Friday, February 15, 2019

ಅಣ್ತಮ್ಮರ ಬಲಿದಾನ

ಹೆತ್ಹೊತ್ತ ತಾಯಿಯ ಕಣ್ಣೀರ ಒರೆಸಲು
ಮುತ್ತಿಟ್ಟ ಮುದ್ದಿನ ಮಡದಿಯ ಸಲಹಲು
ನೀವಿಟ್ಟಿರಿ ಹೆಜ್ಜೆಯ ದೇಶವ ಕಾಯಲು
ವಿಪತ್ತಿನ ನಿರೀಕ್ಷೆಯನು ಹುಸಿ ಮಾಡಲು

ರಣ ಹೇಡಿ ನರಿಗಳ ಕುತಂತ್ರದಿಂದ
ಎಗರಿ ಬರುತಿರುವ ವಿಷಕಾರಿ ಗುಂಡುಗಳಿಂದ
ದೇಶವನು ರಕ್ಷಿಸಲು ಪಾಪಿ ತಾಣದವರಿಂದ
ಬಲಿದಾನ ಮಾಡಿದಿರಿ ಪ್ರಾಣವನು ಧರೆಯಿಂದ

ಚಿರಕಾಲ ಉಳಿಯಲಿ ನಿಮ್ಮ ನೆನಪು
ಚಿರವಾಗಿ ಸ್ಪುರಿಸಲಿ ತಮ್ಮ ಹುರುಪು
ಪ್ರೇರಣೆಯ ಮರವಾಗಿ ಹೂ ಬಿಡುತಿರಿ
ಚಿರಶಾಂತಿ ಪಡೆದು ಹರಸುತ ಬದುಕಿರಿ

ನಿಮಗಾಗಿ ಏನೂ ಮಾಡಲಾಗಲಿಲ್ಲವೆಂಬ ಕೊರಗು
ನಿಮ್ಮಿಂದ ಬದುಕುಳಿದಿದ್ದೇವೆ ಎಂದರಿಯದೆ
ಪಾತಕಿಗಳಿಗೆ ಹಾರೈಸುವವರ ಮೆರಗು
ನೋಡಿ ಕುದಿಯುತಿದೆ ರಕ್ತ ಅಸಹಾಯಕತೆಯಿಂದ

ದುಷ್ಟ ರಾಜಕೀಯದ ನೆರಳಲಿ ಬೊಗಳುವವರು
ಮಿತಿಗೇಡಿಗಳಾದ ಬುದ್ಧಿವಂತ ಮನುಜರು
ಬಲಿದಾನಕೆ ನ್ಯಾಯವನು ನೀಡರ್ಯಾರು
ವೈರಿಗಳ ಸಂಹರಿಸಲು ಮತ್ತೆ ಹುಟ್ಟಿ ಬರಬೇಕು ನಿಮ್ಮಂತವರು

Monday, February 4, 2019

ಚಿರವಾದ ಗೆಲುವು

ಈ ಹೆಸರಿನಲ್ಲೇನಿದೆ
ಉಸಿರು ನಿಂತ ಮೇಲೆ
ಜನರು ನೀಡುತಾರೆ
ಹೆಣವು ಎಂಬ ಪಟ್ಟಿ
ಲೋಕ ಮರೆಯುತಾವೆ
ನೀನಿದ್ದೆನೆಂದು ಗಟ್ಟಿ

ಎಷ್ಟೇ ದುಡ್ಡು ಕೂಡಿ
ಬದುಕ ನಡೆಸಿದರುನೂ
ಎಷ್ಟೇ ಆಸ್ತಿ ಗಳಿಸಿ
ಜಗದಿ ಮೆರೆದರುನೂ
ಸತ್ತ ಮೇಲೆ ನಿನಗೆ
ಸಿಗುವುದೊಂದೆ ಪಟ್ಟ
ಕೊನೆಗೆ ದೊರೆವುದೊಂದೆ
ಹೆಣವು ಏರುವ ಚಟ್ಟ

ಒಲವು ಪ್ರೀತಿ ಹಂಚಿ
ಜನರ ಗಳಿಸಬೇಕು
ಒಳಿತು ಮಾಡಿ ಜಗಕೆ
ಜನ್ಮ ಸವೆಸು ನೀ ಸಾಕು
ನಿನ್ನ ಹರಣಕೊಂದು
ಅರ್ಥ ಬರುವುದಾಗ
ನಾಲ್ಕು ಮಂದಿ ಬಂದು
ಒಂದ್ಹನಿ ಸುರಿಸಿದಾಗ

ಬೋಳು ಮರಕೆಯೆಂದು
ಬೊಗಸೆ ನೀರ ಉಣಿಸು
ಹಸಿದ ಜೀವಕೆಂದು
ತುತ್ತು ಅನ್ನ ನೀಡು
ದೇಹಿಯೆಂಬ ದೇಹಕೆಂದು
ಆಶ್ರಯ ದಾನ ಮಾಡು
ನೆನಪಾಗಿ ಉಳಿವೆಯಾಗ
ನೇಪತ್ಯ ಸೇರಿದಾಗ

ಕೊಳೆಯಾದರೆ ಅತ್ತ ಇತ್ತ
ಸ್ವಚ್ಛಗೊಳಿಸು ನಿನ್ನ ಸುತ್ತ
ಸೆಳೆದು ಜನರ ಕಣ್ಣ
ಬಳಿದು ಸ್ನೇಹ ಬಣ್ಣ
ಹಾಕಲು ಹೆಜ್ಜೆಯನ್ನ
ತೊರೆಯುವೆ ಲಜ್ಜೆಯನ್ನ
ಪಡೆಯಲು ವಿಶ್ವಾಸವನ್ನ
ಚಿರವಾಗಿ ಗಲ್ಲುವೆ ಸಾವನ್ನ

Tuesday, January 22, 2019

ಪರ್ವಕಾಲ

ಆ ಸೂರ್ಯ ತೊರೆದ ಕಳ್ಳ ಹಾದಿಯ
ಈ ಭೂಮಿ ಕ್ರಮಿಸಲು ಸರಿ ದಾರಿಯ
ಹಗಲೆಂಬ ಹೊತ್ತು ಹೆಚ್ಚಾಗಲು
ಇರುಳೆಂಬ ಕೆಡುಕು ದೂರಾಗಲು
ಬಾಳೆಂಬ ತೇರು ಜೊತೆ ಸಾಗಲಿ

ಒಳ್ಳೊಳ್ಳೆ ಕೆಲಸ ಸಂಧಿಸಲಿದೋ ಬಂದಿದೆ
ಉತ್ತರಾಯಣದ ಪರ್ವಕಾಲ
ಹುಳುಕೆಂಬ ಬಂಡೆ ಕರಗುತ ಅಳಿಯಲಿದೆ
ನಾನು ನನ್ನದೆಂಬ ಅಹಮ್ಮಿನ ಶೂಲ

ಬೆಳೆದ ಬೆಳೆಗೆ ಸಿಗಲಿ
ಹೊಸ ಆಸೆ ಈಡೇರಿಸುವ ದರ
ಸುಗ್ಗಿಕಟ್ಟಿ ಕುಣಿಯಲಿ
ರಸ ಬಾಧೆ ಅಡಗಿಸುವ ಕರ

ಎಳ್ಳು ಬೆಲ್ಲವ ತಿಂದು ಒಳ್ಳೆ ಮಾತಾಡಬೇಕೆಂಬುದು
ಬರಿ ಮಾತಾಗದಿರಲಿ
ಜಲಸೆಯಿಂದ ಎಗರಿ ವಲಸೆ ಹೋಗದ
ನಿಸ್ವಾರ್ಥದ ಬದುಕಿಗೆ ನಾಂದಿಯಾಗಲಿ

ಬೆಳಗಲಿ ಜಗದ ಜ್ಯೋತಿಯು
ಆರದ ನಂದಾದೀಪವಾಗಿರಲು
ಗುಡಿಸಲಿ ಮನದ ತೊಚ್ಛೆಯನು
ಸ್ವಚ್ಛ ಸಮೃದ್ಧಿಯ ಗುಡಿಯಾಗಿರಲು

Saturday, January 12, 2019

ಹಡಗಿನಂತ ಬದುಕು

ಬದುಕು ಮಾಸಬಹುದೇ ಹಾಗೆ
ತಾರೆ ಮಿನುಗದೆ
ಚಿತ್ರ ಏರಬಹುದೇ ಹೀಗೆ
ಗೋಡೆ ಕುಣಿಕೆಗೆ
ಬಾನ ದಾರಿಯಲ್ಲಿ ಚಂದ್ರ
ಬೆಳಗೊ ಹೊತ್ತಲಿ
ಸೂತ್ರವಿರದ ಜನ್ಮದಲ್ಲಿ
ಪಾತ್ರ ಯಾತಕೆ?

ಬೆಂದ ಬೇಳೆ ಹುಳುಕು ಹೊಟ್ಟೆಗೆ
ನೊಂದ ಜೀವ ಸುಡುವ ಚಟ್ಟಕೆ
ಕಾಲಚಕ್ರ ತಿರುಗುತಿಹುದು
ಒಳಿತು ಕೆಡುಕ ನಡುವೆಯು

ಸಂದ ಬಯಕೆ ಇಚ್ಛೆ ಮನಕೆ
ಕಂದ ಕೊರತೆ ತೊಚ್ಛೆ ಸುಖಕೆ
ಏಳುಬೀಳಿನಾಟ ನಡೆವುದು
ನಿನ್ನ ಹಾದಿ ಕ್ರಮಿಸಲು

ಎಲ್ಲಿ ತಿರುಗಿ ಏನ ಕೇಳಲಿ
ಇಲ್ಲಿ ಕಾವಲು ಸಿಗುವುದೇ?
ಯಾರು ಯಾರಿಗಾಗರೆಂದು
ಸ್ವಂತ ಕೆಲಸ ಆಗದೆ

ಹುಟ್ಟಿ ಬರುವ ಪ್ರಾಣಿಗೆಂದು
ಕರುಣೆ ತೋರುವ ಜೀವವುಂಟು
ಮರೆಯಲಾದರೂ ಅಳುತ ಮರುಗುವ
ದೇಹ ಇರುವುದು ಕಾಣದೆ

ಬರೆದ ಹಾಗೆ ಸಾಗೊ ಚೇತನ
ತೊರೆಯು ಓಡುವಂತೆ ಶರಧಿಗೆ
ಕುಣಿವ ಕಡಲ ನಡುವೆ ಮುಳುಗದ
ಹಡಗಿನಂತೆ ಮೆರೆವ ಭಾವ ಬದುಕಿದು

Monday, January 7, 2019

ಶ್ರೀಮತಿಗೆ ಸೀಮಂತವೇ ಶೃಂಗಾರ

ಮೊದಲ ನಕ್ಷತ್ರದ ಹೆಸರೆಂದರೆ ಅಶ್ವಿನಿ
ಆಗಿಹಳು ನನ ಬಾಳ ಪ್ರೇಮಸತಿ
ನೋವು ನಲಿವಿನಲಿ ನಿಜ ಗೆಳತಿ
ನಮ್ಮಿಬ್ಬರ ಕನಸೀಗ ಆಗುವುದು ನನಸು
ಜೊತೆಯಾಗಿ ಬರಲು ಪುಟ್ಟ ಕೂಸು

ಇಬ್ಬರು ಮೂರಾಗುವ ಈ ಹೊತ್ತಿನಲಿ
ಸಂಸಾರ ವೃದ್ಧಿಯ ಹೊಸ್ತಿಲಲಿ
ಕನಸು ಕಂಗಳ ತುಂಬ ನಲಿವ ಗಿಲಕಿ
ಹೃದಯದಂಗಳದಲ್ಲಿ ಇದುವೆ ಖುಷಿಯ ಗಿರಕಿ

ಶ್ರೀಮತಿಗೆ ಸೀಮಂತ ನಾಂದಿಯಾಯಿತು
ಸಿಂಗಾರದ ಬಾಳಿಗೆ ದಾರಿಯಾಯಿತು
ಹುಳಿಮಾವು, ಹುಣಸೆಗಳ
ಬಯಸಿ ತಿಂದೆ
ಚಿನ್ನದೊಡವೆಗಳನು ರತ್ನದಂತವಳಿಗೆ ನಾನೇ ತಂದೆ

ಬಾಳ ಗೂಡಿನಲಿ ಕೇಳಬೇಕಿದೆ ಹೊಸರಾಗ ಚಿಲಿಪಿಲಿ
ಹೆಣ್ಣು ಗಂಡೆನದೆ ಕೇಳಲಿ ನಗುವ ಕಂದನ ತೊದಲುಲಿ

ಕೇಳಿಸು ಕಂದಗೆ ರಾಮ, ಕೃಷ್ಣರ ಕಥೆಗಳನು
ಗರ್ಭದೊಳಗೇ ಆಲಿಸಲಿ ಹಿರಿಯ ವೀರ ಯೋಧರ ವ್ಯಥೆಗಳನು

ಹಿರಿಯ ಜೀವಗಳ ಹಾರೈಕೆ ಇರಲಿ
ಸದ್ವಿಚಾರಗಳ ಆರೈಕೆ ಸಿಗಲಿ
ಕೇಳಿ ತಿಳಿಯುತ, ಓದಿ ಕಲಿಯುತ ನವಮಾಸ
ತುಂಬಲಿ
ಕಾತರದ ಕಾಯುವಿಕೆ ತೀರಲಿ ಸಖಿ
ಸುಖಿಯಾಗಲಿ ಜೀವಗಳೆರಡಾಗುವ ಹೆರಿಗೆಯ ಆಯಾಸ

Sunday, December 30, 2018

ಸಸ್ಯ ಸಾಮರಸ್ಯ

ಜಾರದಿರಲಿ ಹನಿ ನೀರು
ಬೊಗಸೆಯಿಂದಾಚೆಗೆ
ಬುದ್ಧಿಯಿರಲಿ ಒಂಚೂರು
ಸ್ಥಾನಮಾನದಿಂದೀಚೆಗೆ

ಕಡಿಯದಿರು ಹೆಮ್ಮರವ
ತಂಪೆರೆಯುವ ಮೂಲವ
ಕದಡದಿರು ಜಗ ನಿಯಮವ
ಕಾಪಾಡು ಪ್ರಾಣಿ ಸಂಕುಲವ

ಬಾಯಲ್ಲಿ ಬಡಾಯಿ ಕೊಚ್ಚಿ
ಸ್ವಪ್ರತಿಷ್ಠೆ ವೈಭವೀಕರಿಸದಿರು ಮೂಢ
ಕಾದಿಟ್ಟ ದಿನದಂದು ಫಲಕವ ಹಚ್ಚಿ
ಜಾಗೃತಗೊಳಿಸುವೆನೆಂಬ ನಂಬಿಕೆಯು ಬೇಡ

ಹೆಸರಿಗೆ ಮಾತ್ರ ದಿನವೆಂದುಕೊಂಡು
ಆ ಕ್ಷಣಕ್ಕಷ್ಟೇ ಮುಗಿಯದಿರಲಿ ಹಬ್ಬವು
ಕೇವಲ ಜಾಲತಾಣಗಳ ಮಿತಿಯಲಿರದೆ
ಬದುಕಿನ ದಿನಚರಿಯಾಗಲಿ ಬರಿ ಮಾತಾಗದೆ

ತಿಳಿದಿಕೊ ತರುವಿರದ ಇಳೆಯು
ಉಗುಳುವ ಬೆಂಕಿ ಮಳೆಯು
ಕರಡಿ ನೀರಾದ ಮಣ್ಣು ಮರಳಾಗಿ
ಪ್ರಳಯದಲೆಗಳ ಎರಗಿಸುವವು ಜೋರಾಗಿ

ನೆರಳಿಗಾಗಿ ತುಸು ಉಸಿರಿಗಾಗಿ
ಕಡಿಯದಿರು ಹಸಿರು ಮರವ
ನೀರಡಿಕೆಗಾಗಿ ಹನಿ ನೀರಿಗಾಗಿ
ಕೊಲ್ಲದಿರು ಜೀವ ಜಲವ

ಮರೆತರೆ ಕ್ರಮಬದ್ಧ ಕಾರ್ಯವನು
ಅನುಭವಿಸುವೆ ಕರುಣೆಯಿರದ ಕರ್ಮವನು
ಉಳಿಯಲು ನೆಡು ಸಸ್ಯದ ಬೇರನ್ನು
ಬದುಕಲು ದುಗುಡ ರಹಿತ ಬಾಳನ್ನು

ಬೆಳೆಸೋಣ ಸಸ್ಯರಾಶಿಯನ್ನ
ಮೆರೆಯಿಸೋಣ ಸಸ್ಯಕಾಶಿಯನ್ನ
ಉಳಿಸೋಣ ಒಂದು ಹನಿ ನೀರನ್ನ
ಬದುಕೋಣ ಸಾಮರಸ್ಯದ ಬದುಕನ್ನ 

Wednesday, December 19, 2018

ಹಸಿವಿರದ ಹೊಂದಾಣಿಕೆ

ರೆಕ್ಕೆ ಬಲಿತ ಹಕ್ಕೀಯೆಂದೂ
ಗೂಡಲ್ಲಿ ಬಂಧಿಯಾಗುವುದೇ?
ಮಾತು ಕಲಿವ ಮಗುವುಯೆಂದೂ
ತೊದಲು ಮಾತಾಡದೆ ಇರುವುದೇ?
ಸಮಯ ಬಂದ ಕ್ಷಣಕೆ ಸತ್ತು
ಹಿಡಿ ಬೂದಿಯಾಗುವುದು ಈ ದೇಹ
ಹೀಗೆ ಆಗುವುದೇ ವಿಧಿ ಲಿಖಿತ
ತಪ್ಪದೇ ನಡೆಯುವುದು ಇದು ಖಚಿತ

ಜನಿಸಿದ ಕೂಸಿನ ನಗುವ ಕಂಡು
ಮನಸೋಲದ ಹೆತ್ತವರು ಇರರೂ ಎಂದೂ
ನಾಳೆ ಬೆಳೆವ ಮಕ್ಕಳ ಮೇಲೆಂದು
ಅವಲಂಬಿತವಾಗದಿರು ಸಲಹುವರು ಎಂದೂ
ಗೆಲುವೇ ಜೊತೆಯಿರದು ಸೋಲೇ ಉಳಿದಿರದು
ಭರವಸೆಯಲಿ ಬದುಕುತಿರು ಬಾಳಲಿಯೆಂದೂ

ವರಿಸಿದ ಸಂಗಾತಿಯ ಮಂದಹಾಸ
ಸೂರೆಗೊಂಡರೆ ಆಗುವರು ಚರಣದಾಸ
ಅರಳಿದ ಕಾಂತೀಯ ಚಂದ್ರಹಾಸ
ಸೋಲೆಂದರೆ ನೀಡುವುದು ಸ್ಪೂರ್ತಿಯಾಕಾಶ
ಪ್ರೀತಿ ಶಾಶ್ವತವಲ್ಲ ದ್ವೇಷ ಸಂಸ್ಕಾರವೇ ಅಲ್ಲ
ಹಸಿವಿರದ ಹೊಂದಾಣಿಕೆಯ ಸಂಬಂಧಕೆ ಸಾವಿಲ್ಲ