಹೀಗೆ ಪ್ರಾರಂಭವಾಗಬಹುದು.
"ಎಲ್ಲೆಲ್ಲಿ ನೋಡಲಿ
ಕ್ರಿಕೇಟನ್ನೇ ಕಾಣುವೆ
ರೋಡಲ್ಲಿ ತುಂಬಿರುವೆ
ಕಿಡಕಿ ಗಾಜು ಒಡೆದು ಆಡುವೆ"
ಅಂದು ಕಣ್ಣ ಮುಚ್ಚೆ ಆಟ ಆಡುತ್ತಿದ್ದ ಜಮಾನವಿಂದು ಗಲ್ಲಿ ಗಲ್ಲಿಯಲು ಆಡುವ ಕ್ರಿಕೆಟ್ ಯುಗವಾಗಿದೆ. ಮೊನ್ನೆ ಮೊನ್ನೆಯಷ್ಟೆ ಮುಗಿದ ವಿಶ್ವಕಪ್ ಸರಣಿಯ ಮುಂಬದಿಗೆ ಆಯ್.ಪಿ.ಎಲ್ ಎಂಬ ಮತ್ತೊಂದು ಸರಣಿಯ ಸೆಳೆತ ಕ್ರಿಕೇಟಿಗರನ್ನು ಆವರಿಸಿದೆ. ಬಿಡುವಿಲ್ಲದ ಸಮಯದಲ್ಲಿ ಕೆಲಸ ಬಿಟ್ಟು ನೋಡುವ ಹಾಗೆ ಮಾಡುತ್ತಿದೆ. ಇಂತಹ ದಿನಗಳಲ್ಲಿ ನಮ್ಮ ಪೂರ್ವಜರು ಕಲಿಸಿಕೊಟ್ಟ ನೀತಿಯುಕ್ತ ಆಟದ ನೆನಪಾಗುತ್ತದೆ.

ಎರಡು ದಶಕಗಳ ಕಾಲ ಹಿಂದೆ ಹೋದರೆ ನಾವು ಆಡುತ್ತಿದ್ದ ಕಣ್ಣ ಮುಚ್ಚೆ ಕಾದೆ ಗೂಡೆ ನೆನಪಿಗೆ ಬರುತ್ತದೆ. ಅಂತಹ ಆಟಗಳು ಇಂದು ನಮ್ಮ ಕಣ್ಣಿಗೆ ಸಿಗುವುದು ಬಹಳ ವಿರಳವಾಗಿದೆ. ಯಾಕೆಂದರೆ ನಮ್ಮ ಹಳ್ಳಿಯ ಹುಡುಗರೂ ಸಹ ಕ್ರಿಕೇಟ್ ಎಂಬ ಸಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಕಣ್ಣಮುಚ್ಚಾಲೆ, ಲಗೋರಿ, ಕವಡೆ ಆಟ, ಮುಟ್ಟು ಆಟ, ಚಿಣ್ಣಿ ದಾಂಡು ಹೋಗಿ ಚೆಂಡು ದಾಂಡು ಆಗಿರಲು ಹೀಗೆ ಮುಂಚಿನ ಆಟಗಳು ಎಲ್ಲಿ ಮರೆಯಾದವೂ...? ಅಳಿಯಿತೇ...? ಅಳಿವಿಗೆ ಕಾರಣಗಳೇನು...? ಎಂದು ಹತ್ತು ಹಲವಾರು ಪ್ರಶ್ನೆಗಳು ನಮ್ಮ ಕಾಡುತ್ತವೆ. ಇವುಗಳಿಗೆ ಉತ್ತರ ಹುಡುವುದಕ್ಕಿಂತ ಮೊದಲು ಏನಕ್ಕಾಗಿ ಉತ್ತರ ಹುಡುಕ ಬೇಕು ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಉತ್ತಮ.

ಮೊದಲಿನ ಆಟಗಳಲ್ಲಿ ನೀತಿಯಿರುತ್ತಿತ್ತು. ಅದು ಹೇಗೆಂದು ಯೋಚಿಸಿದಾಗ ನಮ್ಮ ಹುದುಗ/ಹುಡುಗಿಯರು ಆಡುತ್ತಿದ್ದ ಕಣ್ಣಮುಚ್ಚಾಲೆ ಎಂಬ ಸರಳ ಸಜ್ಜನಿಕೆಯ ಆಟ ನೆನಪಿಗೆ ಬರುತ್ತದೆ. ಆಟದ ತಿರುಳಾರ್ಥ ಎಷ್ಟು ಜನರಿಗೆ ತಿಳಿದಿದೆ ಎಂದು ಕೇಳಿದರೆ ಒಂದೇ ಒಂದು ಕೈ ಸಹ ಮೇಲಕ್ಕೆ ಬರುವುದಿಲ್ಲ. ನಮ್ಮ ಶಿಕ್ಷಣ ಈಗ ಹೇಳುತ್ತಿದೆ ಕಲಿ ನಲಿಯ ಮೂಲಕ ನಡೆದ ಶಿಕ್ಷಣ ಮಕ್ಕಳ ಬುದ್ಧಿಮತ್ತೆ ಸೇರುತ್ತದೆ ಎಂದು. ಆದರೆ ನಮ್ಮ ಪೂರ್ವಜರು ಮೊದಲೆ ಅದನ್ನು ಅರಿತು ಚಿಕ್ಕ ಚಿಕ್ಕ ಮಕ್ಕಳಿರುವಾಗಲೆ ಅವರಿಗೆ ನಮ್ಮ ಸಂಸ್ಕಾರ ಕಥನದ ತಿಳುವಳಿಕೆಯಾಗುವಂತೆ ಆಟಗಳಲ್ಲಿ ಬಳಸಲಿಕ್ಕೆಂದು ಪುಟಗಟ್ಟಲೆ ಇದ್ದ ಮಹಾ ಕಾವ್ಯದ ತಿರುಳನ್ನು ನಾಲ್ಕೈದು ಸಾಲುಗಳಲ್ಲಿ ಹೇಳಿ ಚಿಣ್ಣರೂ ಸಹ ಅದನ್ನು ಅರಿತು ತಿದ್ದಿ ನಡೆಯುವಂತೆ ಮಾಡಿದ್ದಾರೆ.

ಕಣ್ಣಾ ಮುಚ್ಚೇ....
ಕಾಡೇ ಗೂಡೇ....
ಉದ್ದಿನ ಮೂಟೆ....
ಉರುಳೇ ಹೋಯ್ತು....
ನಮ್ಮಯ ಹಕ್ಕಿ ...
ನಿಮ್ಮಯ ಹಕ್ಕಿ ....
ಬಿಟ್ಟೇ ಬಿಟ್ಟೆ ...

ನಮ್ಮ ಹಿಂದಿನವರು ಮಕ್ಕಳಾಟಗಳಲ್ಲೂ ಸಹ ಎಷ್ಟು ಚೆನ್ನಾಗಿ ರಾಮಾಯಣದ, ಮಹಾಭಾರತದ ಕತೆಗಳನ್ನು ಜೋಡಿಸಿ ಹೆಣೆಯುತ್ತಿದ್ದರು ಇದೇ ಸಾಕ್ಷಿ. ಅಂಥಹ ಒಂದು ರಾಮಾಯಣದ ಕಥೆಯ ನಿರೂಪಣೆ ಮೇಲಿನ ಆಟದಲ್ಲಿದೆ. ಅದು ಹೇಗಂದು ನೋಡಿದರೆ...
"ಕಣ್ಣಾ ಮುಚ್ಚೆ " -
ಅಂದರೆ ಅಯೋಧ್ಯೆಯ ಮಹಾರಾಜ "ದಶರಥ" ಕಣ್ಣು ಮುಚ್ಚಲು
"ಕಾಡೇ ಗೂಡೆ "-
ಶ್ರೀರಾಮಚಂದ್ರನಿಗೆ ಕಾಡೇ ಮನೆಯಾಯಿತು
"ಉದ್ದಿನಮೂಟೆ" -
ಅಹಂಕಾರದಿಂದ ಉದ್ದಿನ ಬೇಳೆಯಂತೆ (ಮೂಟೆಯಂತೆ) ಉಬ್ಬಿಹೋಗಿದ್ದ ರಾವಣನನ್ನು
"ಉರುಳೇ ಹೋಯ್ತು" -
ಯುದ್ಧದಲ್ಲಿ ರಾಮ ಹೊಡೆದು ನೆಲಕ್ಕುರುಳಿಸಿದ. ಅದೆ ಸೊಕ್ಕಿನ ಮೂಟೆ, ಅದೇ ಉದ್ದಿನ ಮೂಟೆ ಉರುಳೇ ಹೋಯ್ತು
"ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ"
ಸಾತ್ವಿಕನಾದ ವಿಭೀಷಣ (ರಾವಣನ ತಮ್ಮ) ಸೀತೆಯನ್ನು ಗೌರವಾಧರಗಳಿಂದ ತಂದು ಶ್ರೀರಾಮನಿಗೊಪ್ಪಿಸಿದ
ರಾವಣ ತಿಳಿದಂತೆ ಇದು ನಮ್ಮ ಹಕ್ಕಿ ಅಲ್ಲ , ನಿಮ್ಮಯ ಹಕ್ಕಿ 
ಬಿಟ್ಟು ಕಳಿಸಿಕೊಡುತ್ತಿದ್ದೇವೆ ಸ್ವೀಕರಿಸಿ, ಎಂದು ರಾಮ ಲಕ್ಷ್ಮಣರನ್ನು ಪ್ರಾರ್ಥಿಸಿದ.

ಅರ್ಥದಲ್ಲಿ ಇಡೀ ರಾಮಾಯಣದ ಕಥೆಯನ್ನು ಮಕ್ಕಳಾಟದಲ್ಲಿ ಪೋಣಿಸಿದವರು ನಮ್ಮ ಹಿಂದಿನ ತಲೆಮಾರಿನವರು. ಹೀಗಿದೆ ನೋಡಿ ಅರ್ಥ "ಕಣ್ಣಾಮುಚ್ಚಾಲೆ" ಆಟಕ್ಕೆ. ಈಗಿನ ಕಾಲದಲ್ಲೂ ಹಳ್ಳಿಗರ ಬಾಯಲ್ಲಿ ಹೀಗೆಲ್ಲ ರಾಮಾಯಣದ ಕಥೆ ಹರಿದಾಡುತ್ತಿರುವಾಗ, ತ್ರೇತಾಯುಗದಲ್ಲಿ ಜನಿಸಿದ್ದ (ಭಗವಂತ) "ಶ್ರೀರಾಮಚಂದ್ರ" ಎಂಥಾ ಪ್ರಸಿದ್ಧ ರಾಜನಾಗಿದ್ದ? ಎಂಥಾ ವ್ಯಕ್ತಿತ್ವ ಹೊಂದಿದ್ದ? ಎನ್ನುವುದು ನಮ್ಮ ಊಹೆಗೂ ಮೀರಿದ ಸಂಗತಿಯಾಗಿದೆ.

ಆದರೆ ಇಂದಿನ ಕ್ರಿಕೇಟ್ ನಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಒಳಿತನ್ನ ಮಾಡುವುದಿರಲಿ ಒಳ್ಳೆಯ ಮಕ್ಕಳನ್ನು ಒಳ್ಳೆಯವರಾಗಿರಲು ಬಿಡುವುದಿಲ್ಲ ಯಾಕೆಂದರೆ ಪಿಕ್ಸಿಂಗ್, ಬೆಟ್ಟಿಂಗ್ ಎನ್ನುವ ಕೆಂಬೂತದ ಛಾಯೆ. ಹಿಂದಿನ ಆಟಗಳು ನಮಗೆ ಪುಸ್ತಕದ ಬದನೆಕಾಯಿಯನ್ನು ತಿಳಿಸದೆ ನಿಜ ಜೀವನದ ಮೌಲ್ಯಗಳನ್ನು ಸಾರುತ್ತಿದ್ದವು. ಇಂದಿನ ಎಷ್ಟು ಮಕ್ಕಳಿಗೆ ಗೊತ್ತು ನಮ್ಮ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತದ ಮೌಲ್ಯ...? ಮೊಬೈಲ್, ಟಿ.ವಿ, ಕಂಪ್ಯೂಟರ್ ಗೇಮ್ಸ್ ಇಂತಹವುಗಳನ್ನ ಬಿಟ್ಟರೆ ಇನ್ನೊಂದು ಗೊತ್ತಿರುವುದೆಂದರೆ ಕ್ರಿಕೇಟ್. ಹಿರಿಯರಾದ ನಾವು ನಮ್ಮ ಮುಂದಿನ ಪೀಳಿಗೆಗಳಿಗೆ ಹಳೆಯ ಆಟಗಳನ್ನು ಕಲಿಸಿ ಮಹಾ ಕಾವ್ಯಗಳ ತಿರುಳನ್ನು ಚಿಕ್ಕ ಸಾಲಿನ ಮೂಲಕ ಹೇಳಿ ಮೌಲ್ಯ ತಿಳಿಯುವಂತೆ ಮಾಡಬೇಕಾಗಿದೆ.

ವಿನಾಯಕ ಭಾಗ್ವತ ಬೆಟ್ಟೆಮನೆ
ನೀಲಕೋಡು

Sunday, April 24, 2016

ಕೊನೆ ಕ್ಷಣಕೂ ಭರವಸೆ

ಬದುಕಿನ ಚೈತನ್ಯವು
ಈ ಜೀವದ ತ್ರಾಣ
ನೀನುಳಿಸು ನನ್ನ ಪ್ರಾಣ
ನಿನ್ನ ಖುಷಿಯ ಒಳಿತು
ನನ್ನ ಜನ್ಮದ ಗುರಿಯು
ಎಂದಿದ್ದ ನಾನೇ ಕೊಡಿತಿರುವೆ
ಮರೆಯಲಾಗದ ಉಡುಗೊರೆಯ

ಬೆವರ ಹರಿಸಿ
ಬೆಳಸಿದ ಗುಲಾಬಿ ಗಿಡವು
ಹೂ ಬಿಡುವ ಮನ್ನವೇ
ಎದೆಯಾಳ ಚುಚ್ಚಿತು
ಮದುವೆಗೆ ನೀ ಬಂದು
ನಮ್ಮನ್ನು ಹಾರೈಸು
ನೋವಾದ ಜಾಗಕೆ
ಹೂ ಎಸಲಿನಿಂದ ಸಂತೈಸು
ನೀನಿರದ ಹೊಸ ಬಾಳಲಿ
ನಲಿವಿರಲಿ ಎಂದು

ಜೊತೆಯಾಗಿ ಕಲ್ಪಿಸಿದ
ಉಡುಪನ್ನು ತೊಡುವೆ
ಬಿಳಿ ಪಂಚೆ ಶಲ್ಯಕೆ
ನೋವಿನ ಕಲೆಯಾದರೆ
ಮರೆಮಾಚುವೆ
ನಗು ಮೊಗದ ನಾಟಕಕೆ
ನೀ ಸೂತ್ರ ಹರಿದುಬಿಡು

ಆ ದೇವ ಅಂದಾನು
ಕೊನೆಯಲ್ಲಿ ತಥಾಸ್ತು
ನಾ ಮೆಚ್ಚಿ ಕೊಡಿಸಿದ
ಜರತಾರಿ ಸೀರೆಯಲಿ
ಬಂದುಬಿಡು
ನೋವಾದರೂ ನಾ ಕರೆದ
ನನ್ನ ಮದುವೆಗೆ

Tuesday, March 29, 2016

ನಿಸ್ವಾರ್ಥವೆಲ್ಲಿದೆ!!

ಸ್ವಾರ್ಥವೆಲ್ಲಿದೆ ಸ್ವಾರ್ಥವೆಲ್ಲಿದೆ
ಎಂದು ಕೇಳುವ ಪ್ರಮೇಯವಿಲ್ಲಾ
ಆದಿ ಅಂತ್ಯದ ನಡುವಿನಲ್ಲಿ
ಬಂದು ಹೋಗುವ ತೃಣವಿನಲ್ಲೂ
ಹೇಳಲಾಗದು ನಿಸ್ವಾರ್ಥವೆಲ್ಲಿದೆ.

ಸ್ವಾರ್ಥಿಯು ತಾನೆಂದು
ಪೇಳುವವರಾರಿಲ್ಲ
ವಿಶಾಲ ಮನಸಿಗನಿಗೂ
ತಾನೊಬ್ಬನೆ ನಿಸ್ವಾರ್ಥಿಯಾಗಿರಬೇಕೆಂಬ
ಮನದಿಚ್ಛೆಯಿರುವುದು.

ಸ್ವಾರ್ಥವಿರದ ಮನುಜನಿಲ್ಲ
"ಸರ್ವೇ ಜನಾಃ ಸುಖಿನೋ ಭವಂತು"
ಪ್ರಾರ್ಥನೆಯ ತುದಿಯಲ್ಲಿ
ಎಲ್ಲರಿಗಿಂತ ನನಗೋಂದು ಚೂರು
ಜಾಸ್ತಿ ಒಳ್ಳೆಯದಾಗಲಿಯೆಂಬ ವಿನಂತಿ.

ಸ್ವಾರ್ಥವಿಲ್ಲದವನಾರೆಂದು ಕೇಳಿದರೆ
ಜನರ ಬಾಯಲ್ಲಿ ಬರುವುದು "ದೇವ"ನೆಂದು
ಅವನಿಗೂ ಸ್ವಾರ್ಥವಿದೆಯೆಂದರೆ ತಪ್ಪಾಗದು!!
ಬೇರೆ ದೇವನಿಗಿಂತ ಹೆಚ್ಚು ಭಕ್ತರು
ತನಗಿಹರೆಂದು ಬೀಗಬೇಕೆಂದು!!

ದೇವನೊಬ್ಬನಾದರೆ ನಾಮ ಹಲವು
"ನಾಮ"ಗಳಿಗೂ ಸ್ವಾರ್ಥವಿದೆಯೆನ್ನಬಹುದು
ಸರ್ವಸಂಗ ಪರಿತ್ಯಾಗಿ ಯಾದರೂ
ಅವನಂತರಾಳದಲಿ ಸ್ವಾರ್ಥವಿರಬಹುದು
ತನ್ನನುಯಾಯಿಗಳಿಗೆ "ಮೋಕ್ಷ"ಸಿಗಲೆಂದು!!

ಸ್ವಾರ್ಥವು ಬಿಡದು ಅಗೋಚರವನ್ನು
ಆಕಾರವಿರದ ಅಲ್ಲಾಃನಿಗೂ
ಸ್ಪುರದ್ರೂಪಿಯಾಗಬೇಕೆಂಬ ಬಯಕೆ!!
ಶಿಲುಬೆಯೇರಿರುವ ಏಸುವಿಗೆ
ನಿಲ್ಲುಲು ನೆಲ ಸಿಗಲೆಂಬ ಹಂಬಲ!!

ಸ್ವಾರ್ಥವಿದೆ ಹುಸಿದು ತಿನ್ನುವ ಪ್ರಾಣಿಗಳಲಿ
ಹರೆಯುವ ಕ್ರಿಮಿ ಕೀಟಗಳಲಿ
ತನಗೊಂದೆ ಆಹಾರ ಸಿಗಲೆಂಬ ಯೋಚನೆ
ಹಾರುತ ಹಾಡುವ ಪಕ್ಷಿಗಳಿಗೂ
ತನ್ನ ಹಾಡನ್ನೇ ಎಲ್ಲ ಕೇಳಲೆಂಬ ಮಿಡಿತ!!

ಹಸಿರಿಗೆ ಹೆಚ್ಚೆಚ್ಚು ಉಸಿರಿತ್ತು ಸಾರ್ಥಕವಾಗುವಾಸೆ!!
ಶಿಲೆಗೆ ಬಹು ಚಂದದ ಶಿಲ್ಪವಾಗುವಾಸೆ
ಮಣ್ಣಿಗೆ ತುಂಬುವ ಫಸಲು ನೀಡುವಾಸೆ
ಬೆಟ್ಟಗಳಿಗೆ ಬಾನೆತ್ತರ ಬೆಳೆಯುವಾಸೆ
ಜೀವವಿರದ ನಿರ್ಜೀವಿಗಳಿಗೂ ಸ್ವಾರ್ಥವಿದೆ..!!

Monday, March 21, 2016

ದೃಢ ಆತ್ಮವಿಶ್ವಾಸ

ನಿನ್ನ ತುಂಬು ಕಿಸೆಯ ಭಾರಕೆ
ಹಲವು ಸ್ನೇಹಿತರು ಸಂಗಕೆ
ನಿನ್ನ ನಗುವಿನ ಮೆರವಣಿಗೆ
ಬಹಳ ಬಂಧುಗಳು ಜೊತೆಗೆ
ಗೆಲುವಿನಲಿ ಸುತ್ತ ನಿಲ್ಲುವವರು
ಸೋಲಿನಲಿ ಕೈ ಹಿಡಿಯರು

ಸತ್ತ ಮನಸಲಿ ಸೂಕ್ಷ್ಮತೆಯಿರದು
ಬಂದಿದ್ದ ಎದುರಿಸಲು ಹಿಂಜರಿಯದು
ಬಳಿಗೆ ಬರುವ ಜನರಿಗೆಲ್ಲ
ಸಿಹಿ ನಗುವನು ಚಪ್ಪರಿಸು
ನೋವ ನುಂಗಿದ ಜೀವದೊಳಗೆ
ನಲಿನಿನ ಮುಖವಾಡದ ಛಾಯೆ


ಹೊಂಡಕ್ಕೆ ಬಿದ್ದ ವ್ಯಕ್ತಿಗಿಂದು
ಆಳಿಗೊಂದು ಕಲ್ಲೆಸೆಯುವರು
ಬಾಯಿಗೆ ಬಂದ ಮಾತಿನಿಂದ
ಮನಸ ಚುಚ್ಚುವರು ಸೂಜಿಯಿಂದ
ಗಾಳಿಸುದ್ಧಿಯ ಹಬ್ಬಿಸಿ ಊರಲಿ
ಮುಖವನೆತ್ತಿ ನಡೆಯದಂತೆ ಮಾಡುವರು

ಉಗಿಸಿಕೊಂಡು ಬದುಕಲಾಗದು
ತಲೆಯೆತ್ತಿ ನಡೆಯುವ ಮಾನದಲಿ
ಕುನ್ನಿ ಕೂಗಿದರೆ ಹಾಳಾಗದು
ದೇವಲೋಕವೆಂಬಂತೆ ಜೀವಿಸು
ನಿನ್ನ ಹೆತ್ತವರ ಸಂತೈಸು ಘಳಿಗೆಯಲಿ
ದೃಢವಾಗಿರಲಿ ಆತ್ಮವಿಶ್ವಾಸ

Tuesday, March 8, 2016

ಪ್ರೀತಿಯೇ ಲೇಸು

ಏಕೋ ಕಾಣೆ
ನನ್ನ ಮನಸಲಿ
ನಿನ್ನ ಭಾವದ
ಚಿಂತನೆ

ಹೇಗೋ ನಾನೇ
ನಿನ್ನ ಕನಸಲಿ
ನುಗ್ಗಿ ಬರುವ
ಕಲ್ಪನೆ

ಸೊಗಸ ಸೂತ್ರಕೆ
ವಿರಸ ಯಾತಕೆ
ಉಕ್ಕಿ ಹರಿಯುಲಿ
ಎದೆಯ ಭಾವನೆ

ಹಲವು ಚಿಂತನೆ
ಚಿತ್ತ ಚಿತೆಯಲಿ
ಸುಡುತ ಕಮರಿದೆ
ಅಂತರಂಗದಲಿ

ಕುಪಿತ ಕಲ್ಪಿತ
ಸೂಕ್ಷ್ಮ ಚಿತ್ರಕೆ
ಸುಡುವ ಚಿಂತೆ
ಪಾತ್ರವಾಗಿದೆ

ಬಳಿಗೆ ಬೇಕು
ಬಯಕೆ ಸಾಕು
ಜೊತೆಗೆ ಸಾಗುವ
ಅಂಕಿತವ ಹಾಕಲಿ

ಕಾಳಜಿ ಮಾಡುವ
ಕನಸಲಿ ಕಾಡುವ
ಒಲವನೆ ಉಣಿಸುವ
ಜೀವಕೆ ಹಂಬಲ

ನೆನಪಿರಲಿ ಎಂದು
ಬಯಸುವ ಪ್ರೀತಿಗಿಂತ
ನಮ್ಮನು ಬಯಸಿದ
ಪ್ರೀತಿಯೇ ಲೇಸು

Sunday, March 6, 2016

ಕತ್ತಲೆಯ ಹಣತೆ

ಅಳುವ ಮೊಗದಲ್ಲಿ
ನಗುವ ಕನಸೆಲ್ಲಿ
ಕತ್ತಲೆಯ ಹಣತೆಯಲಿ
ದೀಪವೆಲ್ಲಿ.....

ಮುದ್ದು ಮನಸಲ್ಲಿ
ಸದ್ದು ಮಾಡಿಲ್ಲಿ
ಬದುಕಿನ ಬೇಗೆಯಲಿ
ಭಾವವೆಲ್ಲಿ.....

ನಿನಗೊಂದು ಜೀವನವು
ಮೀಸಲಿರಲು
ಬಳಸದನು ಅಳಿಯದಂತೆ
ನಿನ್ನ ಹೆಸರು

ತೆಗಳಿಕೆಯ ಬದುಕು
ನಿನಗೆ ಇರಲು
ತಪ್ಪುಗಳು ಮರುಕಳಿಸವು
ಎಂದು ಬೀಗು

ಹೊಗಳಿಕೆಯ ಬಾಳು
ಒದಗಿಬರಲು
ಶತ್ರುಗಳು ಎರಗುವ
ಭೀತಿ ಉಂಟು

ಅಂತರಂಗದ ಯೋಚನೆ
ಸುಕೃತವ ಬಯಸಲು
ಹಾವಭಾವಗಳೇ ನಿನ್ನ
ವ್ಯಕ್ತಿತ್ವದ ಗುರುತು

ಮನಸಿನಲಿ ಬಯಕೆಯ
ಗೊಂಚಲುಳಿದು
ಹೊರಹೊಮ್ಮುವ ಭಾವವು
ಟೀಕೆಗಳಿಯುವುದು

ಈ ಜನ್ಮ ನಿಮಗಾಗಿ
ಉಗಿದುಕೊಳ್ಳಿ
ಈ ದೇಹ ಸತ್ಕಾರ್ಯಕೆ
ಅಗೆದುಕೊಳ್ಳಿ

Sunday, December 6, 2015

ನಿಶೆಯ ಸೆರಗು

ಮುಬ್ಬು ಮುಗಿಲ ಮಾಲೆಯಲಿ
ಅಡಗಿರುವ ಹೊಂಗಿರಣದ ಪಗಳೆಗಳು
ಚೂರು ಬಂದು ವಿರಹಿ ಎಂದು
ಅತ್ತ ಇತ್ತ ಅರಸಿದೆ ಜೋಡಿಯನು

ಸನಿಹದಲ್ಲಿ ಸಂಗಾತಿಯನು ಕಲ್ಪಿಸಿ
ದಿಟ್ಟ ತನದಿ ನೋಡಿದೆ ಒಂಟಿಯಾಗಿ
ಯಾವ ಮಗ್ಗಲಿನಲಿ ಹೊರಬಂದರೂ
ಕೆಲಸವಾಗದೆ ಬೇಸರಿಸಿತು ಸುಂಕವಿತ್ತರು

ಮೂಡಣದಲಿ ಹೊರಗೆ ಬಂದರೆ
ಕೋಳಿ ಕೂಗಿನ ಕಾಟವು
ಪಡುವಣದಲಿ ಮರೆಯಾದರೆ
ನಿಶಾಚರಗಳ ಮಾರ್ದನಿಯು

ದಡದ ಕಡೆಗೆ ಓಡುವ ಅಲೆಗಳಲಿ
ತಾರತಮ್ಯವಿಲ್ಲದ ತತ್ವಗಳಿವೆ
ಪ್ರಾಣಿಯಾಗಲಿ ಕಸವೇ ಆಗಲಿ
ಒಡಲಲ್ಲಿ ಉಳಿಸದೆ ಹೊರಗೆ ದೂಡುವುದು

ಸುರಿವ ಮಳೆಯಲಿ ಬೇಧವಿಲ್ಲ
ಎಲ್ಲರ ಮನ ತಣಿಸುವುದು
ಬೋರ್ಗರೆವ ತರಂಗಗಳ ಜೊತೆ
ನಿಶೆಯ ಸೆರಗು ಹಿಡಿಯಲೆ ಏಕಾಂತದಲಿ

ಮುಂಜಾನೆಯು ಮುಸ್ಸಂಜೆಯಂತೆ
ರಸಗಳೆ ಇಲ್ಲದಾಗ ನವರಸಗಳಲಿ
ಬೆಳಕ ಹೊತ್ತು ಕಿರಣ ಬಂದರೂ
ಚೈತನ್ಯವಿಲ್ಲದಂತೆ ಜೀವ ಸೊರಗುವುದು