Friday, February 15, 2019

ಅಣ್ತಮ್ಮರ ಬಲಿದಾನ

ಹೆತ್ಹೊತ್ತ ತಾಯಿಯ ಕಣ್ಣೀರ ಒರೆಸಲು
ಮುತ್ತಿಟ್ಟ ಮುದ್ದಿನ ಮಡದಿಯ ಸಲಹಲು
ನೀವಿಟ್ಟಿರಿ ಹೆಜ್ಜೆಯ ದೇಶವ ಕಾಯಲು
ವಿಪತ್ತಿನ ನಿರೀಕ್ಷೆಯನು ಹುಸಿ ಮಾಡಲು

ರಣ ಹೇಡಿ ನರಿಗಳ ಕುತಂತ್ರದಿಂದ
ಎಗರಿ ಬರುತಿರುವ ವಿಷಕಾರಿ ಗುಂಡುಗಳಿಂದ
ದೇಶವನು ರಕ್ಷಿಸಲು ಪಾಪಿ ತಾಣದವರಿಂದ
ಬಲಿದಾನ ಮಾಡಿದಿರಿ ಪ್ರಾಣವನು ಧರೆಯಿಂದ

ಚಿರಕಾಲ ಉಳಿಯಲಿ ನಿಮ್ಮ ನೆನಪು
ಚಿರವಾಗಿ ಸ್ಪುರಿಸಲಿ ತಮ್ಮ ಹುರುಪು
ಪ್ರೇರಣೆಯ ಮರವಾಗಿ ಹೂ ಬಿಡುತಿರಿ
ಚಿರಶಾಂತಿ ಪಡೆದು ಹರಸುತ ಬದುಕಿರಿ

ನಿಮಗಾಗಿ ಏನೂ ಮಾಡಲಾಗಲಿಲ್ಲವೆಂಬ ಕೊರಗು
ನಿಮ್ಮಿಂದ ಬದುಕುಳಿದಿದ್ದೇವೆ ಎಂದರಿಯದೆ
ಪಾತಕಿಗಳಿಗೆ ಹಾರೈಸುವವರ ಮೆರಗು
ನೋಡಿ ಕುದಿಯುತಿದೆ ರಕ್ತ ಅಸಹಾಯಕತೆಯಿಂದ

ದುಷ್ಟ ರಾಜಕೀಯದ ನೆರಳಲಿ ಬೊಗಳುವವರು
ಮಿತಿಗೇಡಿಗಳಾದ ಬುದ್ಧಿವಂತ ಮನುಜರು
ಬಲಿದಾನಕೆ ನ್ಯಾಯವನು ನೀಡರ್ಯಾರು
ವೈರಿಗಳ ಸಂಹರಿಸಲು ಮತ್ತೆ ಹುಟ್ಟಿ ಬರಬೇಕು ನಿಮ್ಮಂತವರು

No comments:

Post a Comment