Friday, February 14, 2020

ಮುಂದೊಂದು ದಿನ ಹೀಗಾಗಬಹುದೇ?

ಮಾನವನ ವಿನಾಶಕ್ಕೆ ಯಾಂತ್ರೀಕರಣವೇ ನಾಂದಿ

ಬೆಳೆಯುತ್ತಿರುವ ಆಧುನಿಕ ಯುಗದಲ್ಲಿ ಹಲವಾರು ಆಧುನಿಕ ಸಾಧನಗಳು ಮನುಷ್ಯನನ್ನು ಸೆಳೆಯುತ್ತಿವೆ ಮತ್ತು ಅವನನ್ನು ಆಲಸ್ಯದ ಆಗರವನ್ನಾಗಿಸುತ್ತಿವೆ. ಇದಕ್ಕೆಲ್ಲಾ ಕಾರಣಗಳನ್ನು ಹುಡುಕಿದರೆ, ಹೊರಬರುತ್ತಿರುವ ಒಂದೊಂದೆ ಯಂತ್ರಗಳು ಮಾನವನನ್ನು ಸ್ವಾವಲಂಬಿ ಜೀವನದಿಂದ ಪರಾವಲಂಬಿಯನ್ನಾಗಿಸುತ್ತದೆ. ಇಂತಹ ವಿಚಾರಗಳು ಮುಂದೊಂದು ದಿನ ಹೀಗೂ ಆಗಬಹುದೆಂಬ ಕಲ್ಪನೆ ಮತ್ತು ಆಲೋಚನೆಗೆ ಎಡೆಮಾಡಿಕೊಡುತ್ತಿವೆ.

ಹೀಗೊಂದು ವಾದವುಂಟು, ಆಧುನಿಕ ಯಂತ್ರಗಳ ಆವಿಷ್ಕಾರದಿಂದ ಮನುಷ್ಯನಿಗೆ ಸಮಯಾವಕಾಶಗಳು ವಿಫುಲವಾಗಿ ದೊರೆಯುತ್ತಿದ್ದು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಾಯಕವಾಗಿದೆಯೆಂದು. ಆದರೆ ಇಂತಹ ಜನರ ಪ್ರಮಾಣ ಇರುವುದು ಬೆರಳಣಿಕೆಯಷ್ಟು ಮಾತ್ರ. ಹಾಗಾಗಿ ಅಧಿಕವಾಗಿರುವ ಆಳಸಿ ಜನರ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಯೋಚಿಸಿದರೆ ಹೇಗೆ ಬುಟ್ಟಿಯಲ್ಲಿರುವ ಹಣ್ಣುಗಳಲ್ಲಿ ಒಂದೆರಡು ಹಣ್ಣುಗಳು ಹಾಳಾಗಿದ್ದರೆ ಇಡಿ ಬುಟ್ಟಿಯ ಹಣ್ಣುಗಳೆಲ್ಲವು ಹಾಳೆಂದು ಪರಿಗಣಿಸುತ್ತೇವೆಯೋ ಹಾಗೆ ಇಲ್ಲಿ ಅಧಿಕ ಪ್ರಮಾಣದಲ್ಲಿರುವ ಆಳಸಿಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಆಧುನಿಕ ಉಪಕರಣಗಳಿಂದ ಮಾನವ ಕುಲ ಆಳಸಿಗಳಾಗುತ್ತಿವೆಯೆಂದು ಹೇಳಿದರೆ ಪ್ರಮಾದವಾಗಲಾರದು.

ಇಂತಹ ವಿಚಾರಗಳು ವಿಚಾರಿಯ ಮನದಾಳದಲ್ಲಿ ಭುಗಿಲೆದ್ದು ಸ್ಪೋಟಗೊಂಡು ಬರಹವಾಗಿ ಅಕ್ಷರಗಳ ರೂಪದಲ್ಲಿ ಹೊರಬಂದಿವೆ. ಈ ಯಾಂತ್ರಿಕರಣ, ಜೀವ ಜಂತುಗಳನ್ನು ಹೇಗೆ ತನ್ನ ತೆಕ್ಕೆಗೆ ತೆಗೆದುಕೊಂಡು ಮಾನವ ಲೋಕವನ್ನು ಆಳುತ್ತವೆ ಮತ್ತು ಇವೆಲ್ಲ ಮಾನವನ ವಿನಾಶಕ್ಕೆ ಹೇಗೆ ಕಾರಣವಗಬಹುದು ಎಂಬ ವಿಚಾರಗಳ ಮಂಥನ ಹೀಗಿವೆ.

ಮನುಷ್ಯನಾಗುವನು ಆಲಸ್ಯದ ಆಗರ:

ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಮಾನವ ಆಲಸ್ಯದ ಬದುಕಿಗೆ ಬೇಕಾದಂತಹ ಎಲ್ಲಾ ಯಂತ್ರಗಳನ್ನು ಆವಿಷ್ಕರಿಸಿ ಮೆರೆಯುತ್ತಿದ್ದಾನೆ. ಆದರೆ ಇದು ಮುಂದೊಂದು ದಿನ ತನ್ನ ಅಳಿವಿಗೆ ನಾಂದಿಯಾಗಬಹುದು ಎಂಬ ಪರಿಕಲ್ಪನೆಯೂ ಸಹ ಪಾಪ ಹುಲು ಮಾನವನಿಗಿಲ್ಲ. ಯಾಕೆಂದರೆ ತನ್ನ ಅಪರಿಮಿತವಾದ ಆವಿಷ್ಕಾರ ಮತ್ತು ಬುದ್ಧಿವಂತಿಕೆಯಿಂದ ಕೃತಕ ಮಾನವನನ್ನು ಸೃಷ್ಟಿಸಿ ಅವುಗಳಿಗೆ ಬದುಕ ನಡೆಸಲು ಬೇಕಾದ ಮತ್ತು ಕ್ರಿಯೆ, ಪ್ರತಿಕ್ರಿಯೆಗಳನ್ನು ಹೇಗೆ ಮಾಡಬೇಕೆಂಬ ಅರಿವನ್ನು ಮೂಡಿಸಿರುವುದು ಕೃತಕ ಮಾನವನ ಯುಗ ಪ್ರಾರಂಭದ ಸಂಕೇತವಾಗಿದೆ.

ಅಷ್ಟೇ ಅಲ್ಲದೆ ನಮ್ಮ ಇಂದಿನ ಬದುಕಿಗೂ ಮತ್ತು ಕೇವಲ ೨೦-೨೫ ವರ್ಷಗಳ ಹಿಂದಿನ ಬದುಕಿಗೂ ಇರುವ ವ್ಯತ್ಯಾಸವನ್ನು ತುಲನೆ ಮಾಡಿ ನೋಡಿ. ಆಗ ನಿಮಗೆ ಅರ್ಥವಾಗುತ್ತದೆ ಈಗ ನಾವೆಷ್ಟು ಆಲಸಿಗಳಾಗಿದ್ದೇವೆ ಮತ್ತು ಅವಲಂಬಿತರಾಗಿದ್ದೇವೆ ಎಂಬುದು (ಕೆಲೆವೇ ಕೆಲವರನ್ನು ಹೊರತುಪಡಿಸಿ). ಮೊದಲ್ಲೆಲ್ಲ ೫-೧೦ ಕಿ.ಮಿ ನಡೆದು ಶಾಲೆಗೆ ಹೋಗುತ್ತಿದ್ದೆವು ಆದರೆ ಈಗ ಬರಿ ೧ ಕಿ.ಮಿ ಕ್ರಮಿಸಲು ಆಟೋ, ಬೈಕ್ ಅಥವಾ ಬೇರಿನ್ನಾವುದೇ ರೀತಿಯ ವಾಹನದ ಅಗತ್ಯತೆ ಉಂಟಾಗಿದೆ. ಕೈಯಲ್ಲೇ ಮೊಬೈಲ್ ಹಿಡಿದು ಜಗತ್ತಿನ ವರದಿಗಳನ್ನು ಪಡೆಯಬಹುದು, ಆನಂದಿಸಬಹುದು ಮತ್ತು ಹಣದ ವ್ಯವಹಾರ, ಬೇಕಾಗಿರುವುದನ್ನು ಕಾಯ್ದಿರಿದುವುದು ಮತ್ತು ಮನೆಗೆ ತರಿಸಿಕೊಳ್ಳುವುದು ಮತ್ತು ಹತ್ತು ಹಲವು ಕೆಲಸಗಳನ್ನು ಕುಳಿತಲ್ಲಿಯೇ ಮಾಡಬಹುದು. ಮರ ಹತ್ತಲು, ನಾಟಿ ಮಾಡಲು, ಕಟಾವಿಗೆ, ಭೂಮಿ ಅಗೆಯಲು ಹೀಗೆ ಪ್ರತಿಯೊಂದು ಕೆಲಸ ಮಾಡಲೂ ಸಹ ಯಂತ್ರಗಳ ಮೊರೆ ಹೋಗಿದ್ದೇವೆ. ಅಂದರೆ ಸಶಕ್ತನಾಗಿ ದುಡಿದು ತಿನ್ನುವ ಬದಲು ಯಂತ್ರಗಳ ಸಹಾಯದಿಂದ ಫಲ ಪಡೆದು ಅದರ ದಾಸರಾಗುತ್ತಿದ್ದೇವೆ. ಅತ್ಯಾಧುನಿಕ ಕೃಷಿ ಹಾಗು ಇನ್ನಿತರ ಉಪಕರಣಗಳು ಬಂಜರು ಭೂಮಿಯನ್ನು ಫಲವತ್ತಾಗಿಸುವುದು "ಪರಿವರ್ತನೆ ಜಗದ ನಿಯಮ" ಎಂಬ ಮಾತಿಗೆ ಪೂರಕವಾಗಿದೆ ಎಂದೆನಿಸುತ್ತಿದೆ.

ಅಷ್ಟೇ ಅಲ್ಲದೆ ಇದಕ್ಕೆ ಪೂರಕವೆನ್ನುವಂತೆ ಸರ್ಕಾರದಿಂದ ಹೊರಬರುತ್ತಿರುವ ಹಲವು ಯೋಜನೆಗಳು  ಮನುಷ್ಯನನ್ನು ಇನ್ನಷ್ಟು ಮತ್ತಷ್ಟು ಆಳಸಿಯನ್ನಾಗಿಸುತ್ತಿವೆ. ತಾನು ದುಡಿದು ತಿನ್ನಬೇಕು ಎನ್ನುವ ಇಚ್ಛಾಶಕ್ತಿ ಮತ್ತು ಅಂತಃಕರಣವನ್ನೇ ದುರ್ಬಲಗೊಳಿಸುತ್ತಿವೆ. ಮೊದಲು ಮಾನವರ ಬದುಕು 'ಆಳಾಗಿ ದುಡಿ ಅರಸನಾಗಿ ಉಣ್ಣು' ಎಂಬ ಗಾದೆ ಮಾತಿನಂತಿತ್ತು ಆದರೆ ಅದೀಗ 'ಸೋಮ್ವೇರಿಯಾಗಿ ಇರು ರೋಗಿಯಾಗಿ ಸಾಯಿ' ಎಂದು ಬದಲಾದಂತಿದೆ. ನಮ್ಮ ರೈತಾಬಿ ವರ್ಗದವರಿಗೆ ಸ್ವಾವಲಂಬಿಯಾಗಿ ಬದುಕಲು ಬೇಕಾದ ಸವಲತ್ತುಗಳನ್ನು ಒದಗಿಸದೇ ಅವರನ್ನು ಆಶಕ್ತರು, ಪರಾವಲಂಬಿಗಳು, ಆಲಸಿ, ದುಡಿದು ತಿನ್ನಬೇಕೆಂಬ ಧ್ಯೇಯವನ್ನೇ ಮರೆತವರಂತಾಗಿಸುವ ಮತ್ತು ಆತ್ಮಸಾಕ್ಷಿಯನ್ನೇ ಕೊಂದು ಬದುಕುವಂತಹ ಹಲವಾರು ಯೋಜನೆಗಳನ್ನು ತಂದು ಅವರನ್ನು ಮೂಗಿಗೆ ತುಪ್ಪ ಸವರಿ, ಹೂವಿನಿಂದ ಹಿಂಸಿಸದಿರಿ ಎಂದು ಘನ ಸರ್ಕಾರವನ್ನು ಆಗ್ರಹಿಸೋಣ, ಆಗಬಹುದೇ? ಹೀಗೆಲ್ಲವು ಬೆಳೆಯುತ್ತಾ ಮನುಷ್ಯನನ್ನು ಆಲಸಿಯನ್ನಾಗಿಸುತ್ತಿವೆ ಎಂಬುದು ವಿಷಾದನೀಯ.

ಮಾನವ ವಿನಾಶಕ್ಕೆ ನಾಂದಿ:

ಹೀಗೆ ಮುಂದುವರಿಯುತ್ತಾ ಒಮ್ಮೆ ಯೋಚಿಸಿ, ಈ ಕೃತಕ ಮಾನವರ ಸಂಖ್ಯೆ ಏರಿದಂತೆ ಹುಲು ಮಾನವನಿಗೆ ಉಳಿವುಂಟೇ? ಇದು ಹೇಗಾಗುತ್ತದೆಂದು ಆಲೋಚಿಸಿದಾಗ ನಾವು ನಂಬುವ ಮತ್ತು ಕೆಲವೊಂದು ಐತಿಹಾಸಿಕ ನಿದರ್ಶನಗಳಿಂದ ಸಾಬೀತಾಗಿಹುದು. ತೆಲೆತಲಾಂತರಗಳಿಂದ ನೆಲೆ ಕಂಡುಕೊಂಡಿದ್ದ ಕಾಶ್ಮೀರಿ ಪಂಡಿತರುಗಳು ಹೇಗೆ ರಾತ್ರಿ ಬೆಳಗಾಗುವುದರಲ್ಲಿ ಮನೆ ಮಠಗಳನ್ನು ಕಳೆದುಕೊಂಡು ನಿರಶ್ರಿತರಾದರೋ ಹಾಗೆ ನಾವೇ ಸೃಷ್ಟಿಸಿದ ಕೃತಕ ಮಾನವ ಮಾನವ ಕುಲವನ್ನೇ ನಾಶ ಮಾಡಲು ಅದೆಷ್ಟು ದಿನ ಬೇಕಾಗಬಹುದು?

ಅಲ್ಲದೆ ನಮ್ಮ ಪುರಾಣದ ಸತ್ಯ ಘಟನೆಗಳನ್ನು ನಿದರ್ಶನವನ್ನಾಗಿ ಪಡೆಯೋಣ. ಶ್ರೀ ವಿಷ್ಣುವಿನ ದಶಾವತಾರದ ನಿದರ್ಶನಗಳನ್ನು ಅವಲೋಕಿಸೋಣ. ಯಾಕೆಂದರೆ ಬೀಜ ಮೊಳಕೆಯಾಗಿ ಗಿಡವಾಗಿ ಮರವಾಗಿ ಫಲ ನೀಡುತ್ತವೆಯೋ ಇದು ಹಾಗೆ ಎಂದರೆ ತಪ್ಪಾಗಲಾರದು.

ನೋಡಿ, ದಶವತಾರದಲ್ಲಿ ಚಿಕ್ಕ ಅವತಾರದಿಂದ ದೊಡ್ಡದಾಗುತ್ತ ಹೇಗೆ ನರ ಮತ್ತು ಪ್ರಾಣಿಯ ಅವತಾರದ ಮೂಲಕ ಮಾನವನ ಅವತಾರವಾಗುತ್ತವೆಯೋ ಹಾಗೆ. ದಶವತಾರದ ಮೊದಲೆನೆಯ ಅವತಾರ ಮೀನಿನ ಅವತಾರ ಅಂದರೆ ಚಿಕ್ಕ ಪ್ರಾಣಿ. ನಂತರ ಆಮೆಯ ಅವತಾರ ಸ್ವಲ್ಪ ದೊಡ್ಡದು (ನೀರು ಮತ್ತು ಭೂಮಿಯ ಮೇಲೆ ವಾಸಿಸುವ ಪ್ರಾಣಿಯ ಅವತಾರ), ಆನಂತರ ಹಂದಿಯ ಅವತಾರ ಇನ್ನು ದೊಡ್ಡದು, ತದನಂತರ ನರಸಿಂಹನ ಅವತಾರ ನರ ಮತ್ತು ಪ್ರಾಣಿಯ ಬೆರಕೆ, ಆಮೇಲೆ ಚಿಕ್ಕ ಮೂರ್ತಿಯಾದ ವಾಮನ ಅವತಾರ ಅದೂ ಮತ್ತೆ ಪುನಃ ಚಿಕ್ಕದರಿಂದ ಪ್ರಾರಂಭ. ತದನಂತರ ಪೂರ್ಣ ಪ್ರಮಾಣದ ಮಾನವನ ಅವತಾರಗಳು ಆಗಿದ್ದು. ಇವು ಸಹ ಚಿಕ್ಕದರಿಂದ ದೊಡ್ಡದಾಗಬೇಕು ಎಂಬುದನ್ನು ಪ್ರತಿನಿಧಿಸುತ್ತಿವೆ.

ಮೇಲಿನ ನಿದರ್ಶನಗಳನ್ನು ಓದಿದಾಗ ನಿಮಗನಿಸಬಹುದು ಯಾಕೆ ಇವುಗಳ ಬಗ್ಗೆ ಮಾತಾಡುತ್ತಿದ್ದಾನೆ ಮತ್ತು ಪುರಾಣಕ್ಕು ಆಧುನಿಕತೆಗೇನು ಸಂಬಂಧ ಎಂಬುದು. ಯಾಕೆಂದರೆ ಇಲ್ಲಿ ಸಂಬಂಧಗಳಿವೆ. ಈಗ ಈ ಕೃತಕ ಮಾನವ ಹುಟ್ಟಾಗಿದೆ ಮತ್ತು ಅದರ ಅವಶ್ಯಕತೆ ನಿಯಮಿತವಾಗಿದೆ. ಆದರೆ ಈ ಕೃತಕ ಮಾನವನಿಗೆ ಹಲವು ತರಭೇತಿಗಳನ್ನು ನೀಡಿ ಮಾನವನ ಪರ್ಯಾಯ ಆಗಿರುವುದು ಕಣ್ಣೆದುರಿಗೆದೆ. ಇವುಗಳು ಹೀಗೆ ಮುಂದುವರಿದಾಗ ಕೃತಕ ಮಾನವ ಇನ್ನೊಂದು ಕೃತಕ ಮಾನವನನ್ನು ಸೃಷ್ಟಿಸಲು ಪ್ರಾರಂಭಿಸಿದಾಗ ಮಾನವ ಪ್ರಾಣಿಯ ಯುಗಾಂತ್ಯವಾಗಲು ಶುರುವಾಗಬಹುದು. ಅದಲ್ಲದೆ ಇವಕ್ಕೆ ಪೂರಕವೆಂಬಂತೆ ಮಾನವನು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯಲ್ಲಿ ತನ್ನಿಚ್ಛೆಯಂತೆ ಹಸ್ತಕ್ಷೇಪ ಮಾಡಿ ಮಗುವನ್ನು ಪಡೆಯುವ ಆವಿಷ್ಕಾರ ಮಾಡಿರುವುದು ಅಪಾಯಕಾರಿಯ ಲಕ್ಷಣ ಎನ್ನಬಹುದೇ?

ಧರ್ಮ ಜಾತಿ ಪಂಥಗಳ ಕಲಹ ಅಳಿಯುವುದು:

ಮಾನವ ಕುಲಗಳೆ ಇಲ್ಲದ ಮೇಲೆ ಧರ್ಮ ಜಾತಿ ಪಂಥಗಳ ಕಲಹ ಎಲ್ಲಿರುತ್ತವೆ ಅಲ್ವೇ? ಹೇಗೆಂದರೆ ಮತ್ತು ಯಾಕೆಂದರೆ ಎಂಬ ವಿಚಾರಗಳನ್ನು ಮಥಿಸಿದಾಗ ಮೂಡುವ ಕಲ್ಪನೆ ಹೀಗಾಗಿರುತ್ತವೆ. ಕೃತಕ ಮಾನವನ ಪಾರುಪತ್ಯ ಶುರುವಾದ ಮೇಲೆ ಧರ್ಮ ಜಾತಿ ಪಂಥಗಳ ಕಲಹದಿಂದ ಸದಾ ದ್ವೇಷ, ಅಸೂಯೆ, ಜಲಸೆಯಿಂದ ಕಾದಾಡುವ ವಿದ್ಯಮಾನಗಳು ಮರೆಯಾಗಬಹುದು.

ಅಲ್ಲದೆ ಕಲಿ ಯುಗಾಂತ್ಯದ ನಂತರ ಬರುವುದು ಸತ್ಯ ಯುಗವೆಂಬ ಮಾತಿದೆ. ಹಾಗಾಗಿ ಈ ಬೆಳವಣಿಗೆ ಆ ಯುಗಕ್ಕೆ ಪೂರಕವಾಗಿರಬಹುದೇ? ಯಾಕೆಂದರೆ ದುರ್ಬುದ್ಧಿಯನ್ನೂ ಹೊಂದಿರುವ ಮಾನವರ ಅವಸಾನದ ನಂತರ ಬಾವನೆಗಳಿಲ್ಲದೆ ಕೇವಲ ಗಣಕಯಂತ್ರದ ಪ್ರೋಗ್ರಾಮಿಂಗ್ ಮೇಲೆ ಮಾತ್ರ ಕ್ರಿಯೆ ಮಾಡುವ ಮತ್ತು ಪ್ರತಿಕ್ರಿಯಿಸುವ ಕೃತಕ ಮಾನವರು ಕೇವಲ ಮಾಡುವ ಮತ್ತು ಮಾಡಿದ ಸತ್ಯವನ್ನೆ ನುಡಿದು ಸತ್ಯ ಯುಗಕ್ಕೆ ತಕ್ಕಂತೆ ವರ್ತಿಸಬಹುದೆಂದು ಅರ್ಥೈಸಿಕೊಳ್ಳಬಹುದು. ಆಲ್ವೆ?

ಹೀಗಾಗಿ ಅಪರಿಮಿತವಾಗಿ ಬೆಳೆಯುತ್ತಿರುವ ಆಧುನಿಕರಣದ ಯಾಂತ್ರಿಕ ಬದುಕು ಈಗ ಹಿತವೆನಿಸಬಹುದು. ಆದರೆ ಮುಂದೊಂದು ದಿನ ಇದು ಮಾನವನ ಅವಸಾನಕ್ಕೆ ನಾಂದಿಯಾಗಿ ಹೊಸ ಯುಗದ ಪ್ರಾರಂಭಕ್ಕೆ ಮುನ್ನುಡಿಯಾದರೆ ಅಚ್ಚರಿಯಿಲ್ಲ ಎನ್ನುವುದು ವಿಚಾರವಾದವಾಗಿದೆ.

Thursday, January 9, 2020

ಸಾಂಗತ್ಯ ಸಾಹಿತ್ಯ

ಬಯಸಿರುವ ಭಾವದಲಿ
ಮೈತ್ರಿ ಜೀವದ ಬೆಸುಗೆಯಲಿ
ಮಿಂದವಳೆ ಶಾಯರಿ
ಮುದ ನೀಡುದ ಪದಗಳು

ಭರವಸೆಯ ಸಂಜೆಯಲಿ
ಮೂರ್ತ ನಾದದ ವೇಳೆಯಲಿ
ಕಂಡವಳೆ ಕಿನ್ನರಿ
ಜೊತೆಯಾಗಲು ಬಂದವಳು

ಒಂಟಿ ಬಾಳಿನ ಪಯಣ
ತಳವಿರದ ಹರಿವಂತೆ
ಜಂಟಿ ಗೋಳಿನ ಚಾರಣ
ಮಿತಿಯಿರದ ವ್ಯಯದಂತೆ
ಆದರೇನಂತೆ ಬದುಕಲಿರಬೇಕು
ಹಿತವೆನಿಸೊ ಸಾಂಗತ್ಯ

ತುಂಟಿ ಸೋಲಿನ ಚರಣ
ಮಾರ್ಜಾಲ ನಡೆದಂತೆ
ಗಂಟಿ ಕೂಗಿನ ಹೂರಣ
ಸೂಕ್ಷ್ಮತೆಯ ಹಿಡಿದಂತೆ
ಕೇಳಿರುವಂತೆ ಬರಬಹುದು
ಬದುಕಾಗೊ ಸಾಹಿತ್ಯ

Tuesday, December 31, 2019

ಮುಂದೊಂದು ದಿನ ಹೇಗಾಗಬಹುದೇ?



_ಪೇಟೆಯಲ್ಲಿ ಪುನರಾವರ್ತಿತವಾಗಲಿದೆ ಅವಿಭಕ್ತ ಕುಟುಂಬದ ಪರಿಕಲ್ಪನೆ..._

ಬೆಳೆಯುತ್ತಿರುವ ಜಗತ್ತಿನಲ್ಲಿ ಪ್ರತಿಯೊಂದು ಕಣಕಣವೂ ಮತ್ತು ಪ್ರತಿಯೊಂದು ಕ್ಷಣಕ್ಷಣವೂ ಬದಲಾಗುತ್ತಿರುತ್ತಿದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಹೀಗೆ ಬದಲಾದ ಕಾಲಘಟ್ಟಗಳನ್ನು ನೋಡಿದರೆ ಎಷ್ಟೆಲ್ಲಾ ಪರಿವರ್ತನೆಗಳು ಕಾಣಸಿಗುತ್ತವೆ. ಮೊದಲಿದ್ದ ನೀತಿ-ನಿಯಮಗಳು, ಹೊಂದಾಣಿಕೆಗಳು, ಒಗ್ಗಟ್ಟು, ನಮ್ಮವರೆಂಬ ಭಾವನೆಗಳು, ಸಹಕಾರ ಮನೋಭಾವಗಳು, ಪ್ರೀತಿ-ವಾತ್ಸಲ್ಯ-ಮಮತೆಯ ವಿಷಯಗಳಲ್ಲಿ ಗಣನೀಯ ಬದಲಾವಣೆಗಳಾಗಿರುವುದು ನಮ್ಮ ಅನುಭವಕ್ಕೆ ಬರುತ್ತಿವೆ.

ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳ ಬಗೆಗಿನ ಪರಿಕಲ್ಪನೆಯನ್ನು ನಾನಿಂದು ನನ್ನ ವಿಚಾರಧಾರೆಯಿಂದ ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯಗಳನ್ನು ಹಂಚಿಕೊಳ್ಳುವ ಮುಂಚೆ ನಾನೂ ಸಹ ಈ ಎರಡೂ ಪ್ರಕಾರದ ಕುಟುಂಬ ವ್ಯವಸ್ಠೆಯಲ್ಲಿ ಒಬ್ಬನಾಗಿದ್ದವನು, ಹೀಗಾಗಿ ಇದರ ಬಗ್ಗೆ ಮತ್ತು ಮುಂದಿನ ಆಗು ಹೋಗುಗಳ ಬಗ್ಗೆ ನನ್ನ ವಿಚಾರಧಾರೆಗೆ ಒಂದು ರೂಪು ನೀಡಬಹುದೆಂದು ಅಂದುಕೊಂಡಿದ್ದೇನೆ.

ಅವಿಭಕ್ತ ಕುಟುಂಬವಿದು ಮೊದಲು ನೀಡುವ ವರವೆಂದರೆ ಅದು ಸಂಸ್ಕಾರ. ತುಂಬು ಕುಟುಂಬದಲ್ಲಿ ಒಬ್ಬ ವ್ಯಕ್ತಿ ತನ್ನ ಅಕ್ಕ-ತಂಗಿ ಮತ್ತು ಅಣ್ಣ-ತಮ್ಮಂದಿರ ನಡುವೆ ಬೆಳೆಯುವ ನಾವು ಜನರೊಂದಿಗೆ ಹೇಗೆ ಒಡನಾಡಬೇಕು, ಮಾತಾಡಬೇಕು, ಗುರು-ಹಿರಿಯರನ್ನು ಹೇಗೆ ಗೌರವಿಸಬೇಕು ಹಾಗೂ ಮತ್ತವರ ಬೆಲೆಯೇನು ಮತ್ತು ಸಮೂಹದಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ತಿಳಿಸಿಕೊಡುತ್ತದೆ.. ಆಡಿ-ಬೆಳೆವಂತಹ ಖುಷಿ, ವೈವಿಧ್ಯಮಯ ಆಟೋಟಗಳ ಪರಿಚಯ ಮತ್ತು ಅವುಗಳನ್ನಾಡಿದ ಅನುಭವದ ಸಂತೋಷ ವಿಭಕ್ತ ಕುಟುಂಬದ ಪರಿಸರದಿಂದ ಸಿಗಲಾರದು.

ಆದರೆ ದೊಡ್ಡ ಕುಟುಂಬವನ್ನು ನಿಭಾಯಿಸುವ ಜವಾಬ್ಧಾರಿ ಕುಟುಂಬದ ಹಿರಿಯನ ಮೇಲಿರುವುದರಿಂದ ಕುಟುಂಬದ ಮಕ್ಕಳಿಗೆಲ್ಲಾ ಉತ್ತಮ ಶಿಕ್ಷಣ ಸಿಗುತ್ತದೆಂಬ ಭರವಸೆ ಇರಲಾರದು. ಹೀಗಾಗಿ ಹಿರಿಯನ ಅನುಜರ ಮಕ್ಕಳು ತನ್ನಪ್ಪ ನಮಗೆ ಸರಿಯಾಗಿ ಕಲಿಸಲಿಲ್ಲವೆಂಬ ಆಪಾದನೆ ಮಾಡಲು ಸಹಕಾರಿಯಾಗಿರುತ್ತದೆ. ಆದರೆ ಆಪಾದನೆ ಮಾಡುವ ಮಕ್ಕಳು ತಾವೆಷ್ಟು ಓದಿ ಗುಡ್ಡೆ ಹಾಕಿದ್ದೇವೆ ಅಥವಾ ತಮ್ಮ ಬುದ್ಧಿಮತ್ತೆಯೆಷ್ಟೆಂಬುದನ್ನು ಅರಿಯದೆ ಹೆತ್ತವರ ಮೇಲೆ ಆಪಾದನೆ ಹೊರಿಸುವುದು ಸರ್ವೆ ಸಾಮಾನ್ಯವಾಗಿದೆ. ಅವಿಭಕ್ತ ಕುಟುಂಬದಲ್ಲೂ ಸಹ ತಂದೆಯಾದವನು ತನ್ನ ಮಕ್ಕಳ ಏಳಿಗೆಗಾಗಿ ಅಗ್ರಜನನ್ನು ಒತ್ತಾಯ ಪಡಿಸಿ ಅವನೊಂದಿಗೆ ಜಗಳವಾಡಿಯಾದರೂ ಹಣವನ್ನೋ ಅಥವಾ ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನೋ ತಂದುಕೊಡುತ್ತಾನೆಂಬುದನ್ನು ಮಕ್ಕಳು ಅರ್ಥ ಮಾಡಿಕೊಂಡು ವಿಭಕ್ತ ಕುಟುಂಬವಾದ ಮೇಲೆ ಹೆತ್ತವರನ್ನು ಹಿತವಾಗಿ ನೋಡಿಕೊಳ್ಳುವುದು ಉಚಿತವಾಗಿರುತ್ತದೆ.

ಹಾಗೆ ವಿಭಕ್ತ ಕುಟುಂಬದಲ್ಲಿ ಒಡನಾಡಿಗಳಾರು ಇರುವುದಿಲ್ಲ. ಆದರೆ ಮಕ್ಕಳ ಓದು ಮತ್ತು  ಬಯಸಿದ್ದನ್ನು ಕೊಡಿಸುವಲ್ಲಿ ಸಹಕಾರಿಯಾಗಿರುತ್ತದೆ. ನಾನು ನನ್ನದೆಂಬ ಬಾವ ಬೆಳೆಯುತ್ತದೆ. ಹೊರ ಜಗತ್ತಿನೊಂದಿಗೆ ಬೆಳೆಯುವ ಅವಕಾಶ ಸಿಕ್ಕರೆ ಒಳಿತು ಇಲ್ಲವೆಂದರೆ ಬೆಳೆಯುವ ಮಗುವಿನಲ್ಲಿ ಸಂಕುಚಿತ ಮನೋಬಾವ ಬೆಳೆಯುತ್ತದೆ. ಅಲ್ಲದೆ ಬೇರೆಡೆಗೆ ಹೋಗುತ್ತೇನೆಂದರೆ ಮನೆಯನ್ನು ನೋಡಿಕೊ ಳ್ಳುವ ಜನ ಸಿಗುವುದಿಲ್ಲ ಅಲ್ಲದೆ ನಮಗೆ ಸರಿಯಾದ ರಕ್ಷಣೆ ಇರುವುದಿಲ್ಲ.

ಆದರೆ, ಕಾಲಚಕ್ರ ಉರುಳಿದಂತೆ ಹೇಗೆ ಹಳ್ಳಿಗಳಲ್ಲಿ ತುಂಬಿದ್ದ ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿ ವಿಭಕ್ತ ಕುಟುಂಬಗಳಾಗಿವೆಯೋ ಹಾಗೆ ಮುಂದೊಂದು ದಿನ ಪಟ್ಟಣಗಳಲ್ಲಿ ಈ ಅವಿಭಕ್ತ ಕುಟುಂಬದ ಪರಿಕಲ್ಪನೆಗಳು ಮತ್ತೆ ಭೂಮಿಕೆಗೆ ಬರುತ್ತವೆಯೇನೊ ಎಂದೆನಿಸುತ್ತಿದೆ. ಆದರೆ ಈ ಅವಿಭಕ್ತ ಕುಟುಂಬಗಳು ಸ್ವಂತ ಅಣ್ಣ-ತಮ್ಮಂದಿರ ಸಂಸಾರಗಳಿಂದ ಕೂಡಿರುವುದಿಲ್ಲ ಬದಲಾಗಿ ಸ್ನೇಹ ಜೀವಿಗಳ ಸಂಸಾರಗಳ ಸಮ್ಮಿಲನವಾಗಿರುತ್ತವೆ.

ಯಾಕೆ ಹೀಗಾಗುತ್ತದೆ ಎಂದು ನೀವು ಆಲೋಚಿಸುವುದಾದರೆ, ಈಗಾಗಲೆ ಆರತಿಗೊಂದು ಕೀರುತಿಗೊಂದು ಎಂಬ ನಿಲುವುಗಳು ಮಾಯವಾಗಿ ಹೆಣ್ಣಾಗಲಿ ಗಂಡಾಗಲಿ ನಮಗೊಂದೆ ಸಾಕು ಎಂಬ ವಿಚಾರಧಾರೆ ಹರಿಯುತ್ತಿದೆ ಮತ್ತು ಅದೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಒಂದೇ ಕುಟುಂಬದ ಅಣ್ತಮ್ಮಂದಿರ ಅವಿಭಕ್ತ ಕುಟುಂಬ ಏರ್ಪಡುವುದು ದೂರದ ಮಾತು. ಬದಲಾಗಿ ಉತ್ತಮ ಸ್ನೇಹ ಜೀವಿಗಳು ಜೊತೆಯಾಗಿ ಒಂದೇ ಸೂರಲ್ಲಿ ವಾಸಿಸಲು ಅಣಿಯಾಗಬಹುದು.

ಇಂತಹ ಪರಿಸ್ಥಿತಿಗಳಿಗೆ ಕಾರಣಗಳೆಂದರೆ:

೧. ಏರುತ್ತಿರುವ ದಿನಚರಿಗಳ ಬೆಲೆ.
೨. ಪಟ್ಟಣಗಳಲ್ಲಿ ಏರುತ್ತಿರುವ ಮನೆಗಳ ಬಾಡಿಗೆ.
೩. ಸ್ವಂತ ಮನೆ ಕಟ್ಟಿ ಬದುಕಲು ಬೇಕಾದ ಜಾಗ ಮತ್ತು ಆರ್ಥಿಕ ಕೊರತೆಯಾಗಬಹುದು.
೪. ಸ್ನೇಹದಲ್ಲಿ ಕಲಹ ಮತ್ತು ಅಹಂಕಾರದ ಮಾತುಗಳು ಬರದಿರಬಹುದೆಂಬ ಭರವಸೆ.
೫. ಬಾಡಿಗೆ ಮನೆಗಳ ಕೊರತೆ ಎದುರಾಗಬಹುದು.
೬. ತನ್ನ ಮಗ/ಮಗಳಿಗೆ ಆಟವಾಡಲು ಜೊತೆಯಾಗಿ ಇನ್ನೊಬ್ಬರು ಸಿಗಲೆಂಬ ಆಲೋಚನೆ.

ಹೀಗೆ ಪಟ್ಟಿ ಮಾಡಿದರೆ ಇನ್ನೂ ಹಲವು ಕಾರಣಗಳು ಸಿಗಬಹುದು. ಹೀಗಾಗಿ ಈ ಅವಿಭಕ್ತ ಕುಟುಂಬಗಳೆಂಬ ಪರಿಕಲ್ಪನೆ ಪುನಃ ಮುನ್ನುಡಿಗೆ ಬರಬಹುದು. ಇವನ್ನೆಲ್ಲಾ ಆಲೋಚಿಸಿದರೆ ನಾವೆಲ್ಲೋ 'ನಾವು ನಮ್ಮನೆಯವರೆಂಬ ಭಾವವನ್ನು' ಕಳೆದುಕೊಂಡು 'ನಾವು ನಮ್ಮ ಸ್ನೇಹಿತರೆಂಬ’ ಬಾವಕ್ಕೆ ಒಲವನ್ನು ತೋರಿಸುತ್ತಿದ್ದೇವೆಯೇನೋ ಎಂದೆನಿಸುತ್ತಿದೆ.  ಅಲ್ವೇ?

ಹೀಗೆ ಸ್ನೇಹ ಜೀವಿಗಳ ಅವಿಭಕ್ತ ಕುಟುಂಬದಲ್ಲಿ ಅಸಮಾನತೆಯ ಗೊಂದಲ ಬರುವುದಿಲ್ಲ ಮತ್ತು ತನ್ನ ಮಕ್ಕಳಿಗೆ ಸರಿಯಾದ ವಿದ್ಯೆಕೊಡಲಿಲ್ಲವೆಂಬ ಅಸಮಾಧಾನ ಇರುವುದಿಲ್ಲ. ಯಾಕೆಂದರೆ ಇಲ್ಲಿ ಜೊತೆಯಾಗಿ ಒಂದೇ ಕುಟುಂಬದಲ್ಲಿರುವ ಸ್ನೇಹಿತರಿಬ್ಬರೂ ಸಹ ಸಮಾನ ಜವಬ್ಧಾರರು. ಹಾಗಾಗಿ ತಮ್ಮ ತಮ್ಮ ಮಕ್ಕಳಿಗೆ ಬೇಕಾದ ಅವಶ್ಯಕ ತೆಗಳನ್ನು ಮತ್ತು ವಿದ್ಯೆಯನ್ನು ಕೊಡಿಸುವುದು ಅವರವರ ದುಡಿಮೆ ಮತ್ತು ಆಸೆಗಳಿಗೆ ಅನುಗುಣವಾಗಿರುತ್ತವೆ.  ಹೀಗಾಗಿ ತನಗೆ ಅನ್ಯಾಯವಾಗಿದೆ ಅಥವಾ ತನ್ನಪ್ಪನನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂಬಂತಹ ಮನಸ್ತಾಪಗಳು ಭುಗಿಲೇಳುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಇಂತಹ ಪರಿಕಲ್ಪನೆಗೆ ಜನರ ಮನಸ್ಸು ಒಗ್ಗಿಕೊಳ್ಳುವ ಸಾಧ್ಯತೆಗಳಿವೆ.

ಹೆಂಡತಿಯ ಗೆಳತಿಯ ಕುಟುಂಬದವರೊಂದಿಗೋ ಅಥವಾ ಗಂಡನ ಸ್ನೇಹಿತನೋದಿಗೋ ಹೊಂದಿಕೊಂಡು ಬಾಳ್ವೆ ಮಾಡುವ ದಿನ ಬಹಳ ದೂರವಿಲ್ಲವೆಂದೆನಿಸುತ್ತಿದೆ. ಯಾಕೆಂದರೆ ಹಳ್ಳಿಗಳೆಲ್ಲ ತರುಣರಿಲ್ಲದೆ ಬಿಕೋ ಎನ್ನುತ್ತಿದೆ ಯಾಕೆಂದರೆ ಕಲಿತ ಮಕ್ಕಳೆಲ್ಲಾ ಹೆತ್ತವರನ್ನು ಬಿಟ್ಟು ಪೇಟೆ ಸೇರಾಗಿದೆ. ಅಲ್ಲದೆ ಕೃಷಿ ಮಾಡುವವ ಕೀಳೆಂಬ ಮನೋಭಾವ ಮಂದಿಯ ಮನದಲ್ಲಿ ಮೂಡಿರುವುದು ವಿಷಾದನೀಯ. ಅದಲ್ಲದೆ ನಮ್ಮ ಸರಕಾರಗಳೂ ಸಹ ಕೃಷಿಯ ಬಗ್ಗೆ ಮತ್ತು ಕೃಷಿಕರ ಬಗ್ಗೆ ತೋರುತ್ತಿರುವ ನಿಷ್ಕಾಳಜಿಯಿಂದ ಪೇಟೆಯ ಬದುಕೊಂದೇ ಬದುಕಿನ ಗುರಿ ಎಂಬಂತಾಗಿದೆ.

ಹೀಗಾಗಿ ಬದುಕಿನ ಅಡಿಪಾಯವನ್ನು ಭದ್ರವಾಗಿ ಹಾಕಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ಸಹ ಹುಟ್ಟಿ-ಬೆಳೆದ ಗೂಡನ್ನು ಬಿಟ್ಟು ಪೇಟೆಯತ್ತ ಹೆಜ್ಜೆ ಹಾಕುತ್ತಿರುವ ಹೊಸ ಪೀಳಿಗೆಯವರಿಂದಲೇ ಹೊಸ ಪರಿವರ್ತನೆಯ ಪರ್ವ ಸಾಧ್ಯವಾಗುತ್ತದೆ.

Wednesday, October 23, 2019

ಬಾಲತನದ ಪುಳಕ

ತುಂಬಿ ಹರಿವ ತೊರೆಯ
ತಟದಲ್ಲಿ ನಿಂತು
ಕಪ್ಪೆ ಹಾರುವ ಹಾಗೆ
ಕಲ್ಲನ್ನು ಎಸೆದು
ಬಾಲ ತನದ ದಿನವನ್ನು
ಸಂಭ್ರಮಿಸುವ ಪುಳಕ

ಪುಸ್ತಕದ ನಡುವಲ್ಲಿ
ನವಿಲುಗರಿಯಾನಿರಿಸಿ
ಮರಿ ಹಾಕಿದೆಯಾ ಎಂದು
ತೆರೆದು ನೋಡುವ ತವಕ

ಗುಡ್ಡ ಬೆಟ್ಟಗಳ ಅಲೆದು
ಕಲ್ಲು ಮುಳ್ಳುಗಳ ಮೆಟ್ಟಿ
ಪ್ರಾಕೃತಿಕ ಹಣ್ಣುಗಳನು
ಮನಸಾರೆ ಸವಿಯುವ ಬಯಕೆ

ಹಳ್ಳ ಕೊಳ್ಳದಲಿ ಜಿಗಿದು
ತಡೆಗೋಡೆ ನಡುವಲ್ಲಿ ಮಿಂದು
ಮೀಸಿ ಮುಟ್ಟಾಡುತಲಿ
ಉಗಿಸಿಕೊಳ್ಳುವ ಕಲಿಕೆ

ಅಧ್ಯಯನದ ನೆಪದಲ್ಲಿ
ಕುಂಬ್ರಿ ಹತ್ತುತ ಓಡಿ
ಗೇರ್ಬೀಜಕೆ ಚಿಕಿತ್ಸೆ ಮಾಡಿ
ಕಾಲ ಹರಣದ ಸುಲಿಗೆ

ಶಾಲೆ ಮುಗಿದ ಮೇಲೆ
ರವಿಯಾದಗ ಕಿವಿಯೋಲೆ
ಮನೆಗೆ ಮರಳುವ ಹೊತ್ತು
ವಿಶ್ರಮಿಸುವ ಮುಸ್ಸಂಜೆ ಗಳಿಗೆ

ಮರಳಿ ಬಯಸಲು ಆ ದಿನಗಳ
ಆಗುವುದೆ ಬಾಲಿಶದ ಯೋಚನೆಯು
ಬಾಣಗಳಿಗೆ ಬಾಲತನ ಬಂದಂತೆ
ಗುರಿ ತಪ್ಪಿದ ಅರ್ಜುನನ ಶರಗಳಿಗೆ

Thursday, October 17, 2019

ನವ ನಯ

ಮುಡಿಪಾಗಿದೆ ಮೂಡಿ
ಒಲವು
ನವ ನಯ ರೀತಿ
ಒಡೆಯಾ.... ನೀನೆ
ಬರುವೆಯಾ ಬೆಳಗಲು ಕಾಂತಿ

ಮುಂದುವರಿಸು
ಬಂದು ವರಿಸು
ಜೋಡಿಯಾಗಲು ಬಯಕೆ ನನಸು
ಕಾಯುವೆನು ನಿನ್ನ
ಅಂಗಾಲ ಕಾಂತಿಗೆ
ಮನಸು ಮಾಗಿದೆ
ಮಾವಾಗಿ ಬಾ

ಕಂಡ ಕನಸು
ನಿನ್ನ ಮನಸು
ಕೂಡಿಬಾಳಲು ಬದುಕೆ ಸೊಗಸು
ಜೊತೆಯಾಗೊ ಮುನ್ನ
ಸಮ್ಮತಿಯೆ ಚೆನ್ನ
ವಯಸು ವಾಲಿದೆ
ಬೆಳಕಾಗಿ ಬಾ

ವರಿಸು

ಇಂದುವನ್ನು ನೋಡುತ
ಬಂದು ಹೃದಯದಿ ಹಾಡುತ
ಏಕೆ ಹೀಗೆ ಕಾಡುವೆ
ಕನಸಲಿ ಮನಸಲಿ
ವರಿಸಲು ಬಾರದೆ

ಯಾರ ಕಣ್ಣನು ಕಾಣಲಿ
ಖುದ್ದು ನೋಡುವೆ ಬಾನಲಿ
ಕದ್ದು ಕಲಕಿದೆ ಚಿತ್ತ ಕೆಣಕಿದೆ
ಪ್ರೀತಿ ಕಲಸುತ
ಒಲವ ಬಡಿಸುತ
ನನ್ನ ಮನಸನು ಕೆಡಿಸಿದೆ
ಓ ಹುಡುಗ.... ಬಾ ಹುಡುಗ....
ಎಲ್ಲಿರುವೆ ಬಾ ಬೆಡಗ.....

ಯಾವ ಚಿತ್ರವ ನೋಡಲು
ನಿಂದೆ ರೂಪವು ಕಾಣಲು
ಬಿದ್ದು ನಗಿಸಿದೆ ಎದ್ದು ಕುಣಿಸಿದೆ
ನೀತಿ ಕಲಿಸಿದೆ
ನಿಯಮ ತಿಳಿಸಿದೆ
ನಮ್ಮ ಜೀವನ ತೆರೆದಿದೆ
ಓ ಹುಡುಗ.... ಬಾ ಹುಡುಗ....
ಓಡದಲೆ ಸೇರು ಬದುಕ.....

Thursday, October 3, 2019

ಕಾವ್ಯ ಗಾನ

ಕಾವ್ಯ ರಾಗದ ಲಯಕೆ
ಬಾವ ಜೀವದ ಬೆಸುಗೆ
ಕವಿಯ ಆಶಯಕೊಂದು
ರೂಪ ನೀಡುವುದು

ಗಾನ ತಾಳದ ಸ್ವರಕೆ
ಶ್ರೋತೃ ಮನ ತಲುಪುವುದು
ಗೀತೆ ಬರೆದ ಜನಕೆ
ತೃಪ್ತ ಹೆಮ್ಮೆ ಹೆಚ್ಚುವುದು

ದನಿಯ ಇಂಪು ಗಾಳಿಯಲ್ಲಿ
ನುಡಿಯ ಕುಣಿತ ಸ್ವರಗಳಲ್ಲಿ
ಕೇಳಿ ತಂಪು ಕಿವಿಗಳಲ್ಲಿ
ಹರಡಿತು ಕಂಪು ಬರಹದಲ್ಲಿ

ಈಜಿ ಮುಳುಗಲು ಪಾತಾಳಕೆ
ಅದುವೆ ರಾಗದ ಅವರೋಹಣ
ಗಿರಿಯ ಏರಿ ಗುರಿಯ ತಲುಪಲು
ಅದಕೆ ಹೆಸರು ಆರೋಹಣ

ಬೇಡಿ ಬಯಸಿ ಸಿದ್ಧಿಯಾದರೆ
ಇನಿತು ದೊರೆತ ಖುಷಿಯದು
ತೋಡಿ ಹರಿಸಿ ವೃದ್ಧಿಯಾದರೆ
ಗರ್ವ ತೊರೆದು ನಿಲ್ಲುವುದು

ಹತ್ತಿ ಮುಳುಗುವ ಜನರು ವಿರಳ
ಸಾಧನೆ ತುದಿಯ ಹತ್ತುವುದು ಸರಳ
ನಿರತವಾದರೆ ಭಕ್ತಿ ತಪವಿದು
ಅಭಿಮಾನವು ಸುತ್ತಿ ಬರುವುದು